ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಗುಜರಾತ್: ದಾಖಲೆಯ ತವಕದಲ್ಲಿರುವ ಬಿಜೆಪಿಯ ಕಟ್ಟಿಹಾಕುವುದೇ ‘ಇಂಡಿಯಾ’?

Published 26 ಏಪ್ರಿಲ್ 2024, 18:59 IST
Last Updated 26 ಏಪ್ರಿಲ್ 2024, 18:59 IST
ಅಕ್ಷರ ಗಾತ್ರ

18ನೇ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಯದೆಯೇ ಸಂಸತ್ತಿಗೆ ಸಂಸದರೊಬ್ಬರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಜನರು ತಮ್ಮ ಹಕ್ಕು ಚಲಾಯಿಸಿ, ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಈಗ ಜನರು ತಮ್ಮ ಹಕ್ಕು ಚಲಾಯಿಸುವ ಮೊದಲೇ ‘ಇವರೇ ನಿಮ್ಮ ಪ್ರತಿನಿಧಿ’ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿಬಿಟ್ಟಿದೆ. ಬಿಜೆಪಿಯ ಮುಕೇಶ್‌ ದಲಾಲ್‌ ಸಂಸತ್ತಿಗೆ ಪ್ರಥಮವಾಗಿ ಆಯ್ಕೆಯಾದವರು. ಲೋಕಸಭಾ ಚುನಾವಣೆಗೆ ಗುಜರಾತ್‌ನ ಮೂಲಕ ಬಿಜೆಪಿ ಖಾತೆ ತೆರದದ್ದು ಹೀಗೆ.

‘ನಾವು ಈ ಬಾರಿ ಎಲ್ಲ 26 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ’ ಎಂದು ರಾಜ್ಯ ಬಿಜೆಪಿ ನಾಯಕರು, ಕೇಂದ್ರದ ನಾಯಕರು ಹೇಳುತ್ತಲೇ ಬಂದಿದ್ದಾರೆ. ಕಾರ್ಯಕರ್ತರಲ್ಲಿಯೂ ಇದೇ ವಿಶ್ವಾಸವಿದೆ. ಆದರೆ, ಸೂರತ್ ಲೋಕಸಭಾ ಕ್ಷೇತ್ರದ ದಲಾಲ್‌ ಅವರ ಅವಿರೋಧ ಆಯ್ಕೆ ಮಾತ್ರ ವಿರೋಧ ಪಕ್ಷಗಳ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ‘ಸವಾರ್ಧಿಕಾರಿಯ ಅಸಲಿ ಮುಖ (ಸೂರತ್‌, ಲೋಕಸಭಾ ಕ್ಷೇತ್ರದ ಹೆಸರೂ ಹೌದು, ಮುಖಕ್ಕೆ ಹಿಂದಿ ಭಾಷೆಯಲ್ಲಿ ಹೇಳುವ ಪದವೂ ಹೌದು) ಮತ್ತೊಂದು ಬಾರಿ ಮುಂದೆ ಬಂದಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ನಾಮಪತ್ರ ತಿರಸ್ಕೃತಗೊಂಡ ಇದೇ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ನೀಲೇಶ್‌ ಕುಂಬಾನಿ ಅವರನ್ನು ಆರು ವರ್ಷಗಳಿಗೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಸೂರತ್‌ ಗೆಲುವಿನೊಂದಿಗೆ ಖಾತೆ ತೆರೆದ ಬಿಜೆಪಿಯು ಗುಜರಾತ್‌ನಾದ್ಯಂತ ಇತಿಹಾಸ ನಿರ್ಮಿಸುವ ತವಕದಲ್ಲಿದೆ. 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 26 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಇಲ್ಲಿನ ಬಿಜೆಪಿ ಅಭ್ಯರ್ಥಿಗಳು 1.5 ಲಕ್ಷದಿಂದ ಆರಂಭವಾಗಿ 6.8 ಲಕ್ಷವರೆಗಿನ ಮತಗಳ ಅಂತರದಿಂದ 2019ರಲ್ಲಿ ಗೆದ್ದು ಬಂದಿದ್ದರು. ಇದು ದಾಖಲೆಯಾಗಿತ್ತು. ಈ ಬಾರಿ ಎಲ್ಲ ದಾಖಲೆಗಳನ್ನು ಮುರಿದು, ಚುನಾವಣಾ ಇತಿಹಾಸದಲ್ಲಿ ಹೊಸ ಇತಿಹಾಸ ಬರೆಯುವ ಉತ್ಸಾಹದಲ್ಲಿದೆ ಬಿಜೆಪಿ.

ಪ್ರತಿಯೊಬ್ಬ ಅಭ್ಯರ್ಥಿಯು ಕನಿಷ್ಠ 5 ಲಕ್ಷ ಮತಗಳ ಅಂತರದಿಂದ ಗೆದ್ದುಬರಬೇಕು ಎನ್ನುವುದು ಬಿಜೆಪಿಯ 2024ರ ಲೋಕಸಭಾ ಚುನಾವಣೆಯ ಗುರಿ. ಅದರಲ್ಲೂ ಗಾಂಧಿನಗರ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಗೃಹ ಸಚಿವ ‘ಅಮಿತ್‌ ಶಾ ಅವರನ್ನು ದಾಖಲೆಯ 10 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ’ ಎನ್ನುತ್ತಾರೆ ರಾಜ್ಯದ ಬಿಜೆಪಿ ಘಟಕದ ಅಧ್ಯಕ್ಷ ಸಿ.ಆರ್‌. ಪಾಟೀಲ್‌. ಇದೇ ಪಾಟೀಲ್‌ ಅವರು 2019ರ ಚುನಾವಣೆಯಲ್ಲಿ 6.8 ಲಕ್ಷ ಮತಗಳ ಅಂತರದಿಂದ ಗೆದ್ದುಬಂದಿದ್ದರು. ವಿಧಾನಸಭಾ ಚುನಾವಣೆ ಇರಲಿ, ಲೋಕಸಭಾ ಚುನಾವಣೆ ಇರಲಿ, ರಾಜ್ಯದಲ್ಲಿ ಬಿಜೆಪಿಯದ್ದೇ ಮೇಲುಗೈ. ಇಷ್ಟಾದರೆ ಸಾಲದು, ಗೆಲುವು ಎನ್ನುವುದು ದಾಖಲೆಯಾಗಬೇಕು ಎನ್ನುವ ಗುರಿಯನ್ನು ಹೊತ್ತು ಬಿಜೆಪಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ.

‘ಇಂಡಿಯಾ’ ಮೈತ್ರಿಕೂಟ ಮತ್ತು ಜಾತಿ ಸಮೀಕರಣ

ಗುಜರಾತ್‌ನಲ್ಲಿ ಇತಿಹಾಸ ನಿರ್ಮಿಸಬೇಕೆಂದಿರುವ ಬಿಜೆಪಿಯನ್ನು ತಕ್ಕಮಟ್ಟಿಗೆ ಕಟ್ಟಿಹಾಕಬೇಕು ಎನ್ನುವ ತಂತ್ರವನ್ನು ಕಾಂಗ್ರೆಸ್‌ ಹಾಗೂ ಎಎಪಿ ಹೂಡಿವೆ. 24 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ 2 ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸುತ್ತಿದೆ. ನಗರ ಮತ್ತು ಪಟ್ಟಣ ಪ್ರದೇಶ ಗಳಲ್ಲಿ ಇರುವ ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಿರುವ ಸಮುದಾಯಗಳೇ ಬಿಜೆಪಿ ಭದ್ರ ಮತಬ್ಯಾಂಕ್‌ಗಳು. ಈ ಬಾರಿ, ‘ಇಂಡಿಯಾ’ ಮೈತ್ರಿಕೂಟವು ಜಾತಿ ಲೆಕ್ಕಾಚಾರ ಹಾಕಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರನ್ನೇ ಕಾಂಗ್ರೆಸ್‌ ಸ್ಪರ್ಧೆಗೆ ಆರಿಸಿದೆ.

‘ಈ ಬಾರಿ 10 ಕ್ಷೇತ್ರಗಳನ್ನಾದರೂ ಗೆಲ್ಲುತ್ತೇವೆ. ಹಿಂದೆಲ್ಲಾ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಕ್ಕೂ ಕೆಲ ದಿನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದೆವು. ಆದರೆ, ಈ ಬಾರಿ ಹಲವು ದಿನಗಳ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ’ ಎನ್ನುತ್ತಾರೆ ರಾಜ್ಯದ ಉಸ್ತುವಾರಿ, ಕಾಂಗ್ರೆಸ್‌ನ ಮುಕುಲ್‌ ವಾಸ್ನಿಕ್‌. ಕೆಲವು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಅಲ್ಲೆಲ್ಲಾ ಕಾಂಗ್ರೆಸ್‌ ಅದೇ ವರ್ಗದ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಜೊತೆಗೆ, ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ 7 ಮಾಜಿ ಶಾಸಕರನ್ನೇ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿಸಿದೆ. 5 ಹಾಲಿ ಶಾಸಕರಿಗೂ ಟಿಕೆಟ್‌ ನೀಡಲಾಗಿದೆ. ಅಂದರೆ, 26 ಕ್ಷೇತ್ರಗಳ ಪೈಕಿ 12 ಕಡೆ ಹಳೆಯ ಹುರಿಯಾಳುಗಳನ್ನೇ ಕಣಕ್ಕಿಳಿಸಿದಂತಾಗಿದೆ.

ಪ್ರತಿ ಚುನಾವಣೆಯಲ್ಲೂ ಬಿಜೆಪಿಗೆ ಶೇ 60ರಷ್ಟು ಮತಗಳು ಬೀಳುತ್ತವೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶೇ 60ಕ್ಕೂ ಅಧಿಕ ಮತಗಳು ದೊರೆತಿದ್ದವು. ಕಾಂಗ್ರೆಸ್‌ ಹಾಗೂ ಎಎಪಿಗೆ ಬಿದ್ದ ಮತಪ್ರಮಾಣವನ್ನು ಸೇರಿಸಿದರೂ ಶೇ 40 ಅನ್ನು ಮೀರುವುದಿಲ್ಲ. ಆದ್ದರಿಂದ ಬಿಜೆಪಿ ಗೆಲುವೇ ಖಚಿತ ಎನ್ನುತ್ತಾರೆ ಬಿಜೆಪಿ ನಾಯಕರು. ಆದರೆ, ಇಂಡಿಯಾ ಮೈತ್ರಿಕೂಟವು ಈ ಲೆಕ್ಕಾಚಾರವನ್ನು ಒಪ್ಪುತ್ತಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಮೂರು ಪಕ್ಷಗಳ ಮಧ್ಯೆ ಮತಗಳು ಹಂಚಿಹೋಗಿದ್ದವು. ಆದರೆ ಈ ಬಾರಿ, ಕಾಂಗ್ರೆಸ್‌ ಹಾಗೂ ಎಎಪಿ ಒಟ್ಟಿಗೆ ಇರುವುದರಿಂದ ಮತಗಳ ಹಂಚಿ ಹೋಗುವುದಿಲ್ಲ. ಇದರಿಂದ ಮೈತ್ರಿಕೂಟಕ್ಕೆ ಅನುಕೂಲವೇ ಹೆಚ್ಚು. ಎಲ್ಲಾ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಎಎಪಿ ಜೊತೆಗೂಡಿ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಮೈತ್ರಿಕೂಟದ ನಾಯಕರು.

ಬನಸ್ಕಾಂತ: ಮಹಿಳಾ ಸೆಣಸಾಟ

ಈ ಬಾರಿಯ ಚುನಾವಣೆಯಲ್ಲಿ ಬನಸ್ಕಾಂತ ಲೋಕಸಭಾ ಕ್ಷೇತ್ರವು ಗಮನಸೆಳೆದಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಮಹಿಳೆಯರನ್ನೇ ಅಭ್ಯರ್ಥಿಗಳನ್ನಾಗಿಸಿವೆ. ಇಬ್ಬರೂ ಮಹಿಳೆಯರು ಆಯಾ ಪಕ್ಷದ ಪ್ರಮುಖ ಮಹಿಳಾ ಮುಖ. ಕಾಂಗ್ರೆಸ್‌ನ ಜೀನಿ ಠಾಕೂರ್‌ ಅವರು ಮಹಿಳಾಪರ ಧ್ವನಿಯಾಗಿ ರಾಜ್ಯದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪ್ರಖರ ಮಾತುಗಳ ಕಾರಣಕ್ಕಾಗಿಯೇ 2017 ಹಾಗೂ 2022ರಲ್ಲಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಜೀನಿ ಅವರಿಗೆ ಪಕ್ಷಾತೀತವಾಗಿ ಅಭಿಮಾನಿಗಳೂ ಇದ್ದಾರೆ. ತಮ್ಮ ಠೇವಣಿ ಮೊತ್ತವನ್ನೂ ಅವರು ಜನರಿಂದಲೇ ಸಂಗ್ರಹಿಸಿ ನೀಡಿದ್ದಾರೆ. ಪ್ರಚಾರಕ್ಕೆ ಜನರಿಂದಲೇ ಸಂಗ್ರಹಿಸಿದ ಹಣವನ್ನು ಬಳಸುತ್ತಿದ್ದಾರೆ. ಅವರ ಈ ಪಾರದರ್ಶಕ ನಡೆಯು ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನೊಂದೆಡೆ, ಬಿಜೆಪಿಯು ರೇಖಾ ಚೌಧರಿ ಅವರನ್ನು ಜೀನಿ ಎದುರು ಕಣಕ್ಕೆ ಇಳಿಸಿದೆ. ಇವರದ್ದು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿರುವ ಕುಟುಂಬ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿದ್ದವರು. ರೇಖಾ ಅವರ ಅಜ್ಜ ಗಾಲ್ಬಾಬಾಯ್‌. ಬಾನಸ್‌ ಹೆಸರಿನ ಡೈರಿಯನ್ನು ಸ್ಥಾಪಿಸಿದ್ದಾರೆ. 4.5 ಲಕ್ಷ ರೈತರು ಪ್ರತಿ ದಿನವೂ ಇಲ್ಲಿಗೆ ಹಾಲು ಹಾಕುತ್ತಾರೆ. ಇದು ರೇಖಾ ಅವರಿಗೆ ಇರುವ ದೊಡ್ಡ ಮತಬ್ಯಾಂಕ್‌ ಅಂತಲೇ ಹೇಳಲಾಗುತ್ತಿದೆ. 2013ರಿಂದಲೂ ಇಲ್ಲಿ ಬಿಜೆಪಿಯೇ ಗೆಲುತ್ತಾ ಬಂದಿದೆ. ಆದರೆ, ಗೆಲುವಿನ ಅಂತರ ಮಾತ್ರ ತುಸು ಕಡಿಮೆಯೇ. ಎರಡೂ ಪಕ್ಷಗಳೂ ಗೆಲುವಿನ ತವಕದಲ್ಲಿದ್ದಾವೆ.

ಮತಗಟ್ಟೆಗೆ ಕರೆತರಲು ಲೆಕ್ಕಾಚಾರ

‘ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಶೇ 100ರಷ್ಟು ಮತದಾನ ನಡೆಯಬೇಕು. ಬೆಳಿಗ್ಗೆ 10ರ ಬಿಸಿಲೇರುವ ಮೊದಲೇ ಶೇ 100ರಷ್ಟೂ ಮತ ಚಲಾವಣೆಯಾಗಬೇಕು ಎನ್ನುವ ಗುರಿ ಹಾಕಿಕೊಳ್ಳಲಾಗಿದೆ’ ಎನ್ನುತ್ತಾರೆ ಬಿಜೆಪಿ ಪಕ್ಷದ ಕಾರ್ಯಕರ್ತರು. ಇದು ಕೇವಲ ಗಾಂಧಿನಗರ ಕ್ಷೇತ್ರದ ಲೆಕ್ಕಾಚಾರವಲ್ಲ. ರಾಜ್ಯದಾದ್ಯಂತ ಇದೇ ಲೆಕ್ಕಾಚಾರ ನಡೆಸುವ ಉತ್ಸಾಹದಲ್ಲಿ ಬಿಜೆಪಿ ಇದೆ. ಇದಕ್ಕಾಗಿ ವ್ಯವಸ್ಥೆಯೊಂದನ್ನು ರಚಿಸಿಕೊಂಡಿದ್ದಾರೆ. ಬಿಜೆಪಿಯ ರಾಜ್ಯ ಅಧ್ಯಕ್ಷರ ಕಾರ್ಯತಂತ್ರಗಳಲ್ಲಿ ಇದು ಪ್ರಮುಖವಾದದು. ಹೀಗೆ ಕೆಲಸ ಮಾಡಿದರೆ ಮಾತ್ರವೇ ಇತಿಹಾಸ ನಿರ್ಮಾಣ ಸಾಧ್ಯ ಎನ್ನುತ್ತಾರೆ ಪಾಟೀಲ್‌.

‘ಗುಜರಾತ್‌ನಾದ್ಯಂತ 78 ಲಕ್ಷ ನಮ್ಮ ವಾಟ್ಸ್‌ಆ್ಯಪ್‌ ಸದಸ್ಯರಿದ್ದಾರೆ. ಇವರೆಲ್ಲರೂ ತಮ್ಮ ಮನೆಯ ಕನಿಷ್ಠ ಮೂರು ಜನರನ್ನು ಮತಗಟ್ಟೆಗೆ ಕರೆತಂದರೂ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎನ್ನುತ್ತಾರೆ ಅಧ್ಯಕ್ಷ ಪಾಟೀಲ್‌. 2019ರ ಚುನಾವಣೆಯಲ್ಲಿಯೂ ಈ ಕಾರ್ಯತಂತ್ರ ವನ್ನೇ ನಡೆಸಲಾಗಿತ್ತು. 2022ರ ವಿಧಾನಸಭೆ ಚುನಾವಣೆಯಲ್ಲಿಯೂ ಇದನ್ನೇ ಅನುಸರಿಸಲಾಗಿತ್ತು.

ರಾಜ್ಯದಲ್ಲಿ ಸುಮಾರು 4.5 ಕೋಟಿಯಷ್ಟು ಅರ್ಹ ಮತದಾರರು ಇದ್ದಾರೆ. ಆದರೆ 2.5 ಕೋಟಿಯಿಂದ 2.8 ಕೋಟಿಯಷ್ಟು ಮಾತ್ರ ಮತ ಚಲಾಯಿಸುತ್ತಿದ್ದಾರೆ. ಇದರಲ್ಲಿ 1.6 ಕೋಟಿಯಷ್ಟು ಮತಗಳು ಬಿಜೆಪಿಗೇ ಹೋಗುತ್ತವೆ. ಸುಮಾರು 70 ಲಕ್ಷದಷ್ಟಿರುವ ಬಿಜೆಪಿಯ ಕಾಲಾಳುಗಳು ಎರಡರಿಂದ ಮೂರು ಮತಗಳನ್ನು ಹಾಕಿಸುತ್ತಾರೆ ಎಂದು ಬಿಜೆಪಿಯೇ ಹೇಳುತ್ತದೆ. ಅಂತಹ ಮತಗಳೇ 1.5 ಕೋಟಿ ಯನ್ನು ದಾಟುತ್ತದೆ. ಅದರಾಚೆಗೆ ಮತಗಳನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿಲ್ಲ. ಆದರೆ ರಾಜ್ಯದ ಸುಮಾರು 2 ಕೋಟಿ ಮತದಾರರು ಮತದಾನದಿಂದ ದೂರವೇ ಉಳಿದಿದ್ದಾರೆ. ಅಂತಹ ಮತದಾರರನ್ನು ಸೆಳೆದರೆ, ತನ್ನ ಮತ ಪ್ರಮಾಣ ಹೆಚ್ಚಿಸಿಕೊಳ್ಳಬಹುದು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ.

ಗುಜರಾತ್‌ನ ಗ್ರಾಮೀಣ ಪ್ರದೇಶದಲ್ಲೇ ಹೀಗೆ ಮತದಾನದಿಂದ ದೂರ ಉಳಿದ ಮತದಾರರ ಪ್ರಮಾಣ ಹೆಚ್ಚು. ಅವರನ್ನು ಸೆಳೆಯಲು ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮನೆ–ಮನೆಗೆ ತೆರಳಿ ಮತಕೇಳುತ್ತಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಎಎಪಿ ಸಹ ಇದನ್ನೇ ಅನುಸರಿಸುತ್ತಿದೆ. ಹೀಗೆ ಒಟ್ಟು ಮತಪ್ರಮಾಣವನ್ನು ಹೆಚ್ಚಿಸುವ ಮೂಲಕ, ತಮ್ಮ ಮತಪ್ರಮಾಣವನ್ನೂ ಹೆಚ್ಚಿಸಿಕೊಳ್ಳಲು ಈ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ. ಕೆಲವು ಕ್ಷೇತ್ರಗಳಲ್ಲಿ ಈ ಕಾರ್ಯತಂತ್ರವು ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೂ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT