ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲ ಆರೋಗ್ಯದ ಸವಿಗಾಲ: ಶರೀರದ ಚೈತನ್ಯ ತಡೆಯಲು ಮಾಡಬೇಕಾದ್ದು ಏನು?

Last Updated 15 ನವೆಂಬರ್ 2021, 22:30 IST
ಅಕ್ಷರ ಗಾತ್ರ

ಚಳಿಗಾಲ ಎಂದರೆ ಆರೋಗ್ಯಸಂಪದದ ಬುತ್ತಿಯನ್ನು ಕಟ್ಟಿಕೊಳ್ಳುವ ಕಾಲ. ನವಚೈತನ್ಯವನ್ನು ಗಳಿಸಿಕೊಳ್ಳುವ ಕಾಲ, ಮುಂಬರುವ ಬೇಸಿಗೆಯಲ್ಲಿ ಉಂಟಾಗುವ ರೋಗರುಜಿನಗಳಿಂದ ಬಲಗುಂದುವ ಶರೀರದ ಚೈತನ್ಯವನ್ನೂ ತಡೆಯಲು ದೇಹವನ್ನು ಸಿದ್ಧಪಡಿಸಿಕೊಳ್ಳುವ ಕಾಲ.

ಬೆಳಗ್ಗೆ‌ ಹಾಸಿಗೆಯಿಂದ ಏಳುವ ಬದಲು ಇನ್ನೊಂದು ಹೊದಿಕೆ ಎಳೆದು ಮಲಗುವ ಆಲಸ್ಯ, ಎದ್ದಾಗ ಬಿಸಿ ಬಿಸಿ ಕಾಫಿಗಳ ಹಂಬಲ, ದಿನಪೂರ್ತಿ ಮಂದ ಬೆಳಕಿನ ಮಬ್ಬು, ಸಾಯಂಕಾಲಕ್ಕೆ ಬಿಸಿ ಬಿಸಿ ಕುರುಕಲು ತಿನ್ನುವ ಆಸೆ‌ ಬಂತೆಂದರೆ ಚಳಿಗಾಲ ಬಂತು ಅಂತನೇ‌ ಅರ್ಥ! ಚಳಿಗಾಲ‌ ಕೆಲವರಿಗೆ ಇಷ್ಟ ಕೆಲವರಿಗೆ ಕಷ್ಟ! ನಿಮಗೆ ಕಷ್ಟವಾಗದಂತೆ ಈ ಚಳಿಗಾಲ ಕಳೆಯುವುದು ಹೇಗೆ ನೋಡೋಣ.

ಚಳಿಗಾಲದಲ್ಲಿ ಎಚ್ಚರಿಕೆ

l ಚಳಿಗಾಲದಲ್ಲಿ ಕಾಲ ಸ್ವಭಾವದಿಂದ ದೇಹ ಹೊರಹಾಕುವ ಉಷ್ಣತೆಯು ಕಡಿಮೆ ಆಗಿ ಚರ್ಮದಲ್ಲಿನ ರೋಮಕೂಪಗಳು ಕಿರಿದಾಗುತ್ತವೆ. ಹೀಗೆ ದೇಹದೊಳಗೆ ಹೆಚ್ಚಾದ ಉಷ್ಣತೆಯಿಂದಾಗಿ ಹಸಿವು ಬೇರೆ ಎಲ್ಲ ಕಾಲಗಳಿಗಿಂತ ಹೆಚ್ಚಾಗುವುದು. ಹೀಗೆ ಹೆಚ್ಚಾದ ಜೀರ್ಣಶಕ್ತಿಯು ಅತ್ಯಂತ ಗುರು ಆಹಾರವನ್ನೂ ಜೀರ್ಣಿಸುತ್ತದೆ. ಹಾಗಾಗಿ ಆಹಾರವನ್ನು ಸಮಯಕ್ಕೆ ಸರಿಯಾಗಿ ಹಾಗೂ ಬೇಕಾದಷ್ಟು ಪ್ರಮಾಣದಲ್ಲಿ ಆಹಾರ ಸೇವಿಸುವುದು ಒಳ್ಳೆಯದು. ಇಲ್ಲದಿದ್ದಲ್ಲಿ ದೇಹ ಶೋಷಣೆಗೊಂಡು ವಾತಪ್ರಕೋಪ ಉಂಟಾಗುತ್ತದೆ. ವಾತಸಂಬಂಧಿ ಸಮ‌ಸ್ಯೆಗಳಾದ ಮಂಡಿನೋವು (ಸಂಧಿವಾತ, ಆಮವಾತ,) ಕುತ್ತಿಗೆ, ಸೊಂಟ (ಸಯಾಟಿಕಾ), ಹಿಮ್ಮಡಿ ನೋವುಗಳಿಂದ ಬಳಲುತ್ತಿದ್ದರೆ ಅವು ಉಲ್ಬಣಗೊಳ್ಳುತ್ತವೆ.

l ವಾತಾವರಣದಲ್ಲೇ ಶೀತಾಂಶ ಗುಣ ಹೆಚ್ಚು ಇರುವುದರಿಂದ ಕೆಮ್ಮು, ನೆಗಡಿ, ತಲೆಭಾರ, ತಲೆನೋವು, ಉಸಿರಾಟದ ತೊಂದರೆ ಉಂಟಾಗುತ್ತದೆ. ಅಲ್ಲಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯೂ, ವಾಂತಿ, ಭೇದಿ ಮುಂತಾದ ರೋಗಗಳಿಗೆ ಕಾರಣವಾಗುತ್ತವೆ.

l ಚಳಿಗಾಲದಲ್ಲಿ ಚರ್ಮ ಆರೋಗ್ಯಯುತವಾಗಿರಲು ಬೇಕಾದ ತೇವಾಂಶ ಕಡಿಮೆಯಾಗಿ ಚರ್ಮದ ಹೊರಪದರ ತೀವ್ರವಾಗಿ ಒಣಗಿ ಬಿರುಕು ಉಂಟಾಗುತ್ತದೆ. ಇದರಿಂದ ಚರ್ಮಸಂಬಂಧಿ ಸಮ‌ಸ್ಯೆಗಳಾದ ಶೀತಪಿತ್ತ (ಅರ್ಟಿಕೇರಿಯಾ), ಕೂದಲು ಉದುರುವುದು, ತಲೆಹೊಟ್ಟಿಗೆ ಕಾರಣವಾಗಬಹುದು. ಮೊದಲೇ ಇದ್ದ ಸೋರಿಯಾಸಿಸ್ ನಂತಹ ತೊಂದರೆ ಉಲ್ಬಣಗೊಳ್ಳಬಹುದು.

l ವಾತಾವರಣದಲ್ಲಿ ಅತ್ಯಂತ ಶೀತ ಗಾಳಿಯಿದ್ದಾಗ, ಹೊರಗೆ ಹೋಗುವಾಗ ಸರಿಯಾಗಿ ಬೆಚ್ಚನೆಯ ವಸ್ತ್ರ ಧರಿಸದೆ ಇದ್ದರೆ, ದೇಹದ ಉಷ್ಣಾಂಶ ಅತ್ಯಂತ ಕಡಿಮೆಯಾಗುತ್ತದೆ, ಇದನ್ನು ಸರಿಪಡಿಸಲು ಹೃದಯವು ತುಂಬಾ ಶ್ರಮ ಪಡಬೇಕಾಗುತ್ತದೆ. ಇದರಿಂದ ಹೃದಯದ ಬಡಿತ ವೇಗವಾಗುತ್ತದೆ ಮತ್ತು ರಕ್ತನಾಳಗಳಲ್ಲೂ ಒತ್ತಡ ಉಂಟಾಗುತ್ತದೆ.

ಚಳಿಗಾಲದ ಆಹಾರ

ನಿಧಾನವಾಗಿ ಜೀರ್ಣವಾಗುವ ಗುರು ಆಹಾರಗಳಾದ ಸಿಹಿ ಪದಾರ್ಥಗಳು, ಮಧುರರಸಯುಕ್ತ ಆಹಾರ, ಕಬ್ಬಿನ ಹಾಲು, ಗೋಧಿ, ಜೋಳ, ಹೊಸ ಅಕ್ಕಿ ಅನ್ನ, ಎಣ್ಣೆ, ತುಪ್ಪ, ಹೆಸರುಬೇಳೆ, ಎಳ್ಳು, ಕಡಲೆಕಾಯಿ, ಬೆಲ್ಲ, ದ್ವಿದಳ ಧಾನ್ಯಗಳು, ಪಾಲಕ್ ಸೊಪ್ಪು, ಹೀರೆಕಾಯಿ, ಪಡವಲಕಾಯಿ, ಸೋರೆಕಾಯಿ, ಬೆಂಡೆಕಾಯಿ, ಉದ್ದು, ಲವಂಗ, ಸಾಬುದಾನ ಹೆಚ್ಚು ಹಿತಕರ. ಮಾಂಸಾಹಾರದಲ್ಲಿ ಮಾಂಸರಸ ಸೇವನೆ ಸೂಕ್ತ.

l ಆಮ್ಲರಸ ಹೇರಳವಾಗಿರುವ ನೆಲ್ಲಿಕಾಯಿಯನ್ನು ಯಥೇಚ್ಛವಾಗಿ ಬಳಸುವುದು ಸೂಕ್ತ. ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆ ಆಗುವುದರಿಂದ, ನೆಲ್ಲಿಕಾಯಿಯಂತಹ ಋತುವಿಗನುಸಾರವಾಗಿ ಸಿಗುವ ವಿಟಮಿನ್ ಸಿ ಯುಕ್ತ ಆಹಾರ ಲಾಭದಾಯಕ.

l ಶುಂಠಿ, ಕಬ್ಬು, ಅಳಲೆಕಾಯಿ, ಹಾಲು, ಹಾಲಿನ ಉತ್ಪನ್ನಗಳು, ಹಿಪ್ಪಲಿ, ಖರ್ಜೂರ, ಡ್ರೈ ಫ್ರೂಟ್ಸ್, ಜೇನುತುಪ್ಪ, ಬಿಸಿನೀರು ಸೇವನೆ ಹಿತಕರ.

l ಬಾಳೆಹಣ್ಣು, ಕಿತ್ತಳೆ, ಸೇಬು, ಪೇರಳೆ, ಸಪೋಟ, ಕಪ್ಪುದ್ರಾಕ್ಷಿ, ಪೈನಾಪಲ್, ಸೀತಾಫಲ ಹಣ್ಣುಗಳ ಸೇವನೆ ಒಳ್ಳೆಯದು.

l ಚೆನ್ನಾಗಿ ಕುದಿಯುತ್ತಿರುವ 100 ಎಂ.ಎಲ್‌. ಹಾಲಿಗೆ 4-6 ಚಿಟಿಕೆ ಶುದ್ಧ ಅರಿಶಿಣಪುಡಿ, 4-6 ಕಾಳುಮೆಣಸಿನ ಪುಡಿ, 1/4 ಕಲ್ಲುಸಕ್ಕರೆ ಪುಡಿ ಸೇರಿಸಿ, ಇಳಿಸಿ ಬಿಸಿ ಇರುವಾಗಲೇ ಸೇವಿಸಿ.

ಅಪಥ್ಯ

l ತೀರಾ ಕಟು, ಮಸಾಲೆ ಪದಾರ್ಥಗಳು, ರೂಕ್ಷ, ಅತಿ ಶೀತ ಗುಣಗಳುಳ್ಳ, ರೆಫ್ರಿಜರೇಟರ್‌ನಲ್ಲಿಟ್ಟ ಆಹಾರ ಪದಾರ್ಥಗಳು ವರ್ಜ್ಯ.

l ಬಾಜ್ರ, ರಾಗಿ, ಬಾರ್ಲಿ, ನುಗ್ಗೆಕಾಯಿ, ಒಣಗಿಸಿದ ಮೆಂತ್ಯ, ಹಾಗಲಕಾಯಿ, ಬದನೆಕಾಯಿ, ಬಟಾಣಿ, ಕಡಲೆಕಾಳು, ಹುರುಳಿಕಾಳುಗಳು, ಮೂಲಂಗಿ, ಗಸಗಸೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಬಳಸದಿರುವುದು ಸೂಕ್ತ.

l ಮೊಸರು, ಅರ್ಧ ಹೆಪ್ಪಾದ ಸಿಹಿ ಮೊಸರು, ತಣ್ಣನೇಯ ನೀರು, ತಂಪು ಪಾನೀಯಗಳು, ಐಸ್ ಕ್ರೀಂ ಸೇವನೆ ಸೂಕ್ತವಲ್ಲ.

ಜೀವನಶೈಲಿ

l ಶಾಖವಾಗಿರುವ ದಪ್ಪದಾದ ಬಟ್ಟೆಯನ್ನು ತೊಡಬೇಕು; ಅವಕಾಶವಿದ್ದರೆ ಉಣ್ಣೆಯ ಬಟ್ಟೆ ಒಳ್ಳೆಯದು

l ಆತಪ ಸೇವನೆ (ಸೂರ್ಯರಶ್ಮಿಗೆ ಸ್ವಲ್ಪ ಹೊತ್ತು ಮೈಯೊಡ್ಡುವುದು.)

l ನಿತ್ಯವೂ ಬೆವರು ಬರುವಷ್ಟು ವ್ಯಾಯಾಮ ಮಾಡಬೇಕು.

l ವ್ಯಾಯಾಮ ಮಾಡಿದ ಕೂಡಲೇ ಸ್ನಾನ ಮಾಡಬಾರದು.

l ಈ ಕಾಲದಲ್ಲಿ ಅಭ್ಯಂಗವೂ ದೇಹಕ್ಕೆ ಅತ್ಯಂತ ಒಳ್ಳೆಯದು. ಚಳಿಯಲ್ಲಿ ರಕ್ತಸಂಚಾರ ಸುಗಮವಾಗುವಂತೆ ಕಾಪಾಡುವುದರ ಜೊತೆಗೆ ಚರ್ಮವು ಶೀತ, ರೂಕ್ಷ ಗಾಳಿಯಿಂದ ಒಣಗದಂತೆ ಮಾಡುವುದು. ವಾತಹರ ಔಷಧೀಯ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಅಭ್ಯಂಗವು ನೋವು ನಿವಾರಣೆಯಂತೆ ಕೆಲಸ ಮಾಡುವುದು.

l ಹದವಾದ ಬಿಸಿ ನೀರಿಗೆ ಕೆಲವು ಹನಿ ತೆಂಗಿನೆಣ್ಣೆ ಸೇರಿಸಿ ಸ್ನಾನ ಮಾಡುವುದರಿಂದ ಚರ್ಮದಲ್ಲಿನ ತೇವಾಂಶವನ್ನು ಕಾಪಿಟ್ಟುಕೊಳ್ಳಬಹುದು.

l ಅಭ್ಯಂಗ ಸ್ನಾನ ಮಾಡಿ ಮೈಯನ್ನು ತಂಗಾಳಿಗೆ ಮೈಯೊಡ್ಡಬಾರದು.

l ಬರಿಯ ನೆಲದ ಮೇಲೆ ದೀರ್ಘ ಕಾಲ ಕುಳಿತುಕೊಳ್ಳುವುದಾಗಲಿ, ಮಲಗುವುದಾಗಲಿ ಒಳ್ಳೆಯದಲ್ಲ. ಈ ಕಾಲದಲ್ಲಿ ನೆಲದಲ್ಲಿ ಅತಿ ತೀವ್ರವಾದ ಶೀತವು ವ್ಯಾಪಿಸಿ ತೀವ್ರವಾದ ರೋಗಕ್ಕೂ ಕಾರಣವಾಗಬಹುದು.

l ಬೆಚ್ಚನೆಯ ಬಟ್ಟೆಗಳನ್ನು ಧರಿಸಿ ದೇಹದ ಉಷ್ಣಾಂಶವನ್ನು ಕಾಪಾಡಬೇಕು.

l ಅಗರು, ಬಜೆ, ಅರಿಶಿಣಗಳಿಂದ ತಯಾರಿಸಿದ ಧೂಪವನ್ನು ಸೇವಿಸಬೇಕು.

l ಹಿಮ, ರೂಕ್ಷ ಗಾಳಿಗೆ ಬೆಚ್ಚನೆಯ ಬಟ್ಟೆ, ಧರಿಸದೆ ಮೈಯೊಡ್ಡದಿರಿ.

l ಆದಷ್ಟು ಉಪವಾಸಾದಿಗಳನ್ನು ಮಾಡದಿರಿ.

l ಹಗಲು ನಿದ್ರೆ, ರಾತ್ರಿ ತಡವಾಗಿ ಮಲಗುವುದು ಸೂಕ್ತವಲ್ಲ.

ಸೂಕ್ತ ಆಸನಗಳು

ಸೂರ್ಯನಮಸ್ಕಾರ, ಭುಜಾಂಗಸನ, ತ್ರಿಕೋಣಾಸನ, ಧನುರಾಸನ, ಪ್ರಾಣಾಯಾಮ.

ಚಳಿಗಾಲ ಎಂದರೆ ಆರೋಗ್ಯಸಂಪದದ ಬುತ್ತಿಯನ್ನು ಕಟ್ಟಿಕೊಳ್ಳುವ ಕಾಲ. ಪೂರ್ಣ ಚಳಿಗಾಲದಲ್ಲೂ ಈ ಮೇಲೆ ಹೇಳಿರುವ ಮಾರ್ಗಗಳನ್ನು ಅನುಸರಿಸುವುದು ಒಳ್ಳೆಯದು ಏಕೆಂದರೆ ಇದೇ ಇಡೀ ವರ್ಷದಲ್ಲಿ ಸೃಜನಾತ್ಮಕ ಕಾಲ; ನವಚೈತನ್ಯವನ್ನು ಗಳಿಸಿಕೊಳ್ಳುವ ಕಾಲ, ಮುಂಬರುವ ಬೇಸಿಗೆಯಲ್ಲಿ ಉಂಟಾಗುವ ರೋಗರುಜಿನಗಳಿಂದ ಬಲಗುಂದುವ ಶರೀರದ ಚೈತನ್ಯವನ್ನೂ ತಡೆಯಲು ದೇಹವನ್ನು ಸಿದ್ಧಪಡಿಸಿಕೊಳ್ಳುವ ಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT