ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್‍ಝೈಮರ್ಸ್: ಮರೆವಿನ ಕಾಯಿಲೆಯಷ್ಟೆ ಅಲ್ಲ

Published 25 ಸೆಪ್ಟೆಂಬರ್ 2023, 23:31 IST
Last Updated 25 ಸೆಪ್ಟೆಂಬರ್ 2023, 23:31 IST
ಅಕ್ಷರ ಗಾತ್ರ

ಮುಪ್ಪಿನ ಅರಳು ಮರಳು ಮನುಷ್ಯನಲ್ಲಿ ಕಾಣುವ ವಯೋಸಹಜ ಬದಲಾವಣೆ. ಆದರೆ, ವಯೋಸಹಜ ಕುಂದಿಗಿಂತ ವೇಗವಾಗಿ ಹಾಗೂ ವ್ಯಾಪಕವಾಗಿ ನೆನಪಿನ ಶಕ್ತಿಯು ಕೆಲವೊಮ್ಮೆ ಕಡಿಮೆಯಾಗುತ್ತದೆ. ಇದನ್ನೇ ‘ಡೆಮೆನ್ಶಿ’ಯ ಅಥವಾ ‘ಮುಪ್ಪಿನ ಮರೆವಿನ ಕಾಯಿಲೆ’ ಎನ್ನುತ್ತೇವೆ.

ವಿಶ್ವದಲ್ಲಿ ಸುಮಾರು 5 ಕೋಟಿ ಜನ ಡೆಮೆನ್ಶಿಯದಿಂದ ಬಳಲುತ್ತಿದ್ದಾರೆ. ಪ್ರತಿ 3 ಸೆಕೆಂಡಿಗೆ ಒಬ್ಬರು, ಡೆಮೆನ್ಶಿಯಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ ಸುಮಾರು 45-50 ಲಕ್ಷ! ನಮ್ಮಲ್ಲಿ ಈ ಕಾಯಿಲೆಯ ಬಗ್ಗೆ ಅರಿವು ಅಷ್ಟೊಂದಿಲ್ಲದ ಕಾರಣ, ಅನೇಕರು ವೈದ್ಯಕೀಯ ಸಂಪರ್ಕಕ್ಕೆ ಬರುವುದಿಲ್ಲ. ಹೀಗಾಗಿ ಬಳಲುತ್ತಿರುವವರ ಸಂಖ್ಯೆ ವಾಸ್ತವದಲ್ಲಿ ಇನ್ನೂ ಹೆಚ್ಚಿರಬಹುದು.

ಡೆಮೆನ್ಶಿಯಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ‘ಅಲ್‍ಝೈಮರ್ಸ್ ಕಾಯಿಲೆ’. ಪ್ರತಿ ವರ್ಷ ಸೆಪ್ಟೆಂಬರ್ 21ರಂದು ‘ವಿಶ್ವ ಅಲ್‍ಝೈಮರ್ಸ್ ದಿನ’ ಎಂದು ಆಚರಿಸಲಾಗುತ್ತದೆ.

ಕಾರಣಗಳು:

ಇಳಿವಯಸ್ಸು, ಅನುವಂಶಿಯತೆ, ಜೆನೆಟಿಕ್ ಅಂಶಗಳು ಮುಖ್ಯ ಕಾರಣಗಳು. ಜೊತೆಗೆ ತೆಲೆಗೆ ಬಲವಾದ ಪೆಟ್ಟು, ದುಶ್ಚಟ, ಅನಾರೋಗ್ಯಕರ ಆರೋಗ್ಯಶೈಲಿ - ಈ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ನೆನಪುಗಳು ಮುಖ್ಯವಾಗಿ ಮಿದುಳಿನ ಹೊರ ಮೇಲ್ಮೈ (ಕಾರ್ಟೆಕ್ಸ್‌ನಲ್ಲಿ) ‘ಅಸಿಟೈಲ್ ಕೊಲಿನ್’ ಎಂಬ ರಾಸಾಯನಿಕದ ಸಹಾಯದಿಂದ ಸಂಗ್ರಹಗೊಳ್ಳುತ್ತವೆ. ಅಲ್‍ಝೈಮರ್ಸ್ ಕಾಯಿಲೆಯಲ್ಲಿ ಅಮೈಲಾಯ್ಡ್ ಹಾಗೂ ಟಾವು ಎಂಬ ಪ್ರೊಟೀನ್‌ಗಳು ಮಿದುಳಿನ ನರಕೋಶಗಳಲ್ಲಿ ಹಾಗೂ ಸುತ್ತಮುತ್ತ ಸಂಗ್ರಹಗೊಳ್ಳುತ್ತವೆ. ಇದರಿಂದ ನರಕೋಶಗಳು ಹಾಳಾಗಿ ಮಿದುಳಿನ ಗಾತ್ರ ಸಂಕುಚಿತಗೊಳ್ಳುತ್ತದೆ. ‘ಅಸಿಟೈಲ್ ಕೊಲೀನ್’ ಎಂಬ ನರವಾಹಕದ ಪ್ರಮಾಣವು ಕಡಿಮೆಯಾಗಿ, ನೆನಪಿನ ಶಕ್ತಿ ಕುಂದಲಾರಂಭಿಸುತ್ತದೆ.

ಲಕ್ಷಣಗಳು:

ಮೊದಲಿನ ಹಂತದಲ್ಲಿ ಮರೆವು ಶುರುವಾಗುತ್ತದೆ. ಇತ್ತೀಚಿನ ಚಟುವಟಿಕೆಗಳು, ಘಟನೆಗಳು ನೆನಪಿಗೆ ಬರುವುದಿಲ್ಲ. ಉದಾಹರಣೆಗೆ, ಬೆಳಗಿನ ಉಪಾಹಾರ ಸೇವಿಸಿದ್ದರೂ, ಪದೇ ಪದೇ ಬಂದು ಉಪಾಹಾರ ಕೇಳುವುದು. ದಿನನಿತ್ಯದ ವಸ್ತುಗಳನ್ನು ಇಟ್ಟ ಜಾಗವನ್ನು ಮರೆಯುವುದು, ಹುಡುಕಾಡುವುದು. ವಸ್ತುಗಳ ಹೆಸರೂ ಮರೆತುಹೋಗಬಹುದು. ಹೊರಗೆ ಹೋದರೆ ಮರಳಿ ಮನೆಗೆ ಬರಲು ದಾರಿ ಗೊತ್ತಾಗದೇ ಇರಬಹುದು. ಸಂಕೀರ್ಣ ಚಟುವಟಿಕೆಗಳನ್ನು ನಿಭಾಯಿಸಲು ಆಗುವುದಿಲ್ಲ.

ಈ ಹಂತದಲ್ಲಿ, ಚಿಕ್ಕ ಪುಟ್ಟ ವಿಷಯಗಳು ನೆನಪಿಗೆ ಬರದಿದ್ದಾಗ, ವಸ್ತಗುಗಳು ಸಿಗದಿದ್ದಾಗ ಹತಾಶೆ, ಸಿಟ್ಟು ಬರುತ್ತದೆ. ಹೀಗೆ ಮುಂದುವರಿದರೆ, ಆತಂಕ, ಖಿನ್ನತೆಗಳು ಶುರುವಾಗುತ್ತವೆ.

ಮಧ್ಯದ ಹಂತದಲ್ಲಿ, ಮರೆವು ಇನ್ನಷ್ಟು ಹೆಚ್ಚು ಜೀವನದ ವಿವಿಧ ಆಯಾಮಗಳನ್ನು ಆವರಿಸಿಕೊಳ್ಳುತ್ತದೆ. ಲೆಕ್ಕ, ವಸ್ತುಗಳ ಉಪಯೋಗ, ಮನೆಯಲ್ಲಿ ಕೋಣೆಯ ದಾರಿ - ಇವೆಲ್ಲ ಮರೆತುಹೋಗಬಹುದು. ಹತ್ತಿರದ ಸಂಬಂಧಿಗಳು, ಬಂಧುಮಿತ್ರರ ಹೆಸರುಗಳನ್ನು ಸ್ಮರಿಸಿಕೊಳ್ಳಲು ಆಗದಿರಬಹುದು. ದಿಕ್ಕು ತಪ್ಪಿ ಅಲೆದಾಡುವುದು, ಪದೇ ಪದೇ ಕೇಳಿದ್ದನ್ನೇ ಕೇಳುವುದು ಸಾಮಾನ್ಯವಾಗುತ್ತದೆ. ಮಾತು ಕಡಿಮೆಯಾಗಬಹುದು. ಭ್ರಾಂತಿ, ನಿದ್ರಾಹೀನತೆ, ಅಸಹಜವಾದ ಸಿಟ್ಟು, ಗೊಂದಲ ಉಂಟಾಗುತ್ತವೆ.

ಕೊನೆಯ ಹಂತದಲ್ಲಿ ವ್ಯಕ್ತಿಯು ಸಂಪೂರ್ಣವಾಗಿ ಇತರರ ಮೇಲೆ ಅವಲಂಬಿತರಾಗುತ್ತಾರೆ. ಆಹಾರವನ್ನು ಜಗಿಯುವುದು, ದ್ರವ ಪಧಾರ್ಥಗಳನ್ನು ನುಂಗುವುದನ್ನು ಹೇಳಬೇಕಾಗುತ್ತದೆ. ಮಲ-ಮೂತ್ರೆ ವಿಸರ್ಜನೆಯ ಮೇಲಿನ ನಿಯಂತ್ರಣ ಇರುವುದಿಲ್ಲ. ದಿನ-ರಾತ್ರಿಯ ಪ್ರಜ್ಞೆ ಇರುವುದಿಲ್ಲ. ಹಗಲು ಮಲಗುತ್ತಾರೆ, ರಾತ್ರಿ ಎಚ್ಚರವಿರುತ್ತಾರೆ. ಭ್ರಮಾವಸ್ಥೆ ಹೆಚ್ಚುತ್ತದೆ.

ಚಿಕಿತ್ಸೆ:

ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲಾಗುವುದಿಲ್ಲ. ಆದರೆ, ಕೆಲವು ಔಷಧಿಗಳು, ಥೆರಪಿ ಹಾಗೂ ಉತ್ತಮ ಆರೈಕೆಯಿಂದ ರೋಗ ಉಲ್ಬಣಗೊಳ್ಳುವ ಗತಿಯನ್ನು ನಿಧಾನಗೊಳಿಸಬಹುದು.

ಔಷಧಿಗಳ ಜೊತೆಗೆ, ರೆಮಿನಿಸೆನ್ಸ್ ಥೆರಪಿ (ಹಳೆಯ ಘಟನೆಗಳನ್ನು, ನೆನಪುಗಳನ್ನು ಸ್ಮರಿಸಲು ಕಥೆ–ಚಿತ್ರದ ಸಹಾಯದಿಂದ ಕೈಗೊಳ್ಳುವ ಚಿಕಿತ್ಸೆ), ಬೌದ್ಧಿಕ ಪುನರ್ವಸತಿಗಳಿಂದ ವ್ಯಕ್ತಿಯ ರೋಗಲಕ್ಷಣಗಳು ಒಂದು ಮಟ್ಟಿಗೆ ಹತೋಟಿಯಲ್ಲಿರುತ್ತವೆ. ಜೊತೆಗೆ, ಖಿನ್ನತೆ, ಆತಂಕ, ಭ್ರಮೆ, ನಿದ್ರಾಹೀನತೆಗೆ ಚಿಕಿತ್ಸೆ ನೀಡುವುದರಿಂದ ರೋಗಿವ ಜೀವನದ ಗುಣಮಟ್ಟವೂ ಸುಧಾರಿಸುತ್ತದೆ.

ಆರೈಕೆ:

ಈ ಕಾಯಿಲೆಯಿಂದ ಬಳಲುತ್ತಿರುವವರು ಪ್ರತಿಯೊಂದು ಚಟುವಟಿಕೆಗೂ ಇತರರನ್ನು ಅವಲಂಬಿಸಿರುತ್ತಾರೆ. ಅವಲಂಬನೆ ಹೆಚ್ಚಾಗಿ ವ್ಯಕ್ತಿಗೆ ಮುಜುಗರವಾಗುತ್ತದೆ. ಇದು ಮುಂದುವರಿದು ಹತಾಶೆ, ಖಿನ್ನತೆಗಳು ಎದುರಾಗುತ್ತವೆ; ತಾವು ಇತರರಿಗೆ ಭಾರ ಎಂಬ ಭಾವನೆ ಉಂಟಾಗುತ್ತದೆ. ಹೀಗಾಗಿ ಶಾಂತ ಹಾಗೂ ವಿಶ್ವಾಸಭರಿತ ಆರೈಕೆಯ ಅವಶ್ಯಕತೆಯಿರುತ್ತದೆ.

ಸಲಹೆಗಳು:

• ದಿನಚರಿಯನ್ನು ನಿಗದಿಪಡಿಸಿ. ಊಟ, ವ್ಯಾಯಾಮ, ಓದು ಇತ್ಯಾದಿ ಚಟುವಟಿಕೆಗಳಿಗೆ ಸಮಯವನ್ನು ನಿಗದಿಗೊಳಿಸಿ.
• ರೋಗಿಯ ಮರೆವನ್ನು ಅವಮಾನಿಸದಿರಿ. ಅವರ ಅಸಹಾಯಕತೆಗೆ ಕೋಪಗೊಳ್ಳಬೇಡಿ.
• ಅವರು ನೆನಪಿಸಿಕೊಳ್ಳಲು ಕಷ್ಟಪಡುತ್ತಿರುವಾಗ, ನೆನಪಿಸಿಕೊಳ್ಳುವಂತೆ ಸವಾಲು ಹಾಕಬೇಡಿ. ಬದಲಾಗಿ, ಅವರು ಕೇಳುವ ಮುನ್ನವೇ ಅವರಿಗೆ ಸಹಾಯ ಮಾಡಿ.
• ಮನೆಯ ವಾತವಾರಣ ಶಾಂತವಾಗಿರಲಿ. ಅನಾವಶ್ಯಕ ಶಬ್ದ, ಗದ್ದಲ ಬೇಡ.
• ಅವರಿಗೆ ಕೇಳುವ ಪ್ರಶ್ನೆಗಳು ಸರಳವಾಗಿರಲಿ. ‘ಏನು ಕುಡಿಯುತ್ತೀರಿ?’ ಎನ್ನುವ ಬದಲು ‘ಕಾಫಿ ಇಲ್ಲವೇ ಟೀ ಕುಡಿಯುವಿರಾ?’ ಎಂದು ಪ್ರಶ್ನಿಸಿ.
• ಮನೆಯಲ್ಲಿ ಕೊಣೆಗಳು, ದಿನಬಳಕೆಯ ವಸ್ತುಗಳ ಸ್ಥಳಗಳು ಮುಂತಾದವನ್ನು ಹೆಸರಿನಿಂದ ಗುರುತಿಸಿ.
• ಅವರನ್ನು ಒಬ್ಬರನ್ನೇ ಹೊರಹೋಗಲು ಬಿಡಬೇಡಿ. ಮನೆಯ ಬಾಗಿಲುಗಳು ಭದ್ರವಾಗಿರಲಿ. ಅಕ್ಕಪಕ್ಕದವರಿಗೆ, ಆ ವ್ಯಕ್ತಿಯ ಪರಿಸ್ಥಿತಿಯ ಬಗ್ಗೆ ತಿಳಿಸಿ.
• ದೈಹಿಕ ಸ್ವಚ್ಛತೆ ಹಾಗೂ ಆಹಾರದ ಬಗ್ಗೆ ವಿಶೇಷ ಕಾಳಜಿಯಿರಲಿ.
• ಸುಲಭವಾಗಿ ಧರಿಸುವಂತಹ ಹಾಗೂ ಕಳಚುವಂತಹ ಬಟ್ಟೆಗಳನ್ನು ಹಾಕಿಸಿ.
• ಅವರ ಬಳಿ ಅವರ ಹೆಸರು, ವಿಳಾಸ, ತುರ್ತು ದೂರವಾಣಿ ಸಂಖ್ಯೆಗಳಿರುವ ಗುರುತಿನ ಚೀಟಿಯನ್ನು ಅವರ ಬ್ರೇಸ್ ಲೆಟ್‍ನಲ್ಲೋ, ಜೇಬಿನಲ್ಲೋ ಸದಾ ಇಟ್ಟಿರಿ.

ಇನ್ನು ಕೆಲವು ದಶಕಗಳಲ್ಲಿ ನಮ್ಮ ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗಲಿದೆ. ಆಗ ಸಹಜವಾಗಿಯೇ ಡೆಮೆನ್ಶಿಯದಿಂದ ಬಳಲುವವರ ಸಂಖ್ಯೆ ವೃದ್ಧಿಸಲಿದೆ. ಹೀಗಾಗಿ, ಈ ಕಾಯಿಲೆಯ ಬಗ್ಗೆ ಜಾಗೃತಿಯಷ್ಟೇ ಅಲ್ಲ, ಇದನ್ನು ನಿಭಾಯಿಸುವುದಕ್ಕೆ ಅಗತ್ಯವಿರುವ ಕೌಶಲ ಹಾಗೂ ಸಂಪನ್ಮೂಲಗಳ ಬಗೆಗಿನ ತಯಾರಿ ಈಗಿನಿಂದಲೇ ಆರಂಭವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT