ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ |  ‘ತೀವ್ರ ಬರ’ ಘೋಷಣೆ ಪ್ರಕ್ರಿಯೆ ಸಂಕೀರ್ಣಗೊಳಿಸಿದ ಕೇಂದ್ರ ಸರ್ಕಾರ
ಆಳ–ಅಗಲ | ‘ತೀವ್ರ ಬರ’ ಘೋಷಣೆ ಪ್ರಕ್ರಿಯೆ ಸಂಕೀರ್ಣಗೊಳಿಸಿದ ಕೇಂದ್ರ ಸರ್ಕಾರ
Published 7 ಫೆಬ್ರುವರಿ 2024, 19:29 IST
Last Updated 7 ಫೆಬ್ರುವರಿ 2024, 19:29 IST
ಅಕ್ಷರ ಗಾತ್ರ

ಬರವು ಸಾಧಾರಣ ಮಟ್ಟದಲ್ಲಿದೆಯೇ ಅಥವಾ ತೀವ್ರ ಮಟ್ಟದಲ್ಲಿದೆಯೇ ಎಂಬುದನ್ನು ಲೆಕ್ಕಚಾರ ಮಾಡುವುದು ಬರ ನಿರ್ವಹಣೆಯಲ್ಲಿ ಅತ್ಯಂತ ಪ್ರಮುಖವಾದ ಘಟ್ಟ. ಬರವು ಸಾಧಾರಣ ಮಟ್ಟದಲ್ಲಿ ಇದ್ದರೆ ಸರ್ಕಾರಗಳು ಕೈಗೊಳ್ಳಬೇಕಾದ ಪರಿಹಾರ ಕಾರ್ಯಕ್ರಮಗಳು ಕಡಿಮೆ ಪ್ರಮಾಣದ್ದು ಆಗಿರುತ್ತವೆ. ಆದರೆ ಬರವು ತೀವ್ರ ಸ್ವರೂಪದ್ದು ಆಗಿದ್ದರೆ, ಸರ್ಕಾರಗಳು ದೊಡ್ಡ ಪ್ರಮಾಣದ ಪರಿಹಾರ ಕಾರ್ಯಗಳನ್ನೇ ಕೈಗೆತ್ತಿಕೊಳ್ಳಬೇಕಾಗುತ್ತದೆ. ಈ ಮೊದಲು ಬರದ ತೀವ್ರತೆಯನ್ನು ಲೆಕ್ಕ ಹಾಕುವ ಮಾನದಂಡಗಳು ಸರಳವಾಗಿದ್ದವು. ಆದರೆ ಕೇಂದ್ರದ ಎನ್‌ಡಿಎ ಸರ್ಕಾರವು 2016 ಮತ್ತು 2020ರಲ್ಲಿ ಜಾರಿಗೆ ತಂದ ಬರ ನಿರ್ವಹಣೆ ಕೈಪಿಡಿಯು, ಬರ ಘೋಷಣೆ ಮತ್ತು ಬರದ ತೀವ್ರತೆ ಲೆಕ್ಕಾಚಾರದ ಪ್ರಕ್ರಿಯೆಗಳನ್ನು ಸಂಕೀರ್ಣಗೊಳಿಸಿದೆ. ಈ ಹಿಂದಿನ ಲೆಕ್ಕಾಚಾರದಲ್ಲಿ ತೀವ್ರ ಬರ ಎನಿಸಿಕೊಳ್ಳುತ್ತಿದ್ದ ಸ್ಥಿತಿಯು ಈಗಿನ ಲೆಕ್ಕಾಚಾರದಲ್ಲಿ ತೀವ್ರ ಬರ ಎನಿಸಿಕೊಳ್ಳದೇ ಇರುವ ಸಾಧ್ಯತೆಯೇ ಹೆಚ್ಚು. ತೀವ್ರ ಬರ ಎಂದು ಕೇಂದ್ರ ಸರ್ಕಾರ ಪರಿಗಣಿಸದೇ ಇದ್ದರೆ, ಅದು ಅನುದಾನವನ್ನೂ ಕೊಡಬೇಕಿಲ್ಲ

‘ರಾಜ್ಯಗಳಲ್ಲಿ ತೀವ್ರ ಬರ ಇದ್ದರಷ್ಟೇ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ನೆರವನ್ನು ಕೋರಬೇಕು’ ಎನ್ನುತ್ತದೆ ಬರ ನಿರ್ವಹಣಾ ಕೈಪಿಡಿ–2020. ಆದರೆ ಬರವು ತೀವ್ರ ಸ್ವರೂಪದ್ದು ಎಂದು ಸಾಬೀತುಮಾಡಲು ಸಾಧ್ಯವಾಗದೇ ಇರುವಷ್ಟರಮಟ್ಟಿಗೆ ಸಂಕೀರ್ಣವಾದ ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ರಾಜ್ಯಗಳಲ್ಲಿನ ಬರವು ತೀವ್ರ ಸ್ವರೂಪದ್ದು ಎಂದು ಘೋಷಿಸಲು ಅಥವಾ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದಿದ್ದರೆ, ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್‌) ಹೆಚ್ಚುವರಿ ಅನುದಾನವನ್ನು ನೀಡುವ ಪ್ರಮೇಯವೇ ಬರುವುದಿಲ್ಲ.

(ಕೆಲವು ಸಂದರ್ಭಗಳಲ್ಲಿ ರಾಜ್ಯಗಳಲ್ಲಿ ಸಾಧಾರಣ ಬರ ಇದ್ದರೂ ರಾಜ್ಯ ಸರ್ಕಾರಗಳು ಕೇಂದ್ರದ ನೆರವನ್ನು ಕೋರಬಹುದು ಎಂದು ಕೈಪಿಡಿಯಲ್ಲಿ ಹೇಳಲಾಗಿದೆ. ಆದರೆ ಅಂತಹ ಸಂದರ್ಭಗಳು ಯಾವುವು ಎಂಬುದನ್ನು ಕೈಪಿಡಿಯಲ್ಲಿ ವಿವರಿಸಿಲ್ಲ. ಕೈಪಿಡಿಯ ಆಧಾರದಲ್ಲಿ ರೂಪಿಸಲಾದ 2023ರ ಬರ ನಿರ್ವಹಣಾ ಮಾರ್ಗಸೂಚಿಗಳಲ್ಲೂ ವಿವರಿಸಿಲ್ಲ).

2010ರಲ್ಲಿ ಯುಪಿಎ ಸರ್ಕಾರವು ಜಾರಿಗೆ ತಂದಿದ್ದ ಬರ ನಿರ್ವಹಣಾ ಕೈಪಿಡಿಯ ಪ್ರಕಾರ ಬರ ಮತ್ತು ತೀವ್ರ ಎಂದು ಘೋಷಿಸಲು ವಾಸ್ತವಿಕ ಮಳೆಯಲ್ಲಾದ ಕೊರತೆಯನ್ನು ಲೆಕ್ಕ ಹಾಕಲಾಗುತ್ತಿತ್ತು. ಜತೆಗೆ ಕೃಷಿ ಭೂಮಿಯಲ್ಲಿ ಬರಬೇಕಿದ್ದ ಇಳುವರಿ ಮತ್ತು ಅದಕ್ಕೆ ದೊರೆಯುತ್ತಿದ್ದ ಬೆಲೆ ಹಾಗೂ ಬಂದ ಇಳುವರಿ ಮತ್ತು ಅದಕ್ಕೆ ದೊರೆತ ಬೆಲೆಯಲ್ಲಿನ ವ್ಯತ್ಯಾಸವನ್ನು ಪರಿಗಣಿಸಲಾಗುತ್ತಿತ್ತು. ಇವುಗಳ ಆಧಾರದಲ್ಲಿ ಬರದ ತೀವ್ರತೆ ಎಷ್ಟು ಎಂಬುದನ್ನು ನಿರ್ಧರಿಸಲಾಗುತ್ತಿತ್ತು. ಆದರೆ 2016ರಲ್ಲಿ ಜಾರಿಗೆ ತಂದ ಮತ್ತು 2020ರಲ್ಲಿ ಪರಿಷ್ಕರಿಸಲಾದ ಕೈಪಿಡಿಯ ಪ್ರಕಾರ ಬರದ ತೀವ್ರತೆ ನಿರ್ಧರಿಸಲು ನಾಲ್ಕು ಪ್ರಮುಖ ಸೂಚ್ಯಂಕಗಳನ್ನು ರೂಪಿಸಲಾಗಿದೆ. ಆ ಸೂಚ್ಯಂಕಗಳೂ ಹಲವು ಉಪ ಸೂಚ್ಯಂಕಗಳನ್ನು ಒಳಗೊಂಡಿವೆ. ಅವುಗಳಲ್ಲಿ ಮೂರನೇ ಎರಡರಷ್ಟು ಸೂಚ್ಯಂಕಗಳಲ್ಲಿ ತೀವ್ರ ಬರ ಎಂಬುದು ಸಾಬೀತಾದರೆ ಮಾತ್ರ ತೀವ್ರ ಬರ ಎಂದು ಪರಿಗಣಿಸಲಾಗುತ್ತದೆ.

ಬಿತ್ತನೆ ಪ್ರಮಾಣವೇ ಮುಖ್ಯ, ಬೆಳೆಯ ಸ್ಥಿತಿಯಲ್ಲ...

ಇದು ಹಸಿರು ಸೂಚ್ಯಂಕದ ಒಂದು ಉಪಸೂಚ್ಯಂಕ. ಬರವನ್ನು ಅಳೆಯುವ ಹಲವು ಮಾನದಂಡಗಳಲ್ಲಿ ಬಿತ್ತನೆ, ಕೈಗೆ ಬಂದ ಬೆಳೆ ಪ್ರಮಾಣ ಮತ್ತು ಅದರಿಂದ ಬಂದ ಆದಾಯ– ಇವುಗಳೂ ಮುಖ್ಯ ಮಾನದಂಡಗಳಾಗಿವೆ. ಬೆಳೆ ನಷ್ಟವನ್ನು ಹಣದ ರೂಪದಲ್ಲಿ ಅಳತೆ ಮಾಡುವ ಕ್ರಮವನ್ನು ಈ ಹಿಂದೆ ಅನುಸರಿಸಲಾಗುತ್ತಿತ್ತು. ಎಷ್ಟು ಆದಾಯ ನಷ್ಟವಾಗಿದೆ ಎನ್ನುವುದರ ಮೇಲೆ ಬರ ಘೋಷಣೆ ಮಾಡಬೇಕೇ ಬೇಡವೇ ಎಂದು ನಿರ್ಧರಿಸಲಾಗುತ್ತಿತ್ತು. ಆದರೆ, ಈಗ ನಿಯಮಗಳು ಬದಲಾಗಿದ್ದು, ಹೆಚ್ಚು ಸಂಕೀರ್ಣವಾಗಿವೆ. ಎಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿದೆ ಎನ್ನುವುದರ ಮೇಲೆ ಈಗ ಬರವನ್ನು ನಿರ್ಧರಿಸಲಾಗುತ್ತದೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲಿ ರೂಪಿಸಿದ ನಿಯಮಗಳ ಪ್ರಕಾರ, ಬೆಳೆ ನಷ್ಟದ ಪ್ರಮಾಣವನ್ನು ಆಣೆವಾರಿ ಅಥವಾ ಪೈಸೆವಾರಿ ಲೆಕ್ಕದಲ್ಲಿ ಅಳೆಯಲಾಗುತ್ತಿತ್ತು. ಉದಾಹರಣೆಗೆ, ಒಂದು ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. ಒಂದು ಎಕರೆ ಭೂಮಿಯಲ್ಲಿ ಆ ಪ್ರದೇಶದ ಸರಾಸರಿ ಇಳುವರಿ ಪ್ರಮಾಣವು 18 ಕ್ವಿಂಟಲ್‌ ಎಂದಿಟ್ಟುಕೊಳ್ಳಿ. ಆ ಜಮೀನಿನಲ್ಲಿ 9 ಕ್ವಿಂಟಲ್‌ ಇಳುವರಿ ದೊರೆತರೆ (ಶೇ 50ರಷ್ಟು ಕಡಿಮೆ) ಅದನ್ನು ಬರ ಎಂದು ಘೋಷಿಸಲಾಗುತ್ತಿತ್ತು. ‌ಮುಂಗಾರು ಬೆಳೆ ಹಾಗೂ ಹಿಂಗಾರು ಬೆಳೆಗಳ ನಷ್ಟಗಳಿಗೂ ಇದೇ ಸೂತ್ರವೇ ಅನ್ವಯ.

ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಈ ನಿಯಮಗಳಿಗೆ ಕೆಲವು ಬದಲಾವಣೆಗಳನ್ನು 2020ರಲ್ಲಿ ತಂದಿತು. ನೂತನ ನಿಮಯಗಳ ಪ್ರಕಾರ, ಬಿತ್ತನೆ ಪ್ರದೇಶದ ಪ್ರಮಾಣ ಎಷ್ಟು ಎಂಬುದೇ ಬರ ಎಂದು ಘೋಷಿಸಲು ಇರುವ ಪ್ರಮುಖ ಮಾನದಂಡವಾಗಿದೆ.

‘ಬರವು ಎಷ್ಟು ಪ್ರದೇಶದಲ್ಲಿ ವಿಸ್ತರಿಸಿದೆ ಮತ್ತು ಎಷ್ಟು ತೀವ್ರವಾಗಿದೆ ಎಂಬುದನ್ನು ಬಿತ್ತನೆ ಪ್ರದೇಶ ಪ್ರಮಾಣವು ಸೂಚಿಸುತ್ತದೆ. ಜೊತೆಗೆ, ಬಿತ್ತನೆ ಕಾರ್ಯವು ನೇರವಾಗಿ ಮಳೆಯ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ
ಮಳೆ ಪ್ರಮಾಣವು ಕಡಿಮೆ ಇದ್ದರೆ, ಬಿತ್ತನೆ ಪ್ರದೇಶವು ಕಡಿಮೆ ಇರಲಿದೆ. ಆದ್ದರಿಂದಲೇ ನೀರಿನ ಲಭ್ಯತೆಯ
ಕುರಿತು ಬಿತ್ತನೆ ಪ್ರದೇಶದ ಪ್ರಮಾಣವು ನಿಖರ ಮಾಹಿತಿಯನ್ನು ನೀಡುತ್ತದೆ’ ಎಂದು ಕೈಪಿಡಿಯಲ್ಲಿ ವಿವರಿಸಲಾಗಿದೆ.

ಜುಲೈ ಅಥವಾ ಆಗಸ್ಟ್‌ ಹೊತ್ತಿಗೆ ಮುಂಗಾರು ಬೆಳೆಗಳ ಬಿತ್ತನೆ ಕಾರ್ಯ ಮುಗಿಯುತ್ತದೆ. ಮಳೆಯು ಒಂದೆರಡು ತಿಂಗಳು ಆಚೆ–ಈಚೆ ಬಂದರೂ, ಬಿತ್ತನೆ ಕಾರ್ಯವು ಅದರನ್ವಯ ಮುಗಿಯುತ್ತದೆ. ಒಂದು ವೇಳೆ, ಜುಲೈ ಅಥವಾ ಆಗಸ್ಟ್‌ ಹೊತ್ತಿಗೆ ಸಾಮಾನ್ಯವಾಗಿ ಇರಬೇಕಿದ್ದ ಬಿತ್ತನೆ ಪ್ರದೇಶಕ್ಕಿಂತ ಶೇ 85ರಷ್ಟು ಇದ್ದರೆ ಅದನ್ನು ಬರದ ಪರಿಸ್ಥಿತಿ ಎಂದು ಘೋಷಣೆ ಮಾಡಲಾಗುತ್ತದೆ. ಒಂದು ವೇಳೆ ಈ ಪ್ರದೇಶವು ಶೇ 75ರಷ್ಟಕ್ಕಿಂತ ಕಡಿಮೆ ಇದ್ದರೆ, ಅದನ್ನು ತೀವ್ರ ಬರ ಎಂದು ಘೋಷಣೆ ಮಾಡಲಾಗುತ್ತದೆ.

ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯದಲ್ಲಿಯೂ (ಅಕ್ಟೋಬರ್‌ನಿಂದ ನವೆಂಬರ್‌) ಇದೇ ಸೂತ್ರವನ್ನು ಅನುಸರಿಸಲಾಗುತ್ತದೆ. ಬಿತ್ತನೆ/ನಾಟಿ ನಡೆದ ಹೊಲ–ಗದ್ದೆ
ಗಳಲ್ಲಿ ಬೆಳೆ ಹಾಳಾಗಿದೆಯೇ ಅಥವಾ ಉತ್ತಮವಾಗಿದೆಯೇ ಎಂಬುದನ್ನು ಇಲ್ಲಿ ಪರಿಗಣಿಸುವುದೇ ಇಲ್ಲ.

2020ರ ಬರ ನಿರ್ವಹಣೆ ಕೈಪಿಡಿ

ಈ ಕೈಪಿಡಿ ಪ್ರಕಾರ ಮಳೆ ಕೊರತೆ, ಬೆಳೆ ಸ್ಥಿತಿ ಯಾವುದನ್ನೂ ನೇರವಾದ ಸಾಂಖ್ಯಿಕ ಮಾದರಿಯಲ್ಲಿ ಲೆಕ್ಕಾಚಾರ ಮಾಡುವುದಿಲ್ಲ. ಬದಲಿಗೆ ಅವುಗಳನ್ನು ಸೂಚ್ಯಂಕಗಳನ್ನಾಗಿ ಪರಿವರ್ತಿಸಲಾಗುತ್ತದೆ. ಸೂಚ್ಯಂಕಗಳ ಆಧಾರದಲ್ಲಿ ಬರದ ಸ್ಥಿತಿಯನ್ನು ನಿರ್ಧರಿಸಲಾಗುತ್ತದೆ.

1. ಮಳೆ ಸೂಚ್ಯಂಕ

l ವಾಡಿಕೆ ಮಳೆಯಲ್ಲಿ ಶೇ 60ರಿಂದ ಶೇ99ರಷ್ಟು ಕೊರತೆಯಾದರೆ ಅದನ್ನು ತೀವ್ರ ಕೊರತೆ ಎಂದು ಪರಿಗಣಿಸಲಾಗುತ್ತದೆ. ಬೇಸಾಯದ ಋತುವಿನಲ್ಲಿ
ಸತತ ನಾಲ್ಕು ವಾರ ಮಳೆ ಕೊರತೆಯಾದರೆ (ವಾಡಿಕೆಯಲ್ಲಿ ಶೇ 50ಕ್ಕಿಂತಲೂ ಹೆಚ್ಚು ಕೊರತೆ) ಮಾತ್ರ ಅದನ್ನು ತೀವ್ರ ಕೊರತೆ ಎಂದು ಮತ್ತೊಂದು ಉಪಸೂಚ್ಯಂಕದಲ್ಲಿ ಪರಿಗಣಿಸಲಾಗುತ್ತದೆ

l ಇವುಗಳ ಆಧಾರದಲ್ಲಿ ‘ಪ್ರಮಾಣಿತ ಸರಾಸರಿ ಮಳೆ ಸೂಚ್ಯಂಕ–ಎಸ್‌ಪಿಐ’ ಅನ್ನು ನಿರ್ಧರಿಸಲಾಗುತ್ತದೆ. ಈ ಸೂಚ್ಯಂಕದಲ್ಲಿ ಮಳೆ ಕೊರತೆಯನ್ನು ಸ್ವಲ್ಪ ಕೊರತೆ, ಸಾಧಾರಣ ಕೊರತೆ, ತೀವ್ರ ಕೊರತೆ ಮತ್ತು ಅತಿ ಕೊರತೆ ಎಂದು ವರ್ಗೀಕರಿಸಲಾಗಿದೆ. ಇದರಲ್ಲಿ ತೀವ್ರ ಕೊರತೆ ಬಂದರೆ ಮಾತ್ರ ಅದನ್ನು ತೀವ್ರ ಬರ ಎಂದು ಪರಿಗಣಿಸಲು ಅವಕಾಶವಿದೆ

2. ಹಸಿರು ಸೂಚ್ಯಂಕ

l ದೂರಸಂವೇದಿ ಉಪಗ್ರಹಗಳ ಚಿತ್ರಗಳು ಮತ್ತು ಇನ್ಫ್ರಾರೆಡ್‌ ಚಿತ್ರಗಳ ನೆರವಿನಿಂದ ಹಸಿರು ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ಇದರಲ್ಲಿ ಹಸಿರು ಸೂಚ್ಯಂಕ ಮತ್ತು ತೇವ ಸೂಚ್ಯಂಕ ಎಂಬ ಎರಡು ಉಪ ಸೂಚ್ಯಂಕಗಳಿವೆ. ಉಪಗ್ರಹಳ ಚಿತ್ರಗಳಲ್ಲಿ ಹಸಿರು ಮತ್ತು ತೇವಾಂಶವು ದಟ್ಟವಾಗಿ (ಇನ್ಫ್ರಾರೆಡ್‌ನಲ್ಲಿ ಧನಾತ್ಮಕ ಸಂಖ್ಯೆಗಳು)
ಕಂಡರೆ ಬರ ಇಲ್ಲ ಎಂದು ಪರಿಗಣಿಸಲಾಗುತ್ತದೆ.

ಈ ಸೂಚ್ಯಂಕದ ದೊಡ್ಡ ಕೊರತೆ ಅಂದರೆ, ಪೈರು ಅಥವಾ ಗಿಡ ತೆನೆಕಟ್ಟಿದೆಯೇ ಇಲ್ಲವೇ ಎಂಬುದನ್ನು ಪರಿಗಣಿಸುವುದೇ ಇಲ್ಲ. ಬದಲಿಗೆ ಹಸಿರಿನ ಪ್ರಮಾಣವನ್ನು ಮಾತ್ರ ಪರಿಗಣಿಸುತ್ತದೆ

l ಹಸಿರು ಸ್ಥಿತಿ ಸೂಚ್ಯಂಕದ ಪ್ರಕಾರ, ಹಸಿರಿನ ಪ್ರಮಾಣವು ಶೇ 40ಕ್ಕಿಂತ ಕಡಿಮೆ ಇದ್ದರಷ್ಟೇ ತೀವ್ರ ಬರ ಎಂದು ನಿರ್ಧರಿಸಲು ಪರಿಗಣಿಸಲಾಗುತ್ತದೆ

