ಮದುವೆ ಕುರಿತಾದ ಸಾಕಷ್ಟು ಕಥೆಗಳು ಈಗಾಗಲೇ ಸಿನಿಮಾಗಳಾಗಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ‘ಒಂದು ಮದುವೆ ಕಥೆ’. ಹಿರಿಯ ರಂಗಕರ್ಮಿ ಕನಸುರಮೇಶ್ ನಿರ್ದೇಶನದ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಸಂಪೂರ್ಣ ಹಾಸ್ಯ ಕಥೆ ಹೊಂದಿರುವ ಚಿತ್ರಕ್ಕೆ ಉದ್ಯಮಿ ವಿಜೆಯೇಂದ್ರಗೌಡ ಬಂಡವಾಳ ಹೂಡುತ್ತಿದ್ದಾರೆ.
‘ಮದುವೆ ಎಂಬುದು ಗಂಡು–ಹೆಣ್ಣಿನ ಬದುಕಿನ ತಿರುವು. ಅದು ಆಗೋದಕ್ಕೆ ಏನೆಲ್ಲಾ ಪ್ರಯತ್ನಗಳು ನಡೆಯುತ್ತವೆ, ಯಾರ್ಯಾರು ಅಡ್ಡಿಪಡಿಸುತ್ತಾರೆ ಎಂಬುದು ಚಿತ್ರದ ಕಥೆ. ಒಂದು ಕಾಲದಲ್ಲಿನ ಹೆಣ್ಣು ಭ್ರೂಣಹತ್ಯೆಯಿಂದ ಇವತ್ತು ಹಳ್ಳಿಗಳಲ್ಲಿ ಹುಡುಗರಿಗೆ ಹುಡುಗಿ ಸಿಗದಂತಾಗಿದೆ. ಇಂತಹ ಸಂದರ್ಭದಲ್ಲಿ ವಯಸ್ಸಾದ ವ್ಯಕ್ತಿಗೆ ಮದುವೆ ನಿಶ್ಚಯವಾಗುತ್ತದೆ. ಮುಂದೇನಾಗುತ್ತದೆ ಎಂಬುದೇ ಚಿತ್ರಕಥೆ’ ಎಂದರು ನಿರ್ದೇಶಕರು.
‘ತಪ್ದೇ ಎಲ್ಲರೂ ಬನ್ನಿ’ ಎಂಬ ಅಡಿಬರಹವಿದೆ. ರವಿಸಿರಿ, ಗಹನ, ಜಯರಾಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಗಣೇಶ್ರಾವ್ ಕೇಸರ್ಕರ್, ಕಿಲ್ಲರ್ ವೆಂಕಟೇಶ್, ಮಿಮಿಕ್ರಿ ಗೋಪಿ ಮುಂತಾದವರು ತಾರಾಗಣದಲ್ಲಿದ್ದಾರೆ.
ರವಿಕುಮಾರ್ ಕಪ್ಪುಸೋಗೆ ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಮನು ರಾವ್ ಸಂಗೀತ ಸಂಯೋಜಿಸಿದ್ದಾರೆ. ದೀಪಕ್ಕುಮಾರ್.ಜೆ.ಕೆ ಛಾಯಾಚಿತ್ರಗ್ರಹಣ, ಜಾಬ್ಸನ್ ಸಂಕಲನವಿದೆ. ಮೈಸೂರು ಮತ್ತು ಮಂಡ್ಯಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.