ಸಸ್ಪೆನ್ಸ್, ಆ್ಯಕ್ಷನ್ಥ್ರಿ, ಥ್ರಿಲ್ಲರ್ ಕಥಾಹಂದರದ ‘ನವರತ್ನ’ ಸಿನಿಮಾಗೆ ಹಾಸ್ಯದ ಹದ ಬೆರೆಸಿ, ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ಹಾಗೂ ಚಿತ್ರದ ನಾಯಕ ನಟರೂ ಆಗಿರುವ ಪ್ರತಾಪ್ ರಾಜ್. ಕಾಡಿನಲ್ಲಿ ಸಾಗುವ ಕಥೆಯ ಹಾದಿ ತಪ್ಪದಂತೆ ಹಿಡಿದಿಟ್ಟುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಾಯಕ–ನಾಯಕಿಯರಿಬ್ಬರ ಪಯಣದ ದಿಕ್ಕು ಒಂದೇ ಆದರೂ, ಗುರಿ ಮಾತ್ರ ಬೇರೆ. ಅವರಿಬ್ಬರ ಹಾದಿ ದಟ್ಟಾರಣ್ಯದ ‘ರತ್ನವನ’. ಆ ಜಾಗಕ್ಕೆ ಹೋದವರು ವಾಪಸ್ ಬರುವುದಿಲ್ಲ ಎಂಬ ಪ್ರತೀತಿ. ಆದರೂ, ಸಾವು–ಬದುಕಿನ ನಡುವೆ ಸೆಣಸುತ್ತಿರುವ ತಂದೆಯನ್ನು ಉಳಿಸಿಕೊಳ್ಳಲು, ಅದೇ ಸ್ಥಳದಲ್ಲಿರುವ ಶಿವಲಿಂಗಕ್ಕೆ ನವರತ್ನದ ಹಾರ ಹಾಕಲು ನಾಯಕಿ ಬರುತ್ತಾಳೆ.