ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಒಣಗಿ ಕುಳಿತಿರುವಾಗ, ಇದೆಂಥ ಮೋಜು? ಸೌಂದರ್ಯಗೆ ನೆಟ್ಟಿಗರ ತರಾಟೆ

Last Updated 3 ಜುಲೈ 2019, 19:45 IST
ಅಕ್ಷರ ಗಾತ್ರ

ಇಡೀ ಚೆನ್ನೈನ ನಗರವೇ ನೀರಿಲ್ಲದೇ ತತ್ತರಿಸಿರುವ ಹೊತ್ತಿನಲ್ಲೇ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಸೌಂದರ್ಯ ರಜನಿಕಾಂತ್‌ ಅವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಚಿತ್ರವೊಂದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ಎಚ್ಚೆತ್ತುಕೊಂಡ ಸೌಂದರ್ಯ ಫೋಟೊವನ್ನು ಡಿಲಿಟ್‌ ಮಾಡಿ, ಸಮಜಾಯಿಷಿಯನ್ನೂ ನೀಡಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಸೌಂದರ್ಯ ರಜನಿಕಾಂತ್‌ ತಮ್ಮ ಕೆಲವು ಫೋಟೊಗಳನ್ನು ಪ್ರಕಟಿಸಿದ್ದರು.ತಮ್ಮ ಪುತ್ರನೊಂದಿಗೆ ಈಜುಕೊಳದಲ್ಲಿ ಆಟವಾಡುತ್ತಿರುವ ಸನ್ನಿವೇಶದ ಚಿತ್ರವೂ ಅದರಲ್ಲಿತ್ತು. ಈ ಚಿತ್ರ ಚೆನ್ನೈನ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಯಿತು. ಚೆನ್ನೈ ನಗರ ನೀರಿಲ್ಲದೇ ಪರಿತಪಿಸುತ್ತಿರುವಾಗ ಈ ಫೋಟೊವನ್ನು ಹಂಚಿಕೊಂಡಿರುವುದು ಸರಿಯಲ್ಲ. ಇದು ಸೂಕ್ತ ಸಮಯವಲ್ಲ ಎಂದು ಜನ ಟೀಕೆ ಮಾಡಲಾರಂಭಿಸಿದರು. ಹಾಗಾಗಿ ಸೌಂದರ್ಯ ಅವರು ಈಜುಕೊಳದ ಚಿತ್ರವನ್ನು ಡಿಲಿಟ್‌ ಮಾಡಿದರು.

ಫೋಟೊ ಡಿಲಿಟ್‌ ಮಾಡಿದ್ದಕ್ಕೆ ಸೌಂದರ್ಯ ಅವರು ಸಮಜಾಯಿಷಿಯನ್ನೂ ನೀಡಿದ್ದಾರೆ. ‘ನನ್ನ ಪ್ರವಾಸ ಕಥನದ ಕೆಲ ಚಿತ್ರಗಳನ್ನು ನಾನು ಉತ್ತಮ ಉದ್ದೇಶದಿಂದಲೇ ಹಂಚಿಕೊಂಡಿದ್ದೆ. ಆದರೆ, ಚೆನ್ನೈ ನಗರ ಸದ್ಯ ಅನುಭವಿಸುತ್ತಿರುವ ಸನ್ನಿವೇಶದ ಸೂಕ್ಷ್ಮತೆಯನ್ನು ಅರಿತು ಅದನ್ನು ಈಗ ಡಿಲಿಟ್‌ ಮಾಡಿದ್ದೇನೆ. ಮಕ್ಕಳ ಬಾಲ್ಯದ ದೈಹಿಕ ಚಟುವಟಿಕೆಯ ಮಹತ್ವವನ್ನು ತಿಳಿಸಲೆಂದೇ ನಾನು ನನ್ನ ಮಗನ ಜತೆಗೆ ಈಜುಕೊಳದಲ್ಲಿದ್ದ ಚಿತ್ರವನ್ನು ಪ್ರಕಟಿಸಿದ್ದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಚೆನ್ನೈನಲ್ಲಿ ನೀರಿನ ಬವಣೆ ಎದುರಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ರಜನಿಕಾಂತ್‌ ಅವರು, ‘ಮಳೆ ನೀರು ಸಂಗ್ರಹಿಸಲು ನಾವು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಮುಂಗಾರು ಬರುವುದಕ್ಕೂ ಮೊದಲೇ ಕೆರೆ, ಕಾಲುವೆಗಳ ಹೂಳೆತ್ತಬೇಕು’ ಎಂದು ನೀರಿನ ಸಂರಕ್ಷಣೆ ಕುರಿತು ಮಾತನಾಡಿದ್ದರು.

ಸೌಂದರ್ಯ ಅವರು ರಜನಿಕಾಂತ್‌ ಅವರ ಹಿರಿಯ ಪುತ್ರಿ. ಇದೇ ವರ್ಷದ ಜನವರಿಯಲ್ಲಿ ಅವರು ವಿಶಾಖನ್‌ ಎಂಬುವವರನ್ನು ವಿವಾಹವಾಗಿದ್ದರು. ಇದಕ್ಕೂ ಮೊದಲು ಸೌಂದರ್ಯ ಆರ್‌. ಅಶ್ವಿನ್‌ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮೂರು ವರ್ಷದ ಮಗುವಿದೆ. ಸೌಂದರ್ಯ ಅವರು ವೃತ್ತಿಯಿಂದ ಗ್ರಾಫಿಕ್‌ ಡಿಸೈನರ್‌. ತಮ್ಮ ತಂದೆಯ ‘ಕೊಚಾಡಿಯನ್’ ಮತ್ತು 'ವೇಲೆಯಿಲ್ಲಾ ಪಟ್ಟದಾರಿ–2' ಅನ್ನು ಅವರೇ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT