ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯು ದಿನ ಕಳೆದಂತೆ ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ. ಬಿಗ್ ಬಾಸ್ ಮನೆಯೊಳಗೆ ಹೋದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿನಯ್ ಮತ್ತು ಪ್ರತಾಪ್ ಕಚ್ಚಾಡುತ್ತಲೇ ಇದ್ದಾರೆ. ಈ ಇಬ್ಬರ ನಡುವೆ ಹಲವು ಭಾರಿ ಕಾವೇರಿದ ಮಾತುಕತೆ ನಡೆದಿದ್ದೂ ಇದೆ. ಆದರೆ, ಈಗ ಕಾಲ ಬದಲಾಗಿದೆ. ಪ್ರತಾಪ್ ಅವರನ್ನು ಹೊಗಳುವ ಮೂಲಕ ವಿನಯ್ ಅಚ್ಚರಿ ಮೂಡಿಸಿದ್ದಾರೆ.
ಇದ್ದಕ್ಕಿದ್ದ ಹಾಗೆ, ವಿನಯ್ ಅವರು ನಿನ್ನ ಮೇಲೆ ಗೌರವ ಹೆಚ್ಚಾಗಿದೆ ಎಂದು ಪ್ರತಾಪ್ಗೆ ಹೇಳಿದ್ದಾರೆ. ಅಂದಹಾಗೆ, ಇದು ಮನದಾಳದಿಂದ ಬಂದ ಮೆಚ್ಚುಗೆಯೋ? ಅಥವಾ ಮತ್ತೊಂದು ಗೇಮ್ ಪ್ಲಾನ್ ಇರಬಹುದೇ ಎಂಬ ಅನುಮಾನ ಆರಂಭವಾಗಿದೆ. ಮೊದಲಿನಿಂದಲೂ ತಮ್ಮ ಚಾಣಾಕ್ಷತನದಿಂದ ಮನೆಯ ಎಲ್ಲ ಸದಸ್ಯರನ್ನು ನಿರ್ವಹಿಸುತ್ತಿರುವ ಪ್ರತಾಪ್ ಅವರು ವಿನಯ್ ಗಾಳಕ್ಕೆ ಬೀಳುವುದು ಅನುಮಾನ.
ವಿನಯ್ ಅನ್ನು ನಂಬದ ಪ್ರತಾಪ್
ವಿನಯ್ ಎಷ್ಟೇ ಪುಸಲಾಯಿಸಿದರೂ ಡ್ರೋನ್ ಪ್ರತಾಪ್ ಅವರು ವಿನಯ್ ಗಾಳಕ್ಕೆ ಬೀಳುವ ಆಸಾಮಿಯಲ್ಲ. ಏಕೆಂದರೆ, ವಿನಯ್ ಆಟಗಳ ಬಗ್ಗೆ ಎಲ್ಲರಿಗಿಂತಲೂ ಉತ್ತಮವಾಗಿ ಪ್ರತಾಪ್ ಅರಿತಿದ್ದಾರೆ. ಉದಾಹರಣೆಗೆ ಮಂಗಳವಾರದ ಎಪಿಸೋಡ್ನಲ್ಲಿ ವಿನಯ್ ತಂಡದ ಹಲವರು ತನಿಷಾ ಅವರಿಗೆ ರಾಣಿ ಎಂದು ಫಲಕ ಹಾಕಿದಾಗ ಪ್ರತಾಪ್ ಅವರು ವಿನಯ್ ತಂಡದ ಗೇಮ್ ಪ್ಲಾನ್ ಅನ್ನು ಬಿಚ್ಚಿಟ್ಟಿದ್ದಾರೆ.
ಈ ಕುರಿತು ವರ್ತೂರು ಸಂತೋಷ್ ಜೊತೆ ಮಾತನಾಡಿದ ಅವರು, ತನಿಷಾ ಅವರನ್ನು ತಮ್ಮ ತಂಡದ ಕಡೆ ಸೆಳೆಯಲು ವಿನಯ್ ತಂತ್ರ ರೂಪಿಸಿದ್ದಾರೆ. ಹಾಗಾಗಿಯೇ ಅಷ್ಟು ಜಗಳವಾದರೂ ತನಿಷಾಗೆ ರಾಣಿ ಎಂಬ ಫಲಕ ಹಾಕಿದ್ದಾರೆ. ನಮ್ಮ ತಂಡದ ಸಣ್ಭ ಮನಸ್ತಾಪಗಳ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಪ್ರತಾಪ್ ಹೇಳಿದರು.
ನಾಮಿನೇಶನ್ ಪಾಸ್ ಸಿಕ್ಕಾಗಲೂ ಪ್ರತಾಪ್ ಅವರು, ವಿನಯ್ ಅವರಿಗೆ ಪಾಸ್ ನೀಡದೇ ತಮ್ಮದೇ ತಂತ್ರ ಹೂಡಿದ್ದರು.