ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅಕಾಲಿಕ ನಿಧನದ ಬಗ್ಗೆಸುಳ್ಳು ಸುದ್ದಿಗಳು ಹರಡುತ್ತಿರುವುದಕ್ಕೆ ಮೀನಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿರುವ ಅವರು,'ನನ್ನ ಪ್ರೀತಿಯ ಪತಿ ವಿದ್ಯಾಸಾಗರ್ ನಿಧನದಿಂದ ನಾನು ತೀವ್ರ ದುಃಖಿತಳಾಗಿದ್ದೇನೆ. ಈ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಾಗೂ ಮಾಧ್ಯಮಗಳು ನಮ್ಮ ಖಾಸಗಿತನವನ್ನು ಗೌರವಿಸಬೇಕು. ಹಾಗೇ ಈ ಘಟನೆ ಕುರಿತು ಯಾವುದೇ ಸುಳ್ಳು ಸುದ್ದಿಗಳನ್ನು ಹರಡುವ ಕೆಲಸ ಮಾಡಬೇಡಿ‘ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಶ್ವಾಸಕೋಶ ಸೋಂಕು: ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ
ಸಂಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತ ಕುಟುಂಬದ ಮಿತ್ರರು, ಸಹದ್ಯೋಗಿಗಳು, ಹಿರಿಯರು, ರಾಜಕೀಯ ಮುಖಂಡರು, ಅಭಿಮಾನಿಗಳು, ಮಾಧ್ಯಮದವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಮೀನಾ ಹೇಳಿದ್ದಾರೆ.
ವಿದ್ಯಾಸಾಗರ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಎರಡು–ಮೂರು ತಿಂಗಳಿಂದ ಚೆನ್ನೈ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಶ್ವಾಸಕೋಶ ಹಾಗೂ ಹೃದಯ ಕಸಿಯ ಅಗತ್ಯವಿತ್ತು. ಆದರೆ ಶಸ್ತ್ರಚಿಕಿತ್ಸೆಗೆ ಹೊಂದಿಕೆಯಾಗುವ ಅಂಗಾಗ ದಾನಿ ಸಿಗಲಿಲ್ಲವಾದ್ದರಿಂದ ಸುದೀರ್ಘ ಸಮಯ ಕಾದು ಜೂನ್ 28ರಂದು ನಿಧನರಾದರು.
ವಿದ್ಯಾಸಾಗರ್ ಅವರುಕೋವಿಡ್ನಿಂದ ನಿಧನರಾದರು ಎಂದು ಕೆಲವರು ಗಾಸಿಪ್ಹರಡಿದ್ದರು. ಅವರಿಗೆ ಪಾರಿವಾಳಗಳಿಂದ ವಾಸಿಯಾಗದ ಕಾಯಿಲೆ ಬಂದಿದೆ ಎಂದು ಮತ್ತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.