ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಸಿದ್ಧಲಿಂಗೇಶ್ವರ ಧಾರಾವಾಹಿ ಜುಲೈ 4ರಂದು 400ನೇ ಸಂಚಿಕೆಗೆ ತಲುಪಲಿದೆ.
ಸಿದ್ಧಲಿಂಗೇಶ್ವರರ ಬದುಕು, ಪವಾಡಗಳನ್ನ ಸಮಾಜಕ್ಕೆ ಪ್ರಸ್ತುತವಾಗಿರುವಂತೆ ಈ ಧಾರಾವಾಹಿ ತೋರಿಸಿರುವುದು ಬಹಳ ವಿಶೇಷ. ಪ್ರತಿದಿನ ಧಾರಾವಾಹಿಯ ಅಂತ್ಯದಲ್ಲಿ ಬರುವ ಬಸವಣ್ಣನ ವಚನಗಳು ಮತ್ತು ಅದರ ಸಾರಾಂಶ ವೀಕ್ಷಕರ ಮೆಚ್ಚುಗೆ ಗಳಿಸಿವೆ.
ನವೀನ್ ಕೃಷ್ಣ ಅವರು ನಿರ್ದೇಶಿಸಿರುವ ಧಾರಾವಾಹಿಯನ್ನು ನಂದಿ ಮೂವೀಸ್ ಬ್ಯಾನರ್ನಲ್ಲಿ ಅರವಿಂದ್ ಮತ್ತು ಶ್ರೀನಿವಾಸ್ ನಿರ್ಮಿಸಿದ್ದಾರೆ. ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರ ಪಾತ್ರದಲ್ಲಿ ವಲ್ಲಭ ಸೂರಿ ಅವರು ಅಭಿನಯಿಸಿದ್ದಾರೆ. ಮಂಡ್ಯ ರಮೇಶ್ ಮತ್ತು ಅಪರ್ಣ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಈ ಧಾರಾವಾಹಿಯ ಮತ್ತೊಂದು ವಿಶೇಷ, ಅತ್ಯುತ್ತಮ ಗ್ರಾಫಿಕ್ಸ್ ಬಳಕೆ. ಎಡೆಯೂರು ಶ್ರೀಸಿದ್ಧಲಿಂಗೇಶ್ವರ ಪವಾಡಗಳು, ನಾಗ ರಾಣಿ ದಿತಿ, ಡಮರುಗ ಮತ್ತು ಅಘೋರ ಸಂಚಿಕೆಗಳಲ್ಲಿ ಗ್ರಾಫಿಕ್ಸ್ ಅದ್ಭುತವಾಗಿ ಮೂಡಿಬಂದಿತ್ತು. ಈಗ ಮುಂಬರುವ ಮತ್ಸ್ಯ ಕನ್ನಿಕೆಯ ವಿಶೇಷ ಸಂಚಿಕೆಗಳಲ್ಲೂ ಗ್ರಾಫಿಕ್ಸ್ ಬಳಸಲಾಗಿದ್ದು, ಕತೆಯೂ ರೋಚಕವಾಗಿರಲಿದೆ. ಜುಲೈ 4ರಂದು ರಾತ್ರಿ 9ಗಂಟೆಗೆ ಈ ಧಾರಾವಾಹಿಯ 400ನೇ ಸಂಚಿಕೆ ಪ್ರಸಾರವಾಗಲಿದೆ ಎಂದು ವಾಹಿನಿಯ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.