ನಾಗ ಚೈತನ್ಯ ಜೊತೆ ಮಗು ಹೊಂದಬೇಕು ಎಂದು ಸಮಂತಾ ಬಯಸಿದ್ದಳು: ತೆಲುಗು ನಿರ್ಮಾಪಕಿ

ಹೈದರಾಬಾದ್: ನಟಿ ಸಮಂತಾ ಹಾಗೂ ನಾಗ ಚೈತನ್ಯ ವಿವಾಹ ವಿಚ್ಚೇದನ ಪ್ರಕರಣದಲ್ಲಿ ಕೆಲವರು ಸಮಂತಾ ಮೇಲೆ ಆರೋಪ ಮಾಡುತ್ತಿರುವುದಕ್ಕೆ ತೆಲುಗು ನಿರ್ಮಾಪಕಿ ನೀಲಿಮಾ ಗುಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಮಂತಾಳಿಗೆ ಬೇರೆ ಸಂಬಂಧವಿತ್ತು, ಗರ್ಭಪಾತ ಮಾಡಿಸಿಕೊಂಡಿದ್ದಳು ಎಂಬುದೆಲ್ಲ ಸುಳ್ಳು. ಕಳೆದ ವರ್ಷ ನಾನು ಸಮಂತಾಳನ್ನು ‘ಶಾಕುಂತಲಂ’ ಸಿನಿಮಾಕ್ಕಾಗಿ ಸಮಂತಾಳನ್ನು ಸಂಪರ್ಕಿಸಿದ್ದಾಗ, ಸಿನಿಮಾ ಮಾಡಲು ಖುಷಿಯಿಂದ ಒಪ್ಪಿಕೊಂಡಿದ್ದರು. ಆದರೆ, ಶೂಟಿಂಗ್ ಇವಾಗಲೇ ಬೇಡ, ಏಕೆಂದರೆ ನಾನು ಮಗು ಹೊಂದಬೇಕೆಂದು ಬಯಸಿದ್ದೇನೆ ಎಂದು ಹೇಳಿದ್ದರು’ ಎಂದು ಹೇಳಿದ್ದಾರೆ.
ಹೈದ್ರಾಬಾದ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ನೀಲಿಮಾ ಗುಣ ಅವರು ಈ ಹೇಳಿಕೆ ನೀಡಿದ್ದಾರೆ. ನೀಲಿಮಾ ಗುಣ ಅವರು ತೆಲುಗಿನ ನಿರ್ದೇಶಕ ಗುಣಶೇಖರ ಅವರ ಮಗಳು.
‘ಸಮಂತಾ ನಾಗ ಚೈತನ್ಯ ಜೊತೆ ಕುಟುಂಬವನ್ನು ಹೊಂದಬೇಕು ಎಂದು ಬಯಸಿದ್ದಳು. ಆದರೆ, ಈಗ ನಡೆದಿರುವ ಬೆಳವಣಿಗೆಗೆ ಕಾರಣ ಏನು ಎಂಬುದು ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಶಾಕುಂತಲಂ ಸಿನಿಮಾ ಕಾಳಿದಾಸನ ‘ಶಾಕುಂತಲಾ’ ನಾಟಕ ಆಧರಿಸಿ ಮುಂದಿನ ವರ್ಷ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಸಮಂತಾ ಶಾಕುಂತಲೆ ಆಗಿ ಅಭಿನಯಿಸಿದ್ದಾರೆ, ರುದ್ರಮ್ಮಾದೇವಿ ಖ್ಯಾತಿಯ ಗುಣಶೇಖರ್ ಅವರೇ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ನಿನ್ನೆಯಷ್ಟೇ ಸಮಂತಾ ಇದೇ ವಿಷಯವಾಗಿ ‘ನನ್ನ ಬಗ್ಗೆ ಹಲವು ಊಹಾಪೋಹಗಳು ಹರಡಿವೆ, ನನಗೆ ಬೇರೆ ಸಂಬಂಧವಿತ್ತು, ನಾನು ಗರ್ಭಪಾತ ಮಾಡಿಸಿಕೊಂಡಿದ್ದೆ, ನನಗೆ ಮಕ್ಕಳು ಬೇಕಿರಲಿಲ್ಲ ಮತ್ತು ನಾನು ಅವಕಾಶವಾದಿಯಾಗಿದ್ದೆ ಎಂದೆಲ್ಲ ಹೇಳಿದ್ದರು. ಆದರೆ, ಅವೆಲ್ಲವೂ ನಿಜವಲ್ಲ. ವಿಚ್ಛೇದನದ ನೋವೇ ದೀರ್ಘವಾದದ್ದು. ಅದರ ಜತೆಗೆ ಇಂತಹ ಮಾತುಗಳ ಮೂಲಕ ನನ್ನ ಮನಸ್ಸನ್ನು ಘಾಸಿಗೊಳಿಸಲಾಗುತ್ತಿದೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ. ನನ್ನ ಬಗೆಗಿನ ವದಂತಿಗಳೆಲ್ಲವೂ ಸುಳ್ಳು ಎಂದು ಹೇಳುತ್ತಿದ್ದೇನೆ. ಇದರಿಂದ ಹೊರಬರಲು ನನಗೆ ಇನ್ನಷ್ಟು ಸಮಯ ಬೇಕಿದೆ’ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: ಅಫೇರ್, ಅಬಾರ್ಶನ್ನ ವದಂತಿಗಳೆಲ್ಲ ಸುಳ್ಳು: ಸಮಂತಾ ಸ್ಪಷ್ಟನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.