ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಮತಪತ್ರಕ್ಕೆ ಆಧಾರ್‌: ಮಾಹಿತಿ ಕಳವಿಗೆ ಹೆದ್ದಾರಿ

ಪಾಠ ಕಲಿಸದ ಆಂಧ್ರ ಪ್ರದೇಶ, ತೆಲಂಗಾಣ, ಪುದುಚೇರಿ ಪ್ರಕರಣ
Last Updated 30 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

7.8 ಕೋಟಿ ಮತದಾರರ ವೈಯಕ್ತಿಕ ಮಾಹಿತಿಯನ್ನು ರಾಜಕೀಯ ಪಕ್ಷಗಳು ಅಕ್ರಮವಾಗಿ ಪಡೆದುಕೊಂಡಿವೆ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಒಪ್ಪಿಕೊಂಡಿತ್ತು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ವಿಧಾನಸಭೆಗಳಿಗೆ 2019ರಲ್ಲಿ ಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ, 5.5 ಕೋಟಿ ಮತದಾರರ ಆಧಾರ್‌ ಸಂಖ್ಯೆಯನ್ನು ಮತದಾರರ ಗುರುರು ಚೀಟಿಗೆ ಜೋಡಿಸಲಾಗಿತ್ತು. ಆದರೆ, ಮನೆ ಮನೆಗೆ ತೆರಳಿ ದೃಢೀಕರಣದ ಕೆಲಸವನ್ನು ಮಾಡಿರಲಿಲ್ಲ. ಆಧಾರ್‌–ಮತದಾರರ ಗುರುತು ಚೀಟಿ ಜೋಡಣೆಗೆ ಹಲವು ಮತದಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಮತದಾರರ ಗುರುತು ಚೀಟಿಗೆ ಆಧಾರ್‌ ಜೋಡಣೆಯಾದರೆ, ಅದನ್ನು ಬಳಸಿಕೊಂಡು ಮತದಾರರ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದಕ್ಕೆ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಪುದುಚೇರಿ ಚುನಾವಣೆ ಸಂದರ್ಭದಲ್ಲಿ ನಡೆದ ವಿದ್ಯಮಾನವು ಉದಾಹರಣೆಯಾಗಿದೆ. ಮತದಾರರ ಗುರುತು ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆಗಾಗಿ ಕಾಯ್ದೆಯನ್ನು ಸಂಸತ್ತು ಡಿಸೆಂಬರ್‌ 20ರಂದು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂಗೀಕರಿಸಿದೆ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಪುದುಚೇರಿ ಪ್ರಕರಣಗಳ ಪೊಲೀಸ್‌ ತನಿಖೆ ಮತ್ತು ಚುನಾವಣಾ ಆಯೋಗದ ತನಿಖೆಯ ಆಂತರಿಕ ದಾಖಲಾತಿಗಳನ್ನು ರಿಪೋರ್ಟರ್ಸ್‌ ಕಲೆಕ್ಟಿವ್‌ ಪರಿಶೀಲನೆ ನಡೆಸಿದೆ. ಮತದಾರ ಮಾಹಿತಿಯನ್ನು ರಾಜಕೀಯ ಪ‍ಕ್ಷಗಳು ಹೇಗೆ ಬಳಸಿಕೊಂಡಿವೆ ಮತ್ತು ಅದರ ಮೇಲೆ ಕಣ್ಗಾವಲು ಇರಿಸಬೇಕಿದ್ದ ಸಂಸ್ಥೆಗಳು ಹೇಗೆ ನಡೆದುಕೊಂಡಿವೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ಸಮಾಲೋಚನೆ ಮತ್ತು ಪರಿಶೀಲನೆಯಂತಹಪ್ರಕ್ರಿಯೆಗಳನ್ನು ನಿರ್ಲಕ್ಷಿಸಿ ಚುನಾವಣಾ ಕಾನೂನುಗಳ ತಿದ್ದುಪಡಿ ಕಾಯ್ದೆ 2021 ಅನ್ನು ಅಂಗೀಕರಿಸಲಾಗಿದೆ. ಮತದಾರರ ಚೀಟಿಗೆ ಹೆಸರು ಸೇರಿಸುವಾಗ ಅಥವಾ ದೃಢೀಕರಣದ ಸಂದರ್ಭದಲ್ಲಿ ಮತದಾರರ ಆಧಾರ್ ಸಂಖ್ಯೆಯನ್ನು ಚುನಾವಣಾ ನೋಂದಣಾಧಿಕಾರಿಯು ಪಡೆದುಕೊಳ್ಳಲು ಈ ಕಾಯ್ದೆಯು ಅವಕಾಶ ಒದಗಿಸುತ್ತದೆ. ಆಧಾರ್‌ ಮತ್ತು ಮತದಾರರ ಗುರುತು ಚೀಟಿ ಜೋಡಣೆಯು ಚುನಾವಣೆಯ ಸಂದರ್ಭದಲ್ಲಿ ದುರ್ಬಳಕೆ ಆಗಬಹುದು ಎಂದು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

* ರಿಪೋರ್ಟರ್ಸ್‌ ಕಲೆಕ್ಟಿವ್ ವರದಿ. ವರದಿಯ ಇಂಗ್ಲಿಷ್‌ ಆವೃತ್ತಿ ಆರ್ಟಿಕಲ್–14.ಕಾಂನಲ್ಲಿ ಲಭ್ಯವಿದೆ

-----

ಪುದುಚೇರಿಯಲ್ಲಿ ಏನಾಯಿತು?

ಪುದುಚೇರಿಯ ಬಿಜೆಪಿ ಘಟಕವು ಜನರ ಅನುಮತಿ ಪಡೆಯದೇ ಅವರ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮೊದಲಾದ ವೈಯಕ್ತಿಕ ಮಾಹಿತಿಯನ್ನು ಪಡೆಯುತ್ತಿದೆ ಎಂದು ಆರೋಪಿಸಿ ಕಾರ್ಯಕರ್ತ ಆನಂದ್ ಎಂಬುವರು ಮದ್ರಾಸ್ ಹೈಕೋರ್ಟ್‌ನಲ್ಲಿ ಮಾರ್ಚ್ 18ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಆನಂದ್ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳ ಸುಮಾರು 900 ಮತಗಟ್ಟೆಗಳಿಗೂ ಬಿಜೆಪಿ ಪ್ರತ್ಯೇಕ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಸೃಷ್ಟಿಸಿತ್ತು. ಮತದಾರರ ಆಧಾರ್ ಸಂಖ್ಯೆಯ ಜತೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್ ಗ್ರೂಪ್ ಸೇರುವಂತೆ ಆಹ್ವಾನ ಬರುತ್ತಿತ್ತು.
‘ವ್ಯಕ್ತಿಯೊಬ್ಬರು ಎರಡು ಮೊಬೈಲ್ ಸಂಖ್ಯೆಗಳನ್ನು ಉಪಯೋಗಿಸುತ್ತಿದ್ದರೆ, ಆಧಾರ್ ಜೊತೆ ಜೋಡಣೆಯಾಗಿರುವ ಸಂಖ್ಯೆಗೆ ಮಾತ್ರ ವಾಟ್ಸ್ಆ್ಯಪ್ ಗ್ರೂಪ್ ಸೇರುವಂತೆ ಆಹ್ವಾನ ಬರುತ್ತಿತ್ತೇ ವಿನಾ, ಜೋಡಣೆಯಾಗದ ಮೊಬೈಲ್ ಸಂಖ್ಯೆಗೆ ಅಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

ವಾಸಸ್ಥಳ ಬದಲಾಯಿಸಿ‌ದರೂ, ಪ್ರಸ್ತುತ ವಾಸವಾಗಿರುವ ವಿಧಾನಸಭಾ ಕ್ಷೇತ್ರದ ಬಿಜೆಪಿ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರುವಂತೆ ಆಹ್ವಾನಿಸುವ ಸಂದೇಶಗಳು ಬರುವ ವಿದ್ಯಮಾನವೂ ಪುದುಚೇರಿಯಲ್ಲಿ ಕಂಡುಬಂದಿದೆ. ‘ಮತದಾರ ತನ್ನ ಆಧಾರ್‌ ಕಾರ್ಡ್‌ನಲ್ಲಿ ಮನೆಯ ವಿಳಾಸ ತಿದ್ದುಪಡಿ ಮಾಡಿದಾಗ, ಬಿಜೆಪಿ ಈ ವಿಳಾಸ ಬಳಸಿಕೊಂಡಿರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ಕರೆ ಮಾಡಿ ಜನರನ್ನು ಸಂಪರ್ಕಿಸುವ ಯತ್ನಗಳು ನಡೆದಿವೆ. ‘ಇಂತಹ ಒಂದು ಕರೆಯನ್ನು ನಾನು ಸ್ವೀಕರಿಸಿದೆ. ಕರೆ ಮಾಡಿದವರು ನನ್ನ ಹೆಸರು, ನನ್ನ ಮತಗಟ್ಟೆಯ ಮಾಹಿತಿ ನೀಡಿದರು. ಪಕ್ಷವು ಪುದುಚೇರಿ ನಿವಾಸಿಗಳ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಂಡಿರುವುದು ಸ್ಪಷ್ಟ. ಈ ಸಂಖ್ಯೆಗಳನ್ನು ಬಳಸಿಕೊಂಡು ಗೂಗಲ್‌ ಪೇ ಮೊದಲಾದ ಆ್ಯಪ್‌ಗಳ ಮೂಲಕ ಮತದಾರರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಅವಕಾಶವೂ ಸಿಕ್ಕಂತಾಗುತ್ತದೆ. ಇಂತಹ ಹಣ ವರ್ಗಾವಣೆಗಳನ್ನು ಪರೀಕ್ಷಿಸುವ ಯಾವ ವ್ಯವಸ್ಥೆಯೂ ಸದ್ಯಕ್ಕೆ ಇಲ್ಲದ ಕಾರಣ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬುದು ಅಸಂಬದ್ಧ ಎನಿಸುತ್ತದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ಪ್ರತಿಪಾದನೆ

ಮತದಾರರ ಮಾಹಿತಿ ಪಡೆದಿರುವುದನ್ನು ಬಿಜೆಪಿ ನಿರಾಕರಿಸಿಲ್ಲ. ‘ಮತದಾರರನ್ನು ಗುರುತಿಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಆಯಾ ವಿಧಾನಸಭಾ ಕ್ಷೇತ್ರದ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗುಂಪುಗಳನ್ನು ರಚಿಸಲಾಗಿದೆ’ ಎಂದು ಪಕ್ಷದ ಪುದುಚೇರಿ ಘಟಕದ ಅಧ್ಯಕ್ಷ ವಿ. ಸಾಯಿನಾಥನ್ ಅವರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಉಳಿದ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ.

‘ಕ್ಷೇತ್ರಕಾರ್ಯದ ವೇಳೆ ಪಕ್ಷದ ಕಾರ್ಯಕರ್ತರು ಮತದಾರರಿಂದ ಸಂಗ್ರಹಿಸಿದ ಹಾಗೂ ಡೇಟಾಬೇಸ್‌ನಲ್ಲಿ ಸಿಗುವ ಮಾಹಿತಿ ಆಧರಿಸಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಎಸ್‌ಎಂಎಸ್ ಕಳುಹಿಸಲು ಉಪಯೋಗಿಸಿರುವ ಮೊಬೈಲ್ ಸಂಖ್ಯೆಗಳನ್ನು ಬೇರಾವ ಮೂಲದಿಂದಲೂ ಪಡೆದಿಲ್ಲ’ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಿದೆ.

ಮತದಾರರ ಹೆಸರೇ ಮಾಯ

ಆಂಧ್ರಪ್ರದೇಶದಲ್ಲಿ ಈ ಹಗರಣ ಮತ್ತೊಂದು ಹಂತಕ್ಕೆ ಹೋಗಿದೆ. ‘ತೆಲುಗುದೇಶಂ ಪಕ್ಷದ ಅಭಿಯಾನವು ಆಧಾರ್ ಸಂಖ್ಯೆ ಪಡೆಯಲಷ್ಟೇ ಸೀಮಿತವಾಗಿಲ್ಲ. ತಮ್ಮ ಪಕ್ಷದ ಪರ ಇಲ್ಲದ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವ ಸಾಧ್ಯತೆಯೂ ಇದೆ’ ಎಂದು ತೆಲಂಗಾಣ ಪೊಲೀಸರು ಹೇಳಿದ್ದರು.

ಮತಚೀಟಿಗೆ ಆಧಾರ್ ಸಂಖ್ಯೆ ಜೋಡಿಸುವ ಯೋಜನೆಗೆ ಆಯ್ಕೆಯಾಗಿದ್ದ ಆಂಧ್ರಪ್ರದೇಶದಲ್ಲಿ ಮೊದಲ ವರ್ಷವೇ 25 ಲಕ್ಷ ಜನರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟುಹೋಗಿತ್ತು. ಟಿಡಿಪಿ ರಚಿಸಿದ್ದ ‘ಸೇವಾಮಿತ್ರ’ ಆ್ಯಪ್‌ನಲ್ಲಿ ಮತದಾರರ ಮೊಬೈಲ್ ಸಂಖ್ಯೆ, ಕುಟುಂಬದ ವಿವರ, ಅವರ ರಾಜಕೀಯ ಒಲವು ಏನು ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿತ್ತು. ಪಕ್ಷದ ದೂರಿನ ಮೇರೆಗೆ ತೆಲಂಗಾಣ ಪೊಲೀಸರು ಆ್ಯಪ್ ಅಭಿವೃದ್ಧಿಪಡಿಸಿದ್ದ ಐಟಿ ಗ್ರಿಡ್ಸ್ ಇಂಡಿಯಾ ಪ್ರೈ.ಲಿ. ಸಂಸ್ಥೆಯಲ್ಲಿ ಶೋಧ ನಡೆಸಿದ್ದರು.

ವೈಯಕ್ತಿಕ ಮಾಹಿತಿ ಬಳಕೆ ಹೇಗೆ?

ವೈಯಕ್ತಿಕ ಮಾಹಿತಿ ಬಳಕೆ ಮಾಡಿಕೊಂಡಿರುವ ಪಕ್ಷಗಳು ಇದಕ್ಕಾಗಿ ಮತದಾರರ ಸಮ್ಮತಿ ಪಡೆದುಕೊಂಡಿಲ್ಲ ಎಂಬುದು ತನಿಖಾಧಿಕಾರಿಗಳ ವರದಿಯಿಂದ ತಿಳಿದು ಬಂದಿದೆ.

ಮತದಾರರ ನಿವಾಸ, ದೂರವಾಣಿ ಸಂಖ್ಯೆ, ಜಾತಿ, ಅವರು ಸರ್ಕಾರದಿಂದ ಪಡೆದುಕೊಂಡಿರುವ ಸೌಲಭ್ಯಗಳು, ರಾಜಕೀಯ ಆಯ್ಕೆ ಮುಂತಾದ ಮಾಹಿತಿಯನ್ನು ಪಕ್ಷಗಳು ಕಲೆ ಹಾಕಿವೆ. ಆಧಾರ್‌ ಮತ್ತು ಸರ್ಕಾರದ ಇತರ ದತ್ತಾಂಶಗಳಿಂದ ಈ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಈ ಮಾಹಿತಿಯ ಆಧಾರದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಲಾಗಿದೆ. ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂಬುದು ಖಚಿತವಾದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುವುದಕ್ಕೆ ಯತ್ನಿಸಿರುವ ಸಾಧ್ಯತೆಯೂ ಇದೆ.

ಜಾಣಕುರುಡು

ಆಂಧ್ರ ಪ್ರದೇಶ ಪ್ರಕರಣ ಬೆಳಕಿಗೆ ಬಂದು ಎರಡು ವರ್ಷಗಳೇ ಕಳೆದಿವೆ. ಆದರೆ ತನಿಖೆ ಪೂರ್ಣವಾಗಿಲ್ಲ. ಚುನಾವಣಾ ಆಯೋಗ ಮತ್ತು ಯುಐಡಿಎಐ ಯಾವುದೇ ಕ್ರಮ ತೆಗೆದುಕೊಳ್ಳದಿರುವುದೇ ಇದಕ್ಕೆ ಕಾರಣ.

ಪುದುಚೇರಿ ಪ್ರಕರಣದಲ್ಲಿ ಆಯೋಗವು ಆರಂಭದಲ್ಲಿ ಬೇರೆಯವರ ಮೇಲೆ ಹೊಣೆ ವರ್ಗಾಯಿಸಲು ಯತ್ನಿಸಿತ್ತು. ಆದರೆ, ಮದ್ರಾಸ್ ಹೈಕೋರ್ಟ್‌ 2021ರ ಏಪ್ರಿಲ್‌ 1ರ ವಿಚಾರಣೆಯಲ್ಲಿ ಛೀಮಾರಿ ಹಾಕಿದ ನಂತರ ಕೆಲವು ಕ್ರಮಗಳನ್ನು ತೆಗೆದುಕೊಂಡಿತು. ‘ನಮ್ಮ ಪ್ರಾಧಿಕಾರದಿಂದ ಯಾವುದೇ ದತ್ತಾಂಶವನ್ನು, ಯಾರಿಗೂ ನೀಡಿಲ್ಲ’ ಎಂದು ಯುಐಡಿಎಐ ಕೈತೊಳೆದುಕೊಂಡಿತು. ಆಧಾರ್ ಪ್ರಾಧಿಕಾರವು ಆಂಧ್ರಪ್ರದೇಶದ ಪ್ರಕರಣದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಆಧಾರ್ ಮಾಹಿತಿ ದುರ್ಬಳಕೆ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ‘ಆಧಾರ್ ಪ್ರಾಧಿಕಾರದ ಕೇಂದ್ರೀಕೃತ ಡೇಟಾಬೇಸ್‌, ಸೆಂಟ್ರಲ್ ಐಡೆಂಟಿಟೀಸ್ ಡೇಟಾ ರೆಪೋಸಿಟರಿ ಮತ್ತು ರಾಜ್ಯ ನಿವಾಸಿ ದತ್ತಾಂಶ ಕೇಂದ್ರಗಳಿಂದ ಈ ದತ್ತಾಂಶಗಳನ್ನು ಕಳವು ಮಾಡಿರುವ ಸಾಧ್ಯತೆ ಇದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿತ್ತು.

ಎಫ್‌ಐಆರ್‌ನಲ್ಲಿನ ಮಾಹಿತಿಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಆಧಾರ್ ಪ್ರಾಧಿಕಾರವು, ‘ನಮ್ಮ ಸರ್ವರ್‌ಗಳಿಂದ ಈ ದತ್ತಾಂಶಗಳನ್ನು ಕಳವು ಮಾಡಿಲ್ಲ. ಬದಲಿಗೆ ರಾಜಕೀಯ ಪಕ್ಷಗಳು ನೇರವಾಗಿ ಫಲಾನುಭವಿಗಳಿಂದಲೇ ಈ ವಿವರ ಪಡೆದುಕೊಂಡಿವೆ’ ಎಂದು ಹೇಳಿಕೆ ನೀಡಿತು. ಆದರೆ ತಾನೇ ದಾಖಲಿಸಿದ್ದ ಎಫ್‌ಐಆರ್‌ನಲ್ಲಿರುವ ಹೇಳಿಕೆಯನ್ನೂ ಆಧಾರ್ ಪ್ರಾಧಿಕಾರ ಬದಲಿಸಿದೆಯೇ ಎಂಬುದು ಬಹಿರಂಗವಾಗಿಲ್ಲ.

ಎಲ್ಲಾ ವಿವರಗಳ ಕೊಂಡಿ ಆಧಾರ್

‘ಮತದಾರರ ವಿವರ, ಫೋನ್ ಸಂಖ್ಯೆ, ಜಾತಿಯ ವಿವರಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ವಿವರವು ಸರ್ಕಾರದ ವಿವಿಧ ಡೇಟಾಬೇಸ್‌ಗಳಲ್ಲಿ ಬಿಡಿಬಿಡಿಯಾಗಿ ಲಭ್ಯವಿವೆ. ರಾಜಕೀಯ ಪಕ್ಷಗಳು ಇವುಗಳನ್ನು ಡೇಟಾಬೇಸ್‌ನಿಂದ ಪಡೆದುಕೊಳ್ಳಬಹುದು ಮತ್ತು ಡಾರ್ಕ್‌ವೆಬ್ ಮಾರುಕಟ್ಟೆಯಿಂದಲೂ ಖರೀದಿಸಬಹುದು. ಈ ಎಲ್ಲಾ ಮಾಹಿತಿಗಳು ಬಿಡಿಬಿಡಿಯಾಗಿ ಮಾತ್ರವೇ ಲಭ್ಯವಿದ್ದು, ಒಂದಕ್ಕೊಂದು ಪರಸ್ಪರ ಜೋಡಣೆಯಾಗಿರುವುದಿಲ್ಲ. ಇವಿಷ್ಟೇ ಮಾಹಿತಿಯಿಂದ ಮತದಾರನ ಪೂರ್ಣ ಚಿತ್ರಣ ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲಾ ವಿವರಗಳನ್ನು ಪರಸ್ಪರ ಜೋಡಿಸುವ ಏಕೈಕ ಕೊಂಡಿ ಆಧಾರ್ ಮಾತ್ರ’ ಎನ್ನುತ್ತಾರೆ ದತ್ತಾಂಶ ಮತ್ತು ಖಾಸಗಿತನ ಸಂಶೋಧಕ ಆನಂದ್ ವೆಂಕಟನಾರಾಯಣನ್.

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಆಧಾರ್ ವಿವರ ನೀಡಬೇಕು ಎಂದು 2018ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದ ಪ್ರಕರಣದಲ್ಲಿ ಆನಂದ್ ನಾರಾಯಣನ್ ಅವರು, ತಜ್ಞ ಸಾಕ್ಷಿಯಾಗಿದ್ದರು.

‘ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಾರ್ವಜನಿಕರು ನೀಡಿರುವ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ದಾಖಲೆಯಲ್ಲಿ ಆಧಾರ್ ಮತ್ತು ಫೋನ್‌ ಸಂಖ್ಯೆಯ ವಿವರ ಇರುತ್ತದೆ. ಈ ದತ್ತಾಂಶವು ಕಾಳಸಂತೆಯಲ್ಲಿ ಬಿಕರಿಗೆ ಇದೆ. ಸರ್ಕಾರವು ಮತದಾರರ ಗುರುತಿನ ಚೀಟಿಗೆ ಆಧಾರ್ ಅನ್ನು ಜೋಡಿಸಿದ ತಕ್ಷಣ, ಈ ಎಲ್ಲಾ ವಿವರಗಳನ್ನು ಪರಸ್ಪರ ಜೋಡಿಸುವ ಒಂದು ಕೊಂಡಿಯಾಗಿ ಆಧಾರ್ ಕೆಲಸ ಮಾಡುತ್ತದೆ. ಈ ಆಧಾರ್ ದತ್ತಾಂಶವನ್ನು ಪಡೆದುಕೊಳ್ಳುವ ಪಕ್ಷವು, ಮತದಾರರ ವ್ಯಕ್ತಿತ್ವದ ಸಂಪೂರ್ಣ ಚಿತ್ರವನ್ನು ರಚಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘ಆಧಾರ್ ದತ್ತಾಂಶ ಒಂದು ಸಿಕ್ಕರೆ ಸಾಕು ಮತದಾರನ ಜಾತಿ, ಧರ್ಮ, ವಿಳಾಸ, ಕೌಟುಂಬಿಕ ವಿವರ, ಸರ್ಕಾರದಿಂದ ಪಡೆದ ವಿವಿಧ ಅನುಕೂಲಗಳ ವಿವರ, ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಜೀವನ ಮತ್ತಿತರ ಎಲ್ಲಾ ವಿವರಗಳೂ ಲಭ್ಯವಾಗುತ್ತವೆ. ಇದನ್ನು ಬಳಸಿಕೊಂಡು ರಾಜಕೀಯ ಪಕ್ಷಗಳು ಆ ಮತದಾರನ ವ್ಯಕ್ತಿತ್ವದ ಸಂಪೂರ್ಣ ಚಿತ್ರಣ, ಆತನ ರಾಜಕೀಯ ಮತ್ತು ಮತದಾನದ ಆದ್ಯತೆಯ ಅಂದಾಜನ್ನು ಮಾಡಲು ಸಾಧ್ಯವಾಗುತ್ತದೆ. ಈ ವಿವರಗಳನ್ನು ಬಳಸಿಕೊಂಡು ಪ್ರತಿ ಮತಗಟ್ಟೆಯಲ್ಲಿ ಯಾರು ಯಾರಿಗೆ ಮತ ಹಾಕುತ್ತಾರೆ ಎಂಬುದನ್ನು ಕರಾರುವಾಕ್ಕಾಗಿ ಊಹಿಸಲು ಸಾಧ್ಯವಿದೆ. ಅಲ್ಲಿಗೆ ಗೋಪ್ಯ ಮತದಾನದ ಕತೆ ಮುಗಿಯುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಯಾರು ಯಾರಿಗೆ ಮತ ಹಾಕಲಿದ್ದಾರೆ ಎಂಬುದರ ದತ್ತಾಂಶ ದೊರೆತರೆ, ತಮಗೆ ಮತ ನೀಡದೇ ಇರುವವರನ್ನು ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಅಪಾಯವೂ ಇದೆ. ಇದನ್ನು ಮತದಾರರ ಪಟ್ಟಿ ಶುದ್ಧೀಕರಣದ ಹೆಸರಿನಲ್ಲಿ ಮಾಡಬಹುದು. ಆದರೆ ಇದು ಆರಂಭವಾದರೆ, ಚುನಾವಣಾ ಆಯೋಗ ಮತ್ತು ಆಧಾರ್ ಪ್ರಾಧಿಕಾರಕ್ಕೂ ಇದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಈಗ ತಂದಿರುವ ಹೊಸ ಕಾನೂನಿನ ಪ್ರಕಾರ, ಆಧಾರ್ ಇಲ್ಲ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಿಂದ ಯಾರ ಹೆಸರನ್ನೂ ತೆಗೆದುಹಾಕಲು ಅವಕಾಶವಿಲ್ಲ. ಆದರೆ ಅಂತಹವರು ಸೂಕ್ತ ದಾಖಲೆಯನ್ನು ಸಲ್ಲಿಸಿದರಷ್ಟೇ ಈ ವಿನಾಯಿತಿ ದೊರೆಯಲಿದೆ. ಗಮನಿಸಬೇಕಾದ ಅಂಶವೆಂದರೆ ಆ ಸೂಕ್ತ ದಾಖಲೆ ಯಾವುದು ಮತ್ತು ಅದರ ದೃಢೀಕರಣ ವಿಧಾನ ಏನು ಎಂಬುದನ್ನು ಸರ್ಕಾರ ಇನ್ನಷ್ಟೇ ನಿರ್ಧರಿಸಬೇಕಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ನೈಜ ಮತದಾರರ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕಿದ ರೀತಿಯಲ್ಲಿಯೇ ಬೇರೆಡೆಯೂ ಆಗಬಹುದು’ ಎನ್ನುತ್ತಾರೆ ಸುಪ್ರೀಂ ಕೋರ್ಟ್‌ನ ವಕೀಲೆ ವೃಂದಾ ಭಂಡಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT