ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಬರ ಪರಿಹಾರದ ಹೊಣೆ ನಮ್ಮದಲ್ಲ, 
ರಾಜ್ಯ ಸರ್ಕಾರದ್ದು ಎನ್ನುತ್ತದೆ ಕೇಂದ್ರ
ಆಳ–ಅಗಲ: ಬರ ಪರಿಹಾರದ ಹೊಣೆ ನಮ್ಮದಲ್ಲ, ರಾಜ್ಯ ಸರ್ಕಾರದ್ದು ಎನ್ನುತ್ತದೆ ಕೇಂದ್ರ
Published 6 ಫೆಬ್ರುವರಿ 2024, 19:20 IST
Last Updated 6 ಫೆಬ್ರುವರಿ 2024, 19:20 IST
ಅಕ್ಷರ ಗಾತ್ರ

ಕರ್ನಾಟಕದ 223// ತಾಲ್ಲೂಕುಗಳಲ್ಲಿ ಬರದ ಸ್ಥಿತಿ ಇದೆ. ಹಲವು ತಾಲ್ಲೂಕುಗಳಲ್ಲಿ ಬರದ ಸ್ಥಿತಿ ತೀವ್ರವಾಗಿದೆ. ಲಕ್ಷಾಂತರ ಎಕರೆಯಷ್ಟು ಬೆಳೆ ನಷ್ಟವಾಗಿದೆ. ಹಲವೆಡೆ ಜನರು ಗುಳೆ ಹೋಗುವ ಸ್ಥಿತಿಯೂ ಎದುರಾಗಿದೆ. ರಾಜ್ಯದಲ್ಲಿ ಬರದ ಕಾರಣದಿಂದ ಆಗಿರುವ ನಷ್ಟದ ಸ್ವಲ್ಪ ಪ್ರಮಾಣವನ್ನು ಕೇಂದ್ರ ಸರ್ಕಾರವು ತುಂಬಿಸಿಕೊಡಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದೆ. ಕೇಂದ್ರ ತಂಡವೂ ರಾಜ್ಯಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸಿದೆ. ಆದರೆ ಕೇಂದ್ರ ಸರ್ಕಾರದಿಂದ ಪರಿಹಾರ ಮಾತ್ರ ಬಿಡುಗಡೆಯಾಗಿಲ್ಲ. ಬರದ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪರಿಹಾರ ಒದಗಿಸಲು ಅವಕಾಶ ಮಾಡಿಕೊಡುತ್ತಿದ್ದ ನಿಯಮಗಳನ್ನು ಬದಲಿಸಲಾಗಿದೆ. ಬರಕ್ಕೆ ಪರಿಹಾರ ನೀಡಬೇಕಾದ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರವು ತನ್ನ ಹೆಗಲಿನಿಂದ ಇಳಿಸಿಕೊಳ್ಳುವ ರೀತಿಯಲ್ಲಿ ಈ ನಿಯಮಗಳನ್ನು ಬದಲಿಸಲಾಗಿದೆ

–––––––––––

ಬರದ ಸ್ಥಿತಿಯನ್ನು ನಿರ್ವಹಿಸುವ ಸಲುವಾಗಿ 2010ರಲ್ಲಿ ಯುಪಿಎ ಸರ್ಕಾರವು ‘ಬರ ನಿರ್ವಹಣಾ ಕೈಪಿಡಿ: ಮಾರ್ಗಸೂಚಿ’ಯನ್ನು ಜಾರಿಗೆ ತಂದಿತ್ತು. ಈ ಕೈಪಿಡಿಯ ‘ಬರ ನಿರ್ವಹಣೆ’ ಅಧ್ಯಾಯದಲ್ಲಿನ ವಿವರವು ಈ ಮುಂದಿನಂತಿತ್ತು: ‘ಬರ ನಿರ್ವಹಣೆ ಎಂಬುದು ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಹಲವು ಸಚಿವಾಲಯಗಳ ನಿರಂತರ ಭಾಗವಹಿಸುವಿಕೆ ಅತ್ಯಗತ್ಯ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಕೇಂದ್ರದ ಸಂಸ್ಥೆಗಳು ಮತ್ತು ರಾಜ್ಯ ಮಟ್ಟದಲ್ಲಿ ರಾಜ್ಯದ ಸಂಸ್ಥೆಗಳು ಬರ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು’

2010ರಲ್ಲಿ ಜಾರಿಗೆ ತಂದಿದ್ದ ಕೈಪಿಡಿಯ ಪ್ರಕಾರ ಬರ ನಿರ್ವಹಣೆಯ ಹೊಣೆಗಾರಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರದ್ದೂ ಹೌದು. ಹೀಗಾಗಿಯೇ ಎರಡೂ ಸರ್ಕಾರಗಳ ಸಂಸ್ಥೆಗಳು ಬರ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು ಎಂಬುದನ್ನು ಆ ಕೈಪಿಡಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಈ ನಿಯಮವನ್ನು 2016ರಲ್ಲಿ ಬದಲಿಸಿತು. ಬರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ನಿಯಮಕ್ಕೆ ಬದಲಾವಣೆ ತರಲಾಯಿತು.

2016ರಲ್ಲಿ ಜಾರಿಗೆ ತಂದಿದ್ದ ನಿಯಮಗಳಿಗೆ 2020ರಲ್ಲಿ ತಿದ್ದುಪಡಿ ಮಾಡಲಾಗಿತ್ತು. 2023ರಲ್ಲಿ ಆ ವರ್ಷದ ಬರ ನಿರ್ವಹಣೆಗೆ ಎಂದೇ ಮತ್ತೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ‘ಬರ ನಿರ್ವಹಣೆಯ (ಅಥವಾ ಯಾವುದೇ ಪ್ರಾಕೃತಿಕ ವಿಕೋಪ) ಪ್ರಾಥಮಿಕ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದು ಮಾತ್ರ. ರಾಜ್ಯ ಸರ್ಕಾರವು ಕೈಗೊಳ್ಳುವ ಪರಿಹಾರ ಕಾರ್ಯಗಳಿಗೆ ಕೇಂದ್ರವು ನೆರವಾಗಬಹುದು ಅಷ್ಟೆ. ಬರ ಪರಿಸ್ಥಿತಿಯನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರಗಳಿಗೆ ಪಡಿತರ ಮತ್ತು ಹಣಕಾಸು ನೆರವು ಒದಗಿಸಬಹುದಷ್ಟೆ. ರಾಜ್ಯದಲ್ಲಿ ತೀವ್ರ ಬರದ ಸ್ಥಿತಿ ಇದ್ದಾಗಷ್ಟೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನೆರವನ್ನು ಕೋರಬೇಕು’ ಎಂದು ನೂತನ ಕೈಪಿಡಿಯು ಹೇಳುತ್ತದೆ.

ಬರದ ಸಂದರ್ಭದಲ್ಲಿ ಜನರಿಗೆ ಪಡಿತರ ಮತ್ತು ಔದ್ಯೋಗಿಕ ನೆರವು ಒದಗಿಸಬೇಕು. ಜಾನುವಾರುಗಳಿಗೆ ಮೇವನ್ನು ಒದಗಿಸಬೇಕು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಹೊಸ ಕೊಳವೆ ಬಾವಿಗಳನ್ನು ಕೊರೆಸಬೇಕು. ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲು ಕ್ರಮ ತೆಗೆದುಕೊಳ್ಳಬೇಕು. ಪೌಷ್ಟಿಕಾಂಶದ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಜನರು ಗುಳೆ ಹೋಗುವುದನ್ನು ತಡೆಯಬೇಕು. ಬೆಳೆ ನಷ್ಟವಾಗಿದ್ದರೆ, ಬೇಸಾಯದ ವೆಚ್ಚವನ್ನು ಭರಿಸಬೇಕು... ಇವು ಬರ ನಿರ್ವಹಣೆ ಸಂದರ್ಭದಲ್ಲಿ ತೆಗೆದುಕೊಳ್ಳಲೇಬೇಕಾದ ಪರಿಹಾರ ಕ್ರಮಗಳು. 2010ರ ಕೈಪಿಡಿಯ ಪ್ರಕಾರ ಈ ಎಲ್ಲಾ ಪರಿಹಾರ ಕಾರ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳಬೇಕು. ಆದರೆ ಈಗಿನ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೈಪಿಡಿಯ ಪ್ರಕಾರ ಈ ಎಲ್ಲಾ ಕಾರ್ಯಗಳನ್ನು ರಾಜ್ಯ ಸರ್ಕಾರವೇ ಕೈಗೊಳ್ಳಬೇಕು.

ಈ ಪರಿಹಾರ ಕಾರ್ಯಗಳನ್ನು ರಾಜ್ಯ ಸರ್ಕಾರವು ತನ್ನಲ್ಲಿರುವ ‘ರಾಜ್ಯ ವಿಪತ್ತು ನಿರ್ವಹಣಾ ನಿಧಿ’ಯ (ಎಸ್‌ಡಿಆರ್‌ಎಫ್‌) ಮೂಲಕ ಕೈಗೊಳ್ಳಬೇಕು. ಆ ಹಣ ಸಾಲದೇ ಇದ್ದರೆ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ’ಯಿಂದ (ಎನ್‌ಡಿಆರ್‌ಎಫ್‌) ನೆರವನ್ನು ಒದಗಿಸಬೇಕು. ಈ ಎರಡೂ ನಿಧಿಗಳ ಹಣ ಸಾಲದೇ ಇದ್ದಾಗ, ಇತರ ಯೋಜನೆಗಳ ಹಣವನ್ನು ಅತ್ಯಗತ್ಯದ ಪ್ರಮಾಣದಲ್ಲಿ ಮಾತ್ರ ಬರ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು 2010ರ ಕೈಪಿಡಿಯಲ್ಲಿ ಸೂಚಿಸಲಾಗಿತ್ತು. ಆದರೆ ಈಗಿನ ಕೈಪಿಡಿಯಲ್ಲಿ, ‘ಬರ ಪರಿಹಾರಕ್ಕೆ ಎಸ್‌ಡಿಆರ್‌ಎಫ್‌ನ ಹಣವು ಸಾಲದೇ ಇದ್ದರೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಹಣಕಾಸು ನೆರವು ಒದಗಿಸುವಂತೆ ಕೋರಬೇಕು. ಆದರೆ ಪರಿಹಾರ ಒದಗಿಸುವ ಇಲ್ಲವೇ ಮನವಿಯನ್ನು ತಿರಸ್ಕರಿಸುವ ಅಧಿಕಾರ ಕೇಂದ್ರದ್ದು’ ಎಂದು ವಿವರಿಸಲಾಗಿದೆ.

ಹೀಗೆ ಒಂದೆಡೆ ಎನ್‌ಡಿಆರ್‌ಎಫ್‌ ಮೂಲಕ ರಾಜ್ಯಗಳಿಗೆ ಬರ ಪರಿಹಾರದ ನೆರವನ್ನು ಕೇಂದ್ರವು ಒದಗಿಸಬೇಕು ಎಂದು ಹೇಳುತ್ತಲೇ, ಇನ್ನೊಂದೆಡೆ ಪರಿಹಾರವನ್ನು ನೀಡುವುದಕ್ಕೆ ತಾನು ಬದ್ಧವಾಗಿರಬೇಕಿಲ್ಲ ಎಂದು ಕೇಂದ್ರ ಸರ್ಕಾರದ ನಿಯಮಗಳು ಹೇಳುತ್ತವೆ. 

2016ರಲ್ಲಿ ಈ ನಿಯಮಗಳಿಗೆ ಬದಲಾವಣೆ ತರುವಾಗ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಅದನ್ನು ಕಡೆಗಣಿಸಿ ನೂತನ ನಿಯಮಗಳನ್ನು ಜಾರಿಗೆ ತರಲಾಗಿತ್ತು. 2020ರಲ್ಲಿ ಮತ್ತೆ ಆ ನಿಯಮಗಳಿಗೆ ಬದಲಾವಣೆ ತರುವಾಗ ರಾಜ್ಯದ ಬಿಜೆಪಿ ಸರ್ಕಾರವೂ ಆಕ್ಷೇಪಗಳನ್ನು ದಾಖಲಿಸಿತ್ತು. ಆಗಲೂ ಅದನ್ನು ಕಡೆಗಣಿಸಿ, ನೂತನ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಈ ಎಲ್ಲಾ ಬದಲಾವಣೆಗಳ ಕಾರಣದಿಂದಲೇ ಬರ ನಿರ್ವಹಣೆಯ ಸಂಪೂರ್ಣ ಹೊಣೆ ರಾಜ್ಯ ಸರ್ಕಾರಗಳ ಹೆಗಲಿಗೆ ಬಿದ್ದಿದೆ. ಕೇಂದ್ರ ಸರ್ಕಾರವು ಪರಿಹಾರವನ್ನು ಕೊಡಬೇಕೇ ಅಥವಾ ತಿರಸ್ಕರಿಸಬೇಕೇ ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಚಲಾಯಿಸುತ್ತಿದೆ.

ರೈತರಿಗೆ ₹1,000 ಕೊಡಿ ಸಾಕು: ಕೇಂದ್ರ

ಕೇಂದ್ರ ಸರ್ಕಾರದ ನೂತನ ‘ಬರ ನಿರ್ವಹಣಾ ಕೈಪಿಡಿ’ಯ ಪ್ರಕಾರ ರೈತರಿಗೆ ಕನಿಷ್ಠ ₹1,000 ಪರಿಹಾರ (ಬೇಸಾಯ ವೆಚ್ಚ ಸಹಾಯಧನ) ನೀಡಬೇಕು ಎಂದು ನೂತನ ಕೈಪಿಡಿ ಹೇಳುತ್ತದೆ. 2023ನೇ ಸಾಲಿನ ಬರ ನಿರ್ವಹಣೆಗೆಂದು ಸಿದ್ಧಪಡಿಸಿದ ಮಾರ್ಗಸೂಚಿಯಲ್ಲೂ ಇದನ್ನೇ ಹೇಳಲಾಗಿದೆ. 2 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ ರೈತರಿಗೆ ಗರಿಷ್ಠ ಮೊತ್ತದ ಪರಿಹಾರ ಒದಗಿಸಬೇಕು ಮತ್ತು ಸಣ್ಣ ಹಿಡುವಳಿದಾರರಿಗೆ ಕನಿಷ್ಠ ಪರಿಹಾರ ಒದಗಿಸಿದರೆ ಸಾಕು ಎಂದು ಮಾರ್ಗಸೂಚಿ ಹೇಳುತ್ತದೆ.

ಹೆಕ್ಟೇರ್‌ಗೆ ಕನಿಷ್ಠ ₹1,000 ಪರಿಹಾರ ಕೊಟ್ಟರೆ ಸಾಕು ಎಂದು ಕೇಂದ್ರ ಸರ್ಕಾರದ ನಿಯಮಗಳು ಹೇಳುವುದರಿಂದಲೇ, ಹೆಚ್ಚಿನ ಪರಿಹಾರ ಒದಗಿಸಲು ಅಗತ್ಯವಿರುವ ಹಣವನ್ನು ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಬೇಸಾಯದ ವೆಚ್ಚದ ಒಂದು ಪಾಲನ್ನಷ್ಟೇ ರೈತರಿಗೆ ಒದಗಿಸಬೇಕು, ಬೆಳೆ ನಷ್ಟದ ಮೊತ್ತವನ್ನಲ್ಲ. ರೈತರು ಬೆಳೆ ವಿಮೆಯನ್ನು ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರವು ಉತ್ತೇಜಿಸಬೇಕು. ಬೆಳೆ ನಷ್ಟವಾದಾಗ, ವಿಮೆಯ ಮೂಲಕ ಪರಿಹಾರ ಪಡೆದುಕೊಳ್ಳಬೇಕು ಎಂದು ನೂತನ ನಿಯಮವು ಹೇಳುತ್ತದೆ.

ಕರ್ನಾಟಕಕ್ಕೆ ಯಾವುದೇ ಹಣ ಕೊಡಬೇಕಿಲ್ಲ ಎನ್ನುತ್ತಿರುವುದೇಕೆ...

ಬರ ಪರಿಹಾರಕ್ಕೆ ಹಣಕಾಸು ನೆರವು ಒದಗಿಸುವಂತೆ ರಾಜ್ಯ ಸರ್ಕಾರವು ಹಲವು ಬಾರಿ ಮನವಿ ಮಾಡಿದರೂ, ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ–ಪದೇ ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ‘ಕರ್ನಾಟಕಕ್ಕೆ ನಾವು ಯಾವುದೇ ಹಣ ನೀಡಬೇಕಿಲ್ಲ’ ಎಂದು ಹೇಳಿದ್ದರು. ಬರ ನಿರ್ವಹಣೆಯ ಕೈಪಿಡಿಯ ನಿಯಮಗಳ ಆಧಾರದಲ್ಲೇ ನಿರ್ಮಲಾ ಅವರು ಹಾಗೆ ಪ್ರತಿಪಾದಿಸಿದ್ದರು.

ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್‌ ಅಡಿಯಲ್ಲಿ ನಿಧಿಯನ್ನು ತೆಗೆದಿರಿಸುತ್ತದೆ. ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿಯೇ ಒಂದು ಭಾಗವನ್ನು ಎನ್‌ಡಿಆರ್‌ಎಫ್‌ಗೆಂದು ಮೀಸಲಿರಿಸಲಾಗುತ್ತದೆ.  ಹಣಕಾಸು ಆಯೋಗವು ನಿಗದಿ ಮಾಡಿದ ಪ್ರಮಾಣದಲ್ಲಿ ಎನ್‌ಡಿಆರ್‌ಎಫ್‌ ನಿಧಿಯ ಸ್ವಲ್ಪ ಪ್ರಮಾಣವನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡುತ್ತದೆ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ 2023–24ನೇ ಸಾಲಿನಲ್ಲಿ ₹929 ಕೋಟಿಯನ್ನು ಈ ನಿಧಿ ಅಡಿ ಒದಗಿಸಬೇಕು ಎಂದು ಹೇಳಿತ್ತು. ಅದರಲ್ಲಿ ತನ್ನ ಪಾಲಿನ ₹697.60 ಕೋಟಿಯನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಹೇಳುತ್ತಿದೆ.

ಕೇಂದ್ರ ಸರ್ಕಾರದ್ದೇ ನಿಯಮಗಳ ಪ್ರಕಾರ ರೈತರಿಗೆ ಪರಿಹಾರ ಮತ್ತು ಇತರ ಪರಿಹಾರ ಕಾರ್ಯಗಳಿಗೆ ₹18,171 ಕೋಟಿ ನೆರವು ನೀಡಿ ಎಂದು ರಾಜ್ಯ ಸರ್ಕಾರ ಕೇಳಿದೆ. 2023–24ನೇ ಸಾಲಿನ ಎಸ್‌ಡಿಆರ್‌ಎಫ್‌ ನಿಧಿಯಲ್ಲಿ ₹929 ಕೋಟಿಯಷ್ಟಿದೆ. ಈ ಹಣವನ್ನು ಬೆಳೆ ಪರಿಹಾರಕ್ಕೆ ಒದಗಿಸಲೂ ಸಾಧ್ಯವಿಲ್ಲ, ಕುಡಿಯುವ ನೀರು, ಕೊಳವೆ ಬಾವಿ, ಮೇವು–ಗೋಶಾಲೆಗಳ ಸ್ಥಾಪನೆಗೆ ಒದಗಿಸಲೂ ಸಾಲುವುದಿಲ್ಲ. ಹೀಗಾಗಿಯೇ ಎನ್‌ಡಿಆರ್‌ಎಫ್‌ ನಿಧಿಯಿಂದ ಹೆಚ್ಚಿನ ನೆರವು ಒದಗಿಸಿ ಎಂದು ರಾಜ್ಯ ಸರ್ಕಾರವು ಕೇಳುತ್ತಿದೆ.

ಆದರೆ, ‘ಕರ್ನಾಟಕಕ್ಕೆ ಎಸ್‌ಡಿಆರ್‌ಎಫ್‌ ಅಡಿ ನಾವು ಒದಗಿಸಬೇಕಿರುವ ₹697.60 ಕೋಟಿಯನ್ನು ಒದಗಿಸಿದ್ದೇವೆ. ನಮ್ಮಿಂದ ಯಾವುದೇ ಬಾಕಿ ಇಲ್ಲ. ಆ ಹಣದಲ್ಲೇ ಪರಿಹಾರ ಕಾರ್ಯ ನಡೆಸಿ’ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಬರ ನಿರ್ವಹಣೆಗೆ ಎನ್‌ಡಿಆರ್‌ಎಫ್‌ ನಿಧಿಯಿಂದ ಹಣ ಒದಗಿಸಬೇಕಿದ್ದರೂ, ಕರ್ನಾಟಕದಲ್ಲಿ ತೀವ್ರ ಬರ ಇದೆ ಎಂಬುದನ್ನು ಕೇಂದ್ರವು ಪರಿಗಣಿಸದೇ ಇರುವ ಕಾರಣಕ್ಕೆ ಪರಿಹಾರದ ಹಣವನ್ನು ನೀಡುತ್ತಿಲ್ಲ. ಕರ್ನಾಟಕದಲ್ಲಿ ತೀವ್ರ ಬರದ ಸ್ಥಿತಿ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತದೆಯೇ
ಅಥವಾ ಇಲ್ಲವೇ ಎಂಬುದನ್ನೂ ಸ್ಪಷ್ಟಪಡಿಸಿಲ್ಲ.

ಆಧಾರ: ಬರ ನಿರ್ವಹಣೆ ಕೈಪಿಡಿ–2010, ಬರ ನಿರ್ವಹಣೆ ಕೈಪಿಡಿ ಮಾರ್ಗಸೂಚಿಗಳು 2016 ಮತ್ತು 2020, 2023ರ ಬರ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಯೋಜನೆ, ಬರ ನಿರ್ವಹಣಾ ಅಂತರ ಸಚಿವಾಲಯ ತಂಡಕ್ಕೆ ಮಾರ್ಗಸೂಚಿಗಳು–2023

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT