ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬರಗಿಯನ್ನು ಸುಮ್ಮನೇ ಬಿಡಲ್ಲ: ಸಂಜನಾ ಆಕ್ರೋಶ

Last Updated 8 ಸೆಪ್ಟೆಂಬರ್ 2020, 3:12 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಒಂದು ಹೆಣ್ಣು, ನನಗೆ ಇನ್ನೂ ಮದುವೆಯಾಗಿಲ್ಲ. ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಪ್ರಶಾಂತ್‌ ಸಂಬರಗಿ ಯಾರು? ನಾನು ಸಂಬರಗಿಯನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ನಟಿ ಸಂಜನಾ ಗರ್ಲಾನಿ ಕಿಡಿಕಾರಿದ್ದಾರೆ.

ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಣ್ಣೀರು ಹಾಕುತ್ತಲೇಮಾತನಾಡಿದ ಅವರು, ವಕೀಲ ಪ್ರಶಾಂತ್‌ ಸಂಬರಗಿ ಮಾಡಿರುವ ಆರೋಪಗಳಿಗೆ ಆಕ್ರೋಶ ವ್ಯಕ್ತಪಡಿಸಿ, ಸಂಬರಗಿ ವಿರುದ್ಧ ಏಕವಚನ ಮತ್ತು ಅಸಂವಿಧಾನಿಕ ಪದಗಳನ್ನು ಪ್ರಯೋಗಿಸಿದ್ದಾರೆ.

‘ನಮ್ಮ ಅಮ್ಮನಿಗೆ ಎದೆ ನೋವು ಕಾಣಿಸಿಕೊಂಡಿದೆ. ನಮ್ಮ ಅಮ್ಮನ ಹೃದಯ ದುರ್ಬಲವಾಗಿದೆ. ಈಗಾಗಲೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.ಪ್ರಶಾಂತ್ ಸಂಬರಗಿ ನನ್ನ ವಿರುದ್ಧ ಮಾತನಾಡಿ ನಮ್ಮ ಅಮ್ಮನ ಜೀವಕ್ಕೆ ಏನಾದರೂ ತೊಂದರೆಯಾದರೆ,ನಾನು ಸತ್ತರೂ ಅವನನ್ನು ಬಿಡುವುದಿಲ್ಲ’ ಎಂದು ಕಿಡಿಕಾರಿದ್ದಾರೆ.

ಕ್ಯಾಸಿನೋಗೆ ಉಪ್ಪಿ, ಯಶ್‌ ಕೂಡ ಹೋಗಿದ್ದಾರೆ

‘ಶ್ರೀಲಂಕಾದ ಕ್ಯಾಸಿನೋಗೆ ಪ್ರತಿ ತಿಂಗಳು ಸೆಲೆಬ್ರಿಟಿಗಳನ್ನು ಆಹ್ವಾನಿಸುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹೀಗೆ ಪ್ರತಿ ರಾಜ್ಯದಿಂದ ತಲಾ 200 ಸೆಲೆಬ್ರಿಟಿಗಳನ್ನು ಆಹ್ವಾನಿಸುತ್ತಾರೆ.ಅವರ ಆಹ್ವಾನದ ಮೇರೆಗೆ ನಾನೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನನ್ನ ತಂದೆ–ತಾಯಿಯ ಜತೆಗೆ ಹೋಗಿದ್ದೆ. ಉಪೇಂದ್ರ ಸರ್‌, ಯಶ್‌ ಸರ್‌, ಆಶಿಕಿ–2 ಚಿತ್ರದ ಖ್ಯಾತಿಯ ಆದಿತ್ಯ ರಾಯ್‌ ಕಪೂರ್‌ ಕೂಡ ಕ್ಯಾಸಿನೋಗೆ ಹೋಗಿದ್ದಾರೆ. ಕ್ಯಾಸಿನೋ ಕಾರ್ಯಕ್ರಮದಲ್ಲಿ ನನ್ನ ಜೊತೆಗೆಬಾಲಿವುಡ್‌ ನಟ ವಿವೇಕ್ ಒಬೆರಾಯ್ ವೇದಿಕೆ ಹಂಚಿಕೊಂಡಿದ್ದರು’ ಎಂದು ಸಂಜನಾ ಹೇಳಿದ್ದಾರೆ.

ಜಮೀರ್ ಅಹ್ಮದ್ ಖಾನ್ ಮತ್ತು ಸಂಜನಾ ಒಂದೇ ದಿನ ಕೊಲೊಂಬೊಗೆ ಏಕೆ ಹೋಗಿದ್ದರು ಎಂದು ಪ್ರಶಾಂತ್ ಸಂಬರಗಿ ಎತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು,‘ನನಗೆ ಜಮೀರ್ ಅಹ್ಮದ್ ಯಾರು ಎಂದು ಗೊತ್ತೇ ಇರಲಿಲ್ಲ. ಅವರು ದೊಡ್ಡ ಶಾಸಕರು.ಆ ಕಾರ್ಯಕ್ರಮಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಬಹಳ ಜನ ಕಲಾವಿದರು ಅಲ್ಲಿಗೆ ಬಂದಿದ್ದರು.ಬರಿ ಪ್ರಚಾರಕ್ಕಾಗಿ ಸಂಬರಗಿ ನನ್ನನ್ನುಟಾರ್ಗೆಟ್ ಮಾಡಿ ಆರೋಪ ಮಾಡುತ್ತಿದ್ದಾನೆ. ಜಮೀರ್ ಅಹ್ಮದ್ ಸರ್ ದಯವಿಟ್ಟು ಪ್ರಶಾಂತ್ ಸಂಬರಗಿಯನ್ನು ಸುಮ್ಮನೇ ಬಿಡಬೇಡಿ’ಎಂದು ಕಣ್ಣೀರು ಹಾಕಿದ್ದಾರೆ.

ನಾನು ಚಿಯರ್ ಗರ್ಲ್ ಅಲ್ಲ

ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ಸಂಜನಾ ಚಿಯರ್ ಗರ್ಲ್ ಆಗಿದ್ದರು, ₹ 300ಕ್ಕೆ ಕೆಲಸ ಮಾಡಿದ್ದರು ಎಂದು ಸಂಬರಗಿ ಮಾಡಿರುವ ಆರೋಪಕ್ಕೂ ಉತ್ತರಿಸಿದ ಸಂಜನಾ, ‘ನಾನು ಚಿಯರ್ ಗರ್ಲ್ ಅಲ್ಲ. ₹500ಕ್ಕೆ ಮಾಡೆಲಿಂಗ್ ಮಾಡಿದ್ದೇನೆ. ಈಗಿನ ಕಾಲಕ್ಕೆ ಅದು ₹5,000 ಬೆಲೆ.ನಾನು ಸೆಲೆಬ್ರಿಟಿ ಆಗಿದ್ದೇ ತಪ್ಪಾ?ಆ ಬೀದಿ ನಾಯಿ ನನ್ನ ಹಿಂದೆ ಯಾಕೆ ಬಿದ್ದಿದ್ದಾನೆ ಗೊತ್ತಿಲ್ಲ. ನನಗೆ ತುಂಬಾ ಕಷ್ಟ ಆಗುತ್ತಿದೆ’ ಎಂದು ನೋವು ತೋಡಿಕೊಂಡಿದ್ದಾರೆ.

‘ನನ್ನ ರಾಖಿ ಬ್ರದರ್‌ ರಾಹುಲ್‌ ಒಳ್ಳೆಯ ಹುಡುಗ. ರಾಹುಲ್‌ ಹೊರಗೆ ಬಂದರೆ ಸಾಕು.ಎಫ್ಐಆರ್‌ನಲ್ಲಿ ನನ್ನ ಹೆಸರು ಇಲ್ಲ. ಸಂಜನಾ ಡ್ರಗ್ಸ್‌ನಲ್ಲಿದ್ದಾರೆ ಎಂದು ಹೇಳಲು ಯಾರಿಗೂ ಅಧಿಕಾರ ಇಲ್ಲ. ಯಾವುದೇ ಸಾಕ್ಷ್ಯ ಇಲ್ಲದೆ ಸಂಬರಗಿ ಮಾತನಾಡುತ್ತಿದ್ದಾನೆ. ಆದರೆ ನಾನು ತುಂಬಾ ಕಷ್ಟಪಟ್ಟು ಹೆಸರು ಸಂಪಾದಿಸಿದ್ದೇನೆ. 50 ಸಿನಿಮಾಗಳಲ್ಲಿ ನಟಿಸಿರುವ ಪಂಚಭಾಷಾ ತಾರೆ ನಾನು. ನನಗೆ ಅಗ್ಗದ ಪ್ರಚಾರ ಬೇಕಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮೂರು ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಸಾಕು’

‘ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ.ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದೇಕೆ? ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ. ಸಂಜನಾ ಮಹಿಳೆಯಾಗಿರುವುದಕ್ಕೆ ಮತ್ತು ಅವರ ವೃತ್ತಿಯನ್ನು ನಾನು ಗೌರವಿಸುವೆ. ನಾವು ಕೇಳುತ್ತಿರುವ ಮೂರು ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ಟರೆ ಸಾಕು, ನಾವು ಅವರ ವಿರುದ್ಧ ಆರೋಪ ಮಾಡುತ್ತಿಲ್ಲ. ನಮ್ಮ ಪ್ರಶ್ನೆಗಳಿಗೆ ಭಾವನಾತ್ಮಕವಾಗಿ ಕೆರಳಿ ನಿಂದಿಸುವುದು ಉತ್ತರವಾಗುವುದಿಲ್ಲ’ ಎಂದು ವಕೀಲ ಪ್ರಶಾಂತ್‌ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.

ಸಂಜನಾ ಗರ್ಲಾನಿ ಅವರಿಗೆ ‘ನೀವು ಶ್ರೀಲಂಕಾದ ಜೂಜು ಅಡ್ಡೆಗೆ ಹೋಗಿದ್ದರೋ ಇಲ್ಲವೋ, ಅಲ್ಲಿ ಶಾಸಕ ಜಮೀರ್‌ ಅಹಮದ್‌ ಇದ್ದರೋ ಅಥವಾ ಇಲ್ಲವೋ? ಜೂಜೂ ಮತ್ತು ಬೆಟ್ಟಿಂಗ್‌ ಬಗ್ಗೆ ಯುವಜನತೆಗೆ ನಿಮ್ಮ ಸಂದೇಶವೇನು?’ ಎಂಬ ಮೂರು ಪ್ರಶ್ನೆಗಳನ್ನು ನಾನು ಟ್ವಿಟರ್‌ನಲ್ಲಿ ಕೇಳಿದ್ದೇನೆ. ಈ ಪ್ರಶ್ನೆಗಳಿಗೆ ಗೌರವದ ಉತ್ತರ ಕೊಟ್ಟರೆ ಸಾಕು. ಅದನ್ನು ಬಿಟ್ಟು ರಂಪಾಟ ಮಾಡಿದರೆ ಏನು ಪ್ರಯೋಜನ? ಅವರು ದುಡಿಯುತ್ತಿರುವ ಮಾರ್ಗ ಮತ್ತು ಅವರ ಸಂಪಾದನೆ ಎಷ್ಟು ಎಂದು ನಾನು ಪ್ರಶ್ನಿಸುತ್ತಿಲ್ಲ. ನನ್ನನ್ನು ನಾಯಿ, ಹಂದಿ ಎಂದು ನಿಂದಿಸಿದ್ದಾರೆ.ನಾಯಿ ನಮ್ಮ ಮನೆದೇವರು ಕಾಲಭೈರವೇಶ್ವರನ ವಾಹನ. ನಾನು ನರಸಿಂಹನ ಆರಾಧಕನಾಗಿರುವುದರಿಂದ ನನ್ನ ಸಹೋದರಿಯ ಕನ್ಸಟ್ರಕ್ಷನ್‌ ಕಂಪನಿಗೆ ಶ್ರೀವರಹಸ್ವಾಮಿಹೆಸರು ಇಟ್ಟಿದ್ದೇವೆ. ನಾಯಿ ಮತ್ತು ಹಂದಿಯನ್ನು ನಾವು ಗೌರವಿಸುತ್ತೇವೆ. ಇನ್ನು ಅವರು ಚಪ್ಪಲಿಯಿಂದ ಹೊಡೆಯುವುದಾಗಿ ನಿಂದಿಸಿದ್ದಾರೆ. ಅದಕ್ಕಾಗಿ ಲೀಗಲ್‌ ನೋಟಿಸ್‌ ಕೊಡಲಿದ್ದೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT