ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಲೇಖನ: ಚಳಿಗಾಲದ ಗಂಟಲುನೋವು

Last Updated 26 ಡಿಸೆಂಬರ್ 2022, 23:45 IST
ಅಕ್ಷರ ಗಾತ್ರ

ಶೀತಗಾಳಿ, ಮೋಡಕವಿದ ವಾತಾವರಣ, ಮಳೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗಂಟಲುನೋವು, ಸುಲಭವಾದ ಆರೈಕೆಗಳಿಂದ ವಾಸಿಯಾಗುವುದು. ಗಂಟಲುನೋವಿನ ಜೊತೆಗೆ, ಸತತವಾಗಿ 101ಡಿಗ್ರಿ.ಸೆ. ತೀವ್ರ ತಾಪ, ವಾರ ಕಳೆದರೂ ನೋವು ಇಳಿಯದೆ, ಸ್ವರವು ಹೊರಡದೆ, ಮಾತನಾಡಲು ಕಷ್ಟವೆನಿಸುವುದು, ಬಾಯಿ ತೆರೆಯಲು ಕಷ್ಟವಾಗುವುದು, ಉಸಿರಾಟದ ಸಮಸ್ಯೆ, ಒಣಕೆಮ್ಮು, ನಾಲಿಗೆ-ಗಂಟಲು-ಬಾಯಿ ಒಣಗುವುದು, ಗಂಟಲು-ಕಣ್ಣುಉರಿಯುವುದು, ತುಟಿ-ಗಂಟಲು-ಕಿರುನಾಲಿಗೆ-ಬಾಯಿಯ ಮೇಲ್ಛಾಗ ಕೆಂಪಾಗಬಹುದು.

ಕೆನ್ನೆ-ಮುಖದ ಬಾವು, ತಲೆಭಾರ-ನೋವು, ಕುತ್ತಿಗೆ- ಗಂಟಲು ಪ್ರದೇಶದಲ್ಲಿ ಗಂಟುಗಳು, ಮೈನೋವು, ಕಿವಿನೋವು, ನೆಗಡಿ, ಸೀನುವುದು, ಎಂಜಲು ನುಂಗಲು ಕಷ್ಟವೆನಿಸುವುದು, ಜೊಲ್ಲುಸುರಿಯುವುದು, ಕುಡಿಯಲು-ತಿನ್ನಲು ಅಸಾಧ್ಯವೆನಿಸು
ವಷ್ಟು ತೀವ್ರವಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇವೆಲ್ಲವೂ ವೈದ್ಯರ ಸಹಾಯದಿಂದ ವಾಸಿಯಾಗ
ಬಹುದು. ಕೆಲವು ತೀವ್ರತರವಾದ ಸ್ಥಿತಿಯುಪ್ರಾಣಘಾತಕ. ಗಂಟಲು ನೋವಿಗೆ ಕಾರಣ ಹಾಗೂ ಪರಿಹಾರಗಳ ಬಗ್ಗೆ ತಿಳಿಯೋಣ.

l ಸೈಕ್ಲೋನ್ ಪರಿಣಾಮ ಶೀತಗಾಳಿ, ವಾಯುಭಾರಕುಸಿತ, ಮಳೆ- ಮೋಡದ ವಾತಾವರಣ, ಆರ್ದ್ರತೆಯನ್ನು ಅನುಭವಿಸುತ್ತಿದ್ದೇವೆ. ಇಂತಹ ಪರಿಸರದಲ್ಲಿ ಮುಖವನ್ನು ಎದುರಿಗೆ ಒಡ್ಡಿ ಪ್ರಯಾಣಿಸುವುದು, ತೆರೆದ ಪ್ರದೇಶದಲ್ಲಿ ಮಲಗುವುದು, ಮಳೆಯಲ್ಲಿ ನೆನೆಯುವುದು - ಇವುಗಳಿಂದ ಗಂಟಲುನೋವಿಗೆ ಒಳಗಾಗುವವರು ಹೆಚ್ಚು. ಕಿವಿ, ಮೂಗು, ಬಾಯಿ, ತಲೆಯು ಮುಚ್ಚುವಂತೆ ಬೆಚ್ಚಗೆ ಮಾಸ್ಕ್- ಸ್ಕಾರ್ಫ್- ಟೋಪಿ ಧರಿಸುವುದು ಉತ್ತಮ ಅಭ್ಯಾಸ. ಬೆಚ್ಚಗಿನ ಬಟ್ಟೆ, ದಪ್ಪವಾದ ಹಾಸಿಗೆ-ಹೊದಿಕೆಗಳ ಉಪಯೋಗವು ಸೂಕ್ತ. ಕಿಟಕಿ-ಬಾಗಿಲನ್ನು ಮುಚ್ಚಿದನಿರ್ವಾತಕೋಣೆಯಲ್ಲಿ ವಾಸಿಸುವುದು,ಮಲಗುವುದು ಕ್ಷೇಮ.

l ಮನೆಯೊಳಗೆ, ಕಚೇರಿಯಲ್ಲಿ ಅರಿಶಿನ, ಸಾಂಬ್ರಾಣಿ, ತುಪ್ಪಗಳ ‘ಧೂಪನ’ದಿಂದ ಆರ್ದ್ರತೆಯನ್ನು, ಉಷ್ಣತೆಯನ್ನು ಕಾಪಾಡಬಹುದು. ಧೂಪನದಿಂದ ಸೂಕ್ಷ್ಮಾಣು ಜೀವಿಗಳಿಂದ ರಕ್ಷಣೆ ಪಡೆಯಬಹುದು.

l ಅರಿಶಿನದ ಒಣಗಿದ ಕೊಂಬನ್ನು ತುಪ್ಪದಲ್ಲಿ ಅದ್ದಿಕೊಂಡು ಬೆಂಕಿಗೆ ಹಿಡಿದು, ಉರಿಯಲು ತೊಡಗಿದಾಗ ಆರಿಸಿ ಅದರಿಂದ ಹೊಮ್ಮುವ ಧೂಮವನ್ನು ಉಸಿರಾಟದೊಂದಿಗೆ ಸೇದುವುದು- ಗಂಟಲಿನ ಬಾವು, ಬಿಗಿತದಿಂದ ಉಂಟಾಗುವ ನೋವನ್ನು ಉಪಶಮನಗೊಳಿಸುತ್ತದೆ. ಕಣ್ಣು ಕೆಂಪಾಗಿದ್ದಾಗ, ಗಂಟಲಿನ ಉರಿ, ಕಣ್ಣುರಿ, ಬಾಯಿಹುಣ್ಣು ಇಂತಹ ಪಿತ್ತದ ಲಕ್ಷಣಗಳಿದ್ದಾಗ ಈ ಧೂಮವನ್ನು ಸೇವಿಸಬಾರದು. ಸಮಸ್ಯೆಯು ಉಲ್ಪಣಿಸುತ್ತದೆ.

l ನಿತ್ಯವೂ ಮುಂಜಾನೆ ಹಲ್ಲುಜ್ಜುವಾಗ ಕಹಿ-ಒಗರುರುಚಿಯ ದಂತಮಂಜನಗಳನ್ನು ಉಪಯೋಗಿ
ಸುವುದು ಉತ್ತಮ ದಿನಚರಿ. ಗಂಟಲಲ್ಲಿ ಕಫವು ಕಟ್ಟಿಕೊಂಡು ಉಂಟಾಗುವ ಬಾವು-ನೋವು- ಬಿಗಿತಗಳನ್ನು ನಿವಾರಿಸುತ್ತದೆ. ಗಂಟಲುನೋವಿದ್ದಾಗಲೂ ಇಂತಹ ಹಲ್ಲುಪುಡಿಯಿಂದ ಹಲ್ಲುಜ್ಜುವುದರಿಂದ ಬೇಗನೇ ಶಮನವನ್ನು ಕಾಣಬಹುದು.

l ಬಾಯಿಯನ್ನೂ ತೆರೆಯಲಾಗದಷ್ಟು ಗಂಟಲುನೋವಿದ್ದಾಗ ಹಲ್ಲುಜ್ಜುವ ಬದಲು, ಜೇನುತುಪ್ಪವನ್ನು ಬೆರಳಿನಿಂದ ಹಲ್ಲಿಗೆ ತಿಕ್ಕಿ, ಚೊಕ್ಕಗೊಳಿಸುವುದು ಸುಖಕರ.

l ಶೀತ-ಮಳೆಯ ವಾತಾವರಣದಲ್ಲಿ ಬಿಸಿನೀರಿನಿಂದ ಬಾಯಿಮುಕ್ಕಳಿಸುವುದು ಗಂಟಲುನೋವು ನಿವಾರಕ. ಗಟ್ಟಿಕಫವು ಶೇಖರಣೆಯಾಗಿದ್ದರೆ ಚಿಟಿಕೆ ಸೈಂಧವಲವಣ/ ಪಿಂಕ್-ಸಾಲ್ಟ್/ ಕಲ್ಲುಪ್ಪು ಸೇರಿಸಬಹುದು. ಉರಿಯೂತ, ಗಂಟಲು ಕೆಂಪಾಗಿದ್ದಾಗ ಇದನ್ನು ಮಾಡುವುದು ಸರಿಯಲ್ಲ.

l ಸ್ನಾನದ ಮೊದಲು, ಕಿವಿಗೆ-ಮೂಗಿಗೆ-ತಲೆಗೆ-ಪೂರ್ಣಶರೀರಕ್ಕೆ ಬೆಚ್ಚಗಿನ ಎಳ್ಳೆಣ್ಣೆಯನ್ನು ಹಚ್ಚುವುದು, ಹನಿಗಳನ್ನು ಬಿಡುವುದು ಉಪಯುಕ್ತ. ಮನೆಯಾಚೆ ಹೋಗುವಾಗ ಕಿವಿಗೆ-ಮೂಗಿಗೆ ಬೆಚ್ಚಗಿನ ಎಣ್ಣೆಯನ್ನು ಸವರಿಕೊಳ್ಳುವುದು. ಈ ಅಭ್ಯಾಸವು ವಾತಾವರಣದ ವ್ಯತ್ಯಾಸದಿಂದ ದೇಹದ ಮೇಲಾಗುವ ಪರಿಣಾಮವನ್ನು ತಡೆಯುತ್ತದೆ. ಚರ್ಮ-ಶರೀರದ ಉಷ್ಣತೆಯನ್ನು, ಆರ್ದ್ರತೆಯನ್ನು ಕಾಪಾಡುತ್ತದೆ. ಗಂಟಲುನೋವು, ನೆಗಡಿ, ಸೀನುವುದು,ಮೂಗುಕಟ್ಟುವುದು,ಉಸಿರಾಡಲು ಕಷ್ಟ, ಕಿವಿನೋವು ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ.

l ಗಂಟಲುಬಾವು-ನೋವಿದ್ದಾಗ ತಲೆಸ್ನಾನವನ್ನು ಮಾಡದೆ ಇರುವುದು ಉತ್ತಮ.

l ಶೀತ-ಆರ್ದ್ರಕಾಲದಲ್ಲಿ ಹೆಚ್ಚು ಹೆಚ್ಚು ದ್ರವಾಹಾರ ಸೇವನೆ, ಮೊಸರು- ಮಜ್ಜಿಗೆ- ಹಾಲಿನ ತಣ್ಣಗಿನ ಉತ್ಪನ್ನಗಳನ್ನು ಸೇವಿಸುವುದರಿಂದ ಜೀರ್ಣಶಕ್ತಿಯು ಮತ್ತಷ್ಟು ಹಾಳಾಗುತ್ತದೆ. ಆದ್ದರಿಂದ ತಾಜಾ-ಬಿಸಿಯಾದ ಆಹಾರಸೇವನೆಯೊಂದಿಗೆ ಚೆನ್ನಾಗಿ ಕುದಿಸಿದ ಬಿಸಿನೀರು ಕುಡಿಯುವುದು ಹಿತಕರ. ಜೀರಿಗೆ/ ಶುಂಠಿ/ ಕೊತ್ತಂಬರಿಬೀಜ/ ಸೋಂಪು/ ಏಲಕ್ಕಿಯಂತಹ ಜೀರ್ಣಕಾರಿ ಆಹಾರೋಪಯೋಗಿ ಪದಾರ್ಥಗಳನ್ನು ನೀರಿಗೆ/ ಹಾಲಿಗೆ ಹಾಕಿ ಕುದಿಸಿ ಕುಡಿಯುವುದು ಉಪಕಾರಿ. ಗಂಟಲುನೋವಿದ್ದಾಗಲೂ ಇಂತಹ ಆಹಾರ-ಪಾನ ಸೂಕ್ತ.

l ಕಫವು ಬಿಗಿದು ಗಂಟಲುಬಾವು-ನೋವಿದ್ದಾಗ ಶುಂಠಿ-ಜೀರಿಗೆ ನೀರುಬಿಸಿಯಾದ ಆಹಾರದಲ್ಲಿ ಸೂಕ್ತ.

l ಗಂಟಲು ಕೆಂಪಾಗಿ, ಒಣಕೆಮ್ಮು, ಉರಿಯಿದ್ದಾಗ ಬಿಸಿ ಆಹಾರದಲ್ಲಿ ಬೆಣ್ಣೆ, ಹಾಲು-ಸಕ್ಕರೆ, ಬಿಸಿಪಾಯಸ, ಖೀರು ಸೇವನೆ ಹಿತಕರ.

l ರಾತ್ರಿಯ ಆಹಾರದಲ್ಲಿ ಮೊಸರನ್ನು ಸೇವಿಸುವುದು,ಮಜ್ಜಿಗೆ ಕುಡಿಯುವುದು, ಬಾಳೆಹಣ್ಣು, ಕಿತ್ತಳೆ ಮೊದಲಾದ ಕಫವನ್ನು ಹೆಚ್ಚಿಸುವ ಹಣ್ಣುಗಳ ಸೇವನೆಯಿಂದ ಗಂಟಲುನೋವು ಕಾಡಬಹುದು. ತಲೆಭಾರ, ಮುಖ-ಗಂಟಲು ಬಾವು ಮೊದಲಾದ ತೊಂದರೆಗಳೂ ಜೊತೆಗೂಡಬಹುದು. ಈ ಸಂದರ್ಭದಲ್ಲಿ ರಾತ್ರಿಯ ಆಹಾರವನ್ನು ಒಂದು ಹೊತ್ತು ಬಿಡುವುದರಿಂದ, ಉಪವಾಸದಿಂದ ಹಿತ ಕಾಣಬಹುದು.

l ರಾತ್ರಿಯ ಆಹಾರವು ತಡವಾದಷ್ಟೂ ಗಂಟಲಿನ ಸಮಸ್ಯೆಗಳು ಜಾಸ್ತಿ. ಗಂಟಲುನೋವಿದ್ದಾಗಲೂ ತಡವಾಗಿ ರಾತ್ರಿಯ ಆಹಾರವನ್ನು ಸೇವಿಸುವುದರಿಂದಸಮಸ್ಯೆಯು ಉಲ್ಬಣಿಸುತ್ತದೆ. ಇಂತಹವರು ಸಂಜೆ 6-7 ಗಂಟೆಯೊಳಗೆ ತಾಜಾ-ಬಿಸಿ-ಜೀರ್ಣಕಾರಿ ಆಹಾರ ಸೇವಿಸಿ, ನಂತರ ಮಲಗುವವರೆಗೆ ಏನನ್ನೂ ಸೇವಿಸದಿರುವುದು ಗುಣಕಾರಿ.

l ತಣ್ಣಗಿನ ಹಣ್ಣಿನ ರಸ, ತಣ್ಣೀರು, ತಣ್ಣಗಿನ ಆಹಾರ, ಐಸ್-ಕ್ರೀಂ, ಮಿಲ್ಕ್-ಶೇಕ್, ಕೇಕ್, ಪೇಸ್ಟರಿ- ಮೊದಲಾದ ಸೇವನೆಯಿಂದ ಗಂಟಲುನೋವು ಬರುವುದು ಸಾಮಾನ್ಯ. ಈ ಕಾರಣಗಳಿದ್ದಾಗ ಒಂದೆರಡು ಹೊತ್ತು ಆಹಾರವನ್ನು ಸೇವಿಸದೆ ಬಿಸಿನೀರು, ಶುಂಠಿ ಮತ್ತು ಬೆಲ್ಲ ಹಾಕಿ ಕುದಿಸಿದ ನೀರು, ಜೀರಿಗೆ ಮತ್ತು ಬೆಲ್ಲ ಹಾಕಿ ಕುದಿಸಿದ ನೀರು ಸೇವಿಸಿ ಗುಣಹೊಂದಬಹುದು.

l ಗಂಟಲುಬಾವು-ಕಫ ಬಿಗಿದು ನೋವು ಇದ್ದಾಗ ಬಿಸಿಯಾದ ಲೇಪನವು ಹಿತಕಾರಿ. ಶುಂಠಿಯನ್ನುಹಾಲಿನಲ್ಲಿ ತೇಯ್ದು/ ಪೇಸ್ಟ್ ಮಾಡಿ ಬಿಸಿಮಾಡಿ ಗಂಟಲಿನ ಹೊರಗೆ ಹಚ್ಚುವುದು ಶಮನವನ್ನು ತರುತ್ತದೆ. ಮೇಲೆ ತಿಳಿಸಿದ ಆರೈಕೆಗಳು ಒಂದೆರಡು ದಿನಗಳಲ್ಲಿಯೇ ಶಮನವನ್ನು ತರುವಂತಹವು. ಇಷ್ಟಾಗಿಯೂ ಕಡಿಮೆಯಾಗದಿದ್ದರೆ, ತೀವ್ರತೆರನಾದ ಲಕ್ಷಣಗಳು, ವಾರ ಕಳೆದರೂ ವಾಸಿಯಾಗದ
ಗಂಟಲುಬೇನೆಗೆ ವೈದ್ಯರ ಸಲಹೆ ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT