ಮಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಿರ್ದೇಶಕಿ, ನಟಿ ಪದ್ಮಜಾ ರಾವ್ ಅವರಿಗೆ ಮಂಗಳೂರಿನ ಜೆಎಂಎಫ್ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
‘ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಯಿಂದ ಪದ್ಮಜಾ ರಾವ್ ಅವರು 2018ರಿಂದ ಹಂತಹಂತವಾಗಿ ₹ 41 ಲಕ್ಷ ಸಾಲವನ್ನು ಪಡೆದಿದ್ದರು. ಬ್ಯಾಂಕ್ ಖಾತೆಯ ಮೂಲಕವೇ ಹಣ ವರ್ಗಾವಣೆಯಾಗಿದೆ. ಸಾಲದ ಭದ್ರತೆಗಾಗಿ ₹ 40 ಲಕ್ಷದ ಚೆಕ್ ಅನ್ನು ಪದ್ಮಜಾ ರಾವ್ ನೀಡಿದ್ದರು. ಸಾಲ ವಾಪಸ್ ಕೊಡದಿದ್ದಾಗ ಚೆಕ್ ಅನ್ನು ನಗದೀಕರಣಕ್ಕೆ ಹಾಕಲಾಗಿತ್ತು. ಅವರ ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆಗಿದೆ. ಈ ಸಂಬಂಧ ದೂರು ನೀಡಲಾಗಿತ್ತು’ ಎಂದು ಪ್ರೊಡಕ್ಷನ್ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಕಾವೂರು ತಿಳಿಸಿದ್ದಾರೆ.
‘ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಪದ್ಮಜಾ ಅವರಿಗೆ ಸಮನ್ಸ್ ನೀಡಿದರೂ ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ, ಫೆ.3ರಂದು ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ’ ಎಂದು ಹೇಳಿದ್ದಾರೆ. ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಗೆ ವಾರಂಟ್ ರವಾನಿಸಲಾಗಿದೆ.