ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣದ ರಂಗತೇರು

Last Updated 12 ಜನವರಿ 2019, 19:30 IST
ಅಕ್ಷರ ಗಾತ್ರ

ತೇರೆಂದರೆ ಎಲ್ಲರೂ ಸೇರುತ್ತಾರೆ. ತೇರು ಯಾವಾಗಲೂ ಎತ್ತರವಾಗಿರುವ, ಜನರ ಮಧ್ಯೆ ಇರುವ, ಬೀದಿಗೆ ಬರುವ, ಭಕ್ತಿಭಾವದಿಂದ ಕಾಣುವ ಹಾಗೆ ರಂಗಭೂಮಿ ಕೂಡಾ. ಮುಖ್ಯವಾಗಿ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡುವುದು. ಶಿವಮೊಗ್ಗ ರಂಗಾಯಣ ರಂಗತೇರು ಶೀರ್ಷಿಕೆಯಡಿ ರಂಗಪಯಣ ಕೈಗೊಂಡಿದೆ. ಮೂರು ಭಿನ್ನ ನಾಟಕಗಳ ಮೂಲಕ ರಂಗತೇರನ್ನು ಹೊತ್ತು ಹೊರಟಿದೆ.

ಆಷಾಢದ ಒಂದು ದಿನ; ಕಾಳಿದಾಸನ ಕುರಿತ ವಾಸ್ತವವಾದಿ ಕಾವ್ಯ ನಾಟಕವಿದು. ಸಂಸ್ಕೃತಿಯನ್ನು ಏಕಮುಖವಾಗಿ ನೋಡದೆ ಬಹುಮುಖವಾಗಿ ನೋಡುವುದು ಹೇಗೆ ಎಂದು ಈ ನಾಟಕ ತೋರಿಸುತ್ತದೆ. ಬಹುಮುಖದ ಕಾಳಿದಾಸನನ್ನು ಸಂಸ್ಕೃತದ ಪಂಡಿತರು ಏಕಮುಖವಾಗಿ ನೋಡಿದ್ದಾರೆ. ಆದರೆ, ಜಾನಪದರು ಬಹುಮುಖವಾಗಿ ನೋಡಿದ್ದಾರೆ. ಇದಕ್ಕೆ ಆಧಾರಗಳಿಲ್ಲದೆ ಇರಬಹುದು. ಹಳ್ಳಿಯಲ್ಲಿ ದನ ಕಾಯುತ್ತಿದ್ದ ಕಾಳಿದಾಸನ ಪ್ರತಿಭೆಗೆ ಮೆಚ್ಚಿ ಉಜ್ಜಯಿನಿಯ ರಾಜನಿಂದ ಕರೆ ಬರುತ್ತದೆ.

ಆದರೆ, ಹಳ್ಳಿಯಲ್ಲಿ ಅವನಿಗೆ ಪರಮಸ್ನೇಹಿತೆ ಮಲ್ಲಿಕಾ ಇರುತ್ತಾಳೆ. ಅವಳನ್ನು ಬಿಟ್ಟು ಹೋಗುವುದಿಲ್ಲ ಎಂದಾಗ ಅವಳೇ ಕಳಿಸುತ್ತಾಳೆ. ಹಾಗೆ ಅರಮನೆಗೆ ಹೋಗಿ ರಾಜಮನೆತನದ ಹುಡುಗಿಯನ್ನು ಮದುವೆಯಾಗುತ್ತಾನೆ. ಅರಮನೆಯ ಕಷ್ಟಸುಖಗಳನ್ನು ಅನುಭವಿಸುತ್ತಲೇ ಒಮ್ಮೆ ಹಳ್ಳಿಗೆ ಬಂದಾಗ ಮಲ್ಲಿಕಾಳ ಮನೆಗೆ ಹೋಗುವುದಿಲ್ಲ. ಹೆಚ್ಚು ಕಷ್ಟಗಳನ್ನು ಎದುರಿಸುತ್ತ, ಮತ್ತೆ ಹಳ್ಳಿಗೆ ಬರುತ್ತಾನೆ. ಹಾಗೆ ಬಂದಾಗ ಮಲ್ಲಿಕಾ ಹಾಗೆಯೇ ಇರುತ್ತಾಳೆಂದು ಭಾವಿಸುತ್ತಾನೆ. ಆದರೆ, ಮಲ್ಲಿಕಾ ಬದಲಾಗಿರುತ್ತಾಳೆ. ಕಾಳಿದಾಸನ ಪ್ರತಿಸ್ಪರ್ಧಿ ವಿಲೋಮ ಮದುವೆಯಾಗಿರುತ್ತಾನೆ. ಮಗುವೂ ಆಗಿರುತ್ತದೆ. ಇದನ್ನೆಲ್ಲ ನೋಡಿದ ಕಾಳಿದಾಸ, ಅರಮನೆಯಲ್ಲಿ ಪಟ್ಟ ನೋವು ಮರೆಯಲು ಹಳ್ಳಿಗೆ ಬಂದವನು ಮಲ್ಲಿಕಾಳನ್ನು ಕಂಡು ಹೊರಡಲು ಅಣಿಯಾಗುತ್ತಾನೆ. ಆಗ ಕಾಳಿದಾಸ ಎಂದು ಮಲ್ಲಿಕಾ ಕರೆಯುತ್ತಾಳೆ. ಜತೆಗೆ, ಅವಳ ಮಗುವೂ ಅಳುತ್ತದೆ. ಆದರೆ, ಕಾಳಿದಾಸ ತಿರುಗಿ ನೋಡದೆ ಹೊರಡುತ್ತಾನೆ.

ಇದಕ್ಕೂ ಮೊದಲು ರಾಜಮನೆತನದ ಪ್ರಿಯಂಗುಮಂಜರಿ ಬಂದು ಹಳ್ಳಿಯ ವಾತಾವರಣವನ್ನು ಅರಮನೆ ಆವರಣದಲ್ಲಿ ಸೃಷ್ಟಿಸಬೇಕೆಂದು ಬಯಸುತ್ತಾಳೆ. ಆದರೆ, ರಾಜಕಾರಣದಲ್ಲಿ ಪ್ರತಿಕ್ಷಣ ಎಚ್ಚರವಾಗಿರಬೇಕು ಎನ್ನುವುದನ್ನು ಮರೆತ ಕಾಳಿದಾಸ ಕಾವ್ಯ, ನಾಟಕದಲ್ಲಿ ಮುಳುಗಿರುವುದನ್ನು ಪ್ರಿಯಂಗುಮಂಜರಿ ಕಾಣುತ್ತಾಳೆ. ಮಲ್ಲಿಕಾಳನ್ನು ತನ್ನ ದಾಸಿಯಾಗಲು ಬಾ ಎಂದು ಕರೆಯುತ್ತಾಳೆ. ಆದರೆ, ಮಲ್ಲಿಕಾಳ ತಾಯಿಗೆ ಹುಷಾರಿರುವುದಿಲ್ಲ. ಹೀಗಾಗಿ ಆಕೆ ಹೊರಡುವುದಿಲ್ಲ. ಹೀಗೆ ಕಾಳಿದಾಸನ ಕುರಿತು ಮೋಹನ್‌ ರಾಕೇಶರು ಹಳ್ಳಿಯ ಹಾಗೂ ಪೇಟೆಯವರಿಂದ ಆಡಿಸುತ್ತಾರೆ.

ದುಬೈ ದೂಳಪ್ಪನ ಭರ್ಜರಿ ಗಾಳ

ವೃತ್ತಿ ರಂಗಭೂಮಿಗೆ ಪರಂಪರೆ ದೊಡ್ಡದಿದೆ. ಜತೆಗೆ, ಬೇರುಗಳೂ ಆಳವಾಗಿವೆ. ಇವುಗಳನ್ನು ಅರಿಯುವ ಸಲುವಾಗಿ ರೆಪರ್ಟರಿಯವರು ಕಲಿಯಬೇಕೆಂಬ ಹಂಬಲದಿಂದ ಈ ನಾಟಕ ಆಡಲಾಯಿತು. ಕಂಪನಿ ನಾಟಕಗಳನ್ನು ನೋಡುವ ಪ್ರೇಕ್ಷಕರಿಗೆ ರಂಗಾಯಣದ ನಾಟಕಗಳನ್ನು ತೋರಿಸುತ್ತ, ಅವರ ಅಭಿರುಚಿಯನ್ನು ಬದಲಾಯಿಸುವ ಪ್ರಯತ್ನವೂ ನಡೆಯಿತು. ಈ ನಾಟಕದಲ್ಲಿ ಹಳ್ಳಿಯ ಹುಡುಗಿಯನ್ನು ಮದುವೆಯಾಗಲು ಮದುಕ ಬಯಸುತ್ತಾನೆ. ಬಡತನದ ಕಾರಣಕ್ಕೆ ಹುಡುಗಿಯ ತಂದೆಗೆ ಎರಡು ಲಕ್ಷ ರೂಪಾಯಿ ಕೊಟ್ಟಿರುತ್ತಾನೆ. ಮತ್ತೆ ಮೂರು ಲಕ್ಷ ರೂಪಾಯಿಗೆ ಹುಡುಗಿಯ ತಂದೆಯಿಂದ ಬೇಡಿಕೆ ಬಂದಿರುತ್ತದೆ. ಈ ನಡುವೆ ಹುಡುಗಿಯ ಸೋದರಮಾವ ಮುದುಕನಿಗೆ ಚಳ್ಳೆಹಣ್ಣು ತಿನ್ನಿಸಿ ತಾನು ಮದುವೆಯಾಗುವುದು ನಾಟಕದ ತಿರುಳು.

ಟ್ರಾನ್ಸ್‌ನೇಷನ್

ನಾಟಕವೆಂದರೆ ಸಿದ್ಧಪಠ್ಯವಿರುವುದನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಆಡುವುದಾಗಿದೆ. ಈ ನಾಟಕ ಡಿವೈಸ್ಡ್‌ ಪ್ಲೇ ಎಂದರೆ ಚೌಕಟ್ಟುಗಳಿಲ್ಲದ ನಾಟಕ. ಈಗಿರುವ ಚೌಕಟ್ಟುಗಳನ್ನು ಮರಿದು ನಾಟಕ ಆಡುವುದು. ರಂಗದ ಮೇಲೆಯೇ ನಾಟಕವನ್ನು ಕಟ್ಟುತ್ತ ಹೋಗುವುದು. ಹೀಗೆ ನಾಟಕ ಆಡುವಾಗ ಪ್ರತಿ ಪ್ರದರ್ಶನದಲ್ಲಿ ಆಶು ವಿಸ್ತರಣೆಯಾಗುತ್ತಲೇ ಇರುತ್ತದೆ. ಪ್ರಸ್ತುತ ಈ ದೇಶದ ಅಸಮಾನತೆ, ಒಂದು ಸಂಸ್ಕೃತಿಯ ಮೇಲೆ ಇನ್ನೊಂದು ಸಂಸ್ಕೃತಿ ಹೇರುವುದು, ಜಾತಿ ತಾರತಮ್ಯ, ಸಂವಿಧಾನ... ಮೊದಲಾದ ಪ್ರಚಲಿತ ವಿದ್ಯಮಾನಗಳು ಅನಾವರಣಗೊಳ್ಳುತ್ತವೆ. ಈ ನಾಟಕದಲ್ಲಿಯೇ ನಾಟಕ ಬರುತ್ತದೆ. ಇದರ ನಿರ್ದೇಶಕ, ನಟರಿಗೆ ಹೀಗೆಯೇ ಮಾಡಿರೆಂದು ಹೇರುತ್ತಾನೆ. ಇದನ್ನು ನಟರು ಒಪ್ಪುವುದಿಲ್ಲ. ಹೀಗೆ ಸಿದ್ಧಮಾದರಿಯ ಚೌಕಟ್ಟುಗಳನ್ನು ಮೀರುತ್ತ ನಾಟಕ ಸಾಗುತ್ತದೆ.

ಈಗಾಗಲೇ ರಾಜ್ಯದ ಕೆಲವು ಕಡೆ ಈ ನಾಟಕಗಳು ಪ್ರದರ್ಶನ ಕಂಡಿವೆ. ಬಾಗಲಕೋಟೆಯಲ್ಲಿ ಜೇವರ್ಗಿ ರಾಜಣ್ಣ ಅವರ ಕಂಪನಿಯ ಥಿಯೇಟರಿನಲ್ಲಿಯೇ ಈ ನಾಟಕಗಳನ್ನು ಆಡಲಾಗಿದೆ. ‘ದುಬೈ ದೂಳಪ್ಪನ...’ ನಾಟಕವನ್ನು 12 ದಿನಗಳ ಮುಕ್ಕಾಂನಲ್ಲಿ ಎಂಟು ದಿನಗಳವರೆಗೆ ನಿತ್ಯ ಮಧ್ಯಾಹ್ನ ಹಾಗೂ ಸಂಜೆ ಎರಡು ಪ್ರದರ್ಶನ ನೀಡಿದ್ದಾರೆ. ಕಂಪನಿ ನಾಟಕಗಳನ್ನು ನೋಡುತ್ತಿದ್ದವರಿಗೆ ರಂಗಾಯಣದ ನಾಟಕಗಳ ರುಚಿ ತೋರಿಸಲಾಯಿತು. ಉದ್ದೇಶ ಕಂಪನಿ ಹಾಗೂ ಆಧುನಿಕ ನಾಟಕಗಳನ್ನು ಆಡುವ ಕಲಾವಿದರ ಸಂಪರ್ಕ ಇರಬೇಕು. ಅವರ ನಾಟಕಗಳನ್ನು ಇವರು, ಇವರ ನಾಟಕಗಳನ್ನು ಅವರು ನೋಡಬೇಕು ಎನ್ನುವುದಾಗಿತ್ತು.

ಕಂಪನಿ ನಾಟಕಗಳನ್ನು ನೋಡುವ ಪ್ರೇಕ್ಷಕರ ಅಭಿರುಚಿ ಎಂಥವು? ಅಂಥ ಪ್ರೇಕ್ಷಕರನ್ನು ರಂಗದ ಮೇಲಿದ್ದಾಗ ಕಲಾವಿದರು ತಮ್ಮ ಕೌಶಲಗಳಿಂದ ಹಿಡಿದಿಡುವುದು ಹೇಗೆ ಎಂಬುದನ್ನು ಈ ಮೂಲಕ ಕಲಿತರು. ಬಸವಣ್ಣನ ಹಾಗೂ ಪುಟ್ಟರಾಜ ಗವಾಯಿಗಳ ಭಾವಚಿತ್ರಗಳನ್ನು ತೆಗೆಯದೆ ‘ಆಷಾಢದ ಒಂದು ದಿನ’ ಹಾಗೂ ‘ಟ್ರಾನ್ಸ್‌ನೇಷನ್’ ನಾಟಕಗಳನ್ನು ಪ್ರದರ್ಶಿಸಿದಾಗ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT