ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಶ್ರುತಿ ಹರಿಹರನ್‌ ಸಂದರ್ಶನ | 'ನಿರ್ದೇಶಕಿಯಾಗಿ ಧುಮ್ಮಿಕ್ಕುವ ಅಭಿಲಾಷೆ'

Last Updated 21 ಅಕ್ಟೋಬರ್ 2022, 2:28 IST
ಅಕ್ಷರ ಗಾತ್ರ

‘ಹೆಡ್‌ಬುಷ್‌’ ಸಿನಿಮಾದಲ್ಲಿ ಭೂಗತ ದೊರೆ ಎಂ.ಪಿ.ಜಯರಾಜ್‌ ಪಾತ್ರಕ್ಕೆ ‘ಡಾಲಿ’ ಧನಂಜಯ ಬಣ್ಣಹಚ್ಚಿದ್ರೆ, ‘ರತ್ನಪ್ರಭಾ’ ಎಂಬ ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್‌ ನಟಿಸಿದ್ದಾರೆ. ತೆರೆಯಿಂದ ಕೊಂಚ ಬಿಡುವು ಪಡೆದು, ಮರಳಿರುವ ಶ್ರುತಿ ಅವರೊಂದಿಗೆ ಮಾತುಕತೆ ಇಲ್ಲಿದೆ.

***

ತೆರೆಯಿಂದ ಕೊಂಚ ದೂರವಿದ್ದಿರಿ. ಈ ಅವಧಿಯ ಬಗ್ಗೆ...
ಮಗುವಿನ ಜನ್ಮದ ಬಳಿಕ, ಆರೈಕೆ ದೃಷ್ಟಿಯಿಂದ ತೆರೆಯಿಂದ ಸುಮಾರು ಒಂದು ವರ್ಷ ನಾನೇ ದೂರವಿದ್ದೆ. ನಂತರದ ಎರಡು ವರ್ಷವನ್ನು ಕೋವಿಡ್‌ ಪಿಡುಗು ಆವರಿಸಿತು. ನಾನಷ್ಟೇ ಅಲ್ಲ, ಇಡೀ ಚಿತ್ರರಂಗವೇ ಆಗ ಸ್ತಬ್ಧವಾಗಿತ್ತು. ಆದರೂ, ಕೋವಿಡ್‌ ಪಿಡುಗಿನ ನಡುವೆ ಲಾಕ್‌ಡೌನ್‌ ತೆರವಾದ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆ, ಮುಂಜಾಗ್ರತಾ ಕ್ರಮ ಕೈಗೊಂಡು ಕೆಲಸ ಮಾಡಿದ್ದೆವು. ಇದರ ಪರಿಣಾಮವೇ ಇಂದು ‘ಹೆಡ್‌ಬುಷ್‌’ ಪ್ರೇಕ್ಷಕರೆದುರಿಗಿದೆ. ಮಗಳಿಗೆ ಎಂಟು ತಿಂಗಳಷ್ಟೇ ಆಗಿದ್ದಾಗ, ನಾನು ಮತ್ತೆ ಬಣ್ಣಹಚ್ಚಿದ್ದೆ. ಸೂರ್ಯ ವಸಿಷ್ಠ ನಿರ್ದೇಶನದ ‘ಸಾರಾಂಶ’ ಎಂಬ ಸಿನಿಮಾ ಅದು. ಇದೂ ರಿಲೀಸ್‌ಗೆ ಸಿದ್ಧವಾಗಿದೆ. ಕಳೆದ ಮೂರು ವರ್ಷದಲ್ಲಿ ನನ್ನ ಸಿನಿಮಾ ರಿಲೀಸ್‌ ಆಗಿರದೇ ಇರಬಹುದು. ಅದರರ್ಥ ನಾನು ಬಣ್ಣಹಚ್ಚುವುದನ್ನು ನಿಲ್ಲಿಸಿದ್ದೇನೆ ಎಂದಲ್ಲ. 2023ರಲ್ಲಿ ನನ್ನ ಹಲವು ಸಿನಿಮಾಗಳು ತೆರೆಕಾಣಲಿವೆ. ನನಗೆಂದೂ ಈ ಅವಧಿ ದೊಡ್ಡ ಗ್ಯಾಪ್‌ ಎಂದೆನಿಸಲಿಲ್ಲ.

ಬದಲಾದ ದೈಹಿಕ, ಮಾನಸಿಕ ಸ್ಥಿತಿಗೆ ಹೊಂದಿಕೊಂಡಿದ್ದು ಹೇಗೆ?
ನಾನೀಗ ದೈಹಿಕವಾಗಿ ಮೊದಲಿನಂತಿಲ್ಲ. ತೂಕ ಹೆಚ್ಚಾಗಿದೆ. ಮತ್ತೆ ಮೊದಲಿನಂತೆ ಕಾಣುವುದೂ ಕಷ್ಟಸಾಧ್ಯವಾಗಿದೆ. ಈ ವಿಷಯವನ್ನು ಪಕ್ಕಕ್ಕಿಡುತ್ತೇನೆ. ಮನಃಸ್ಥಿತಿ ವಿಚಾರಕ್ಕೆ ಬಂದರೆ, ಒಂದು ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಮಗಳನ್ನು ಬಿಟ್ಟು ಕೆಲಸಕ್ಕೆ ಹೋದಾಗ, ‘ಅಯ್ಯೋ ಪಾಪ’ ಎಂದೆನಿಸುತ್ತದೆ. ನಾಯಕಿಯರಿಗಷ್ಟೇ ಅಲ್ಲ, ಪ್ರತಿ ಹೆಣ್ಣಿಗೂ ಕಾಡುವ ವಿಷಯ ಇದು. ಮದುವೆಯ ಬಳಿಕ ಆದ್ಯತೆಗಳೂ ಬದಲಾಗುತ್ತಾ ಹೋಗುತ್ತವೆ. ಕುಟುಂಬದ ಜವಾಬ್ದಾರಿ ಇದೆ. ಕೆಲವೊಮ್ಮೆ ಇದು ಒತ್ತಡಕ್ಕೂ ಕಾರಣವಾಗುತ್ತದೆ. ಆದರೆ, ನನ್ನ ಪತಿ ನನ್ನ ಬೆನ್ನಿಗೆ ನಿಂತಿದ್ದಾರೆ. ಮಗುವಿನ ಆರೈಕೆಗೆ ಕುಟುಂಬ ಜೊತೆಯಾಗಿದೆ. ಹೀಗಾಗಿ ನಾನು ಚಿತ್ರರಂಗದಲ್ಲಿ ಮತ್ತೆ ಸಕ್ರಿಯಳಾಗುತ್ತಿದ್ದೇನೆ.

ಕೋವಿಡ್‌ ಬಳಿಕ, ಸಿನಿಮಾದಲ್ಲಿ ಹೆಣ್ಣಿನ ಪಾತ್ರ ಪೋಷಣೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಈ ಬದಲಾವಣೆ ಕುರಿತು...

ಇದರ ಸಂಪೂರ್ಣ ಕ್ರೆಡಿಟ್‌ ಆನ್‌ಲೈನ್‌ ವೇದಿಕೆಗಳಿಗೆ, ಒಟಿಟಿ ಪ್ಲ್ಯಾಟ್‌ಫಾರಂಗಳಿಗೆ ಸಲ್ಲಬೇಕು. ಚಿತ್ರಮಂದಿರಗಳನ್ನೇ ನೋಡದ ಹಲವು ಮಹಿಳೆಯರ ಕೈಗೇ ಇಂದು ಸಿನಿಮಾ ತಲುಪುತ್ತಿದೆ. ಒಂದು ಕಾಲವಿತ್ತು, ಏಕಪರದೆ ಚಿತ್ರಮಂದಿರಗಳಲ್ಲಿ ಮಹಿಳೆಯರಿಗೆ ಶೌಚಾಲಯವೂ ಇರಲಿಲ್ಲ. ಸಿನಿಮಾಗಳು ಪುರುಷರಿಗಷ್ಟೇ ಸೀಮಿತ ಎನ್ನುವಂತಿತ್ತು. ಆ ಕಾಲದಿಂದ, ನಾವೀಗ ಮಲ್ಟಿಪ್ಲೆಕ್ಸ್‌, ಒಟಿಟಿ ಯುಗಕ್ಕೆ ಬಂದಿದ್ದೇವೆ. ಒಳ್ಳೆಯ ಕಥೆಗೆ ಖಂಡಿತಾ ಪ್ರೇಕ್ಷಕರಿದ್ದಾರೆ. ಸಿನಿಮಾ ಕಂಟೆಂಟ್‌ಗೆ ಆದ್ಯತೆ ದೊರೆಯುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಒಬ್ಬ ನಟಿಯ ವಯಸ್ಸು, ಮದುವೆ, ದೈಹಿಕ ಆಕಾರ ಯಾವುದೂ ಪರಿಗಣನೆ ಆಗುತ್ತಿಲ್ಲ. ಮಹಿಳೆಯನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆಯಲಾಗುತ್ತಿದೆ. ‘ಈ ರೀತಿ ಕಂಟೆಂಟ್‌ಗೆ ಪ್ರೇಕ್ಷಕರಿದ್ದಾರೆ’ ಎನ್ನುವ ಧೈರ್ಯವೂ ಸಿನಿಮಾ ಬರಹಗಾರರಿಗೆ ಬಂದಿದೆ. ಹೆಣ್ಣಾಗಿ ಈ ಬದಲಾವಣೆ ಬಗ್ಗೆ ಖುಷಿ ಇದೆ.

ನೈಜ ಘಟನೆ ಆಧಾರಿತ ಸಿನಿಮಾ ‘ಹೆಡ್‌ಬುಷ್‌’ನಲ್ಲಿ ಪಾತ್ರಕ್ಕಿದ್ದ ಸವಾಲುಗಳನ್ನು ಎದುರಿಸಿದ ಬಗೆ...
ಈ ಸಿನಿಮಾದ ಮೂಲ ಕೃತಿಯನ್ನು ನಾನು ಓದಿಲ್ಲ. ‘ರತ್ನಪ್ರಭಾ’ ಎನ್ನುವ ಪಾತ್ರವನ್ನು ನಿಭಾಯಿಸಲು ಸಂಪೂರ್ಣವಾದ ಮಾರ್ಗದರ್ಶನ ದೊರಕಿದ್ದು ಅಗ್ನಿ ಶ್ರೀಧರ್‌ ಅವರಿಂದ. ಅವರು ಕಣ್ಣಾರೆ ನೋಡಿದ್ದನ್ನು, ಅನುಭವಿಸಿದ್ದನ್ನು ನಮಗೆ ತಿಳಿಸಿದರು. ಹೀಗಾಗಿ ಪಾತ್ರದ ವಿಚಾರದಲ್ಲಿ ಅವರ ಮೇಲೆಯೇ ನಮ್ಮ ನಂಬಿಕೆ ಇತ್ತು. ‘ರತ್ನಪ್ರಭಾ’ is a opinionated women. ಪುರುಷ ಪ್ರಧಾನವಾಗಿದ್ದ ಆಗಿನ ಕಾಲದಲ್ಲೂ, ರತ್ನಪ್ರಭಾ ಯಾವತ್ತೂ ಹೆದರಲಿಲ್ಲ. ಆಕೆಯ ಮಾತಿನಲ್ಲೇ ಒಂದು ಶಕ್ತಿ ಇತ್ತು. ಎಲ್ಲಾ ಕಲಾವಿದರಿಗೂ ಮಾರ್ಗದರ್ಶನ ನೀಡಿ, ಪಾತ್ರಗಳು ಸಹಜವಾಗಿ ಮೂಡುವಂತೆ ಮಾಡಿರುವ ಅಗ್ನಿ ಶ್ರೀಧರ್‌ ಅವರಿಗೇ ಎಲ್ಲ ಕ್ರೆಡಿಟ್‌ ಸಲ್ಲಬೇಕು. ‘ರತ್ನಪ್ರಭಾ’ ಪಾತ್ರ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ, ಅದಕ್ಕೆ ನ್ಯಾಯ ಒದಗಿಸಿದ್ದೇನೆ ಎನಿಸುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಎದ್ದಿರುವ ಹೊಸ ಅಲೆಯ ಬಗ್ಗೆ ನಿರ್ಮಾಪಕಿಯಾಗಿ ನಿಮ್ಮ ಮಾತು...
ಈಗಿನ ಸಿನಿಮಾ ಬರಹಗಾರರಿಗೆ ಯಾವುದೇ ಅಡೆತಡೆ ಇಲ್ಲ. ಅವಕಾಶಗಳು ಹೇರಳವಾಗಿವೆ. ಒಂದು ಕಂಟೆಂಟ್‌ ಯಶಸ್ಸು ಕಾಣುತ್ತದೆಯೋ ಇಲ್ಲವೋ ಎನ್ನುವ ಭಯ ಯಾರಿಗೂ ಇಲ್ಲ. ಅದ್ಭುತ ಕಂಟೆಂಟ್‌ಗಳನ್ನು ತೆರೆಯ ಮೇಲೆ ತರುವಲ್ಲಿ ಧನಂಜಯ, ರಕ್ಷಿತ್‌ ಶೆಟ್ಟಿ ಅವರಂಥ ಹಲವರು ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ.

ಧನಂಜಯ ಅವರನ್ನು ಜಯರಾಜ್‌ ಆಗಿ ಕಂಡ ರೀತಿ...
ನನ್ನ ಹಾಗೂ ಧನಂಜಯ ಅವರ ಸ್ನೇಹ ದಶಕದ್ದು. ‘ರಾಟೆ’ ಸಿನಿಮಾ ಮೂಲಕ ನಮ್ಮ ಈ ಸಿನಿವೃತ್ತಿಯನ್ನು ಜೊತೆಗೇ ಆರಂಭಿಸಿದ್ದೆವು. ‘ಅಲ್ಲಿಂದೀಚೆಗೆ ಧನಂಜಯ ಬದಲಾಗಿದ್ದಾರಾ?’ ಎಂದು ಕೇಳಿದರೆ ಖಂಡಿತಾ ಅವರ ಜೀವನ ಬದಲಾಗಿದೆ. ಅವರು, ಕಂಡ ಕನಸುಗಳನ್ನು ನನಸಾಗಿಸುತ್ತಾ ಬಂದಿದ್ದಾರೆ. ಆದರೆ ಅವರ ವ್ಯಕ್ತಿತ್ವ ಬದಲಾಗಿಲ್ಲ. ಬಂದ ದಾರಿಯನ್ನು ಅವರು ಯಾವತ್ತೂ ಮರೆತಿಲ್ಲ. ಎಷ್ಟೇ ಎತ್ತರಕ್ಕೆ ಬೆಳೆದರೂ ಜೊತೆಗೊಂದಿಷ್ಟು ಜನರನ್ನೂ ಕರೆದೊಯ್ಯುತ್ತಾರೆ. ಹೊಸಬರಿಗೆ ಡಾಲಿ ಪಿಕ್ಚರ್ಸ್‌ ಮೂಲಕ ಅವಕಾಶ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಡಾನ್‌ ಜಯರಾಜ್‌ ಆಗಿದ್ದರೂ, ಅವರ ವ್ಯಕ್ತಿತ್ವ ಇನ್ನೂ ‘ಜಯನಗರ 4th Block’ನಲ್ಲಿರುವ ಧನಂಜಯನಂತೆಯೇ ಇದೆ.

ಸಿನಿಪಯಣದಲ್ಲಿ ಮುಂದಿನ ಹೆಜ್ಜೆ...
ಪರಂವಃ ಸ್ಪಾಟ್ಲೈಟ್‌ನಡಿ ನಿರ್ಮಾಣವಾಗಿರುವ, ಅರ್ಜುನ್ ಲೂವಿಸ್ ಅವರ ‘ಸ್ಟ್ರಾಬರಿ’ ಸಿನಿಮಾ ಹಾಗೂ ಎನ್‌.ಎಸ್‌.ಶಂಕರ್‌ ಅವರ ‘ಈಗ’ ಬಿಡುಗಡೆಗೆ ಸಜ್ಜಾಗಿದೆ. ಎರಡು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಈ ಬಗ್ಗೆ ಮುಂದೆ ಮಾಹಿತಿ ನೀಡುತ್ತೇನೆ.

ನಟಿಯಾಗಿ ಕೆಲಸ ನಿಲ್ಲಿಸಲು ಇಷ್ಟಪಡುವುದಿಲ್ಲ. ಅವಕಾಶಗಳು ಬಂದರೆ ಖಂಡಿತವಾಗಿಯೂ ಬಿಡುವುದಿಲ್ಲ. ನಿರ್ದೇಶಕಿಯಾಗಿ ಧುಮ್ಮಿಕ್ಕುವ ಅಭಿಲಾಷೆ ಇದೆ. ಇಲ್ಲಿಯವರೆಗೂ ಈ ಬಗ್ಗೆ ಒಂದು ಹಿಂಜರಿಕೆ ಇತ್ತು. ಆರಂಭಿಕ ಹೆಜ್ಜೆಯಾಗಿ ಒಂದು ಮ್ಯೂಸಿಕ್‌ ವಿಡಿಯೊ ನಿರ್ದೇಶಿಸಿ, ನಿರ್ಮಾಣ ಮಾಡಿದ್ದೇನೆ.ಶೀಘ್ರದಲ್ಲೇ ಇದು ಬಿಡುಗಡೆಯಾಗಲಿದೆ. ಬರವಣಿಗೆ ಆರಂಭಿಸಿದ್ದೇನೆ. ನಟನೆ, ನಿರ್ದೇಶನ ಹಾಗೂ ನಿರ್ಮಾಣ ಜೊತೆಜೊತೆಯಾಗಿ ಸಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT