ಹುಣಸೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ನಗರದ ಸಂವಿಧಾನ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ‘ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಈ ಸಾಲಿನಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲ ಎದುರಿಸುವ ಪರಿಸ್ಥಿತಿ ಆವರಿಸಿದ್ದರೂ, ತಮಿಳುನಾಡಿಗೆ ಸರ್ಕಾರ ನೀರು ಹರಿಸುತ್ತಿರುವುದನ್ನು ರಾಜ್ಯ ರೈತ ಸಂಘ ಖಂಡಿಸುತ್ತದೆ’ ಎಂದು ಜಹೇಳಿದರು.
‘ಕಾವೇರಿ ಅಚ್ಚುಕಟ್ಟು ಪ್ರದೇಶದ ಹಾರಂಗಿ, ಹೇಮಾವತಿ, ಕಬಿನಿ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಜೂನ್ ತಿಂಗಳಿಂದಲೇ ಕಾಡುತ್ತಿದ್ದರೂ, ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲು ಆಸಕ್ತಿ ತೋರಿಲ್ಲ. ರೈತರನ್ನು ರಕ್ಷಿಸುವ ಜವಾಬ್ದಾರಿ ನಿರ್ಲಕ್ಷಿಸಿದೆ’ ಎಂದು ದೂರಿದರು.
‘ಅನ್ನದಾತನ ರಕ್ಷಣೆಗೆ ಬರಬೇಕಿರುವ ಸರ್ಕಾರ ಮೌನಕ್ಕೆ ಶರಣಾಗಿ ನ್ಯಾಯಾಲಯ ಸೂಚಿಸಿದಂತೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿ ಬಿಟ್ಟು ನೆರೆಯ ತಮಿಳುನಾಡಿನಲ್ಲಿ ಭತ್ತ ಬೆಳೆಯಲು ಸಹಕರಿಸಿದೆ. ರಾಜ್ಯದ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ಬಿತ್ತನೆ ಕಾರ್ಯ ಮಾಡಿದ್ದಾರೆ. ಕೆಲವು ಪ್ರದೇಶದಲ್ಲಿ ನಾಟಿ ಕಾರ್ಯವೂ ಪೂರೈಸಿದೆ. ರಾಜ್ಯದ ರೈತನ ಹಿತ ಕಾಯ್ದುಕೊಳ್ಳುವ ಜವಾಬ್ದಾರಿತನ ಸರ್ಕಾರ ಪ್ರದರ್ಶಿಸಬೇಕು’ ಎಂದು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಗ್ರೇಡ್–2 ನರಸಿಂಹಯ್ಯನವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಮೇಗೌಡ, ಹರಿಹರ ಆನಂದಸ್ವಾಮಿ, ಬೆಂಕಿಪುರ ಚಿಕ್ಕಣ್ಣ, ಚಂದ್ರೇಗೌಡ, ವಿಷಕಂಠಪ್ಪ ವರದರಾಜು, ಕೊಳಗಟ್ಟ ಕೃಷ್ಣ ಇದ್ದರು.