3. ಮಣ್ಣಿನ ತೇವಾಂಶ ಸೂಚ್ಯಂಕ

l ಇದರಲ್ಲಿ ಹಲವು ಉಪಸೂಚ್ಯಂಕಗಳು ಇವೆ. ಮಣ್ಣಿನಲ್ಲಿನ ತೇವಾಂಶದ ಪ್ರಮಾಣವು ಶೇ 50ಕ್ಕಿಂತ ಕಡಿಮೆ ಇದ್ದರಷ್ಟೇ ತೀವ್ರ ಬರ ಇದೆ ಎಂದು ಪರಿಗಣಿಸಲಾಗುತ್ತದೆ. ಬೇಸಾಯದ ಋತುವಿನ ಎಲ್ಲಾ ಹಂತದಲ್ಲಿನ ತೇಂವಾಶದ ಪ್ರಮಾಣ ಶೇ 50ರಷ್ಟನ್ನು ಮುಟ್ಟಿದರೆ ಅದು ತೀವ್ರ ಬರ ಎನಿಸಿಕೊಳ್ಳುವುದಿಲ್ಲ

4. ಜಲಸೂಚ್ಯಂಕಗಳು

l ಜಲಾಶಯ ಸಂಗ್ರಹ ಸೂಚ್ಯಂಕ: ಜಲಾಶಯಗಳಲ್ಲಿನ
10 ವರ್ಷಗಳ ಸರಾಸರಿ ಸಂಗ್ರಹ ಪ್ರಮಾಣದ
ಶೇ 40–60ರಷ್ಟು ಕೊರತೆಯಾಗಿದ್ದರೆ ಮಾತ್ರ ಅದನ್ನು ತೀವ್ರ ಕೊರತೆ ಎಂದು ಪರಿಗಣಿಸಲಾಗುತ್ತದೆ.

l ಅಂತರ್ಜಲ ಬರ ಸೂಚ್ಯಂಕ: ನೆಲಮಟ್ಟದಿಂದ ಅಂತರ್ಜಲ ಎಷ್ಟು ಆಳಕ್ಕೆ ಕುಸಿದಿದೆ, ದೀರ್ಘಾವಧಿಯಲ್ಲಿ ಅತ್ಯಂತ ಆಳದ ಅಂತರ್ಜಲ ಮಟ್ಟವನ್ನು ಲೆಕ್ಕಾಚಾರ ಮಾಡಿ ಇದನ್ನು ನಿರ್ಧರಿಸಲಾಗುತ್ತದೆ

l ಹರಿಯುವ ಜಲಮೂಲಗಳ ಸೂಚ್ಯಂಕ: ನದಿ–ಹಳ್ಳ–ತೊರೆಗಳಲ್ಲಿ ಬೇಸಾಯದ ಋತುವಿನಲ್ಲಿ ಎಷ್ಟು ನೀರು ಹರಿದಿದೆ ಎಂಬುದನ್ನು ಲೆಕ್ಕಾಚಾರ ಮಾಡಿ ಈ ಸೂಚ್ಯಂಕವನ್ನು ನಿರ್ಧರಿಸಲಾಗತ್ತದೆ. ನೀರಿನ ಹರಿವಿನ ಪ್ರಮಾಣ ತೀವ್ರವಾಗಿ ಕುಸಿದಿದ್ದರಷ್ಟೇ ಅದನ್ನು ತೀವ್ರ ಕೊರತೆ ಎಂದು ಪರಿಗಣಿಸಲಾಗುತ್ತದೆ

2020ರ ಕೈಪಿಡಿಯ ಪ್ರಕಾರ ಈ ನಾಲ್ಕು ಸೂಚ್ಯಂಕಗಳಲ್ಲಿ ರಾಜ್ಯ ಸರ್ಕಾರವು ತನ್ನಿಚ್ಛೆಯ ಮೂರು ಸೂಚ್ಯಂಕಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಮೂರರಲ್ಲಿ ಕನಿಷ್ಠ ಎರಡು ಸೂಚ್ಯಂಕಗಳು ‘ತೀವ್ರ ಬರ’ ಎಂಬುದನ್ನು ಸೂಚಿಸುತ್ತಿರಬೇಕು ಮತ್ತು ಒಂದು ಸೂಚ್ಯಂಕವು ‘ಸಾಧಾರಣ ಬರ’ ಎಂದಾದರೂ ಸೂಚಿಸಬೇಕು. ಆಗ ಮಾತ್ರ ಅದನ್ನು ‘ತೀವ್ರ ಬರ’ ಎಂದು ಪರಿಗಣಿಸಲಾಗುತ್ತದೆ.

ಉದಾಹರಣೆಗೆ: ಮಳೆ ಸೂಚ್ಯಂಕ ಮತ್ತು ಜಲ ಸೂಚ್ಯಂಕವು ತೀವ್ರ ಬರ ಎಂದು ತೋರಿಸುತ್ತಿದ್ದರೂ, ಹಸಿರು ಸೂಚ್ಯಂಕ ಮತ್ತು ತೇವಾಂಶ ಸೂಚ್ಯಂಕವು ಸಾಮಾನ್ಯ ಎಂದು ತೋರಿಸಿದರೆ ಆ ಸ್ಥಿತಿಯನ್ನು ‘ತೀವ್ರ ಬರ’ ಎಂದು ಘೋಷಿಸಲು ಸಾಧ್ಯವಿಲ್ಲ. ಆಗ ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೆಚ್ಚುವರಿ ಅನುದಾನ ಅಥವಾ ಪರಿಹಾರ ಕೊಡಬೇಕಾಗುವುದಿಲ್ಲ.

2010ರ ಬರ ನಿರ್ವಹಣೆ ಕೈಪಿಡಿ

l ಜೂನ್‌ನಿಂದ ಸೆಪ್ಟೆಂಬರ್ ನಡುವೆ ನಾಲ್ಕು ವಾರಗಳಲ್ಲಿ ಮಳೆಯಾಗದೇ (ವಾಡಿಕೆಯ ಶೇ 50 ಮತ್ತು ಅದಕ್ಕಿಂತ ಕಡಿಮೆ) ಇದ್ದರೆ ಅದನ್ನು ಕೃಷಿ ಬರ ಎಂದು ಪರಿಗಣಿಸಲಾಗುತ್ತಿತ್ತು

l ಹಿಂಗಾರು ಮತ್ತು ಮುಂಗಾರು ಮಳೆಯ ಪ್ರಮಾಣವು ವಾಡಿಕೆಗಿಂತ ಶೇ 20ರಷ್ಟು ಕಡಿಮೆಯಾದರೆ ಅದನ್ನು
ಬರ ವರ್ಷ ಎಂದು ಪರಿಗಣಿಸಲಾಗುತ್ತಿತ್ತು

l ಹಿಂಗಾರು ಮತ್ತು ಮುಂಗಾರು ಮಳೆಯ ಪ್ರಮಾಣವು ವಾಡಿಕೆಗಿಂತ ಶೇ 25– ಶೇ40ರಷ್ಟು ಕಡಿಮೆಯಾದರೆ ಅದನ್ನು ತೀವ್ರ ಬರ ವರ್ಷ ಎಂದು ಪರಿಗಣಸಲಾಗುತ್ತಿತ್ತು

ಆಧಾರ: ಬರ ನಿರ್ವಹಣೆ ಕೈಪಿಡಿ–2010, ಬರ ನಿರ್ವಹಣೆ ಕೈಪಿಡಿ ಮಾರ್ಗಸೂಚಿಗಳು 2016 ಮತ್ತು 2020, 2023ರ ಬರ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಯೋಜನೆ, ಬರ ನಿರ್ವಹಣಾ ಅಂತರ ಸಚಿವಾಲಯ ತಂಡಕ್ಕೆ ಮಾರ್ಗಸೂಚಿಗಳು–2023, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT