ನವದೆಹಲಿ:ರಾಜ್ಯಸಭೆಯಲ್ಲಿ ಅನುಮೋದನೆಗೊಂಡ ಮೂರು ಪ್ರಮುಖ ಕಾರ್ಮಿಕ ಸಂಹಿತೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
‘ಬಡವರನ್ನು ಶೋಷಿಸುವುದು, ಸ್ನೇಹಿತರನ್ನು ಪೋಷಿಸುವುದು, ಇದು ಮೋದಿಯವರ ಆಡಳಿತ’ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಇಲ್ಲಿವರೆಗೂ ರೈತರನ್ನು ಗುರಿಯಾಗಿಸಿದ್ದ ಕೇಂದ್ರ ಸರ್ಕಾರ, ಈಗ ಕಾರ್ಮಿಕರನ್ನು ಗುರಿಯಾಗಿಸುತ್ತಿದೆ’ ಎಂದು ರಾಹುಲ್ ಗಾಂಧಿ ದೂರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳನ್ನು ಕಟುವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು ಕೇಂದ್ರ ಸರ್ಕಾರದ ಆದ್ಯತೆಯನ್ನು ಪ್ರಶ್ನಿಸುವ ಜತೆಗೆ, ‘ಇಂಥ ಸಂಕಷ್ಟದ ಸಮಯದಲ್ಲಿ ಸರ್ಕಾರ ಜನರ ಜೀವನದ ರಕ್ಷಣೆ ಬಗ್ಗೆ ಏನಾದರೂ ಕ್ರಮಗಳನ್ನು ಕೈಗೊಂಡಿದೆಯೇ’ ಎಂದು ಕೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಈ ಬಿಜೆಪಿ ಸರ್ಕಾರದ ಆದ್ಯತೆಯನ್ನು ನೋಡಿ, ನೌಕರರನ್ನು ಕೆಲಸದಿಂದ ಸುಲಭವಾಗಿ ತೆಗೆಯುವಂತಹ ಮಸೂದೆಯನ್ನು ಜಾರಿಗೆ ತಂದಿದೆ’ ಎಂದು ಆರೋಪಿಸಿದ್ದಾರೆ. ‘ನೌಕರರ ವಿರುದ್ಧ ದೌರ್ಜನ್ಯವೆಸಗಲು ಸುಲಭ ಮಾಡಿಕೊಟ್ಟಿದೆ ಸರ್ಕಾರ’ ಎಂದು ದೂರಿದ್ದಾರೆ.