ಬೆಂಗಳೂರು: ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಹತ್ಯಾಕಾಂಡದ ಕಥೆಯನ್ನು ಹೊಂದಿರುವ ‘ದಿ ಕಾಶ್ಮೀರ್ ಫೈಲ್ಸ್‘ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ.
ಚಿತ್ರದ ಆದಾಯವನ್ನು ದಾನ ಮಾಡಿ, ಅದನ್ನು ಚಾರಿಟಿ ಕೆಲಸಗಳಿಗೆ ಬಳಸಿಕೊಳ್ಳಿ ಎಂದು ಹಲವರು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಮಾಜಿಕ ತಾಣಗಳ ಮೂಲಕ ಒತ್ತಾಯಿಸುತ್ತಿದ್ದಾರೆ.
ಆದೇ ರೀತಿಯಲ್ಲಿ, ಪಶ್ಚಿಮ ಬಂಗಾಳದಲ್ಲಿ ಐಎಎಸ್ ಅಧಿಕಾರಿ, ಲೇಖಕರಾಗಿರುವ ನಿಯಾಜ್ ಖಾನ್ ಎಂಬವರು ವಿವೇಕ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿ, ಸಿನಿಮಾ ಆದಾಯ ದಾನ ಮಾಡಿ ಎಂದಿದ್ದರು.
ಚಿತ್ರ ₹150 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಹೀಗಾಗಿ ನಿರ್ಮಾಪಕರು ಆದಾಯವನ್ನು ಕಾಶ್ಮೀರಿ ಪಂಡಿತರ ಕುಟುಂಬಕ್ಕೆ, ಅವರಿಗೆ ಮನೆ ನಿರ್ಮಿಸಲು ಮತ್ತು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಬೇಕು ಎಂದು ನಿಯಾಜ್ ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ವಿವೇಕ್, ನಾನು ಭೋಪಾಲ್ಗೆ ಬರುತ್ತಿದ್ದೇನೆ. ನಾವಿಬ್ಬರೂ ಅಲ್ಲಿ ಭೇಟಿಯಾಗಿ ಮಾತನಾಡೋಣ, ಸಹಾಯ ಮಾಡುವ ಕುರಿತು ಚರ್ಚಿಸೋಣ, ಹಾಗೆಯೇ ನಿಮ್ಮ ಪುಸ್ತಕಗಳ ಗೌರವಧನ, ಐಎಎಸ್ ಅಧಿಕಾರಿಯಾಗಿ ನಿಮ್ಮ ಸಹಾಯ ಹೇಗೆ ಪಡೆಯಬಹುದು ಎನ್ನುವುದನ್ನು ಕೂಡ ಮಾತನಾಡೋಣ ಎಂದು ಹೇಳಿದ್ದಾರೆ.
Sir Niyaz Khaan Sahab, Bhopal aa raha hoon 25th ko. Please give an appointment so we can meet and exchange ideas how we can help and how you can help with the royalty of your books and your power as an IAS officer. https://t.co/9P3oif8nfL
— Vivek Ranjan Agnihotri (@vivekagnihotri) March 20, 2022
ನಿಯಾಜ್ ಟ್ವೀಟ್ಗೆ ಹಲವರು ಪ್ರತಿಕ್ರಿಯಿಸಿದ್ದು, ಬಾಲಿವುಡ್ನಲ್ಲಿ ಬರುವ ಎಲ್ಲ ಕಥೆಗಳಲ್ಲೂ ಅದೇ ರೀತಿ ಹೀರೊಗಳು, ನಿರ್ಮಾಪಕರು ನಡೆದುಕೊಳ್ಳಲಿ, ವಿವೇಕ್ ಒಬ್ಬರಿಗೆ ಯಾಕೆ ಈ ರೀತಿ ಸಲಹೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.