ಈ ಮನೆಯಲ್ಲಿ ಯಾರಲ್ಲಿಯೂ ನೋಡದ ಬಾಂಧವ್ಯವನ್ನು ನಿಮ್ಮಲ್ಲಿ ಕಂಡಿದ್ದೇನೆ. ನಿಷ್ಕಂಳಕವಾದ ಸ್ನೇಹ ನಿಮ್ಮದು... ಹೀಗೆ ಹೇಳುತ್ತಾ ಕಿಚ್ಚ ಸುದೀಪ್, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಪ್ರಾರಂಭದಿಂದಲೂ ಒಟ್ಟಿಗೆ ಇರುತ್ತಿದ್ದ ತುಕಾಲಿ ಮತ್ತು ವರ್ತೂರ್ ಅವರನ್ನು ಮನೆಯವರೆಲ್ಲ ಸಂತು–ಪಂತು ಎಂದೇ ಕರೆಯುತ್ತಿದ್ದರು. ಎಂತಹ ಸಂದರ್ಭದಲ್ಲಿಯೂ ಒಬ್ಬರನ್ನೊಬ್ಬರು ಬಿಟ್ಟುಕೊಡದ ಇವರ ಸ್ನೇಹಕ್ಕೆ ಸ್ವತಃ ಕಿಚ್ಚ ಸುದೀಪ್ ಅವರೇ ಭೇಷ್ ಎಂದಿದ್ದರು. ಇದೀಗ ಆಪ್ತ ಸ್ನೇಹಿತರಲ್ಲೊಬ್ಬರು ಮನೆಯಿಂದ ಹೊರ ಹೋಗುವ ಸಮಯ ಬಂದಿದೆ.
ಶುಕ್ರವಾರ ರಾತ್ರಿ ಬೀನ್ ಬ್ಯಾಗ್ ಮೇಲೆ ಕುಳಿತು ಮನೆಯಲ್ಲಿ ಕಳೆದ ಪ್ರತಿಕ್ಷಣಗಳನ್ನು ನೆನಪಿಸಿಕೊಂಡು ಖುಷಿಪಟ್ಟಿದ್ದ ಈ ಸ್ನೇಹಿತರು, ಈ ವಾರ ಇಬ್ಬರಲ್ಲಿ ಯಾರಾದರೂ ಹೊರಗೆ ಹೋದರೆ ಹೇಗೆ ಎಂದು ಅಂದುಕೊಂಡು ಭಾವುಕರಾಗಿದ್ದರು. ಇದೀಗ ಆ ಸಮಯ ಬಂದಿದೆ. ಇಂದು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಈ ಬಗ್ಗೆ ಬಿಗ್ ಬಾಸ್ ಸುಳಿವು ನೀಡಿದೆ.
ಇಂದಿನ ಎಪಿಸೋಡ್ನಲ್ಲಿ ಸುದೀಪ್, ಸೇಫ್ ಆದ ಎಲ್ಲರ ಹೆಸರನ್ನು ಹೇಳುತ್ತ ಕೊನೆಯಲ್ಲಿ, ‘ವರ್ತೂರು ಸಂತೋಷ್ ಹಾಗು ತುಕಾಲಿ ಸಂತೋಷ್ ಅವರೇ ನಿಮ್ಮಿಬ್ಬರಲ್ಲಿ ಒಬ್ಬರನ್ನು ಇವತ್ತು ಹೊರಗಡೆ ಕಳಿಸಬೇಕಾಗಿದೆ’ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ಇಬ್ಬರು ಕಣ್ಣೀರು ಹಾಕಿದ್ದಾರೆ.
ತುಕಾಲಿ ಸಂತೋಷ್ ಅವರು, ‘ನಾನು ಹೊರಡಬೇಕಿದ್ದರೆ, ಚೆನ್ನಾಗಿ ಆಡಿ ಗೆದ್ಕೊಂಡು ಬಾ ಎಂದು ವರ್ತೂರ್ಗೆ ಹೇಳೋಕೆ ಇಷ್ಟಪಡ್ತೀನಿ’ ಎಂದು ಹೇಳಿದ್ದಾರೆ. ವರ್ತೂರು ಸಂತೋಷ್ ಅವರು, ‘ತುಕಾಲಿ ಗೆಲ್ಲುವುದನ್ನು ನಾನು ನೋಡಬೇಕು’ ಎಂದು ಹೇಳಿದ್ದಾರೆ.
ಯಾವಾಗಲೂ ತುಕಾಲಿ ಅವರನ್ನು ವಿರೋಧಿಸುವ ನಮ್ರತಾ ಕೂಡ ಇವರಿಬ್ಬರ ಸ್ನೇಹ ಕಂಡು ಭಾವುಕರಾಗಿದ್ದಾರೆ. ‘ಇವರಿಬ್ಬರೂ ದೂರ ಆಗಬೇಕು ಎಂದು ನನಗೆ ಅನಿಸುತ್ತಿತ್ತು. ಆದರೆ ಈವತ್ತು…’ ಎಂದು ಹೇಳಿ ಹಾಗಾಗಬಾರದು ಎಂದು ತಲೆಯಾಡಿಸಿದ್ದಾರೆ.
‘ಯಾರಲ್ಲಿಯೂ ನೋಡದ ಒಂದು ಬಾಂಧವ್ಯವನ್ನು ನಿಮ್ಮಿಬ್ಬರಲ್ಲಿ, ಈ ಸೀಸನ್ನಲ್ಲಿ ನಾನು ನೋಡಿದ್ದೀನಿ. ನಿಷ್ಕಳಂಕವಾದ ಫ್ರೆಂಡ್ಷಿಪ್ ಅದು’ ಎಂದು ಕಿಚ್ಚ ಸುದೀಪ್ ಮನಃಪೂರ್ವಕವಾಗಿ ಹೊಗಳಿದ್ದಾರೆ.
ಹಾಗಾದರೆ ಸಂತು-ಪಂತು ಈ ಇಬ್ಬರಲ್ಲಿ ಯಾರಿಗೆ ಈ ವಾರ ಮನೆಯಿಂದ ಗೇಟ್ಪಾಸ್ ಸಿಗುತ್ತದೆ? ಯಾರು ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ? ಆಪ್ತ ಸ್ನೇಹಿತ ಇಲ್ಲದೆ ಮನೆಯೊಳಗೆ ಹೇಗಿರುತ್ತಾರೆ? ಎಂದು ಕಾದು ನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.