ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ ಅಗಲ | ಒಂದು ದೇಶ ಒಂದು ಚುನಾವಣೆ: ಸಾಧಕ – ಬಾಧಕಗಳ ಸುತ್ತ
ಆಳ ಅಗಲ | ಒಂದು ದೇಶ ಒಂದು ಚುನಾವಣೆ: ಸಾಧಕ – ಬಾಧಕಗಳ ಸುತ್ತ
Published 14 ಮಾರ್ಚ್ 2024, 23:46 IST
Last Updated 14 ಮಾರ್ಚ್ 2024, 23:46 IST
ಅಕ್ಷರ ಗಾತ್ರ

ಲೋಕಸಭೆಗೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುವುದು ಭಾರತಕ್ಕೆ ಹೊಸತೇನಲ್ಲ. ಸ್ವತಂತ್ರ ಭಾರತದ ಮೊದಲ ಎರಡು ಸಾರ್ವತ್ರಿಕ ಚುನಾವಣೆಗಳ ಜತೆಯಲ್ಲೇ ರಾಜ್ಯ ವಿಧಾನಸಭೆಗಳಿಗೂ ಚುನಾವಣೆಗಳು ನಡೆದಿದ್ದವು. ಆನಂತರ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಅಲ್ಲಿಯವರೆಗೆ ಯಾವ ಸರ್ಕಾರವೂ ಅವಧಿಗೆ ಮುನ್ನ ವಿಸರ್ಜನೆಯಾಗಿರಲಿಲ್ಲ ಅಥವಾ ಬಿದ್ದುಹೋಗಿರಲಿಲ್ಲ ಅಥವಾ ರಾಷ್ಟ್ರಪತಿ ಆಳ್ವಿಕೆಯೂ ಜಾರಿಯಾಗಿರಲಿಲ್ಲ.

ಸ್ವತಂತ್ರ ಭಾರತದ ಆರಂಭದ ದಶಕಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌ ಒಂದೇ ಪ್ರಧಾನ ಪಕ್ಷವಾಗಿತ್ತು. 70ರ ದಶಕದಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಮುನ್ನೆಲೆಗೆ ಬಂದಿದ್ದರಿಂದ, ರಾಜ್ಯ ವಿಧಾನಸಭೆಗಳಲ್ಲಿ ಹಲವು ಪಕ್ಷಗಳ ನಡುವೆ ಪೈಪೋಟಿ ಉಂಟಾಗಿತ್ತು. ಇದರಿಂದ ಅವಧಿಗೂ ಮುನ್ನವೇ ವಿಧಾನಸಭೆಗಳು ವಿಸರ್ಜನೆಯಾಗುವ ಹಲವು ಘಟನೆಗಳು ನಡೆದವು. ಅಂತಹ ರಾಜ್ಯಗಳಲ್ಲಿ ಮಧ್ಯಂತರ ಚುನಾವಣೆ ನಡೆದ ಕಾರಣ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುವ ಪ್ರಕ್ರಿಯೆ ಹಳಿ ತಪ್ಪಿತು. ಈಗ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾವ ಮತ್ತೆ ಮುನ್ನೆಲೆಗೆ ಬಂದಿದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಮತ್ತೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವ ಬಂದಿದ್ದು 1983ರಲ್ಲಿ. ಕಾನೂನು ಆಯೋಗವು 1983ರಲ್ಲಿ ತನ್ನ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿತ್ತು. ‘ಏಕಕಾಲದಲ್ಲಿ ಚುನಾವಣೆ ನಡೆಯುವುದರಿಂದ ಚುನಾವಣಾ ವೆಚ್ಚದಲ್ಲಿ ಭಾರಿ ಇಳಿಕೆಯಾಗಲಿದೆ. ಸರ್ಕಾರಿ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡುವುದು ಕಡಿಮೆಯಾಗುವ ಕಾರಣ, ಅವರ ಮುಖ್ಯ ಕರ್ತವ್ಯದಲ್ಲಿ ಉತ್ಪಾದಕತೆ ಹೆಚ್ಚಲಿದೆ. ರಾಜಕೀಯ ಪಕ್ಷಗಳೂ ಚುನಾವಣೆ ಬಿಟ್ಟು, ಆಡಳಿತದತ್ತ ಗಮನಕೊಡಲು ಸಾಧ್ಯವಾಗುತ್ತದೆ’ ಎಂದು ವಿವರಿಸಿತ್ತು. ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಆನಂತರ ಬಂದ ಎಲ್ಲಾ ವರದಿಗಳು ಮತ್ತು ಶಿಫಾರಸುಗಳು ಇದೇ ಮಾತನ್ನು ಹೇಳುತ್ತಾ ಬಂದಿವೆ. ಜತೆಗೆ ಕೆಲವು ವರದಿಗಳು ಇಂತಹ ಚುನಾವಣೆ ನಡೆಸುವುದರಲ್ಲಿ ಇರುವ ಅಥವಾ ಎದುರಾಗುವ ಸವಾಲುಗಳತ್ತಲೂ ಗಮನಹರಿಸಿವೆ.

1999ರಲ್ಲಿ ಕಾನೂನು ಆಯೋಗವು ತನ್ನ 177ನೇ ವರದಿಯಲ್ಲಿ ಮತ್ತೆ ಈ ವಿಷಯವನ್ನು ಪ್ರಸ್ತಾಪಿಸಿತ್ತು. ವಿಧಾನಸಭೆ ವಿಸರ್ಜನೆ ಮತ್ತು ರಾಷ್ಟ್ರಪತಿ ಆಳ್ವಿಕೆಯ ಕಾರಣದಿಂದ ಕೆಲವು ರಾಜ್ಯಗಳಲ್ಲಿ ಮಧ್ಯಂತರ ಚುನಾವಣೆ ನಡೆಯಬಹುದು. ಆದರೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದನ್ನು ತಡೆಯಲು ಇದೇ ನೆಪವಾಗಬಾರದು. ಈ ಚುನಾವಣೆಗಳನ್ನು ಏಕಕಾಲದಲ್ಲಿಯೇ ನಡೆಸಬೇಕು ಎಂದು ಕಾನೂನು ಆಯೋಗವು ಶಿಫಾರಸು ಮಾಡಿತು. 2015ರ ವರದಿಯಲ್ಲಿ ಇದೇ ವಿಚಾರಗಳನ್ನು ಆಯೋಗವು ಪ್ರಸ್ತಾವಿಸಿತ್ತಾದರೂ, ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಆಗುವ ತೊಡಕುಗಳತ್ತಲೂ ಗಮನ ಹರಿಸಿತ್ತು.

2002ರಲ್ಲಿ, 2018ರಲ್ಲಿ ಕಾನೂನು ಆಯೋಗವು ತನ್ನ ವರದಿಗಳಲ್ಲಿ ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಿತ್ತು. ಇದರ ಮಧ್ಯೆ 2015ರಲ್ಲಿ ಸಂಸದೀಯ ಸ್ಥಾಯಿ ಸಮಿತಿಯು ‘ಏಕಕಾಲದಲ್ಲಿ ಚುನಾವಣೆಯ ಕಾರ್ಯಸಾಧ್ಯತೆಗಳು’ ವರದಿಯನ್ನು ಸಿದ್ಧಪಡಿಸಿತ್ತು. ಚುನಾವಣಾ ವೆಚ್ಚ ಇಳಿಕೆ, ಮಾದರಿ ನೀತಿ ಸಂಹಿತೆಯನ್ನು ಪದೇ–ಪದೇ ಹೇರಬೇಕಾದ ಅವಶ್ಯಕತೆ ಇಲ್ಲದಿರುವುದರಿಂದ ಜನರಿಗೆ ಆಗುವ ಅನುಕೂಲ, ಸರ್ಕಾರಿ ಯಂತ್ರದ ಮೇಲಿನ ಹೊರೆ ಇಳಿಕೆ, ಪದೇ–ಪದೇ ಚುನಾವಣೆ ನಡೆಯುವುದರಿಂದ ಜನರಿಗೆ ಆಗುವ ತೊಂದರೆಗಳ ನಿವಾರಣೆ ಮೊದಲಾದ ಅನುಕೂಲಗಳನ್ನು ಪಟ್ಟಿ ಮಾಡಿತ್ತು. ಇಷ್ಟೆಲ್ಲಾ ಅನುಕೂಲಗಳಿರುವ ಕಾರಣ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂದು ಸಮಿತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. 2017ರಲ್ಲಿ ನೀತಿ ಆಯೋಗವೂ ಇಂತಹ ಅಧ್ಯಯನವನ್ನು ನಡೆಸಿ, ಏಕಕಾಲದಲ್ಲಿ ಚುನಾವಣೆ ನಡೆಸುವುದರ ಪರವಾಗಿಯೇ ವರದಿ ನೀಡಿತ್ತು.

ಈಗ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಉನ್ನತಾಧಿಕಾರ ಸಮಿತಿಯು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಬೇಕು, ಅದರಿಂದ ದೇಶಕ್ಕೆ ಉಪಯೋಗವಿದೆ ಎಂದು ಶಿಫಾರಸು ಮಾಡಿದೆ. ಲೋಕಸಭೆ ಮತ್ತು ರಾಜ್ಯ ವಿಧನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂಬ ಪ್ರಸ್ತಾವದ ಬಗ್ಗೆ ಹಲವು ರಾಜ್ಯ ಸರ್ಕಾರಗಳು ಮತ್ತು ಪ್ರಾದೇಶಿಕ ಪಕ್ಷಗಳ ವಿರೋಧವಿದೆ. ಹಲವು ಪ್ರಾದೇಶಿಕ ಪಕ್ಷಗಳು ಈ ಬಗ್ಗೆ ಈಗಾಗಲೇ ತಮ್ಮ ವಿರೋಧವನ್ನು ದಾಖಲಿಸಿವೆ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೇ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೆ ಚುನಾಯಿತ ಸರ್ಕಾರದ ಅವಧಿಯನ್ನು ಮೊಟಕುಗೊಳಿಸುವುದು ಪ್ರಜಾಸತ್ತಾತ್ಮಕವಲ್ಲ. ಅಲ್ಲದೇ ಈ ವ್ಯವಸ್ಥೆಯು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಪದೇ–ಪದೇ ಅವಕಾಶ ಮಾಡಿಕೊಡುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಡಿಎಂಕೆ, ಟಿಎಂಸಿಯಾದಿಯಾಗಿ ಹಲವು ಪ್ರಾದೇಶಿಕ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಹೀಗಾಗಿ ಈ ವರದಿಯು ಅನುಷ್ಠಾನಕ್ಕೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಬಲ ಸವಾಲುಗಳು

* ಸಂವಿಧಾನ ತಿದ್ದುಪಡಿ: ಲೋಕಸಭೆಯ ಅವಧಿಯನ್ನು ನಿಗದಿಪಡಿಸುವ ಸಂವಿಧಾನದ 83ನೇ ವಿಧಿ ಮತ್ತು ಲೋಕಸಭೆಯನ್ನು ವಿಸರ್ಜನೆ ಮಾಡಲು ಅವಕಾಶ ಮಾಡಿಕೊಡುವ 85ನೇ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಅದೇ ರೀತಿ ರಾಜ್ಯ ವಿಧಾನಸಭೆಗಳ ಅವಧಿಯನ್ನು ನಿಗದಿಪಡಿಸುವ ಮತ್ತು ಅವನ್ನು ವಿಸರ್ಜನೆ ಮಾಡಲು ಅವಕಾಶ ಮಾಡಿಕೊಡುವ ಸಂವಿಧಾನದ 172 ಮತ್ತು 174ನೇ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಜತೆಗೆ, ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲು ಅವಕಾಶ ಮಾಡಿಕೊಡುವ ಸಂವಿಧಾನದ 356ನೇ ವಿಧಿಗೂ ತಿದ್ದುಪಡಿ ತರಬೇಕಾಗುತ್ತದೆ

* ಚುನಾವಣಾ ಕ್ಯಾಲೆಂಡರ್ ಬದಲಾವಣೆ: ಈಗ ರಾಜ್ಯ ಗಳಲ್ಲಿ ಇರುವ ವಿಧಾನಸಭೆಗಳು/ಸರ್ಕಾರಗಳ ಅವಧಿ ಪರಸ್ಪರ ಭಿನ್ನವಾಗಿವೆ. ಒಂದು ರಾಜ್ಯದ ಸರ್ಕಾರದ ಅವಧಿ ಒಂದು ವರ್ಷವಷ್ಟೇ ಇದ್ದರೆ, ಬೇರೊಂದು ರಾಜ್ಯದ ಸರ್ಕಾರಕ್ಕೆ ಇನ್ನೂ ನಾಲ್ಕು ವರ್ಷಕ್ಕೂ ಹೆಚ್ಚು ಅಧಿಕಾರದ ಅವಧಿ ಇವೆ. ಆ ವಿಧಾನಸಭೆಗಳನ್ನು ವಿಸರ್ಜನೆ ಮಾಡಿ, ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವ ಅಥವಾ ವಿಧಾನಸಭೆಯ ಅವಧಿಯನ್ನೇ ವಿಸ್ತರಿಸುವಂತೆ ಒಮ್ಮತದ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಕಾನೂನು ತೊಡಕು ಮತ್ತು ಕಾನೂನು–ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಕೋವಿಂದ್‌ ಸಮಿತಿಯ ವರದಿಯಲ್ಲೂ ಈ ಅಂಶಗಳಿಗೆ ಒತ್ತು ನೀಡಲಾಗಿದೆ

* ಚುನಾವಣಾ ಯಂತ್ರ ಬಲಪಡಿಸುವಿಕೆ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ದೇಶದಲ್ಲಿ ಈಗ ಇರುವುದಕ್ಕಿಂತ ಒಂದುಪಟ್ಟು ಹೆಚ್ಚು ಇವಿಎಂಗಳ (ಎಲೆಕ್ಟ್ರಾನಿಕ್‌ ಮತಯಂತ್ರ) ಅವಶ್ಯಕತೆ ಇದೆ. ಜತೆಗೆ ವಿವಿ–ಪ್ಯಾಟ್‌ ಯಂತ್ರಗಳು, ಅವುಗಳ ಸಂಗ್ರಹ ಮತ್ತು ನಿರ್ವಹಣೆಗೆ ಅಪಾರಮಟ್ಟದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. 2015ರಲ್ಲಿ ಕಾನೂನು ಆಯೋಗವು ನೀಡಿದ್ದ ವರದಿಯಲ್ಲಿ ಇವಿಎಂಗಳನ್ನು ಮಾತ್ರ ಹೊಂದಿಸಿಕೊಳ್ಳಲು ₹9,500 ಕೋಟಿಗೂ ಹೆಚ್ಚು ಮೊತ್ತ ಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಈಗ ಆ ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ. ಅಲ್ಲದೆ ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಯು ಹೆಚ್ಚುವರಿ ದಿನಗಳವರೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಸಾಗಣೆ ವೆಚ್ಚ–ಊಟ, ವಸತಿ ವೆಚ್ಚವೂ ಗಣನೀಯ ಮಟ್ಟದಲ್ಲಿ ಏರಿಕೆಯಾಗಲಿದೆ ಎಂಬುದನ್ನು ವರದಿಗಳಲ್ಲಿ ಉಲ್ಲೇಖಿಸಲಾಗಿದೆ

ಅಲ್ಪಾವಧಿ ಚುನಾವಣೆ, ರಾಷ್ಟ್ರಪತಿ ಆಳ್ವಿಕೆ

ಕೋವಿಂದ್‌ ಸಮಿತಿಯು ಈಗ ಮಾಡಿರುವ ಶಿಫಾರಸುಗಳಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಅವುಗಳಲ್ಲಿ ಪ್ರಮುಖವಾದುದು ಅವಧಿಗೂ ಮುನ್ನ ಚುನಾವಣೆ.

ಈಗ ಜಾರಿಯಲ್ಲಿರುವ ವ್ಯವಸ್ಥೆಯ ಪ್ರಕಾರ ರಾಜ್ಯವೊಂದರ ವಿಧಾನಸಭೆಯ ಅವಧಿ ಐದು ವರ್ಷ. 2024ರಲ್ಲಿ ಚುನಾವಣೆ ನಡೆದು ವಿಧಾನಸಭೆ ಅಸ್ತಿತ್ವಕ್ಕೆ ಬಂದಿದೆ ಎಂದಿಟ್ಟುಕೊಳ್ಳಿ. ಆ ವಿಧಾನಸಭೆಯ ಅವಧಿ 2029ರವರೆಗೂ ಇರುತ್ತದೆ. ಅಲ್ಪಮತದ ಕಾರಣದಿಂದಲೋ ಅಥವಾ ಬೇರೆ ಕಾರಣದಿಂದಲೋ 2028ರಲ್ಲೇ ವಿಧಾನಸಭೆ ವಿಸರ್ಜನೆಯಾಗಿಬಿಡುತ್ತದೆ. ಅದೇ ವರ್ಷ ಚುನಾವಣೆಯೂ ನಡೆಯುತ್ತದೆ. 2028ರಲ್ಲಿ ಅಸ್ತಿತ್ವಕ್ಕೆ ಬಂದ ವಿಧಾನಸಭೆಯ ಅವಧಿ 2033ರವರೆಗೆ ಇರುತ್ತದೆ. ಹೀಗೆ ಹೊಸದಾಗಿ ಚುನಾಯಿತವಾದ ಪ್ರತಿ ವಿಧಾನಸಭೆಯ ಅವಧಿಯೂ ಐದು ವರ್ಷಗಳಾಗಿರುತ್ತದೆ.

ಆದರೆ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವದಲ್ಲಿ ಈ ಅಂಶ ಬದಲಾಗಿದೆ. 2024ರಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದು ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ. ಲೋಕಸಭೆ ಮತ್ತು ಆ ಎಲ್ಲಾ ವಿಧಾನಸಭೆಗಳ ಅಧಿಕಾರದ ಅವಧಿ 2029ರವರೆಗೂ ಇರುತ್ತದೆ. ಆದರೆ ಯಾವುದೋ ಒಂದೆರಡು ರಾಜ್ಯಗಳಲ್ಲಿ ಅಲ್ಪಮತದ ಕಾರಣದಿಂದಲೋ ಅಥವಾ ಅನ್ಯ ಕಾರಣದಿಂದಲೋ ವಿಧಾನಸಭೆಗಳು 2028ರಲ್ಲಿ ವಿಸರ್ಜನೆಯಾಗುತ್ತವೆ. ಆ ವಿಧಾನಸಭೆಗಳ ಅವಧಿ ಆರು ತಿಂಗಳಿಗಿಂತ ಕಡಿಮೆ ಇದ್ದರೆ, ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ. ಆರು ತಿಂಗಳಿಗಿಂತ ಹೆಚ್ಚಿನ ಅವಧಿ ಉಳಿದಿದ್ದರೆ, ಆ ಅಲ್ಪಾವಧಿಗೇ ಚುನಾವಣೆ ನಡೆಸಬೇಕಾಗುತ್ತದೆ. 2028ರಲ್ಲಿ ಚುನಾವಣೆ ನಡೆದು ಅಸ್ತಿತ್ವಕ್ಕೆ ಬರುವ ಹೊಸ ವಿಧಾನಸಭೆ ಮತ್ತು ಸರ್ಕಾರದ ಅವಧಿ 2029ರವರೆಗೆ ಮಾತ್ರ. 2029ರಲ್ಲಿ ಲೋಕಸಭೆ ಚುನಾವಣೆಯೊಂದಿಗೆ ಆ ರಾಜ್ಯಗಳು ಮತ್ತೆ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕಾಗುತ್ತದೆ. 

ಸ್ವತಂತ್ರ ಭಾರತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣ ಆ ಪ್ರಕ್ರಿಯೆಯನ್ನು ‘ಏಕಕಾಲದ ಚುನಾವಣೆ’ ಎಂದೇ ಕರೆಯಲಾಗುತ್ತಿತ್ತು. ಸರ್ಕಾರಿ ದಾಖಲೆಗಳಲ್ಲೂ ಹಾಗೇ ಉಲ್ಲೇಖಿಸಲಾಗುತ್ತಿತ್ತು. ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಸಲ್ಲಿಕೆಯಾದ ಕಾನೂನು ಆಯೋಗದ 1999ರ ವರದಿಯಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಎಂದು ಬಳಸಲಾಗಿತ್ತು. ಆನಂತರ ಇದೇ ಪರಿಭಾಷೆಯನ್ನು ಪ್ರಮುಖವಾಗಿ ಬಳಸಲಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT