ಕೊಯಮತ್ತೂರು: ಇಲ್ಲಿನ ಕೊಟ್ಟಾಯ್ ಈಶ್ವರ ದೇಗುಲದ ಹೊರಗೆ ಸಂಭವಿಸಿದ ಕಾರು ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬುಧವಾರ ಮೂವರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಿಳಿಸಿದೆ.
ನೀಲಗಿರಿ ಜಿಲ್ಲೆಯ ಉಮರ್ ಫಾರೂಕ್ (39) ಅಲಿಯಾಸ್ ಕೆ.ಶ್ರೀನಿವಾಸನ್, ಮಹಮ್ಮದ್ ತೌಫೀಕ್ (25) ಮತ್ತು ಫೆರೋಸೆ ಖಾನ್ (28) ಬಂಧಿತರು ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಸಾವಿಗೀಡಾದ ಉಗ್ರ ಜಮೇಶಾ ಮುಬೀನ್ ದೊಡ್ಡ ಮಟ್ಟದಲ್ಲಿ ಹಿಂಸಾತ್ಮಕ ಕೃತ್ಯ ಎಸಗುವ ಉದ್ದೇಶದಿಂದ ಆತ್ಮಾಹುತಿ ದಾಳಿಗೆ ಯೋಜನೆ ರೂಪಿಸಿದ್ದ ಎಂದು ಪ್ರಾಥಮಿಕ ತನಿಳೆ ವೇಳೆ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಮುನ್ನಾ ದಿನ ಕಾರು ಸ್ಫೋಟಗೊಂಡಿತ್ತು. ಘಟನೆಯಲ್ಲಿ ಐಎಸ್ಗೆ ಸೇರಿದ ಭಯೋತ್ಪಾದಕ ಮೃತಪಟ್ಟಿದ್ದ. ಮೊದಲಿಗೆ ಉಕ್ಕಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಅ.27ರಂದು ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಎನ್ಐಎಗೆ ವರ್ಗಾಯಿಸಲಾಯಿತು.