ಸೂಪರ್ ಹಿಟ್ ಆಗಿದ್ದ ಸಿನಿಮಾಗಳ ಶೀರ್ಷಿಕೆ ಬಳಸಿಕೊಂಡು, ಹೊಸದೊಂದು ಸಿನಿಮಾ ಮಾಡುವುದು ಚಂದನವನದಲ್ಲಿ ನಡೆಯುತ್ತಿದೆ. ಇಂತಹ ಕೆಲಸಕ್ಕೆ ಹೊಸದೊಂದು ಉದಾಹರಣೆ ‘ಪ್ರಚಂಡ ಪುಟಾಣಿಗಳು’ ಚಿತ್ರ.
ರಾಜೀವ್ ಕೃಷ್ಣ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. 1981ರಲ್ಲಿ ಗೀತಪ್ರಿಯಾ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಪ್ರಚಂಡ ಪುಟಾಣಿಗಳು’ ಚಿತ್ರ ಸೂಪರ್ ಹಿಟ್ ಆಗಿತ್ತು. ಸುಂದರಕೃಷ್ಣ ಅರಸ್, ಟೈಗರ್ ಪ್ರಭಾಕರ್, ಸದಾಶಿವ ಬ್ರಹ್ಮಾವರ ಇದರಲ್ಲಿ ನಟಿಸಿದ್ದರು. ಹೊಸ ಕಾಲದ ‘ಪ್ರಚಂಡ ಪುಟಾಣಿಗಳು’ ಚಿತ್ರದ ಕೆಲಸವನ್ನು ಮಾರ್ಚ್ 27ರಿಂದ ಆರಂಭಿಸುವ ಉದ್ದೇಶ ಸಿನಿತಂಡದ್ದು. ಇದು ಸಾಧ್ಯವಾಗಲು ‘ಕೊರೊನಾ ಮಾರಿ’ಯಿಂದ ಮುಕ್ತಿ ಬೇಕು ಎಂಬುದು ನಿಜ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ 45 ಮಕ್ಕಳು ತಮ್ಮ ಶಿಕ್ಷಕರ ಜೊತೆ ಸವದತ್ತಿ, ಗೋಕಾಕ್ ಪ್ರವಾಸಕ್ಕೆ ಹೊರಟಿರುತ್ತಾರೆ. ಮಾರ್ಗಮಧ್ಯ ಒಂದು ಆಶ್ರಮದಲ್ಲಿ ಆಶ್ರಯ ಪಡೆದುಕೊಳ್ಳುತ್ತಾರೆ. ಅಲ್ಲಿ ಐದು ಜನ ಮಕ್ಕಳು ನಿಧಿಗಳ್ಳರ ಕೈಗೆ ಸಿಲುಕಿಕೊಳ್ಳುತ್ತಾರೆ. ನಿಧಿಗಳ್ಳರ ಗುಂಪಿನಿಂದ ಮಕ್ಕಳು ಹೇಗೆ ಪಾರಾಗಿ ಬರುತ್ತಾರೆ ಎಂಬುದು ಚಿತ್ರದ ಕಥಾಹಂದರ
‘ಮಕ್ಕಳು ನಿಧಿಗಳ್ಳರಿಂದ ತಪ್ಪಿಸಿಕೊಂಡು ಬರುವುದರಲ್ಲಿನ ವೈಶಿಷ್ಟ್ಯ ಈ ಚಿತ್ರದ ಪ್ಲಸ್ ಪಾಯಿಂಟ್’ ಎನ್ನುತ್ತಾರೆ ರಾಜೀವ್.
‘ಹಿಂದೆ ತೆರೆಗೆ ಬಂದಿದ್ದ ಪ್ರಚಂಡ ಪುಟಾಣಿಗಳು ಸಿನಿಮಾವನ್ನು ನಾವೆಲ್ಲ ಟೆಂಟ್ಗಳಲ್ಲಿ ವೀಕ್ಷಿಸಿದ್ದೆವು. ಅದರಲ್ಲಿನ ಮಕ್ಕಳು ತೋರಿದಂತಹ ಧೈರ್ಯವನ್ನು ನಮ್ಮ ಸಿನಿಮಾದಲ್ಲಿನ ಮಕ್ಕಳೂ ತೋರುತ್ತಾರೆ. ಹಾಗಾಗಿ, ಹಳೆಯ ಶೀರ್ಷಿಕೆಯನ್ನು ಬಳಸಿಕೊಂಡಿದ್ದೇವೆ’ ಎಂದು ವಿವರಿಸಿದರು.
ಅವಿನಾಶ್ ಇದರಲ್ಲಿ ಮುಖ್ಯ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಮಾಸ್ಟರ್ ಭರಮೇಶ್, ಮಾಸ್ಟರ್ ಮನೀಶ್, ಬೇಬಿ ನೇಹಾ ತಾರಾಗಣದಲ್ಲಿದ್ದಾರೆ. ಆರ್. ಪ್ರಮೋದ್ ಅವರ ಛಾಯಾಗ್ರಹಣವಿದೆ. ವಿನುಮನಸು ಅವರ ಸಂಗೀತ ಚಿತ್ರಕ್ಕಿದೆ. ಕೋಲಾರ, ಚಿಕ್ಕಬಳ್ಳಾಪುರ, ಹರಿಹರ, ಸವದತ್ತಿಯಲ್ಲಿ ಚಿತ್ರೀಕರಣ ನಡೆಯಲಿದೆ.