ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕುಣಿಗಲ್ ನಾಗಭೂಷಣ್ ಅವರ ಪತ್ನಿ ಹಾಗೂ ನಟಿ ಸರ್ವಮಂಗಳಾ (68) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶನಿವಾರ ನಗರ ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಇವರಿಗೆ ಪುತ್ರರಾದ ಶಶಿ ಭೂಷಣ್ ಮತ್ತು ನಟ ಭರತ್ ಭೂಷಣ್ ಇದ್ದಾರೆ. ‘ಭಂಡ ನನ್ನ ಗಂಡ’, ‘ಹೆಂಡ್ತಿಯರೇ ಹುಷಾರ್’, ‘ಯಾರಿಗೂ ಹೇಳ್ಬೇಡಿ’, ‘ಹೆಂಡ್ತಿಯರ ಸವಾಲ್’ ಚಿತ್ರಗಳು ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.
‘ಯಾರಿಗೂ ಹೇಳ್ಬೇಡಿ’ ಚಿತ್ರದಲ್ಲಿನ ‘ಚೆನ್ನಾಗಿ ಹೇಳಿದ್ರಿ’ ಸಂಭಾಷಣೆ ಜನಪ್ರಿಯಗೊಂಡಿದ್ದು, ಸರ್ವಮಂಗಳಾ ಅವರ ಹೆಸರಿನೊಂದಿಗೆ ‘ಚೆನ್ನಾಗಿ ಹೇಳಿದ್ರಿ’ ಡೈಲಾಗ್ ಕೂಡ ಅಂಟಿಕೊಂಡಿತ್ತು. ಶಂಕರ್ನಾಗ್ ಮತ್ತು ಮಹಾಲಕ್ಷ್ಮಿ ನಟನೆಯ ‘ಸಂಸಾರದ ಗುಟ್ಟು’, ಭವ್ಯ ನಟನೆಯ ‘ಸ್ವರ್ಗದಲ್ಲಿ ಮದುವೆ’ ಚಿತ್ರಗಳಿಗೂ ಚಿತ್ರಕಥೆ ಕೂಡ ಬರೆದಿದ್ದರು.
ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದ ಸರ್ವಮಂಗಳಾ ಅವರು, ‘ಮೌನರಾಗ’, ‘ಸಂಘಟನೆ’, ‘ತವರಿನ ಕಾಣಿಕೆ’, ‘ಪ್ರೇಮರಾಗ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಕುಣಿಗಲ್ ನಾಗಭೂಷಣ್ ಅವರು 2013ರಲ್ಲಿ ತೀರಿಕೊಂಡ ನಂತರ ಸರ್ವಮಂಗಳ ಬಣ್ಣದ ಬದುಕಿನಿಂದ ವಿಮುಖರಾಗಿದ್ದರು.