ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ನ್ಯೂ ಕರೆಂಟ್ಸ್’ ವಿಭಾಗದಲ್ಲಿ ಪ್ರಶಸ್ತಿ ಪಡೆದ, ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಸಿನಿಮಾ ಜೂನ್ 14ರಂದು ತೆರೆಕಾಣಲಿದೆ. ಜೈಶಂಕರ್ ಆರ್ಯರ್ ನಿರ್ದೇಶನದ ಈ ಚಿತ್ರದಲ್ಲಿ ಯರೇಹಂಚಿನಹಾಳದ ಶರಣಮ್ಮ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತು.
‘ಒಂದು ಕಿರುಚಿತ್ರೋತ್ಸವದ ಮೂಲಕ ನನಗೆ ದೊರೆತ ಪ್ರತಿಭೆ ಜೈಶಂಕರ್. ‘ಕಥಾಸಂಗಮ’ ಸಿನಿಮಾದಲ್ಲಿ ಏಳು ಕಥೆಗಳಲ್ಲಿ ಒಂದು ಕಥೆ ಇವರದ್ದು. ‘ಶಿವಮ್ಮ’ ಕೂಡಾ ಒಂದು ಕಮರ್ಷಿಯಲ್ ಸಿನಿಮಾ. ಬೂಸಾನ್ ಚಿತ್ರೋತ್ಸವದಲ್ಲಿ ದೊರೆತ ಪ್ರಶಸ್ತಿಯ ಮೊತ್ತದಲ್ಲೇ ಸಿನಿಮಾದ ಅರ್ಧ ಖರ್ಚು ಬಂದಿದೆ. ನಾನು ಈ ಸಿನಿಮಾವನ್ನು ವ್ಯವಹಾರದ ದೃಷ್ಟಿಯಿಂದ ನೋಡುತ್ತಿಲ್ಲ. ಹೆಚ್ಚಿನ ಜನರು ಈ ಸಿನಿಮಾವನ್ನು ವೀಕ್ಷಿಸಲು ಮುಂದಾದರೆ ಟಿಕೆಟ್ ದರ ಇಳಿಸಲೂ ನಾನು ಸಿದ್ಧ’ ಎನ್ನುತ್ತಾರೆ ರಿಷಬ್ ಶೆಟ್ಟಿ.
‘ಶಿವಮ್ಮ’ ಬಳಿಕ ‘ಪೆದ್ರೊ’, ಪ್ರಮೋದ್ ಶೆಟ್ಟಿ ನಟನೆಯ ‘ಲಾಫಿಂಗ್ ಬುದ್ಧ’ ಬಿಡುಗಡೆಯಾಗಲಿದೆ’ ಎಂದು ರಿಷಬ್ ಮಾಹಿತಿ ನೀಡಿದರು.