ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಪಟ | ಆಸ್ಕರ್‌ ಕದ ತಟ್ಟಿದ ‘2018’

Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

2018ರ ಮುಂಗಾರು ಮಳೆಯ ದುರಂತಗಳನ್ನು ನೆನಪಿಸುವ ಈ ಮಲಯಾಳಂ ಸಿನಿಮಾ, 2024ರ ಅಕಾಡೆಮಿ (ಆಸ್ಕರ್‌) ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡಿದೆ. ಆ ಸಿನಿಮಾದಲ್ಲಿ ಏನೆಲ್ಲ ಇದೆ?

2018ರಲ್ಲಿ ಕೇರಳದ ಇಡುಕ್ಕಿ ಮತ್ತಿತರ ಜಿಲ್ಲೆಗಳಲ್ಲಿ ಸುರಿದ ಮುಂಗಾರು ಮಳೆ ಸೃಷ್ಟಿಸಿದ ಅವಾಂತರಗಳನ್ನೇ ಇಟ್ಟುಕೊಂಡು ನಿರ್ಮಾಣವಾಗಿರುವ ಮಲಯಾಳಂ ಸಿನಿಮಾ ‘2018’.

ಇದೇ ವರ್ಷದ ಮೇ ತಿಂಗಳಲ್ಲಿ ಸಿನಿಮಾ ತೆರೆಕಂಡಿತು. ಅಪಾರ ಜನಮನ್ನಣೆಯ ಜತೆಗೆ ಹಣ ಗಳಿಕೆಯಲ್ಲೂ ಯಶಸ್ಸು ಕಂಡಿದೆ. ಅಷ್ಟೇ ಅಲ್ಲ, 2024ರ ಅಕಾಡೆಮಿ (ಆಸ್ಕರ್‌) ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡು ಸಿನಿಮಾಸಕ್ತರ ಗಮನ ಸೆಳೆದಿದೆ. ಈ ವರ್ಷ ನಡೆಯುವ ಹಲವು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಅತಿಯಾದ ಮಳೆ, ಪ್ರವಾಹ, ಸುನಾಮಿ, ಚಂಡಮಾರುತ, ಬರ ಇತ್ಯಾದಿ ಪದೇ ಪದೇ ಸಂಭವಿಸುತ್ತಿವೆ. ನಮ್ಮ ದೇಶದ ಒಂದಲ್ಲ ಒಂದು ರಾಜ್ಯದಲ್ಲಿ ಪ್ರತಿವರ್ಷ ಮಳೆ ಮತ್ತು ಪ್ರವಾಹಗಳಿಂದ ಅಸಂಖ್ಯ ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗುತ್ತದೆ. ಸಾವಿರಾರು ಜನ ಆಶ್ರಯ ಕಳೆದುಕೊಳ್ಳುತ್ತಾರೆ.  ಯಾವುದೇ ಮೂಲೆಯಲ್ಲಿ ಸಂಭವಿಸುವ ನಿಸರ್ಗದ ವೈಪರೀತ್ಯಗಳನ್ನು ಕೆಲ ಗಂಟೆಗಳಲ್ಲಿ ಇಡೀ ಜಗತ್ತಿಗೆ ತೋರಿಸುವ ವಿಷಯದಲ್ಲಿ ಸುದ್ದಿ ಮಾಧ್ಯಮಗಳ ನಡುವೆ ಪೈಪೋಟಿ ನಡೆಯುತ್ತಿದೆ. ಐದು ವರ್ಷಗಳ ಹಿಂದಿನ ಕೇರಳದ ಮಳೆ ಅವಾಂತರಗಳನ್ನೆಲ್ಲ ದೇಶದ ಜನ ಟೀವಿ ಚಾನಲ್‌ಗಳ ಮೂಲಕ ನೋಡಿದ್ದಾರೆ. ಅನೇಕರು ಮರೆತೂ ಇದ್ದಾರೆ. ಮಳೆ ದುರಂತಗಳನ್ನು ‘2018’ ಸಿನಿಮಾ ಮತ್ತೆ ನೆನಪಿಸುತ್ತಿದೆ. ಮಳೆಯ ಅಬ್ಬರ ಹಾಗೂ ಅದರ ದುರಂತ ಮುಖಗಳನ್ನು ಇಟ್ಟುಕೊಂಡು ಸಿನಿಮಾ ನಿರ್ಮಿಸುವ ಮಾತುಗಳು ‘2018’ರಲ್ಲಿ ಕೇಳಿಬಂದರೂ ಅದು ಕಾರ್ಯರೂಪಕ್ಕೆ ಬರಲು ಐದು ವರ್ಷಗಳು ಬೇಕಾಯಿತು.

ಸರ್ಕಾರ ಸೋತ ಕಡೆ ಸಮಾಜ ಗೆಲ್ಲುತ್ತದೆ ಎಂಬ ಮಾತಿದೆ. ಅತಿಯಾದ ಮಳೆ ತಂದೊಡ್ಡಿದ ಸಾಲು ಸಾಲು ಸವಾಲುಗಳನ್ನು ಎದುರಿಸುವ ಮಾರ್ಗ ಕಾಣದೆ ಅತಂತ್ರ ಸ್ಥಿತಿಗೆ ತಲುಪಿದ ನೂರಾರು ಜನರ ರಕ್ಷಣೆಗೆ ಸ್ಥಳೀಯರು ಒಂದಾಗಿ ಧಾವಿಸಿ, ದಿಟ್ಟತನದಿಂದ ಪರಿಸ್ಥಿತಿಯನ್ನು ನಿಭಾಯಿಸುವುದು ‘2018’ ಸಿನಿಮಾದ ಒಂದು ಸಾಲಿನ ಕಥೆ.

ಜ್ಯೂಡ್‌ ಆಂಟನಿ ಜೋಸೆಫ್‌ ಈ ಸಿನಿಮಾದ ನಿರ್ದೇಶಕರು. ನೂರೈವತ್ತು ನಿಮಿಷಗಳ ಈ ಸಿನಿಮಾ 2018ರ ಮುಂಗಾರು ಮಳೆ ದುರಂತಗಳ ದೃಶ್ಯ ದಾಖಲೆಯಾಗಿ ಗಮನ ಸೆಳೆಯುವುದಲ್ಲದೆ, ಪ್ರವಾಹವನ್ನು ಎದುರಿಸುವ ವಿಷಯದಲ್ಲಿ ಜನರು ತೋರಿದ ಸಂಯಮ, ಧೈರ್ಯ, ಸಾಹಸಗಳ ಜತೆಗೆ ಮಾನವೀಯತೆಯನ್ನೂ ಎತ್ತಿಹಿಡಿಯುತ್ತದೆ.

‘2018’ರ ಜುಲೈ ತಿಂಗಳಲ್ಲಿ ಕರ್ನಾಟಕದ ಕೊಡಗಿನಲ್ಲೂ ಮುಂಗಾರು ಮಳೆ ಸಾಲು ಸಾಲು ಅವಾಂತರಗಳನ್ನು ಸೃಷ್ಟಿಸಿತ್ತು. ಹಲವಾರು ಮನೆಗಳು, ಹತ್ತಾರು ಎಕರೆಗಳ ಕಾಫಿ ತೋಟಗಳು ಪ್ರವಾಹದಲ್ಲಿ ಕೊಚ್ಚಿಹೋದವು. ಸಂಪರ್ಕ ವ್ಯವಸ್ಥೆ ಹಾಳಾಯಿತು. ಕೊಡಗು ಎಲ್ಲವನ್ನೂ ಕೊಡವಿಕೊಂಡು ಮೇಲಕ್ಕೆದ್ದು ಸಹಜ ಸ್ಥಿತಿಗೆ ಮರಳಿದೆ. ಆದರೆ ಮಳೆಯಿಂದಾಗಿ ಸಾವಿನ ಸಮೀಪಕ್ಕೆ ಹೋಗಿ ಬಂದ ಜನರಿಗೆ 2018ರ ಮಳೆ ಇಂದಿಗೂ ದುಃಸ್ವಪ್ನ.

2018ರ ಜುಲೈ 21ರಂದು ಕೇರಳದ ಕೊಲ್ಲಂ, ಅಲುವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಸತತ ಮಳೆ ಸುರಿಯಿತು. ಮಳೆಯ ನೀರಿನ ಜತೆಗೆ ಪೆರಿಯಾರ್‌ ನದಿಯಲ್ಲಿ ಪ್ರವಾಹ ಬಂತು. ಮುಲ್ಲಪೆರಿಯಾರ್‌ ಅಣೆಕಟ್ಟೆಯಿಂದ ಭಾರಿ ಪ್ರಮಾಣದ ನೀರನ್ನು ಹೊರಬಿಡಲಾಯಿತು. ಪ್ರವಾಹದ ನೀರು ಹತ್ತಾರು ಗ್ರಾಮಗಳಿಗೆ, ನಂತರ ಮನೆಗಳಿಗೂ ನುಗ್ಗಿತು. ನೂರಾರು ಜನ ಪ್ರವಾಹದ ನಡುವೆ ಸಿಲುಕಿದರು. ಅವರನ್ನು ರಕ್ಷಿಸಿ, ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವುದು ಸರ್ಕಾರಕ್ಕೆ ಸವಾಲಾಯಿತು.

ಸಿನಿಮಾದ ಮೊದಲ ಭಾಗದಲ್ಲಿ ನಿರಂತರವಾಗಿ ಸುರಿಯುವ ಮಳೆಯ ನಡುವೆಯೂ ಜನ ನಿರಾತಂಕವಾಗಿ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಹೇಳಿದರೆ, ಎರಡನೇ ಭಾಗದಲ್ಲಿ ಹಠಾತ್‌ ಪ್ರವಾಹದ ಪರಿಣಾಮಗಳನ್ನು ತೋರಿಸುತ್ತ ರಕ್ಷಣಾ ಕಾರ್ಯಾಚರಣೆಯ ಸಾಹಸಗಳನ್ನು ಕಟ್ಟಿಕೊಡುತ್ತದೆ. ಮಳೆ ಬಗ್ಗೆ ಟಿವಿ ಚಾನಲ್‌ ಒಂದು ಸರ್ಕಾರ ಮತ್ತು ಜನರನ್ನು ಎಚ್ಚರಿಸುತ್ತದೆ. ಪ್ರವಾಹ ಹೆಚ್ಚಾದಂತೆ ನೆರವಿನ ನಿರೀಕ್ಷೆಯಲ್ಲಿರುವ ಜನರ ಬಳಿಗೆ ಹೋಗಲಾಗದ ಅಸಹಾಯಕತೆ ಸರ್ಕಾರಿ ಯಂತ್ರದ್ದು. ಈ ಸಂದರ್ಭದಲ್ಲಿ ಕೊಲ್ಲಂ, ಅಲುವಾ ಮತ್ತಿತರ ಪ್ರದೇಶಗಳ ಮೀನುಗಾರರು, ಯುವಕರು ದೋಣಿ, ತೆಪ್ಪ ಇತ್ಯಾದಿಗಳನ್ನು ಪ್ರವಾಹ ಪ್ರದೇಶಕ್ಕೆ ಒಯ್ದು, ಅವನ್ನು ನೀರಿಗಿಳಿಸಿ ಸಂತ್ರಸ್ತರನ್ನು ರಕ್ಷಿಸುತ್ತಾರೆ. ಎಲ್ಲರನ್ನೂ ಪುನರ್ವಸತಿ ಕೇಂದ್ರಗಳಿಗೆ ಸುರಕ್ಷಿತವಾಗಿ ಸೇರಿಸುತ್ತಾರೆ. ನಿಸರ್ಗದ ಎದುರು ಮನುಷ್ಯ ಅಸಹಾಯಕತೆಯನ್ನೂ  ಸಂಘಟಿತ ಪ್ರಯತ್ನಗಳಿಂದ ಎಂಥದೇ ಪರಿಸ್ಥಿತಿಯನ್ನೂ ನಿಭಾಯಿಸಲು ಸಾಧ್ಯ ಎನ್ನುವುದನ್ನು ಸಾದರಪಡಿಸುವ ‘2018’ ನೋಡುಗರಿಗೆ ಆಪ್ತವಾಗುತ್ತದೆ.

ಮಳೆಗಾಲದ ಆರಂಭದಲ್ಲಿ ಜನಜೀವನ ಎಂದಿನ ಲಯದಲ್ಲೇ ಸಾಗುತ್ತದೆ. ಮಳೆಯಲ್ಲೇ ಶಾಲೆಗಳು ನಡೆಯುತ್ತವೆ. ಭವಿಷ್ಯ ರೂಪಿಸಿಕೊಳ್ಳುವ ಧಾವಂತದಲ್ಲಿರುವ ಯುವಜನರು ಹಲವು ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಮಳೆಯ ನಡುವೆ ಮದುವೆ ಪ್ರಸ್ತಾಪಗಳು, ವ್ಯಾಪಾರ, ವಹಿವಾಟುಗಳೂ ನಡೆಯುತ್ತವೆ. ಮಳೆಯಲ್ಲೇ ಕೇರಳ ನೋಡಲು ಪೋಲಂಡ್‌ನ ಪ್ರವಾಸಿ ದಂಪತಿ ಬರುತ್ತಾರೆ. ಮಳೆ ಹೆಚ್ಚಾದಂತೆ ಜನಜೀವನದ ಮೇಲೆ ಪ್ರವಾಹದ ದಾಳಿ ಆರಂಭವಾಗುತ್ತದೆ. ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ಕೈಮೀರುತ್ತದೆ. ಪ್ರವಾಹ ನಿಯಂತ್ರಣಕ್ಕೆ ಇಡುಕ್ಕಿ ಜಿಲ್ಲಾಡಳಿತದ ವಾರ್‌–ರೂಮ್‌ನಲ್ಲಿ ಅಧಿಕಾರಿಗಳು ಮಳೆಯ ಮಾಹಿತಿಗಾಗಿ ಟಿವಿ ಚಾನಲನ್ನೇ ಅವಲಂಬಿಸುತ್ತಾರೆ. ಯಾಂತ್ರಿಕ ದೋಣಿಗಳು ಮತ್ತಿತರ ಸೌಲಭ್ಯಗಳ ಕೊರತೆಯಿಂದ ಸಕಾಲದಲ್ಲಿ ಸಂತ್ರಸ್ತರಿಗೆ ನೆರವಾಗಲು ಸಾಧ್ಯವಾಗುವುದಿಲ್ಲ. ಸೇನೆಯಿಂದ ನಿವೃತ್ತಿ ಪಡೆದು ಸಣ್ಣ ಅಂಗಡಿ ಇಟ್ಟುಕೊಂಡ ಯುವಕ ಅನೂಪ್‌, ಮೀನುಗಾರ ಮಾಥಚ್ಚನ್‌, ಅವನ ಕುಟುಂಬದವರು ಸೇರಿ ಅನೇಕರು ಸಂತ್ರಸ್ತರ ರಕ್ಷಣೆಗೆ ಮುಂದಾಗುತ್ತಾರೆ. ಪ್ರವಾಹದಲ್ಲಿ ಸಿಕ್ಕಿಕೊಂಡ ಗರ್ಭಿಣಿಯ ರಕ್ಷಣೆಗೆ ಸೇನಾ ಹೆಲಿಕಾಪ್ಟರ್‌ ಬರುವ ವೇಳೆಗೆ ಸ್ಥಳೀಯರೇ ಬಹುತೇಕ ಸಂತ್ರಸ್ತರನ್ನು ರಕ್ಷಿಸಿ, ಪುರ್ವಸತಿ ಕೇಂದ್ರಗಳಿಗೆ ಕಳಿಸುತ್ತಾರೆ.

ಇತ್ತೀಚಿನ ಹಲವು ಸಿನಿಮಾಗಳ ಮೂಲಕ ಮುನ್ನೆಲೆಗೆ ಬಂದಿರುವ ನಟ ಟೊವಿನೊ ಥಾಮಸ್‌ (ಅನೂಪ್‌) ಮಾಜಿ ಯೋಧನಾಗಿ, ಸರ್ಕಾರದ ವಾರ್‌–ರೂಮ್‌ ಅಧಿಕಾರಿಯಾಗಿ ಕೊಂಚಾಕೊ ಬೂಬನ್‌, ಮೀನುಗಾರ ಕುಟುಂಬ ಹಿರಿಯ ಮಾಥಚ್ಚನ್‌ ಪಾತ್ರದಲ್ಲಿ ಹಿರಿಯ ನಟ ಲಾಲ್‌, ತಾಯಿಯನ್ನು ನೋಡಲು ದುಬೈನಿಂದ ಬರುವ ಯುವಕನಾಗಿ ವಿನೀತ್‌ ಶ್ರೀನಿವಾಸ್‌, ಲಾರಿ ಚಾಲಕ ಸೇತುಪತಿಯಾಗಿ ಕಲೈ ಅರಸನ್‌ ಮತ್ತು ತನ್ವಿ ರಾಂ ಅಸಿಫ್‌ ಅಲಿ, ಇಂದ್ರನ್‌, ಅಪರ್ಣಾ ಬಾಲಮುರಳಿ, ಅಜು ವರ್ಗಿಸ್‌, ಆಸಿಫ್‌ ಅಲಿ ಸೇರಿ ಮೂವತ್ತಕ್ಕೂ ಹೆಚ್ಚು ಪಾತ್ರಗಳು ಈ ಸಿನಿಮಾದಲ್ಲಿವೆ. ಪ್ರತಿಯೊಂದು ಪಾತ್ರವೂ ನಾಯಕನಂತೆ ವಿಜೃಂಭಿಸಿದರೂ ಸಿನಿಮಾದ ನಿಜವಾದ ಹೀರೊ ಮಳೆ.

2018ರ ಪ್ರವಾಹ ಸಂದರ್ಭದಲ್ಲಿ ಚಿತ್ರಿಸಿಕೊಂಡ ಹಲವು ಫೂಟೇಜುಗಳ ಜತೆಗೆ ಪ್ರವಾಹ ಸನ್ನಿವೇಶಗಳನ್ನು ಹೈದರಾಬಾದ್‌ನ ಸ್ಟುಡಿಯೊ ಒಂದರಲ್ಲಿ ಸೃಷ್ಟಿಸಿ ಚಿತ್ರೀಕರಣ ಮಾಡಲಾಗಿದೆ. ಅಖಿಲ್‌ ಜಾರ್ಜ್‌ ಈ ಸಿನಿಮಾದ ಛಾಯಾಚಿತ್ರಗ್ರಾಹಕರು.

ತಂಗಳು (ರಾಟನ್‌ ಸ್ಟಫ್‌) ಸರಕಿನ ಸಿನಿಮಾ ಎಂಬ ಟೀಕೆಯ ನಡುವೆಯೂ ಕೇರಳದ ಸಿನಿಮಾಸಕ್ತರು
‘2018’ ಸಿನಿಮಾವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT