ರಾಜಧಾನಿಯ ಕಸವು, ಕಲಬೆರಿಕೆ, ಕುತಂತ್ರ ಪ್ರತಿತಂತ್ರ, ಎಲ್ಲವನ್ನೂ ಮೈಗೂಡಿಸಿಕೊಂಡ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಇಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮಧ್ಯೆಯೂ ಮಹಾ ಅಂತರ. ಹಳೆ ಮೈಸೂರು ಭಾಗದ ರಾಜಕಾರಣದಲ್ಲಿ ಪ್ರಬಲ ಹಿಡಿತ ಹೊಂದಿರುವ ಒಕ್ಕಲುತನ ಹಿನ್ನೆಲೆಯ ಎರಡು ಕುಟುಂಬಗಳ ನಡುವೆಯೇ ಇಲ್ಲಿ ಸಮರ.
ಜನರ ‘ಹೃದಯ’ಗಳು ಬಾಧೆಪಟ್ಟಾಗ ಪಿಸುಮಾತು ಆಲಿಸಿ ಚಿಕಿತ್ಸೆ ಕೊಡಿಸಿದ ‘ಹೃದಯವಂತ’ ಎಂದೇ ಹೆಸರಾದ ಡಾ.ಸಿ.ಎನ್. ಮಂಜುನಾಥ್ ಇಲ್ಲಿ ಕೇಸರಿ ಕಲಿ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಳಿಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಭಾವ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯ ಮಾವ...
ಇಂತಿಪ್ಪ ಪ್ರಭಾವಿಯ ಎದುರಾಳಿ, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಂದ ‘ಸೂರಿಯಣ್ಣ’ ಎಂದೇ ಪರಿಚಿತರಾದ, ಹಾಲಿ ಸಂಸದ ಡಿ.ಕೆ. ಸುರೇಶ್. ಇವರ ಅಣ್ಣ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಇವರ ನೆಂಟ ಕುಣಿಗಲ್ ಶಾಸಕ ರಂಗನಾಥ್. ಈ ಕ್ಷೇತ್ರದಲ್ಲಿ ಉತ್ಸವಮೂರ್ತಿ ಡಿಕೆಶಿಯಾದರೆ, ಮೂರ್ತಿಯ ಮೆರವಣಿಗೆ ಸಾಗುವುದು ‘ಸೂರಿಯಣ್ಣ’ನಿಂದಲೇ ಎನ್ನುವುದು ಕಾರ್ಯಕರ್ತರ ಅಂಬೋಣ.
‘ಸೂರಿಯಣ್ಣ’ನ ರಾಜಕೀಯದ ವರಸೆಯೇ ಭಿನ್ನ. ಅಭಿಮಾನಿಗಳ ಪಾಲಿಗೆ ‘ದೇವರು’. ಎದುರಾಳಿ ಪಾಲಿಗೆ ‘ರಣವಿಕ್ರಮ’. ಕ್ಷೇತ್ರದ ಮತದಾರರ ಗುಟ್ಟು ಇವರಿಗೆ ಕರತಲಾಮಲಕ. ಎರಡು ಕುಟುಂಬದ ತಕ್ಕಡಿ ಜಗ್ಗಾಟದಲ್ಲಿ ಹಸ್ತಕ್ಕೆ ಅಭಯವೋ, ಕಮಲಕ್ಕೆ ಅರಳುವಿಕೆಯೋ... ಕುತೂಹಲ ಬಾಕಿ.