ಬೆಂಗಳೂರು: ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಕೆಲವು ಅಭಿಮಾನಿಗಳು ತಮ್ಮ ಇಷ್ಟದ ಈ ನಟನನ್ನು ಕಂಡು ಕೆಲವೊಮ್ಮೆ ಅತಿರೇಕತನದಿಂದ ವರ್ತಿಸುತ್ತಾರೆ.
ಇಂತಹ ಘಟನೆಗಳನ್ನು ಪವನ್ ಕಲ್ಯಾಣ್ ಅಗಾಗ ಎದುರಿಸುತ್ತರಾದರೂ ಇವತ್ತೊಂದು ಗಂಭೀರ ಘಟನೆ ನಡೆದಿದೆ.
ಆಂಧ್ರಪ್ರದೇಶದ ನರಸಾಪುರ ಎಂಬಲ್ಲಿ ಜನಸೇನಾ ಪಕ್ಷದ ಬಹಿರಂಗ ಸಮಾವೇಶ ನಡೆಸುವ ವೇಳೆ ಪವನ್ ಕಲ್ಯಾಣ್ ಅವರು ಕಾರ್ನ ಚಾವಡಿ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ನಂತರ ಕಾರ್ ಮೇಲೆ ಬಂದು ಕೈ ಬೀಸಲು ಪ್ರಾರಂಭಿಸಿದರು.
ಆದರೆ, ಈ ವೇಳೆ ಅಭಿಮಾನಿಯೊಬ್ಬ ಹುಚ್ಚುತನದಿಂದ ವರ್ತಿಸಿದ್ದಾನೆ. ಕಾರ್ ಮೇಲೆ ಪವನ್ ಕಲ್ಯಾಣ್ ಅವರು ನಿಂತಿದ್ದಾಗ ಓಡೋಡಿ ಬಂದು ಅವರನ್ನು ತಬ್ಬಿಕೊಳ್ಳಲು ನೋಡಿದ್ದಾನೆ. ಇದರಿಂದ ಗಲಿಬಿಲಿಗೊಂಡು ತಪ್ಪಿಸಿಕೊಳ್ಳಲು ನೋಡಿದ ನಟ ಕೂಡಲೇ ಕುಸಿದು ಬಿದ್ದರು.
ನಂತರ ಸಾವರಿಸಿಕೊಂಡ ಪವನ್ ಕಲ್ಯಾಣ್ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅಭಿಮಾನಿಯ ಅತಿರೇಕದ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿದೆ. ಪವನ್ ಅವರು ಪ್ರಾಥಮಿಕ ಚಿಕಿತ್ಸೆ ಪಡೆದು ಅಲ್ಲಿಂದ ತೆರಳಿದ್ದಾರೆ.