‘ಚಂದನವನ’ದಲ್ಲಿ ಪ್ರೇಮಕಥೆಗಳಿಗೆ ಕೊರತೆ ಯಾವ ಹೊತ್ತಿನಲ್ಲೂ ಎದುರಾಗಿರಲಿಕ್ಕಿಲ್ಲ. ಪ್ರೇತಿ–ಪ್ರೇಮಕ ಕಥೆ ಇರುವ ಮತ್ತೊಂದು ಸಿನಿಮಾ ಈಗ ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಇದರ ಹೆಸರು ‘ಮಸ್ತ್ ಕಲಂದರ್’. ನಿತಿನ್ ಇದರ ನಾಯಕ.
ಚಿತ್ರದ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ‘ಚಿತ್ರವು ಪ್ರೇಮ ಕಥೆಯೊಂದನ್ನು ಹೇಳುತ್ತದೆ. ಆದರೆ ಇದು ಮಾಮೂಲಿ ಪ್ರೇಮ ಕಥೆ ಅಲ್ಲ. ಇದರಲ್ಲಿ ಇರುವುದು ಪ್ರಾಕ್ಟಿಕಲ್ ಆಗಿರುವ ಪ್ರೇಮಕಥೆ’ ಎಂದು ಹೇಳಿದರು ಚಿತ್ರದ ನಿರ್ದೇಶಕ ರಾಜ್ಕುಮಾರ್ ಆದಿತ್ಯ.
‘22ಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಕಲರ್ಫುಲ್ ಸಿನಿಮಾ ಇದು. ವೀಕ್ಷಕರಿಗೆ ಎಲ್ಲೂ ಬೋರ್ ಆಗುವುದಿಲ್ಲ, ಒಳ್ಳೆಯ ಹಾಡು, ಒಳ್ಳೆಯ ಫೈಟ್ಗಳು, ಕಾಮಿಡಿ, ಸೆಂಟಿಮೆಂಟ್ ದೃಶ್ಯಗಳು ಇದರಲ್ಲಿ ಇವೆ’ ಎಂದು ತಮ್ಮ ಮಾತು ಸೇರಿಸಿದರು ನಿತಿನ್.
‘ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಮಧುಗಿರಿಯ ಏಕಶಿಲಾ ಬೆಟ್ಟದಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಿದ್ದೇವೆ. ಮಾಮೂಲಿ ಲವ್ ಸ್ಟೋರಿ ಇದರಲ್ಲಿ ಇಲ್ಲ. ಇದು ನಿಮ್ಮ ಕಥೆಯೂ ಆಗಿರಬಹುದು, ನಿಮ್ಮ ಸ್ನೇಹಿತರ ಕಥೆಯೂ ಆಗಿರಬಹುದು. ಸಿನಿಮ್ಯಾಟಿಕ್ ಆಯಾಮವನ್ನೂ ಮೀರಿ ಕೆಲವು ಪ್ರಯತ್ನಗಳನ್ನು ಮಾಡಿದ್ದೇವೆ’ ಎಂದು ಹೇಳಿದರು ನಿರ್ಮಾಪಕ ಚಂದ್ರು ಎಸ್.
ಚಿತ್ರದ ಛಾಯಾಗ್ರಹಣ ಎ.ಆರ್. ವಿನ್ಸೆಂಟ್ ಅವರದ್ದು. ‘ಹೊಸಬರದ್ದಾಗಿದ್ದರೂ ಇದು ಅದ್ಭುತ ಪ್ರಯತ್ನ. ನನ್ನ ಮೊದಲ ಮಗುವನ್ನು ಕೈಗೆತ್ತಿಕೊಂಡಷ್ಟು ಖುಷಿ ಆಗುತ್ತಿದೆ’ ಎಂದು ಸಂತಸ ಹಂಚಿಕೊಂಡವರು ನಟಿ ಸ್ವಾತಿ. ಖುಷಿ ಹುಡುಗನ ಖುಷಿ ಸಿನಿಮಾ ಇದು. ಅಪ್ಪ ಮಗನ ಸಂಬಂಧವನ್ನು ಇದರಲ್ಲಿ ಬಹಳ ಚೆನ್ನಾಗಿ ತೋರಿಸಲಾಗಿದೆ ಎನ್ನುವುದು ಚಿತ್ರತಂಡದ ಅಂಬೋಣ.