ಬೆಟ್ಟದಲ್ಲಿ ಜೀವ ಸಂಚಾರವಾಗಿದೆ. ಕಾಡ ನೋಡಹೋದವರು ಖುಷಿಯಾಗಿದ್ದಾರೆ. ಆ ಖುಷಿ ಎರಡನೇ ವಾರಕ್ಕೂ ಮುಂದುವರೆದಿದೆ.
`ಬೆಟ್ಟದ ಜೀವ~ ಚಿತ್ರಕ್ಕೆ ವ್ಯಕ್ತವಾಗಿರುವ ಪ್ರೇಕ್ಷಕರ ಪ್ರತಿಕ್ರಿಯೆ ನಿರ್ದೇಶಕ ಪಿ.ಶೇಷಾದ್ರಿ ಅವರಿಗೆ ಸಮಾಧಾನ ತಂದಿದೆ. ಕಳೆದ ವಾರವಷ್ಟೇ ಪ್ರೇಕ್ಷಕರನ್ನು ಥಿಯೇಟರ್ಗೆ ಸೆಳೆಯುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದ ಅವರು, ಇದೀಗ ತಮ್ಮ ಕಷ್ಟದ ಫಲವನ್ನು ಸಹೃದಯರು ಇಷ್ಟಪಡುತ್ತಿರುವ ಬಗ್ಗೆ ಖುಷಿಖುಷಿಯಾಗಿದ್ದರು.
`ತೆರೆಕಂಡಿರುವ ಮಂತ್ರಿ ಮಾಲ್ ಮತ್ತು ಪಿವಿಆರ್ ಎರಡೂ ಕಡೆ ವಾರಾಂತ್ಯದಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಉಳಿದ ಪ್ರದರ್ಶನಗಳಲ್ಲೂ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ. ಆ ಕಾರಣದಿಂದಲೇ ಸಿನಿಮಾ ಎರಡನೇ ವಾರಕ್ಕೆ ಮುಂದುವರೆಸುತ್ತಿದ್ದೇವೆ~ ಎಂದರು ಶೇಷಾದ್ರಿ.
ಕಮರ್ಷಿಯಲ್ ಪ್ರಭೆಯ ಚಿತ್ರವೊಂದರ ನಿರ್ಮಾಪಕ - ನಿರ್ದೇಶಕರು ತಮ್ಮ ಚಿತ್ರ ತೆರೆಕಂಡ ಮೂರೇ ದಿನಕ್ಕೆ, `ಇನ್ನು ಸಿನಿಮಾ ಓಡಿಸಲಾರೆ, ಸಾರಿ~ ಎಂದು ಕೈಚೆಲ್ಲಿರುವ ಹೊತ್ತಿನಲ್ಲಿ `ಬೆಟ್ಟದ ಜೀವ~ದ ಜೀವಸಂಚಾರ ವಿಶೇಷ ಎನ್ನುವಂತಿದೆ.