ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಫೆ. 28ಕ್ಕೆ ಕಾರ್ಯಕಾರಿ ಸಮಿತಿಯ ಸಭೆ ನಿಗದಿಯಾಗಿದೆ.
ವಾಣಿಜ್ಯ ಮಂಡಳಿಗೆ ಶೀಘ್ರವೇ ಚುನಾವಣೆ ನಡೆಸಬೇಕು ಎಂಬ ಒತ್ತಾಯ ಸದಸ್ಯರ ವಲಯದಿಂದಲೇ ದೀರ್ಘ ಕಾಲದಿಂದ ಕೇಳಿಬಂದಿತ್ತು. ಕೋವಿಡ್, ಲೆಕ್ಕಪತ್ರಗಳ ನಿರ್ವಹಣೆ, ಕೆಲವು ಪ್ರಕರಣಗಳ ವಿಚಾರಣೆ ಸಂಬಂಧಿಸಿ ಹಲವಾರು ಕಾರಣಗಳಿಂದ ಚುನಾವಣೆ ಮುಂದಕ್ಕೆ ಹೋಗಿತ್ತು.
‘ಹೊಸ ಆಡಳಿತ ಮಂಡಳಿಯನ್ನು ರಚಿಸುವ ಸಂಬಂಧ ಮುಹೂರ್ತ ನಿಗದಿಗೆ ಈ ಸಭೆ ನಡೆಸಲಾಗುತ್ತಿದೆ. ಈಗಾಗಲೇ ಸದಸ್ಯರಿಗೆ ಸಭೆಯ ಸೂಚನೆಯನ್ನು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕಳುಹಿಸಲಾಗಿದೆ’ ಎಂದು ಮಂಡಳಿಯ ಗೌರವ ಕಾರ್ಯದರ್ಶಿ ಎನ್.ಎಂ. ಸುರೇಶ್ ಮಾಹಿತಿ ನೀಡಿದರು.
ಚುನಾವಣೆ ನಡೆಸದ ಬಗ್ಗೆ ಮಂಡಳಿಯ ಕೆಲವು ಸದಸ್ಯರು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ಸಲ್ಲಿಸಿದ್ದರು. ಆ ದೂರನ್ನು ಉಲ್ಲೇಖಿಸಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಎಸ್.ಜಿ. ಮಂಜುನಾಥ್ ಅವರು, ಕೂಡಲೇ ಚುನಾವಣಾ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚಿಸಿದ್ದರು.