ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BBK 10 | ಬಿಗ್‌ಬಾಸ್‌ ಮನೆಯಿಂದ ಹೊರಬಂದ ತನಿಷಾ ಕುಪ್ಪಂಡ ಹೇಳಿದ್ದೇನು?

Published 22 ಜನವರಿ 2024, 7:01 IST
Last Updated 22 ಜನವರಿ 2024, 7:01 IST
ಅಕ್ಷರ ಗಾತ್ರ

ಬಿಗ್‌ಬಾಸ್ ಮನೆಯಲ್ಲಿ ‘ಬೆಂಕಿ’ ಎಂದೇ ಖ್ಯಾತಿ ಗಳಿಸಿದ್ದ ತನಿಷಾ ಕುಪ್ಪಂಡ ಈ ವಾರ ಮಧ್ಯದಲ್ಲಿಯೇ ದೊಡ್ಮನೆಯಿಂದ ಹೊರ ಬಂದಿದ್ದರು. ನೂರು ದಿನಕ್ಕೂ ಹೆಚ್ಚು ಸಮಯ ಕಳೆದಿರುವ ಅವರು ತಮ್ಮ ಧ್ವನಿಯಿಂದಲೇ ಹೆಚ್ಚು ಸದ್ದು ಮಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿ ಇಷ್ಟು ವಾರಗಳ ಕಾಲ ಅವರ ಬದುಕು ಹೇಗಿತ್ತು? ಮನೆಯಿಂದ ಹೊರಗೆ ಬರಲು ಕಾರಣವಾದ ಸಂಗತಿಗಳು ಯಾವವು? ಅವರ ಪ್ರಕಾರ ಮನೆಯೊಳಗೆ ಯಾರು ಫೇಕ್‌? ಯಾರು ಜೆನ್ಯೂನ್? ಈ ಎಲ್ಲದರ ಕುರಿತು ತನಿಷಾ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮಿಡ್ ವೀಕ್ ಎಲಿಮಿನೇಷನ್ ಅನುಭವ ಹೇಗಿತ್ತು?

ಆ ಸಂದರ್ಭದಲ್ಲಿ ತುಂಬ ಬೇಜಾರಾಯ್ತು ನನಗೆ. ನಾನು ಇನ್ನಷ್ಟು ದಿನ ಉಳಿದುಕೊಳ್ಳಲು ಅರ್ಹಳು ಎಂಬ ಆತ್ಮವಿಶ್ವಾಸದಲ್ಲಿಯೇ ನಾನಿದ್ದೆ. ಆ ನಂಬಿಕೆ ಮುರಿದುಹೋಯಿತು ಎಂಬ ಬೇಜಾರಿದೆ. ಆದರೆ ಆಚೆ ಬಂದು ಸ್ವಲ್ಪ ರಿಲ್ಯಾಕ್ಸ್ ಆಗಿ ಯೋಚಿಸಿದಾಗ ನನ್ನ ಜರ್ನಿ ನನಗೆ ಖುಷಿ ಕೊಟ್ಟಿದೆ. ನಾನು ಮಾಡಬೇಕಾದ ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದೇನೆ.

ಹಾಗಾಗಿ ನಾನು ಬಿಗ್‌ಬಾಸ್ ಮನೆಯ ಒಳಗೆ ಇದ್ದಾಗ ಎಷ್ಟು ಖುಷಿಯಾಗಿದ್ದೇನೋ, ತೃಪ್ತಳಾಗಿದ್ದೇನೋ. ಆಚೆ ಬಂದಾಗಲೂ ಹಾಗೆಯೇ ಇದ್ದೇನೆ. ಎಲ್ಲರ ಮನೆಯ ಮಗಳಾಗಿದ್ದೇನೆ ನಾನು. ತುಂಬ ಖುಷಿ ಕೊಟ್ಟ ಪಯಣ ಇದು.

ಬಿಗ್‌ಬಾಸ್ ಮನೆಯಿಂದ ಯಾಕೆ ಹೊರಗೆ ಬಂದಿರಿ?

ತಪ್ಪು ಅಂತ ಏನೂ ಮಾಡಿಲ್ಲ ನಾನು. ಸಣ್ಣಪುಟ್ಟ ತಪ್ಪುಗಳನ್ನು ಮಾಡ್ತೀವಿ. ಅದು ಎಲ್ಲರಿಂದಲೂ ನಡೆಯುತ್ತದೆ. ಅದು ತಪ್ಪು ಎಂದು ಗೊತ್ತೂ ಆಗಿರಲ್ಲ. ಬಹುಶಃ ಜನರು ನಿರೀಕ್ಷೆ ಮಾಡುತ್ತಿರುವ ಯಾವುದನ್ನೋ ಹೊಸದಾಗಿ ಕೊಡಲಿಲ್ವೇನೋ ನಾನು ಅಂತ ಅನಿಸ್ತು. ನಾವು ಅಲ್ಲದೇ ಇರುವುದನ್ನು ಮಾಡಿದ್ರೆ ಖಂಡಿತವಾಗಿ ಫೇಕ್ ಆಗಿ ಕಾಣಿಸ್ತೀವಿ. ನಾನು ಫೇಕ್ ಆಗಿ ಏನನ್ನೂ ಮಾಡಲಿಲ್ಲ. ಜನರು ನನ್ನಿಂದ ಇನ್ನೂ ಏನನ್ನೋ ನಿರೀಕ್ಷೆ ಮಾಡ್ತಿದ್ರು ಅನಿಸುತ್ತದೆ. ಅದನ್ನು ನಾನು ಕೊಡಲಿಲ್ವೇನೋ.

ಮತ್ತೆ ಮನೆಯೊಳಗೆ ಹೋಗಲು ಅವಕಾಶ ಸಿಕ್ಕರೆ ನಿಮ್ಮಲ್ಲಿ ನೀವು ಏನನ್ನು ಬದಲಿಸಿಕೊಳ್ಳುತ್ತೀರಿ?

ನನ್ನಲ್ಲಿ ನಾನು ಏನೂ ಬದಲಾವಣೆ ಮಾಡಿಕೊಳ್ಳಲ್ಲ. ಯಾಕಂದ್ರೆ ಎಷ್ಟೋ ಜನರನ್ನು ಮನೆಯೊಳಗಿದ್ದಾಗ ಅಯ್ಯೋ ಪಾಪ ಎಂದು ಅಂದುಕೊಳ್ಳುತ್ತಿದ್ದೆ. ಆದರೆ ಹೊರಗೆ ಬಂದು ನೋಡಿದಾಗ, ಅವರು ಕೊಡುವ ಪ್ರತಿಕ್ರಿಯೆಗಳನ್ನು ನೋಡಿ, ಇವರನ್ನು ಅಯ್ಯೋ ಪಾಪ ಎಂದು ಕ್ಷಮಿಸಿದ್ದು ತಪ್ಪು ಅಂತ ನನಗನಿಸಿತು. ಸಾಮಾನ್ಯವಾಗಿ ನಾನು ಏನಾದ್ರೂ ಅನಿಸಿದ್ರೆ ನೇರವಾಗಿ ಹೇಳಿ ಅಷ್ಟಕ್ಕೆ ಬಿಟ್ಟುಬಿಡ್ತಿದ್ದೆ. ಆದರೆ ಹಾಗೆ ಬಿಡೋದನ್ನು ಕಡಿಮೆ ಮಾಡ್ತಿದ್ನೇನೋ. ಅಂದ್ರೆ ಇನ್ನೊಂಚೂರು ಡ್ರಾಮಾ ಮಾಡ್ತಿದ್ನೇನೋ.

ಮನೆಯೊಳಗೆ ನಿಮ್ಮ ಧ್ವನಿಯ ಬಗ್ಗೆ ಸಾಕಷ್ಟು ಚರ್ಚೆ ಬಂತು…

ಮೊದಲಿಂದಲೂ ನಾನು ನನ್ನ ಬೆಸ್ಟ್ ಅನ್ನು ಕೊಡುತ್ತ ಬಂದಿದೀನಿ. ಯಾರು ಏನೇ ಅಂದುಕೊಂಡರೂ, ಎಲ್ಲರೂ ಟಾರ್ಗೆಟ್ ಮಾಡಿದಾಗಲೂ ಮನಸ್ಸಿಗೆ ತೆಗೆದುಕೊಳ್ಳದೆ ಆಡಿದ್ದೇನೆ. ಯಾಕೆಂದರೆ ಅದು ಗೇಮ್. ಆದ್ರೆ ಪ್ರತಿ ಸಲ ನನ್ನ ಧ್ವನಿಯ ಬಗ್ಗೆ ಮಾತಾಡಿದಾಗಲೂ, ಅದರಲ್ಲೂ ಹೆಚ್ಚು ನಮ್ರತಾ, ವಿನಯ್ ಮಾತಾಡಿದ್ದಾರೆ. ಪ್ರತಿ ನಾಮಿನೇಷನ್‌ನಲ್ಲಿಯೂ ಈ ಕಾರಣ ಕೊಟ್ಟಿದ್ದಾರೆ, ಅವರೇನೋ ಕಡಿಮೆ ಧ್ವನಿಯಲ್ಲಿ ಮಾತಾಡುತ್ತಾರೆ ಎನ್ನುವ ರೀತಿಯಲ್ಲಿ. ನಾನು ಯಾವ ಜಾಗದಲ್ಲಿ ಮಾತಾಡಬೇಕೋ ಆ ಜಾಗದಲ್ಲಿ ಮಾತಾಡಿದ್ದೇನೆ.

ಕಾಲು ನೋವಾಗಿದ್ದು ನಿಮಗೆ ಹಿನ್ನೆಡೆ ?

ಕಾಲು ನೋವಾಗಿದ್ದ ದಿನ ನನಗೆ, ಶಾಕ್ ಆಗಿತ್ತು. ನನಗೆ ಯಾರೋ ಚಾಕು ಚುಚ್ಚಿಬಿಟ್ರೆನೋ ಅನ್ನುವಷ್ಟು ನೊಂದು ಕೊಂಡದ್ದೆ. ಇಷ್ಟು ಚೆನ್ನಾಗಿ ಆಡ್ತಿದ್ನಲ್ವಾ? ಯಾಕೆ ಹೀಗೆ ಕಷ್ಟಕೊಟ್ಟೆ ಎಂದು ದೇವರನ್ನೆಲ್ಲ ಬೈದುಕೊಂಡಿದ್ದೇನೆ. ಕಾಲು ನೋವು ಮಾಡಿ ಮನೆಯೊಳಗೆ ಹೋಗದೇ ಇರುವ ಹಾಗೆ ಮಾಡಿಬಿಟ್ಯಲ್ಲಾ ಎಂದು ದೂರಿದ್ದೇನೆ. ಆ ವಿಷಯದಲ್ಲಿ ನಾನು ಬಿಗ್‌ಬಾಸ್ ಟೀಮ್‌ಗೆ ಥ್ಯಾಂಕ್‌ಫುಲ್ ಆಗಿದ್ದೇನೆ. ಬಹಳಷ್ಟು ಟಾಸ್ಕ್‌ಗಳು ಕಾಲುನೋವು ಆಗಿದ್ದರೂ ಆಡಬಹುದು ಎನ್ನುವ ರೀತಿಯಲ್ಲಿಯೇ ಇರುತ್ತಿದ್ದವು. ಕಾಲು ನೋವು ನನ್ನನ್ನು ಯಾವುದೋ ನಾಲ್ಕು ಟಾಸ್ಕ್‌ನಿಂದ ಹೊರಗಿಟ್ಟಿರಬಹುದು ಬಿಟ್ರೆ, ಉಳಿದನ್ನು ನಾನು ಆಡಲು ಸಮರ್ಥಳಾಗಿದ್ದೆ. ಚಾನ್ಸ್ ಸಿಗಬೇಕಿತ್ತಷ್ಟೆ.

ಅಲ್ಲದೇ ಟಾಸ್ಕ್ ಅಂತ ಬಂದಾಗ ಅದು ಬರೀ ಮೂವತ್ ಪರ್ಸಂಟ್ ಅಷ್ಟೇ ಇರುತ್ತದೆ. ಅದಕ್ಕಿಂತ ಪರ್ಸನಾಲಿಟಿ(ವ್ಯಕ್ತಿತ್ವ) ಮುಖ್ಯ ಎಂದು ಸುದೀಪ್ ಅವರು ಮೊದಲೇ ಕ್ಲಿಯರ್ ಆಗಿ ಹೇಳಿದ್ದರು.

ನೀವು, ಸಂಗೀತಾ, ಕಾರ್ತಿಕ್ ಟ್ರಯೋ ಫ್ರೆಂಡ್‌ಷಿಪ್‌ ಬಗ್ಗೆ…?

ಮೊದಲಿನಿಂದ ನನಗೆ ಒಟ್ಟಿಗೆ ಇದ್ದಿದ್ದರಿಂದ ಸಂಗೀತಾ, ಕಾರ್ತಿಕ್, ನನ್ನ ನಡುವೆ ಟ್ರಯೊ ಫ್ರೆಂಡ್‌ಷಿಪ್ ಬೆಳೆಯಿತು. ಆದರೆ ಅವರಿಬ್ಬರೂ ಸ್ವಲ್ಪ ಜಾಸ್ತಿ ಕ್ಲೋಸ್ ಆಗಿರುವುದು ನನಗೆ ಖಂಡಿತವಾಗಲೂ ಗೊತ್ತಿತ್ತು. ಆ ಕಾರಣಕ್ಕೆ ನಾನು ಇದು ಗುಂಪಲ್ಲ. ನನಗೆ ಇವರ ಜೊತೆಗೆ ಹೆಚ್ಚು ಮಾತಾಡಬೇಕು ಅನಿಸುತ್ತದಷ್ಟೆ ಎಂದು ಹೇಳಿಕೊಂಡು ಎಲ್ಲರ ಜೊತೆ ಮಾತಾಡಿಕೊಂಡು ಓಡಾಡಿಕೊಂಡೇ ಇದ್ದೆ. ತನಿಷಾ ಅವರ ದುಃಖಕ್ಕೆ ಸ್ಪಂದಿಸುವುದಕ್ಕೆ ಪ್ರತಿ ಸಲ ಇರುತ್ತಿದ್ದಳು. ಆದರೆ ತನಿಷಾಗೆ, ತನಿಷಾ ಥರ ಯಾರೂ ಇರಲಿಲ್ಲ. ನನ್ನ ದುಃಖಕ್ಕಾಗಲಿ, ಖುಷಿಗಾಗಲಿ, ನನ್ನ ಕೋಪಕ್ಕಾಗಲಿ ಸ್ಪಂದಿಸುವವರು ಯಾರೂ ಇರಲಿಲ್ಲ. ಸಂಗೀತಾಗೆ ಏನು ಸಮಸ್ಯೆ ಎಂದರೆ, ಫ್ರೆಂಡ್ಸ್ ಅಂದ್ರೆ ಅವರನ್ನು ಸ್ವಲ್ಪ ತಲೆಮೇಲೆ ಇಟ್ಕೋಬೇಕು. ಆಗ ಅವರಿಗೆ ಸಮಾಧಾನ ಆಗುತ್ತದೆ. ಇಲ್ಲಾ ಅಂದ್ರೆ ಸಮಾಧಾನ ಆಗುವುದಿಲ್ಲ. ನಾನು ಜಗಳ ಆಯ್ತು ಅಂದ್ರೆ ಅಲ್ಲಲ್ಲೇ ಬಿಟ್ಟು ಹೋಗ್ತಾ ಇರ್ತೀನಿ. ಅವ್ರು ಜನರನ್ನೇ ಬಿಟ್ಟು ಹೋಗ್ತಿರ್ತಾರೆ. ಹಾಗಾಗಿ ಅವರು ತಪ್ಪು ಮಾಡಿದ್ರೂ ತುಂಬ ಬೇಗ ಕ್ಷಮಿಸಿ ನಾರ್ಮಲ್ ಆಗಿಬಿಡ್ತಿದ್ದೆ.

ಕಾರ್ತಿಕ್ ವಿಚಾರಕ್ಕೆ ಬಂದ್ರೆ, ಕಾರ್ತಿಕ್ ಸ್ವಲ್ಪ ತಡವಾಗಿ ಅರ್ಥ ಮಾಡಿಕೊಳ್ಳುವುದು. ತುಂಬ ಚೆನ್ನಾಗಿದ್ರು, ಕೊನೆ ಕ್ಷಣದಲ್ಲಿ ಬೇರೆ ಯಾರದೋ ಮಾತು ಕೇಳಿಕೊಂಡು ಎಡವಿದ್ರು ಅಂತ ಅನಿಸ್ತು. ಪ್ರತಿ ಸಲ ಹೇಳಬೇಕಾದ್ರೆ ನಾನು ಇರ್ತಿದ್ದೆ. ಆದ್ರೆ ಅವು ಇರ್ತಿರ್ಲಿಲ್ಲ. ಹಾಗಾಗಿ ಒಬ್ರು ಸ್ವಲ್ಪ ಬೇಗ ದೂರವಾದ್ರು. ಇನ್ನೊಬ್ರು ತುಸು ತಡವಾಗಿ ದೂರವಾದ್ರು. ಆಚೆ ಹೋದರೆ ಬಹುಶಃ ನಾನು ಕಾರ್ತೀಕ್ ಜೊತೆಗೆ ಸ್ನೇಹ ಮುಂದುವರಿಸ್ತೀನಿ.

ಮನೆಯೊಳಗೆ ಯಾರು ಇಷ್ಟ? ಯಾರು ಫೇಕ್? ಯಾರು ಗೆಲ್ಲಬಹುದು?

ನನಗೆ ವರ್ತೂರು ಅವರ ಮುಗ್ಧತೆ ಇಷ್ಟ. ಯಾರದೋ ಮಾತಿಗೆ ಕೇಳಿಸಿಕೊಂಡು, ಯಾರ ಬಗ್ಗೆಯೂ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದಿಲ್ಲ. ಹಾಗಾಗಿ ಅವರ ಜೊತೆಗೆ ಮಾತಾಡುವುದು ನನಗೆ ಮೊದಲಿನಿಂದಲೂ ಇಷ್ಟ.

ನನ್ನ ಪ್ರಕಾರ ಬಿಗ್‌ಬಾಸ್ ಮನೆಯಲ್ಲಿ ಫೇಕ್ ಅಂದ್ರೆ, ಸಂಗೀತಾ. ಜೆನ್ಯೂನ್ ಅನಿಸುವುದು ವರ್ತೂರು ಸಂತೋಷ್. ನನ್ನ ಪ್ರಕಾರ ಗೆಲ್ಲಬಹುದು ಅನಿಸುವುದು ಸಂಗೀತಾ. ಆದರೆ ನನಗೆ ಕಾರ್ತಿಕ್ ವಿನ್‌ ಆಗಬೇಕು.

ಜಿಯೊ ಸಿನಿಮಾ ಫನ್‌ಟಾಸ್ಕ್‌ಗಳ ಬಗ್ಗೆ ಹೇಳಿ?

ಜಿಯೊ ಸಿನಿಮಾ ಫನ್ ಫ್ರೈಡೇ ಟಾಸ್ಕ್‌ಗಳು ಯಾವಾಗ ಬಂದ್ರೂ ಅವುಗಳನ್ನು ಸಾಕಷ್ಟು ಎಂಜಾಯ್ ಮಾಡಿದೀನಿ ನಾನು. ಮ್ಯೂಸಿಕಲ್ ಪಾಟ್ ಅಂತೊಂದು ಗೇಮ್ ಮಾಡಿದ್ರು. ಅದರಲ್ಲಿ ನಾನು ಗೆದ್ದೆ ಕೂಡ. ಆ ಟಾಸ್ಕ್ ನಂಗೆ ತುಂಬ ಇಷ್ಟವಾಯ್ತು. ಯಾಕಂದ್ರೆ ಅಸಮರ್ಥರು ಎಂದು ನಾವು ಮನೆಯೊಳಗೆ ಎಂಟರ್‍ ಆಗಿದ್ವಿ. ಇಡೀ ವಾರ ಕೆಲಸ ಮಾಡು ಕೆಲಸ ಮಾಡು ಅಂದ್ಕೊಂಡು ಇದ್ವಿ. ಅವರಾದ್ಮೇಲೆ ತಿನ್ನು, ಅವರಾದ್ಮೇಲೆ ಮಲಗು. ಲೈಟ್ ಆಫ್ ಆಗೋವರೆಗೂ ಕಾಯಬೇಕು ಹೀಗೆಯೇ ಕಳೆದಿದ್ವಿ. ಸಾಕಾಗಿಬಿಟ್ಟಿತ್ತು. ಆ ವಾರ ಬಂದ ಮ್ಯೂಸಿಕಲ್ ಟಾಸ್ಕ್ ಬಂದಾಗ ಎಂಜಾಯ್ ಮಾಡಿದೀನಿ.

ಬಿಗ್‌ಬಾಸ್ ಮನೆಯಿಂದ ಆಚೆ ಬಂದು ಏನು ಮಿಸ್ ಮಾಡ್ಕೋತಿದೀರಿ…

ಮೈಕ್ ಅನ್ನೋದು ನನ್ನ ದೇಹದ ಒಂದು ಭಾಗವೇ ಆಗಿಬಿಟ್ಟಿದೆ. ಎರಡನೇದಾಗಿ ಬಿಗ್‌ಬಾಸ್ ಧ್ವನಿ. ನಾವು ಮುಂದೆ ನಡೆಯುವುದಕ್ಕೆ ದಾರಿಯೇ ಇಲ್ಲ ಅಂದಾಗ ಹೆಜ್ಜೆ ಎಲ್ಲಿ ಇಡಬಹುದು ಎಂದು ತೋರಿಸಿಕೊಟ್ಟಿದೆ. ನಾನು ಒಂಟಿಯಾದಾಗ ಮನೆ ಸದಸ್ಯರು ನನಗೆ ಸಾಂತ್ವನ ಹೇಳಿದ್ದಾರೆ. ನಮ್ಮ ಮನೆಯವರೂ ಇಷ್ಟು ಕಾಳಜಿ ಮಾಡಿರ್ಲಿಲ್ವೇನೋ, ಅಷ್ಟು ಪ್ರೀತಿ ಕೊಟ್ಟಿದ್ದಾರೆ ನಾನು ಇದನ್ನು ಯಾವತ್ತಿಗೂ ಮರೆಯಲಾರೆ ಎಂದಿದ್ದಾರೆ ತನಿಷಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT