ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಟಿಮೋರ್ ದುರಂತ: ಪತ್ತೆಯಾಗದ 6 ಕಾರ್ಮಿಕರ ದೇಹಗಳು

ಅವಘಡ ತಪ್ಪಿಸಲು ಕೈಮೀರಿ ಯತ್ನಿಸಿದ್ದ ಪೈಲಟ್‌
Published 27 ಮಾರ್ಚ್ 2024, 15:38 IST
Last Updated 27 ಮಾರ್ಚ್ 2024, 15:38 IST
ಅಕ್ಷರ ಗಾತ್ರ

ವಾಷಿಂಗ್ಟನ್: ಹಡಗು ಡಿಕ್ಕಿ ಹೊಡೆದು ಬಾಲ್ಟಿಮೋರ್‌ನ ಸೇತುವೆ ಕುಸಿದ ಅವಘಡದಲ್ಲಿ ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭಾವಿಸಿರುವುದಾಗಿ ಮೇರಿಲ್ಯಾಂಡ್‌ ರಾಜ್ಯದ ಪೊಲೀಸ್ ಸೂಪರಿಂಟೆಂಡೆಂಟ್‌ ಕರ್ನಲ್ ರೋಲ್ಯಾಂಡ್‌ ಆರ್. ಬಟ್ಲರ್‌ ಜೂನಿಯರ್ ಬುಧವಾರ ತಿಳಿಸಿದರು.

ಶ್ರೀಲಂಕಾಕ್ಕೆ ಹೊರಟಿದ್ದ, ಸಿಂಗಪುರ ಧ್ವಜ ಹೊತ್ತಿದ್ದ ‘ಡಾಲಿ’ ಎಂಬ ಹೆಸರಿನ ಸರಕು ಸಾಗಣೆ ಹಡಗು ‘ಫ್ರಾನ್ಸಿಸ್‌ ಸ್ಕಾಟ್‌ ಕೀ’ ಸೇತುವೆಯ ಒಂದು ಆಧಾರಸ್ತಂಭಕ್ಕೆ ಮಂಗಳವಾರ ಡಿಕ್ಕಿ ಹೊಡೆದಿತ್ತು. ಸೇತುವೆ ಮೇಲಿನ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ಆಗ ಆರು ಕಾರ್ಮಿಕರು ನಿರತರಾಗಿದ್ದರು. ಸೇತುವೆ ಕುಸಿದದ್ದೇ ಅವರೆಲ್ಲ ನೀರುಪಾಲಾದರು. ಈ ಪೈಕಿ ಯಾರ ದೇಹಗಳನ್ನೂ ಪತ್ತೆಹಚ್ಚಲು ಅಗ್ನಿಶಾಮಕ ದಳದವರೂ ಸೇರಿದಂತೆ ರಕ್ಷಣಾ ಕಾರ್ಯದಲ್ಲಿ ನಿರತರಾದವರಿಗೆ ಸಾಧ್ಯವಾಗಿಲ್ಲ. 

‘ದೀರ್ಘ ಕಾಲ ಈಜುಗಾರರು ಸತತವಾಗಿ ಪ್ರಯತ್ನಿಸಿದರೂ ಯಾರ ದೇಹಗಳೂ ಪತ್ತೆಯಾಗಿಲ್ಲ. ಹೀಗಾಗಿ ಆರೂ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದೇವೆ’ ಎಂದು ಕರ್ನಲ್ ರೋಲ್ಯಾಂಡ್ ಹೇಳಿದರು.

ಕಾರ್ಮಿಕರ ಹೊರತಾಗಿ ಬೇರೆಯವರು ನೀರಿನಲ್ಲಿ ಮುಳುಗಿರುವುದರ ಕುರಿತು ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದೂ ಅವರು ತಿಳಿಸಿದರು.

ಅಮೆರಿಕನ್ ಪೈಲಟ್ಸ್‌ ಅಸೋಸಿಯೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕ್ಲೇ ಡೈಮಂಡ್ ಪ್ರಕಾರ, ವಿದ್ಯುತ್ ಸಮಸ್ಯೆ ಉಂಟಾಗಿದ್ದರಿಂದ ಎಂಜಿನ್ ತಟಸ್ಥವಾಯಿತು. ಆಗ ಪ್ರತಿ ಗಂಟೆಗೆ 15 ಕಿ.ಮೀ. ವೇಗದಲ್ಲಿ ಹಡಗು ಚಲಿಸುತ್ತಿತ್ತು. ಅವಘಡ ತಪ್ಪಿಸಲು ಏನೆಲ್ಲ ಸಾಧ್ಯವೋ ಎಲ್ಲವನ್ನೂ ಪೈಲಟ್‌ ಮಾಡಿದರು. ಆದರೂ ಪರಿಸ್ಥಿತಿ ಅವರ ಕೈಮೀರಿತ್ತು. 

‘ಅಮೆರಿಕದ ಮೂಲಸೌಕರ್ಯ ಪರಂಪರೆಯ ಮುಖ್ಯ ರಚನೆಯಾಗಿದ್ದ ಬಾಲ್ಟಿಮೋರ್‌ನ ಸೇತುವೆಯನ್ನು ಮರು ನಿರ್ಮಾಣ ಮಾಡುವ ಹಾದಿ ಸುಲಭವಿಲ್ಲ’ ಎಂದು ಅಮೆರಿಕ ಸಾರಿಗೆ ಇಲಾಖೆಯ ಕಾರ್ಯದರ್ಶಿ ಪೀಟ್ ಬಟಿಜೀಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಅವಘಡ ಸಂಭವಿಸಿದ ಸ್ಥಳಕ್ಕೆ ಹೊಂದಿಕೊಂಡ ಬಂದರಿಗೆ ಹಡಗುಗಳು ಬರುವುದು ಮತ್ತು ಅಲ್ಲಿಂದ ಹೋಗುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. 

ಚಿಕಿತ್ಸೆ ನಂತರ ಒಬ್ಬರು ಮನೆಗೆ:

ಅವಘಡದಲ್ಲಿ ಗಾಯಗೊಂಡಿದ್ದ ಒಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡಿ, ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದು ಮೇರಿಲ್ಯಾಂಡ್‌ ಮೆಡಿಕಲ್ ಸೆಂಟರ್‌ ವಿಶ್ವವಿದ್ಯಾಲಯದ ಆಘಾತ ಚಿಕಿತ್ಸಾ ಕೇಂದ್ರದ ಮುಖ್ಯಸ್ಥ ಡಾ. ಡೇವಿಡ್‌ ಎಫ್ರಾನ್‌ ಹೇಳಿದರು. ಗಾಯಗೊಂಡ ವ್ಯಕ್ತಿಯ ಹೆಸರು ಹಾಗೂ ಗಾಯದ ಸ್ವರೂಪವನ್ನು ಗುಟ್ಟಾಗಿ ಇಡಲಾಗಿದೆ ಎಂದರು. 

ಭಾರತೀಯ ಸಿಬ್ಬಂದಿಗೆ ಬೈಡನ್ ಶ್ಲಾಘನೆ

ಅವಘಡ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಹಡಗಿನಲ್ಲಿದ್ದ ಸಿಬ್ಬಂದಿ ನೀಡಿದ ಸಂದೇಶದಿಂದ ಸೇತುವೆ ಮೇಲೆ ವಾಹನಗಳು ಸಂಚರಿಸದಂತೆ ಕ್ಷಿಪ್ರವಾಗಿ ತಡೆಯಲು ಸಾಧ್ಯವಾಯಿತು. ಇದರಿಂದ ಅಸಂಖ್ಯಾತ ಜೀವಗಳನ್ನು ಉಳಿಸಿದಂತಾಯಿತು. ಹಡಗಿನಲ್ಲಿ ಇದ್ದ ಸಿಬ್ಬಂದಿಯ ಕೆಲಸ ಶ್ಲಾಘನೀಯ ಎಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದರು.

ಪೈಲಟ್‌ಗಳೂ ಸೇರಿ ಹಡಗಿನಲ್ಲಿ ಇದ್ದ 22 ಸಿಬ್ಬಂದಿ ಭಾರತೀಯರು.  ಹಡಗಿನಲ್ಲಿದ್ದ ಸಿಬ್ಬಂದಿಯಲ್ಲಿ ಒಬ್ಬರಿಗೆ ಅವಘಡದಿಂದಾಗಿ ಸಣ್ಣ ಪ್ರಮಾಣದ ಗಾಯಗಳಾಗಿವೆ ಎಂದು ಹಡಗು ನಿರ್ವಹಣಾ ಕಂಪನಿ ಸಿನರ್ಜಿ ಮರೀನ್ ಗ್ರೂಪ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT