ದಾವಣಗೆರೆ: ನಟ ಪ್ರಜ್ವಲ್ ದೇವರಾಜ್, ಶ್ರೀನಗರ ಕಿಟ್ಟಿ ಅಭಿನಯದ ‘ವೀರಂ’ ಚಲನಚಿತ್ರ ಏಪ್ರಿಲ್ 7ರಂದು ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
‘ಈ ಚಿತ್ರವನ್ನು ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅರ್ಪಿಸಲಿದ್ದು, ಅಕ್ಕ, ತಮ್ಮಂದಿರ ಪ್ರೀತಿ, ಕಾಳಜಿ ಹಾಗೂ ಆಕಾಂಕ್ಷೆಯನ್ನು ತೋರುವ ಚಿತ್ರ ಇದಾಗಿದೆ. ಕೆಲವೊಮ್ಮೆ ಅಡ್ಡದಾರಿ ಹಿಡಿಯಬಾರದು ಎಂದುಕೊಂಡರು ಜೀವನ ಅಲ್ಲಿಗೆ ತಂದು ನಿಲ್ಲಿಸಿಬಿಡುತ್ತದೆ. ಈ ಸಮಸ್ಯೆಯಿಂದ ಹೊರಬರುವುದು ಹೇಗೆ’ ಎಂಬುದು ಚಿತ್ರದ ಸಾರಾಂಶವಾಗಿದೆ. ‘ವೀರಂ’ ಎಂದರೆ ಛಲಗಾರ, ಸತ್ಯದ ಹಾದಿಯಲ್ಲಿ ನಡೆಯುವವ ಎಂಬ ಅರ್ಥ ಬರುತ್ತದೆ’ ಎಂದು ಚಿತ್ರದ ನಿರ್ಮಾಪಕ ಶಶಿಧರ್ ಕೆ.ಎಂ ಹಾಗೂ ನಿರ್ದೇಶಕ ಖದರ್ ಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಹಲವು ವರ್ಷಗಳ ಬಳಿಕ ಮಾಸ್ ಸಿನಿಮಾ ಮಾಡಿದ್ದೇನೆ. ಕುಟುಂಬದವರು ಕುಳಿತು ಚಿತ್ರ ನೋಡಬಹುದು. ಚಿತ್ರದ ನಿರ್ದೇಶಕರು ಸಾಕಷ್ಟು ಕಲಾವಿದರನ್ನು ಬಳಸಿಕೊಂಡು ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ. ವಿಷ್ಣುವರ್ಧನ್ ಅವರ ಮೇಲಿನ ಪ್ರೀತಿ ವ್ಯಕ್ತಪಡಿಸಲು ಇದೊಂದು ಅವಕಾಶ ಸಿಕ್ಕಂತಾಗಿದೆ. ಶ್ರೀನಗರ ಕಿಟ್ಟಿ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ನಟ ಪ್ರಜ್ವಲ್ ದೇವರಾಜ್ ಹೇಳಿದರು.
‘ಚಿತ್ರ ಚೆನ್ನಾಗಿ ಮೂಡಿಬಂದಿದ್ದು, ನಿರ್ದೇಶಕರು ಹಾಗೂ ಕಲಾವಿದರೂ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಚಿತ್ರಮಂದಿರಗಳ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂದು ನಟ ಶ್ರೀನಗರ ಕಿಟ್ಟಿ ತಿಳಿಸಿದರು.
ಚಿತ್ರದಲ್ಲಿ ನಟಿ ರಚಿತಾರಾಮ್, ಶ್ರುತಿ, ಅಚ್ಯುತ್ ಕುಮಾರ್, ಶಿಷ್ಯದೀಪಕ್, ಚಿರಾಗ್ ಜಾನಿ, ಬಲರಾಜವಾಡಿ, ಮೈಕೋ ನಾಗರಾಜ್, ಗಿರೀಶ್ ಶಿವಣ್ಣ, ಸ್ವಾತಿ ತಾರಾಬಳಗದ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ಲಿವಿತ್ ಛಾಯಾಗ್ರಹಣ, ಡಾ.ವಿ.ನಾಗೇಂದ್ರಪ್ರಸಾದ್, ಕವಿರಾಜ್ ಸಾಹಿತ್ಯದಲ್ಲಿ 4 ಹಾಡುಗಳು ಚಿತ್ರದಲ್ಲಿವೆ.
ಶಿಷ್ಯ ದೀಪಕ್, ಗಿರೀಶ್ ಶಿವಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.