ಕೊಟ್ಟಾಯಂ(ಕೇರಳ): ಮಲಯಾಳಂ ಸಿನಿಮಾ ಚಿತ್ರಕತೆ ಬರಹಗಾರ, ನಟ ಮತ್ತು ನಾಟಕಕಾರ ಪಿ.ಬಾಲಚಂದ್ರನ್ ಅವರು(69) ಸೋಮವಾರ ನಿಧನರಾದರು.
‘ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ವೈಕಾಮ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದರು’ ಎಂದು ಮೂಲಗಳು ತಿಳಿಸಿವೆ.
ಮೂರು ದಶಕಗಳ ಕಾಲ ಸಿನಿಮಾರಂಗದಲ್ಲಿ ಕಾರ್ಯನಿರ್ವಹಿಸಿದ ಬಾಲಚಂದ್ರನ್ ಅವರು ‘ಅಂಕಲ್ ಬನ್’, ‘ಉಲ್ಲಾಡಕ್ಕಂ’, ‘ಅಗ್ನಿದೇವನ್’, ‘ಪವಿತ್ರಂ’ ಮತ್ತು ‘ಪುನರಾದಿವಸಂ’ ಸೇರಿದಂತೆ ಹಲವಾರು ಜನಪ್ರಿಯ ಮಲಯಾಳಂ ಚಲನಚಿತ್ರಗಳಿಗೆ ಚಿತ್ರಕತೆ ಬರೆದಿದ್ದಾರೆ.
ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ಅವರು ನಾಟಕರಂಗದಲ್ಲಿ ಪ್ರಸಿದ್ಧಿ ಪಡೆದಿದ್ದರು. 1989ರಲ್ಲಿ ಬಾಲಚಂದ್ರನ್ ಅವರು ಅತ್ಯುತ್ತಮ ನಾಟಕ ರಚನೆಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಾಲಚಂದ್ರನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.