ನವದೆಹಲಿ : ‘ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 7.81 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ’ ಎಂದು ಕೇಂದ್ರ ಜಲ ಶಕ್ತಿ ಖಾತೆಯ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಲಿಖಿತವಾಗಿ ಉತ್ತರ ನೀಡಿದ ಪಟೇಲ್ ಅವರು, ‘ಜನವರಿ 31, 2023ರವರೆಗೆ ದೇಶದ 19.36 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ ಸುಮಾರು 11.06 ಕೋಟಿ (ಶೇ 57.12) ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು ಇರುವುದಾಗಿ ವರದಿಯಾಗಿದೆ’ ಎಂದು ತಿಳಿಸಿದರು.
ಜಲಜೀವನ್ ಮಿಷನ್ ಅನ್ನು ಘೋಷಿಸುವ ವೇಳೆಗೆ ದೇಶದಲ್ಲಿ 3.23 ಕೋಟಿಯಷ್ಟು (ಶೇ 17) ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು.
ಗೋವಾ, ತೆಲಂಗಾಣ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯು, ಗುಜರಾತ್ ಹಾಗೂ ಹರಿಯಾಣ– ಈ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ.