<p><strong>ಬೆಂಗಳೂರು</strong>: ‘ನೀವು ರಣವೀರ್ ಸಿಂಗ್ ಅಥವಾ ಸೂಪರ್ ಸ್ಟಾರ್ ಇರಬಹುದು. ಆದರೆ, ಸಾರ್ವಜನಿಕರ ಮುಂದೆ ನಿಂತು ಮಾತನಾಡುವಾಗ ನಾಲಗೆ ಮೇಲೆ ಹತೋಟಿ ಇಟ್ಟುಕೊಂಡಿರಬೇಕು. ನೆದರು ತಪ್ಪಿ ಆಡಿದ ಹಗುರ ಮಾತಿಗೆ ಕ್ಷಮೆ ಕೇಳಿದ್ದೇನೆ ಎಂದಾಕ್ಷಣ ಅದು ಮಾಸಿ ಹೋಗುವುದಿಲ್ಲ. ತಪ್ಪನ್ನು ಮನ್ನಿಸಿದಂತಾಗುವುದಿಲ್ಲ. ಜನರ ಮನಸ್ಸಿನಿಂದ ನೆನಪುಗಳನ್ನು ಅಳಿಸಬಹುದು. ಆದರೆ ಇಂಟರ್ನೆಟ್ನಿಂದ ಅಳಿಸಲಾಗದು ಎಂಬುದನ್ನು ಮರೆಯಬೇಡಿ...!</p><p>‘ನನ್ನ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾಖಲಾಗಿರುವ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ (41) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅರ್ಜಿದಾರ ರಣವೀರ್ ಸಿಂಗ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪರಿಯಿದು.</p><p>‘ನೀವು ಸೂಪರ್ ಸ್ಟಾರ್ ಆಗಿದ್ದರೇನಂತೆ? ಕಾನೂನಿಗೆ ಮಿಗಿಲಾದವರೇನೂ ಅಲ್ಲ. ದೈವವನ್ನು ದೆವ್ವ ಎನ್ನಲಾಗದು. ಇನ್ನೊಬ್ಬರ ಭಾವನೆಗೆ ಘಾಸಿ ಮಾಡುವ ಅಧಿಕಾರ ನಿಮಗಿಲ್ಲ. ಚಾಮುಂಡಿ, ಕರಾವಳಿ ಭಾಗದ ಜನರ ಪಾಲಿನ ಪವಿತ್ರ ದೈವರಾಧನೆ. ರಿಷಬ್ ಶೆಟ್ಟಿ ದೇವತೆ ಚಾಮುಂಡಿಯ ಪಾತ್ರವನ್ನು ನಿಭಾಯಿಸಿದ್ದಾರೆ. ರಿಷಬ್ ಅವರನ್ನು ಮೆಚ್ಚಿ ಮಾತಾಡುವ ಜೊತೆಗೆ ನೀವು ಅವರ ನಟನೆಯನ್ನು ಮಹಿಳಾ ದೆವ್ವ ಎಂದು ಅಣಕ ಮಾಡಿದ್ದೀರಿ. ಇವೆಲ್ಲಾ ನಿಮಗೆ ಗೊತ್ತಿಲ್ಲದೆ ಮಾತಾಡಿದ್ದೀರಿ ಎಂದರೂ, ಜನರ ಮೇಲೆ ಪ್ರಭಾವ ಬೀರಬಲ್ಲ ನಟ ನೀವು. ನಾನೇನೇ ಮಾತಾಡಿದರೆ ಜನರ ಮನಸ್ಸಿನಲ್ಲಿ ಬೇರೂರುತ್ತದೆ ಎಂಬುದರ ಅರಿವು ನಿಮಗಿರಬೇಕಿತ್ತು. ಜವಾಬ್ದಾರಿ ಮೆರೆಯಬೇಕಿತ್ತು. ಯಾರೇ ಆಗಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಕೃತ್ಯಕ್ಕೆ ದಯೆ ತೋರಿಸಲು ಆಗದು’ ಎಂದು ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.</p><p>ರಣವೀರ್ ಪರ ಪದಾಂಕಿತ ಹಿರಿಯ ವಕೀಲ ಸಜನ್ ಪೂವಯ್ಯ, ‘ಅರ್ಜಿದಾರರು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ. ಈಗಾಗಲೇ ಅವರು ತಾವಾಡಿದ ಆಕ್ಷೇಪಾರ್ಹ ಮಾತುಗಳಿಗೆ ಕ್ಷಮೆ ಕೋರಿದ್ದಾರೆ. ಆಗಿರುವ ಪ್ರಮಾದ ಸರಿಪಡಿಸಲು ಸಿದ್ಧರಿದ್ದಾರೆ’ ಎಂದರು.</p><p>ವಾದ ಆಲಿಸಿದ ನ್ಯಾಯಪೀಠ, ‘ರಣವೀರ್ ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನೊಂದಿಗೆ ಮುಂದಿನ ವಿಚಾರಣೆವರೆಗೂ ಪ್ರಾಸಿಕ್ಯೂಷನ್ ರಣವೀರ್ ವಿರುದ್ಧ ಆತುರದ ಕ್ರಮಕ್ಕೆ ಮುಂದಾಗಬಾರದು’ ಎಂದು ಆದೇಶಿಸಿತು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರಿಗೆ ನಿರ್ದೇಶಿಸಿತು. ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಲಾಗಿದೆ. ರಣವೀರ್ ಪರ ಹೈಕೋರ್ಟ್ ವಕೀಲ ಮನು ಪ್ರಭಾಕರ್ ಕುಲಕರ್ಣಿ ವಕಾಲತ್ತು ವಹಿಸಿದ್ದಾರೆ.</p>.<div><blockquote>ರಣವೀರ್ ಬುದ್ಧಿಪೂರ್ವಕವಾಗಿ ಘೋರ ಅಜ್ಞಾನದಿಂದ ಚೇಷ್ಟೆಯ ಮಾತನಾಡಿದ್ದಾರೆ. ಧಾರ್ಮಿಕ ಸಂಗತಿಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಜನರ ಧಾರ್ಮಿಕ ಸಂವೇದನೆಗಳ ಮೇಲೆ ಸವಾರಿ ಸಲ್ಲದು. </blockquote><span class="attribution">ನ್ಯಾ.ಎಂ.ನಾಗಪ್ರಸನ್ನ</span></div>.<h2>ದೈವವನ್ನು ದೆವ್ವ ಎಂದ ಆರೋಪ</h2><p>ಗೋವಾದಲ್ಲಿ 2025ರ ನವೆಂಬರ್ 28ರಂದು ‘ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದ (ಐಎಫ್ಎಫ್ಐ) ಸಮಾರೋಪ ಸಮಾರಂಭ ಜರುಗಿತ್ತು. ಈ ಸಂದರ್ಭದಲ್ಲಿ ರಣವೀರ್ ಸಿಂಗ್, ‘ಕಾಂತಾರ ಚಾಪ್ಟರ್-1’ ಕುರಿತು ಮಾತನಾಡಿದ್ದರು.</p><p>ತಮ್ಮ ಮಾತುಗಳಲ್ಲಿ ಅವರು, ‘ಕರಾವಳಿ ಕರ್ನಾಟಕದ ಪಂಜುರ್ಲಿ, ಗುಳಿಗ ದೈವಗಳ ದೈವೀಕ ಅಭಿವ್ಯಕ್ತಿಯನ್ನು ಒರಟು, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಅನುಕರಣೆ ಮಾಡಿ ಅಣಕಿಸಿದ್ದಾರೆ. ಚಾಮುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಈ ಮೂಲಕ ಲಕ್ಷಾಂತರ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದಿಸಿದ್ದಾರೆ. ಹಾಗಾಗಿ, ರಣವೀರ್ ಸಿಂಗ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ನಗರದ ವಕೀಲ ಪ್ರಶಾಂತ್ ಮೆಥಲ್ 1ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.</p><p>ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯ ತನಿಖೆ ನಡೆಸುವಂತೆ 2026ರ ಜನವರಿ 23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಇದರನ್ವಯ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್ಎಸ್) ಕಲಂ 196, 299 ಮತ್ತು 302ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ರಣವೀರ್ ಸಿಂಗ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನೀವು ರಣವೀರ್ ಸಿಂಗ್ ಅಥವಾ ಸೂಪರ್ ಸ್ಟಾರ್ ಇರಬಹುದು. ಆದರೆ, ಸಾರ್ವಜನಿಕರ ಮುಂದೆ ನಿಂತು ಮಾತನಾಡುವಾಗ ನಾಲಗೆ ಮೇಲೆ ಹತೋಟಿ ಇಟ್ಟುಕೊಂಡಿರಬೇಕು. ನೆದರು ತಪ್ಪಿ ಆಡಿದ ಹಗುರ ಮಾತಿಗೆ ಕ್ಷಮೆ ಕೇಳಿದ್ದೇನೆ ಎಂದಾಕ್ಷಣ ಅದು ಮಾಸಿ ಹೋಗುವುದಿಲ್ಲ. ತಪ್ಪನ್ನು ಮನ್ನಿಸಿದಂತಾಗುವುದಿಲ್ಲ. ಜನರ ಮನಸ್ಸಿನಿಂದ ನೆನಪುಗಳನ್ನು ಅಳಿಸಬಹುದು. ಆದರೆ ಇಂಟರ್ನೆಟ್ನಿಂದ ಅಳಿಸಲಾಗದು ಎಂಬುದನ್ನು ಮರೆಯಬೇಡಿ...!</p><p>‘ನನ್ನ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾಖಲಾಗಿರುವ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ (41) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅರ್ಜಿದಾರ ರಣವೀರ್ ಸಿಂಗ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪರಿಯಿದು.</p><p>‘ನೀವು ಸೂಪರ್ ಸ್ಟಾರ್ ಆಗಿದ್ದರೇನಂತೆ? ಕಾನೂನಿಗೆ ಮಿಗಿಲಾದವರೇನೂ ಅಲ್ಲ. ದೈವವನ್ನು ದೆವ್ವ ಎನ್ನಲಾಗದು. ಇನ್ನೊಬ್ಬರ ಭಾವನೆಗೆ ಘಾಸಿ ಮಾಡುವ ಅಧಿಕಾರ ನಿಮಗಿಲ್ಲ. ಚಾಮುಂಡಿ, ಕರಾವಳಿ ಭಾಗದ ಜನರ ಪಾಲಿನ ಪವಿತ್ರ ದೈವರಾಧನೆ. ರಿಷಬ್ ಶೆಟ್ಟಿ ದೇವತೆ ಚಾಮುಂಡಿಯ ಪಾತ್ರವನ್ನು ನಿಭಾಯಿಸಿದ್ದಾರೆ. ರಿಷಬ್ ಅವರನ್ನು ಮೆಚ್ಚಿ ಮಾತಾಡುವ ಜೊತೆಗೆ ನೀವು ಅವರ ನಟನೆಯನ್ನು ಮಹಿಳಾ ದೆವ್ವ ಎಂದು ಅಣಕ ಮಾಡಿದ್ದೀರಿ. ಇವೆಲ್ಲಾ ನಿಮಗೆ ಗೊತ್ತಿಲ್ಲದೆ ಮಾತಾಡಿದ್ದೀರಿ ಎಂದರೂ, ಜನರ ಮೇಲೆ ಪ್ರಭಾವ ಬೀರಬಲ್ಲ ನಟ ನೀವು. ನಾನೇನೇ ಮಾತಾಡಿದರೆ ಜನರ ಮನಸ್ಸಿನಲ್ಲಿ ಬೇರೂರುತ್ತದೆ ಎಂಬುದರ ಅರಿವು ನಿಮಗಿರಬೇಕಿತ್ತು. ಜವಾಬ್ದಾರಿ ಮೆರೆಯಬೇಕಿತ್ತು. ಯಾರೇ ಆಗಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಕೃತ್ಯಕ್ಕೆ ದಯೆ ತೋರಿಸಲು ಆಗದು’ ಎಂದು ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.</p><p>ರಣವೀರ್ ಪರ ಪದಾಂಕಿತ ಹಿರಿಯ ವಕೀಲ ಸಜನ್ ಪೂವಯ್ಯ, ‘ಅರ್ಜಿದಾರರು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ. ಈಗಾಗಲೇ ಅವರು ತಾವಾಡಿದ ಆಕ್ಷೇಪಾರ್ಹ ಮಾತುಗಳಿಗೆ ಕ್ಷಮೆ ಕೋರಿದ್ದಾರೆ. ಆಗಿರುವ ಪ್ರಮಾದ ಸರಿಪಡಿಸಲು ಸಿದ್ಧರಿದ್ದಾರೆ’ ಎಂದರು.</p><p>ವಾದ ಆಲಿಸಿದ ನ್ಯಾಯಪೀಠ, ‘ರಣವೀರ್ ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನೊಂದಿಗೆ ಮುಂದಿನ ವಿಚಾರಣೆವರೆಗೂ ಪ್ರಾಸಿಕ್ಯೂಷನ್ ರಣವೀರ್ ವಿರುದ್ಧ ಆತುರದ ಕ್ರಮಕ್ಕೆ ಮುಂದಾಗಬಾರದು’ ಎಂದು ಆದೇಶಿಸಿತು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರಿಗೆ ನಿರ್ದೇಶಿಸಿತು. ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಲಾಗಿದೆ. ರಣವೀರ್ ಪರ ಹೈಕೋರ್ಟ್ ವಕೀಲ ಮನು ಪ್ರಭಾಕರ್ ಕುಲಕರ್ಣಿ ವಕಾಲತ್ತು ವಹಿಸಿದ್ದಾರೆ.</p>.<div><blockquote>ರಣವೀರ್ ಬುದ್ಧಿಪೂರ್ವಕವಾಗಿ ಘೋರ ಅಜ್ಞಾನದಿಂದ ಚೇಷ್ಟೆಯ ಮಾತನಾಡಿದ್ದಾರೆ. ಧಾರ್ಮಿಕ ಸಂಗತಿಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಜನರ ಧಾರ್ಮಿಕ ಸಂವೇದನೆಗಳ ಮೇಲೆ ಸವಾರಿ ಸಲ್ಲದು. </blockquote><span class="attribution">ನ್ಯಾ.ಎಂ.ನಾಗಪ್ರಸನ್ನ</span></div>.<h2>ದೈವವನ್ನು ದೆವ್ವ ಎಂದ ಆರೋಪ</h2><p>ಗೋವಾದಲ್ಲಿ 2025ರ ನವೆಂಬರ್ 28ರಂದು ‘ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದ (ಐಎಫ್ಎಫ್ಐ) ಸಮಾರೋಪ ಸಮಾರಂಭ ಜರುಗಿತ್ತು. ಈ ಸಂದರ್ಭದಲ್ಲಿ ರಣವೀರ್ ಸಿಂಗ್, ‘ಕಾಂತಾರ ಚಾಪ್ಟರ್-1’ ಕುರಿತು ಮಾತನಾಡಿದ್ದರು.</p><p>ತಮ್ಮ ಮಾತುಗಳಲ್ಲಿ ಅವರು, ‘ಕರಾವಳಿ ಕರ್ನಾಟಕದ ಪಂಜುರ್ಲಿ, ಗುಳಿಗ ದೈವಗಳ ದೈವೀಕ ಅಭಿವ್ಯಕ್ತಿಯನ್ನು ಒರಟು, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಅನುಕರಣೆ ಮಾಡಿ ಅಣಕಿಸಿದ್ದಾರೆ. ಚಾಮುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಈ ಮೂಲಕ ಲಕ್ಷಾಂತರ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದಿಸಿದ್ದಾರೆ. ಹಾಗಾಗಿ, ರಣವೀರ್ ಸಿಂಗ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ನಗರದ ವಕೀಲ ಪ್ರಶಾಂತ್ ಮೆಥಲ್ 1ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.</p><p>ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯ ತನಿಖೆ ನಡೆಸುವಂತೆ 2026ರ ಜನವರಿ 23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಇದರನ್ವಯ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್ಎಸ್) ಕಲಂ 196, 299 ಮತ್ತು 302ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ರಣವೀರ್ ಸಿಂಗ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>