ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಪೆನ್ಸ್‌, ಥ್ರಿಲ್ಲರ್‌, ಹಾರರ್‌ ಅಂದರೆ ‘ದೇವಯಾನಿ’

Last Updated 8 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಉದಯ ಟಿ.ವಿ.ಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಧಾರಾವಾಹಿಯೊಂದು ಆರಂಭವಾಗಿದೆ. ಸಸ್ಪೆನ್ಸ್‌, ಥ್ರಿಲ್ಲರ್, ಹಾರರ್ ಮತ್ತು ಪ್ರೇಮ ಕಥೆಯನ್ನು ಈ ಧಾರಾವಾಹಿ ಒಳಗೊಂಡಿದೆ ಎಂಬುದು ವಾಹಿನಿಯ ಹೇಳಿಕೆ.

ಈ ಧಾರಾವಾಹಿಯ ಹೆಸರು ‘ದೇವಯಾನಿ’. ನವೆಂಬರ್ 12 ರಿಂದ ಪ್ರಸಾರ ಆರಂಭಿಸಿರುವ ಈ ಧಾರಾವಾಹಿ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ಸಂಜೆ 7 ಗಂಟೆಗೆ ವೀಕ್ಷಕರ ಮುಂದೆ ಬರಲಿದೆ.

ಧಾರಾವಾಹಿಯ ನಾಯಕಿ ದೇವಯಾನಿ ಎಂಟು ವರ್ಷಗಳಿಂದ ಶ್ರೀವತ್ಸನನ್ನು ಪ್ರೀತಿಸಿರುತ್ತಾಳೆ. ಆದರೆ, ಅವರ ಪ್ರೀತಿಗೆ ಇಬ್ಬರ ಮನೆಯವರಿಂದಲೂ ವಿರೋಧ. ಎಂಟು ವರ್ಷಗಳ ನಂತರ ಅವರ ಮದುವೆಗೆ ಎರಡೂ ಕುಟುಂಬಗಳು ಒಪ್ಪಿಗೆ ಕೊಟ್ಟಿವೆ. ಎಲ್ಲವೂ ಸರಿಯಾಯಿತು ಎಂದು, ವಧು-ವರ ಮದುವೆ ಮಂಟಪವರೆಗೆ ಬಂದಾಗ ಅಲ್ಲಿಗೆ ಬರುವ ಪವಾಡ ಪುರುಷರೊಬ್ಬರು ‘ಈ ಮದುವೆ ನಡೆದದ್ದೇ ಆದಲ್ಲಿ ದೇವಯಾನಿಯ ಸಾವು ಖಚಿತ’ ಎಂದು ಹೇಳುತ್ತಾರೆ.

ಎಲ್ಲ ಅಡ್ಡಿ, ಆತಂಕಗಳಿಂದ ಪಾರಾಗಿ ಈ ಜೋಡಿ ಮದುವೆಯಾಗುತ್ತಾರೆ. ಮದುವೆ ಆದ ನಂತರವೂ ದೇವಯಾನಿಯ ಕಷ್ಟಗಳು ನಿಲ್ಲುವುದಿಲ್ಲ. ಶ್ರೀವತ್ಸ - ದೇವಯಾನಿ ಜೋಡಿಯನ್ನ ಹೇಗಾದರೂ ಮಾಡಿ ಬೇರೆ ಮಾಡಲೇಬೇಕು ಎಂದು ಸಮಯಕ್ಕಾಗಿ ಕಾದು ಕುಳಿತಿರುತ್ತಾರೆ ಕೆಲವು ಹಿತಶತ್ರುಗಳು.

‘ದೇವಯಾನಿ ಸಾವನ್ನು ಹೇಗೆ ಗೆಲ್ಲುತ್ತಾಳೆ, ಶತ್ರುಗಳಿಂದ ಗಂಡನನ್ನು ಹೇಗೆ ರಕ್ಷಣೆ ಮಾಡುತ್ತಾಳೆ?’ ಎನ್ನುವ ಕುತೂಹಲಕರ ಕಥೆ ಈ ಧಾರಾವಾಹಿಯದ್ದು. ಪ್ರತಿ ಸಂಚಿಕೆಯಲ್ಲೂ ಒಂದೊಂದು ತಿರುವು ಇರುತ್ತದೆ ಎಂದು ವಾಹಿನಿ ಹೇಳಿಕೊಂಡಿದೆ.

ಈ ಧಾರಾವಾಹಿಯನ್ನು ಸುಂದರೇಶ್ ಅವರು ನಿರ್ಮಾಣ ಮಾಡಿದ್ದಾರೆ. ಇದರ ನಿರ್ದೇಶನ ಎಂ.ಕುಮಾರ್ ಅವರದ್ದು. ಕಥೆ ಹೊಸೆಯುವ ಹೊಣೆ ಹೊತ್ತವರು ಗಿರಿಜಾ ಮಂಜುನಾಥ್. ಸಂಭಾಷಣೆ ಗೌತಮ್ ವಖಾರಿ ಅವರದ್ದು.

ಮಾಮೂಲು ಎಂಬಂತೆ ಆಗಿರುವ ಅತ್ತೆ - ಸೊಸೆಯ ಕಾಟ, ಕಿರುಕುಳದ ಕಥೆಯಿಂದ ಹೊರತಾಗಿರುವ ಈ ಹೊಸ ಧಾರಾವಾಹಿಯ ಪ್ರತಿ ಕಂತೂ ಕುತೂಹಲಕರ ತಿರುವುಗಳನ್ನು ಪಡೆಯುತ್ತ ವೀಕ್ಷಕರ ಮನ ರಂಜಿಸುವುದರಲ್ಲಿ ಸಂಶಯವಿಲ್ಲ ಎಂಬುದು ಧಾರಾವಾಹಿ ತಂಡದವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT