ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಕ್ಸ್‌ಪಿಯರ್‌ನ ನಿಜಬಣ್ಣ ಬಯಲು ಮಾಡಿದ ಶ್ರೀಮತಿ

Last Updated 23 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

‘ಶೇಕ್ಸ್‌ಪಿಯರನ ಶ್ರೀಮತಿ’ ನಾಟಕ ಏಕವ್ಯಕ್ತಿ ಪ್ರದರ್ಶನವಾದರೂ ಎಲ್ಲೂ ಯಾಂತ್ರಿಕವಾಗಿರದೆ, ತನ್ನ ವೈವಿಧ್ಯಪೂರ್ಣ ಅಂಶಗಳಿಂದ ಸುಲಭವಾಗಿ ನೋಡಿಸಿಕೊಂಡು ಹೋದ ಸಮರ್ಥ ಪ್ರಯೋಗ. ಪ್ರಪ್ರಥಮವಾಗಿ ಶೇಕ್ಸ್‌ಪಿಯರನ ಹೆಸರೇ ಆಸಕ್ತಿಯನ್ನು ಹುಟ್ಟಿಸುವ ಕಥಾವಸ್ತು. ಜಗತ್ಪ್ರಸಿದ್ಧ ನಾಟಕಕಾರನ ಹೆಂಡತಿಯ ಮೂಲಕ ಅನಾವರಣಗೊಳ್ಳುವ ನಾಟಕ ಸಹಜವಾಗಿ ಕುತೂಹಲ ದಕ್ಕಿಸಿಕೊಳ್ಳುವ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.

‘ಕ್ರಿಯೇಟಿವ್ ಥಿಯೇಟರ್’ ಅರ್ಪಿಸಿದ ‘ಶೇಕ್ಸ್‌ಪಿಯರನ ಶ್ರೀಮತಿ’ ಲೇಖಕ ಉದಯ್ ಇಟಗಿಯವರು ವಿವಿಧ ಆಕರಗಳಿಂದ ಸಂಗ್ರಹಿಸಿ ಬರೆದ ಸ್ವೋಪಜ್ಞತೆಯನ್ನು ತೋರಿದ ಸ್ವಾರಸ್ಯಕರ ಏಕವ್ಯಕ್ತಿ ರಂಗಪ್ರಯೋಗ. ರಂಗದ ಮೇಲೆ ತರಲು ಸವಾಲಾಗಬಲ್ಲಂಥ ನಾಟಕವನ್ನು ನಿರ್ದೇಶಕ ವಿಶ್ವರಾಜ್ ಪಾಟೀಲ ಮನಮುಟ್ಟುವಂತೆ ಹರಿತವಾಗಿ ನಿರ್ದೇಶಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀಮತಿಯ ಅಂತರಂಗವನ್ನು, ತುಮುಲ-ವಿಷಾದಗಳನ್ನು ನೋಡುಗರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಿದವರು ಹಿರಿಯ ಕಲಾವಿದೆ ಲಕ್ಷ್ಮೀ ಚಂದ್ರಶೇಖರ್.

ಜನಪ್ರಿಯತೆ ಮತ್ತು ಖ್ಯಾತಿಯನ್ನು ವಿಶ್ವದಾದ್ಯಂತ ಪಡೆದುಕೊಂಡಿರುವ ರಂಗಪ್ರೇಮಿಗಳ ಆರಾಧ್ಯದೈವ ಶೇಕ್ಸ್‌ಪಿಯರನ ಅಂತರಂಗದ ಬದುಕಿನ ಪಾತಳಿಗೆ ದುರ್ಬೀನಿಟ್ಟು ನೋಡುವ ಈ ಪ್ರಯತ್ನ ರಂಗದ ಮೇಲೆ ಹೇಗೆ ಅರಳುವುದೋ ಎಂಬ ಕುತೂಹಲ ದೊಡ್ಡದಾಗಿತ್ತು. ಕ್ರಿ.ಶ. ಹದಿನಾರು ಮತ್ತು ಹದಿನೇಳನೆಯ ಶತಮಾನದ ಕಾಲಘಟ್ಟದಲ್ಲಿ ಇಂಗ್ಲೆಂಡಿನಲ್ಲಿ ಜೀವಿಸಿದ್ದು, ನಾಟಕ ಮತ್ತು ಕಾವ್ಯಕ್ಕೆ ಹೊಸದಿಕ್ಕನ್ನು ತೋರಿದ ಮಹತ್ವದ ಬರಹಗಾರ ವಿಲಿಯಂ ಶೇಕ್ಸ್‌ಪಿಯರ್‌. ಜಗದ ಕಣ್ಣಿಗೆ ಕಂಡಿದ್ದಕ್ಕಿಂತ ವಿಭಿನ್ನವಾಗಿ ಅವನ ಹೆಂಡತಿ ಆನಿ ಹ್ಯಾಥ್ವೆಯ ಸ್ವಗತದ ಮಾತುಗಳಿಂದ ಅವನ ವ್ಯಕ್ತಿತ್ವವನ್ನು ಒರೆಗೆ ಹಚ್ಚುವ ಬಗೆ ವಿಶಿಷ್ಟವಾಗಿತ್ತು. ಬಹು ಸರಳವಾದ ಭಾಷೆಯಲ್ಲಿ ಶ್ರೀಮತಿ ತನ್ನ ಸರಳ-ಬಿಚ್ಚುಮನದ ಸ್ವಭಾವಕ್ಕನುಗುಣವಾಗಿ ಗೊಂದಲಮಯವಾದ ಅವನ ಬದುಕಿನ ಹೆಜ್ಜೆಗಳನ್ನು ತಾನು ಕಂಡಂತೆ ತೆರೆದಿಡುವ ಪರಿ ಆಪ್ಯಾಯಮಾನ.

ಅವಳಿಗಿಂತ ಎಂಟು ವರ್ಷ ಕಿರಿಯನಾದ ಹದಿನೆಂಟರ ಯುವಕ ಶೇಕ್ಸ್‌ಪಿಯರ್‌ ತಾನಾಗೇ ಅವಳ ಸ್ನೇಹ ಬಯಸಿ, ಮುಂದುವರೆದು, ಆಕೆಯ ಗರ್ಭಕ್ಕೆ ಕಾರಣನಾಗಿ ಪಂಚಾಯಿತಿಯ ತೀರ್ಮಾನಕ್ಕೆ ಮಣಿದು ಒತ್ತಾಯಕ್ಕೆ ಅವಳನ್ನು ಮದುವೆಯಾದವನು. ರಸಿಕ, ಚಂಚಲಚಿತ್ತ ಗಂಡನ ಬಗ್ಗೆ ಅವಳಿಗೆ ಸದಾ ಗುಮಾನಿ-ಗೊಂದಲ. ಸಿರಿವಂತ ಮನೆತನದ ಸೋಮಾರಿ ಅತ್ತೆ, ಬೇಜವಾಬ್ದಾರಿ ಸ್ವಭಾವದ ಕುಡುಕ ಮಾವ, ಜೊತೆಗೆ ತಿಕ್ಕಲುತನದ ಸುಳ್ಳುಗಾರ, ಸ್ತ್ರೀಲೋಲುಪ ಗಂಡನೊಡನಾಟದ ಸಂಸಾರದಲ್ಲಿ ಮೂರುಮಕ್ಕಳು ಬೇರೆ. ಏಕಾಂಗಿಯಾಗಿ ಸಂಸಾರ ನಿಭಾಯಿಸುವ ಗಟ್ಟಿಗಿತ್ತಿ ಹೆಣ್ಣಾಗಿ ಆಕೆ, ಮನೆಯಲ್ಲೇ ಸಣ್ಣಪುಟ್ಟ ಕೆಲಸಗಳಿಂದ ಹಣ ಸಂಪಾದಿಸುವ ಶ್ರಮಜೀವಿ.

ಸಂಸಾರದ ಜವಾಬ್ದಾರಿ ಹೊರದ ಗಂಡ ಲಂಡನ್ನಿಗೆ ಪಲಾಯನ ಮಾಡಿ, ಅಲ್ಲಿ ಹೆಣ್ಣು-ಹೆಂಡಗಳ ಸಹವಾಸದಲ್ಲಿದ್ದರೂ ಅದನ್ನು ಪ್ರತಿಭಟಿಸದ ಒಳ್ಳೆಯ ಹೆಂಡತಿ ಇವಳು. ಸಲಿಂಗಕಾಮಿಯಾಗಿಯೂ ಆಗಿದ್ದ ಅವನ ಎಲ್ಲ ದೌರ್ಬಲ್ಯಗಳ ಬಗ್ಗೆ ತಿಳಿದಿದ್ದರೂ ಇವಳು ತಲೆಕೆಡಿಸಿಕೊಳ್ಳದ ಪ್ರಶಾಂತೆ. ಅವನ ಸಾನೆಟ್ಟಿನಂತೆ ತಾನು ಅವನ ಪಾಲಿಗೆ ‘ಬೇಸಿಗೆಯ ಹಗಲಾಗದೆ, ಚಳಿಗಾಲದ ದಿನದಂತೆ’ ಆದ ತಾನು ಅವನ ಮೈ-ಮನ ಬೆಚ್ಚಗಿರಿಸಲಾಗಲಿಲ್ಲ ಎಂಬ ವಿಷಾದವೂ ಅವಳಲ್ಲಿದೆ. ಸಾಹಿತ್ಯಪ್ರೇಮಿಯಲ್ಲದ ತಾನು ಅವನಿಗೆ ಸರಿಜೋಡಿಯಲ್ಲ ಎಂಬ ಅರಿವೂ ಇದೆ.

ಪ್ರಪಂಚದ ಎಲ್ಲ ಕವಿಗಳು, ಲೇಖಕರು ಸುಳ್ಳುಗಾರರೇ ಎಂದು ಮೂದಲಿಸುವ ಶ್ರೀಮತಿ, ‘ಗಂಡಂದಿರ ಮನಸ್ಸನ್ನು ಮಾತ್ರ ಬಗೆದು ನೋಡಬಾರದು. ಅದು ನಿಗೂಢ-ಹೊಲಸು’ ಎಂದು ಬಹು ಮಾರ್ಮಿಕವಾಗಿ ನುಡಿಯುತ್ತಾಳೆ. ತಮ್ಮದು ವಿರಸ ದಾಂಪತ್ಯವಾದರೂ ಗಂಡನ ಬರವಣಿಗೆ ಶಕ್ತಿಯ ಬಗ್ಗೆ ಮೆಚ್ಚುವ ಅವಳಲ್ಲಿ ಅವನ ಕೆಟ್ಟಚಾಳಿಗಳ ಬಗ್ಗೆ ತಿರಸ್ಕಾರ ಇದ್ದೇ ಇರುತ್ತದೆ. ಬೈಬಲ್‌ಅನ್ನು ನಂಬಿದ ತಾನು ಸದ್ಗೃಹಿಣಿ, ನೆಟ್ಟಗೆ ಬಾಳುತ್ತಿರುವ ತನಗೇನೂ ತಿಳಿಯದು ಎಂದು ಎಲ್ಲವನ್ನೂ ಮುಕ್ತವಾಗಿ ಮಾತನಾಡುವ ಶ್ರೀಮತಿ, ಹತ್ತಿರವಿದ್ದೂ ದೂರ ಉಳಿದ ಗಂಡನ ಅಸಾಂಗತ್ಯದ ಬಗ್ಗೆ ಜರಡಿ ಹಿಡಿದು ಜಾಲಾಡುವ, ವಿಶ್ಲೇಷಿಸುವ ವಿಚಾರಗಳು ಬಹು ಅರ್ಥಗರ್ಭಿತ.

‘ಪ್ರಸಿದ್ಧ ವ್ಯಕ್ತಿಗಳ ಬದುಕಿನ ಚಿತ್ರಣ ಕಟ್ಟಿಕೊಡುವಾಗ ಅವರ ಬದುಕಿನಲ್ಲಿ ಬಂದ ಇತರೆ ಹೆಣ್ಣುಮಕ್ಕಳ ಕುರಿತು ಹೈಲೈಟ್ ಮಾಡುತ್ತಾರೆಯೇ ವಿನಾ ಅವರ ಕೈಹಿಡಿದ ಹೆಂಡತಿಯ ವಿಷಯವನ್ನು ಮಾತ್ರ ಎಲ್ಲೂ ಹೊರಗೆಡಹುವುದೇ ಇಲ್ಲ’ ಎಂಬ ವಿಷಾದ ವ್ಯಕ್ತಪಡಿಸುತ್ತಾಳೆ. ‘ಪ್ರಸಿದ್ಧರು ಪ್ರಸಿದ್ಧಿಗೆ ಬರುವುದರ ಹಿಂದೆ ಅವರ ಹೆಂಡತಿಯರ ಶ್ರಮ, ತ್ಯಾಗದ ದೊಡ್ಡಕಥೆಯನ್ನು ಯಾರೂ ಲೆಕ್ಕಿಸುವುದಿಲ್ಲ’ ಎಂಬ ಅವಳ ನೋವಿನ ಹಳವಂಡ ಆಕೆಯ ಬದುಕಿನ ನಿಃಶಬ್ದ ಕ್ರೌರ್ಯ-ದುರಂತವನ್ನು ಎತ್ತಿ ಹಿಡಿಯುತ್ತದೆ.

ಶೇಕ್ಸ್‌ಪಿಯರ್‌ ತನ್ನ ಜೀವಿತಾವಧಿಯ ಕಡೆಯ ಐದುವರ್ಷಗಳು ಹೆಂಡತಿಯ ಆರೈಕೆಯಲ್ಲೇ ಇದ್ದರೂ ಅವನು ತನ್ನ ಹಳೆಯ ಗೆಳೆತನದ ಗುಂಗಿನಲ್ಲೇ ಇದ್ದನೇ ಎಂಬ ಅಸ್ಪಷ್ಟತೆ–ಅಪರಿಚಿತತೆ ಅವಳ ಬೆರಗು. ತನ್ನ ಐವತ್ತೆರಡನೆಯ ಹುಟ್ಟಿದಹಬ್ಬದ ದಿನವೇ ಮರಣಿಸಿದ ಶೇಕ್ಸ್‌ಪಿಯರ್‌ನ ವಂಶ ತನ್ನ ಮಕ್ಕಳೊಂದಿಗೆ ಕೊನೆಯಾದ ಬಗ್ಗೆ ಶ್ರೀಮತಿ ವಿಷಾದಿಸಿದರೂ, ಎಂದಿಗೂ ಆಪ್ತವಾಗದ ಗಂಡ ಎಂದಿಗೂ ತನ್ನ ಕನಸಿನಲ್ಲಿ ಸುಳಿದಿಲ್ಲ ಎಂಬ ಕಹಿಭಾವನೆಯನ್ನು ಒಸರಿಸುವ ಅವಳ ನಿಟ್ಟುಸಿರ ಅಭಿವ್ಯಕ್ತಿಯಲ್ಲಿ ಪ್ರಸಿದ್ಧ ಕವಿಯ ಹೆಂಡತಿಯರ ಅಸಮ ದಾಂಪತ್ಯದ ಸಾರ್ವತ್ರಿಕತೆಯನ್ನು ಬಿಂಬಿಸುತ್ತಾಳೆ.

ನಾಟಕ ನೋಡಿದ ಮೇಲೆ ಜಗಮೆಚ್ಚಿದ ಶೇಕ್ಸ್‌ಪಿಯರ್‌ನ ಪ್ರತಿಭೆ-ಅವನ ಹೆಂಡತಿಯ ಅಂತರಂಗದ ತೊಳಲಾಟ-ಸ್ಪಂದನಗಳ ಓಘದ ಮುಂದೆ ಮಂಕಾಗಿ ತೋರುತ್ತದೆ. ಎಲ್ಲ ಪ್ರಸಿದ್ಧರ ಹೆಂಡತಿಯರ ಅಂತರಂಗದ ಜ್ವಾಲಾಮುಖಿಗಳಿಗೆ ಕನ್ನಡಿ ಹಿಡಿವ, ಶೇಕ್ಸ್‌ಪಿಯರ್‌ನ ಹೆಂಡತಿ ಮೇಲ್ನೋಟಕ್ಕೆ ಒರಟಳಂತೆ ಕಂಡರೂ ಅವಳ ಪ್ರಾಮಾಣಿಕತೆಯ ವ್ಯಕ್ತಿತ್ವ ಕಂಡು ಮನಸ್ಸು ಮಿಡಿಯುತ್ತದೆ.

ಶೇಕ್ಸ್‌ಪಿಯರ್‌ನ ಹೆಂಡತಿಯಾಗಿ ಹೃದಯಸ್ಪರ್ಶಿ ಅಭಿನಯ ನೀಡಿದ ಲಕ್ಷ್ಮೀ ಚಂದ್ರಶೇಖರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಟಕಾವಧಿ ಒಂದು ಗಂಟೆಯುದ್ದಕ್ಕೂ ಎಲ್ಲೂ ಬೇಸರ ಹಣಕದಂತೆ ರಂಗದ ಮೇಲಿನ ಆಕೆಯ ಚಲನೆ, ಚಟುವಟಿಕೆಗಳು ಪೂರಕವಾಗಿವೆ. ಇದನ್ನು ಆಗುಮಾಡಿದ ನಿರ್ದೇಶಕ ವಿಶ್ವರಾಜ್ ಅಭಿನಂದನೀಯರು. ರಂಗಸಜ್ಜಿಕೆ- ರಂಗಪರಿಕರ (ವಿಶ್ವನಾಥ ಮಂಡಿ) ಧ್ವನಿ ಸಂಯೋಜನೆ (ಗಜಾನನ ನಾಯ್ಕ) ಬೆಳಕಿನ ವಿನ್ಯಾಸ ( ಮುದ್ದಣ್ಣ ರಟ್ಟಿಹಳ್ಳಿ) ವಸ್ತ್ರವಿನ್ಯಾಸ (ಮಂಗಳಾ ಎನ್.) ಪ್ರಸಾಧನ (ರಾಮಕೃಷ್ಣ ಕನ್ನರಪಾಡಿ) ಪರಿಪೂರ್ಣವಾಗಿತ್ತು. ಎಲ್ಲ ಅಂಶಗಳಲ್ಲೂ ನೋಡುಗನಿಗೆ ತೃಪ್ತಿ ನೀಡಿದ್ದು ನಾಟಕದ ಗೆಲುವು!

ಖ್ಯಾತನಾಮರ ಹೆಂಡಂದಿರ ದನಿಗೆ ಹೊರತೂಬು ನೀಡಿದರೆ ಅವರ ಗಂಡಂದಿರ ಮುಖವಾಡಗಳು ಕಳಚಿ ನಿಜಬಣ್ಣ ಬಯಲಾಗುವುದು ಎಂಬ ಸೂಚ್ಯಾರ್ಥ ಇಂಥ ನಾಟಕಗಳ ಸಂದೇಶವೆನ್ನಬಹುದೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT