ಮಂಗಳೂರು ರಿಫೈನರೀಸ್ ಆ್ಯಂಡ್ ಪೆಟ್ರೋಕೆಮಿಕಲ್ಸ್ ಕಂಪನಿ (ಎಂಆರ್ಪಿಎಲ್) ಆರಂಭಿಸುವ ವೇಳೆ ತುಂಡು ಭೂಮಿ ನೀಡಿದ್ದ ಮಂಗಳೂರು ತಾಲ್ಲೂಕಿನ ಬಾಳ ಗ್ರಾಮದ ಕಳವಾರಿನ ಕೃಷಿ ಕುಟುಂಬವೊಂದು ಬಳಿಕ ತನ್ನೆಲ್ಲ ಜಮೀನನ್ನು ಆ ಕಂಪನಿಗಾಗಿ ಕಳೆದುಕೊಂಡಿದೆ. ಈ ಕುಟುಂಬದ ಗ್ರೆಗರಿ ಪತ್ರಾವೊ ದೈತ್ಯ ಕಂಪನಿ ವಿರುದ್ಧ ಎರಡು ದಶಕ ಹೋರಾಡಿದರೂ ಫಲವತ್ತಾದ ಕೃಷಿ ಭೂಮಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಭೂಮಿ ಕಳೆದುಕೊಂಡರೂ ಗ್ರೆಗರಿಛಲ ಬಿಡದೆ ಕಂಪನಿ ವಿರುದ್ಧ ದಾವೆ ಹೂಡಿ, ಕಾನೂನು ಹೋರಾಟವನ್ನುಸುಪ್ರೀಂ ಕೋರ್ಟ್ವರೆಗೂ ಒಯ್ದು, ಕಳೆದುಕೊಂಡ ಭೂಮಿಗೆ ನ್ಯಾಯಯುತ ಪರಿಹಾರ ಸಿಗಲೇಬೇಕು ಎಂಬ ತೀರ್ಪು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 14.27 ಎಕರೆ ಕೃಷಿ ಭೂಮಿ ಹೊರತಾಗಿ ಇನ್ನಾವುದೇ ಆಸ್ತಿ ಹೊಂದಿಲ್ಲದ ಗ್ರೆಗರಿ ಎಂಆರ್ಪಿಎಲ್ನಂತಹ ಕಂಪನಿಯನ್ನು ಎದುರು ಹಾಕಿಕೊಂಡು ಒಬ್ಬಂಟಿಯಾಗಿ ಹೋರಾಟ ನಡೆಸಿ ನ್ಯಾಯ ಪಡೆದಿದ್ದೇ ಒಂದು ಅಚ್ಚರಿ!
ಪೆಟ್ರೋಲಿಯಂ ಕಚ್ಚಾತೈಲದ ಸಂಸ್ಕರಣೆಯ ಕಾರ್ಖಾನೆಗಾಗಿ 52 ಸೆಂಟ್ಸ್ ಜಾಗ ಬಿಟ್ಟುಕೊಡುವಂತೆ ಗ್ರೆಗರಿ ತಂದೆ ಥಾಮಸ್ ಪತ್ರಾವೊ ಅವರನ್ನು ಕೆಐಎಡಿಬಿ ಕೋರಿತ್ತು. ಥಾಮಸ್ 1984ರಲ್ಲಿ ಜಾಗ ಬಿಟ್ಟುಕೊಟ್ಟರು. ಪತ್ರಾವೊ ಕುಟುಂಬಕ್ಕೆ ಭರವಸೆ ನೀಡಿದಷ್ಟು ಪರಿಹಾರ ಸಿಗಲಿಲ್ಲ.
1988ರಲ್ಲಿ ಎಂಆರ್ಪಿಎಲ್ ಕಂಪನಿ ಆರಂಭವಾಯಿತು. 1996ರಲ್ಲಿ ಕಂಪನಿ ವಿಸ್ತರಣೆಗಾಗಿ ಮತ್ತಷ್ಟು ಜಾಗಕ್ಕೆ ಬೇಡಿಕೆ ಸಲ್ಲಿಸಿತು. ಗ್ರೆಗರಿ ಕುಟುಂಬ ಇದಕ್ಕೊಪ್ಪಲಿಲ್ಲ.
ಕಂಪನಿಯು ಮೂರನೇ ಹಂತದ ವಿಸ್ತರಣೆಗೆ ಮತ್ತಷ್ಟು ಭೂಮಿ ಬೇಕು ಎಂದು 2006ರಲ್ಲಿ ಬೇಡಿಕೆ ಇಟ್ಟಿತು. ಆಗ ಗ್ರೆಗರಿ ಕಾನೂನು ಹೋರಾಟ ಆರಂಭಿಸಿದರು. 2010ರ ಏಪ್ರಿಲ್ನಲ್ಲಿ ಹೈಕೋರ್ಟ್ನಲ್ಲಿ ಗ್ರೆಗರಿ ವಿರುದ್ಧ ತೀರ್ಪು ಬಂದಿತು. ಅದೇ ತಿಂಗಳು ಜಿಲ್ಲಾಡಳಿತ ಗ್ರೆಗರಿ ಮನೆ ಕೆಡವಿತು. ಅವರುಜಗ್ಗಲಿಲ್ಲ. ಮನೆ ಇದ್ದ ಜಾಗದಲ್ಲೇ ಡೇರೆ ಹಾಕಿ ಅಲ್ಲೇ ವಾಸಿಸಲಾರಂಭಿಸಿದರು.
ಗ್ರೆಗರಿ ಮನೆ ಕೆಡವಿದ್ದಕ್ಕೆ ವ್ಯಕ್ತವಾದ ಜನಾಕ್ರೋಶ ಹಾಗೂ ಹೋರಾಟಕ್ಕೆ ಸಿಕ್ಕ ಜನಬೆಂಬಲ ಕಂಡು ಸರ್ಕಾರ ಕಂಗಾಲಾಯಿತು.ಈ ನಡುವೆ 14 ಎಕರೆ 27 ಸೆಂಟ್ಸ್ ಸ್ವಾಧೀನ ಸಂಬಂಧ ಎಂಆರ್ಪಿಎಲ್ 2015ರಲ್ಲಿ ಹೈಕೋರ್ಟ್ನಲ್ಲಿ ಗ್ರೆಗರಿ ವಿರುದ್ಧ ಮೊಕದ್ದಮೆ ದಾಖಲಿಸಿತು. ಭೂ ಪರಿಹಾರಕ್ಕೆ ಸಂಬಂಧಿಸಿದ ವ್ಯಾಜ್ಯವನ್ನು ಜಿಲ್ಲಾ ನ್ಯಾಯಾಲಯದಲ್ಲೇ ಇತ್ಯರ್ಥಗೊಳಿಸುವಂತೆ ಹೈಕೋರ್ಟ್ ಸೂಚಿಸಿತು. 2020ರಲ್ಲಿ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಗ್ರೆಗರಿ ಪರ ಆದೇಶ ಪ್ರಕಟಿಸಿತು.
‘ಈ ಪ್ರಕರಣದಲ್ಲಿ ಕಂಪನಿ ಪ್ರತಿವಾದಿಯಲ್ಲ. ಭೂಸ್ವಾಧೀನ ಮಾಡಿಕೊಂಡ ಕೆಐಎಡಿಬಿ ಪ್ರತಿವಾದಿ. ಹಾಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ಎಂಆರ್ಪಿಎಲ್ ತಗಾದೆ ತೆಗೆದು, ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಹಾಕಿತು. ಹೈಕೋರ್ಟ್ ಎಂಆರ್ಪಿಎಲ್ ಪರವಾಗಿ ತೀರ್ಪು ನೀಡಿತು. ಗ್ರೆಗರಿ ಜಾಗ ಬಿಟ್ಟುಕೊಡಲು ಒಪ್ಪಿಕೊಂಡರು. ಪರಿಹಾರದ ಮೊತ್ತ ನಿಗದಿ ಸರಿಯಾಗಿ ಆಗಿಲ್ಲ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.
‘ಸುಪ್ರೀಂ ಕೋರ್ಟ್ನಲ್ಲಿ ನನ್ನ ಪರವಾಗಿ ತೀರ್ಪು ಬಂದಿದೆ. ಕಳೆದುಕೊಂಡ ಜಾಗಕ್ಕೆ ಸುಮಾರು ₹ 5 ಕೋಟಿಗಳಷ್ಟು ಪರಿಹಾರ ಸಿಗಬಹುದು. ಪರಿಹಾರದ ಮೊತ್ತ ಇನ್ನೂ ಕೈ ಸೇರಿಲ್ಲ. ಜಾಗ ಕಳೆದುಕೊಂಡ ನೋವಿದೆ. ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಕ್ಕ ಖುಷಿ ಇದೆ’ ಎನ್ನುತ್ತಾರೆ ಗ್ರೆಗರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.