ಪತ್ರ ಚಳವಳಿಯಲ್ಲಿ ನಂಬಿಕೆ ಇಲ್ಲ: ಪ್ರಮೋದ್ ಮಧ್ವರಾಜ್
‘ಶೋಭಾ ಕರಂದ್ಲಾಜೆ ವಿರುದ್ಧ ನಡೆದ ಪತ್ರ ಚಳವಳಿ ಬಗ್ಗೆ ನನಗೆ ಗೊತ್ತಿಲ್ಲ. ಈ ರೀತಿಯ ಅಭಿಯಾನದ ಬಗ್ಗೆ ವೈಯಕ್ತಿಕವಾಗಿ ನನಗೆ ನಂಬಿಕೆ ಇಲ್ಲ’ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು. ‘ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ನಾನು ಆಕಾಂಕ್ಷಿಯಾಗಿದ್ದೇನೆ. ಕಾರ್ಯಕರ್ತರು ಮುಖಂಡರ ಅಭಿಪ್ರಾಯವನ್ನು ಪಕ್ಷ ಪಡೆಯುತ್ತದೆ. ಸಮೀಕ್ಷೆಗಳನ್ನೂ ನಡೆಸುತ್ತದೆ. ಟಿಕೆಟ್ ಕೊಡುವುದು ಪಕ್ಷದ ಸಂಸದೀಯ ಮಂಡಳಿಗೆ ಬಿಟ್ಟ ವಿಷಯ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ‘ಮೀನುಗಾರ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂದು ಪಕ್ಷ ನಿರ್ಧರಿಸಿದರೆ ನನಗೆ ಅವಕಾಶ ನೀಡಬೇಕು ಎಂದು ಕೇಳಿದ್ದೇನೆ. ಟಿಕೆಟ್ ಸಿಗದಿದ್ದರೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಜೀವ ಇರುವ ತನಕ ಬಿಜೆಪಿ ತೊರೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.