ಕನ್ನಡ ಚಿತ್ರರಂಗದಲ್ಲೂ ಈಗ ಪ್ಯಾನ್ ಇಂಡಿಯಾ ಸೂತ್ರ ಬಳಕೆಯಾಗುತ್ತಿದೆ. ‘ಕೆಜಿಎಫ್ ಚಾಪ್ಟರ್ 1’, ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಇದಕ್ಕೊಂದು ನಿದರ್ಶನ. ಸುದೀಪ್ ನಟನೆಯ ‘ಪೈಲ್ವಾನ್’ನದ್ದೂ ಇದೇ ಹಾದಿಯ ಪಯಣ. ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಕೂಡ ಈ ಕಾನ್ಸೆಪ್ಟ್ನಡಿಯೇ ನಿರ್ಮಾಣವಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಪ್ಯಾನ್ ಇಂಡಿಯಾ ಎಂದಾಕ್ಷಣ ಕಲಾವಿದರ ಆಯ್ಕೆಯಲ್ಲಿ ಬದಲಾವಣೆ ಸಹಜ. ಹಿಂದಿಯ ಚಿತ್ರಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು ಹೆಜ್ಜೆ ಹಾಕುವುದು ಸರ್ವೇ ಸಾಮಾನ್ಯ. ಹಾಗೆಯೇ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಉತ್ತರ ಭಾರತದ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಮಾರುಕಟ್ಟೆಯನ್ನು ವಿಸ್ತರಿಸುವುದಷ್ಟೇ ಇದರ ಹಿಂದಿರುವ ಉದ್ದೇಶ.
ಸುದೀಪ್ ನಟನೆಯ ಬಹುನಿರೀಕ್ಷಿತ ‘ಪೈಲ್ವಾನ್’ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಸೆಪ್ಟೆಂಬರ್ 12ರಂದು ಬಿಡುಗಡೆಯಾಗಲಿದೆ. 3 ಸಾವಿರ ಚಿತ್ರಮಂದಿರಗಳಿಗೆ ಇದು ಲಗ್ಗೆ ಇಡಲಿದೆಯಂತೆ.
ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ಅವರ ಪತ್ನಿ ಸ್ವಪ್ನಾ ಕೃಷ್ಣ. ಹಿಂದಿ ಕಿರುತೆರೆಯ ನಟಿ ಆಕಾಂಕ್ಷಾ ಸಿಂಗ್ ಇದರ ನಾಯಕಿ. ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ತಾರಾಗಣದಲ್ಲಿದ್ದಾರೆ.
ಬಾಲಿವುಡ್ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಈ ಚಿತ್ರಕ್ಕೂ ನೃತ್ಯ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕರುಣಾಕರ ಎ. ಅವರದ್ದು.