‘ಮೀ–ಟೂ’ ಅಭಿಯಾನ ಎಷ್ಟು ಬೇಗ ಮುನ್ನೆಲೆಗೆ ಬಂತೋ ಅಷ್ಟೇ ಬೇಗ ಮರೆಯಾಗುತ್ತಿದೆ. ಆದರೆ ಇದು ಹೀಗಾಗಬಾರದು, ಮುಂದುವರಿಯಬೇಕು’ ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಕೆಲವು ಮೀ–ಟೂ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ನಿಜ. ಹಾಗಂತ ಅಪರಾಧವನ್ನು ಸಹಿಸಿಕೊಂಡು ಇರಬಾರದು. ಅದರ ವಿರುದ್ಧ ಧ್ವನಿ ಎತ್ತಬೇಕು’ ಎಂದು ಅವರು ಹೇಳಿದ್ದಾರೆ.
‘ರಾತ್ರೋ ರಾತ್ರಿ ಪರಿಸ್ಥಿತಿ ಬದಲಾಗುವುದಿಲ್ಲ. ಇಂತಹ ಆಭಿಯಾನಗಳಿಂದ ನಿಧಾನವಾಗಿ ಬದಲಾವಣೆಯಾಗುತ್ತದೆ. ಅಲ್ಲಿಯವರೆಗೂ ಕಾಯಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಯವರೆಗೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮುಂದುವರಿಯುತ್ತಲೇ ಹೋಗುತ್ತದೆ’ ಎಂದಿದ್ದಾರೆ.
‘ಮಿಷನ್ ಮಂಗಲ’ ಸಿನಿಮಾ ಪ್ರಚಾರಕ್ಕಾಗಿ ಹೋಗಿದ್ದ ಸಂದರ್ಭದಲ್ಲಿ ಹೆಣ್ಣುಮಕ್ಕಳ ಧೈರ್ಯ ಸಾಹಸದ ಕುರಿತು ಪ್ರಶ್ನೆ ಎದುರಾದಾಗ ತಾಪ್ಸಿ ಮೀ–ಟೂ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ.