ಮುಖ್ಯಮಂತ್ರಿ ವಿರುದ್ಧ ಸಿದ್ದರಾಮಯ್ಯ ಬಂಡಾಯ
ಬೆಂಗಳೂರು, ಜ.1–ಕಳೆದ ಮೂರು ತಿಂಗಳಿಂದ ರಾಜ್ಯ ಜನತಾ ದಳದಲ್ಲಿ ಭಿನ್ನಮತೀಯ ಚಟುವಟಿಕೆಗಳು ನಡೆದಿದ್ದರೂ ಬಹಿರಂಗವಾಗಿ ಯಾವ ಗುಂಪಿನ ಜೊತೆಯೂ ಗುರುತಿಸಿಕೊಳ್ಳದೆ ಇದುವರೆಗೆ 'ತಟಸ್ಥ' ಧೋರಣೆ ತಳೆದಿದ್ದ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಗುಂಪಿನ ಜೊತೆ ಗುರುತಿಸಿಕೊಳ್ಳಲು ತೀರ್ಮಾನಿಸಿದ್ದಾರೆ.
ದೆಹಲಿಯಲ್ಲಿರುವ ದೇವೇಗೌಡರನ್ನು ಇಂದು ರಾತ್ರಿ ದೂರವಾಣಿ ಮೂಲಕ ಸಂಪರ್ಕಿಸಿದ್ದ ಸಿದ್ದರಾಮಯ್ಯ ಅವರು, 'ಪಟೇಲ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ನೀವು ಕೈಗೊಳ್ಳುವ ಯಾವುದೇ ರೀತಿಯ ನಿರ್ಧಾರಕ್ಕೆ ನಾನು ಬದ್ಧನಾಗಿರುವುದಾಗಿ' ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ರಾಜ್ಯ ಜನತಾ ದಳದ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವ ಸೂಚನೆಗಳಿವೆ.
ಮಂಗಳೂರಿಗೂ ಹಬ್ಬಿದ ಹಿಂಸೆ, ಗೋಲಿಬಾರ್
ಮಂಗಳೂರು, ಜ. 1– ಬೆಂಗಳೂರಿನಿಂದ ಬಂದ ಸಚಿವರ ತಂಡ ಶಾಂತಿ ಸಮಾಲೋಚನಾ ಸಭೆ ನಡೆಸುತಿದ್ದಂತೆಯೇ, ಮಂಗಳೂರಿಗೂ ಹಬ್ಬಿದ ಹಿಂಸಾಚಾರವನ್ನು ನಿಯಂತ್ರಿಸಲು ಬಂದರು ಪ್ರದೇಶದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದರು. ಗಲಭೆಗೆ ಒಬ್ಬ ಬಲಿಯಾಗಿದ್ದಾನೆ.
ಸುರತ್ಕಲ್ನಲ್ಲಿ ಗಲಭೆಗಳು ತಣ್ಣಗಾಗುತ್ತಿದ್ದರೆ ಮಂಗಳೂರು ಉದ್ವಿಗ್ನಗೊಂಡು ವ್ಯಾಪಾರ ವಹಿವಾಟು, ಖಾಸಗಿ ಬಸ್ ಸಂಚಾರ ಸ್ತಬ್ಧಗೊಂಡಿದೆ.
ಹೊಸ ವರ್ಷಾಚರಣೆಯ ಪರಾಕಾಷ್ಠೆ: ವಾಹನ ಅಪಘಾತಗಳಿಗೆ 11 ಬಲಿ
ಬೆಂಗಳೂರು, ಜ. 1– ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವಿವಿಧ ಕಡೆ ಸಂಭವಿಸಿದ ಎಂಟು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ಹನ್ನೊಂದು ಜನರು ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.