ನವದೆಹಲಿ: ಜನವರಿ 31ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮೇಲ್ಮನೆಯ ಕಲಾಪ ಸುಗಮವಾಗಿ ನಡೆಯುವ ಸಲುವಾಗಿ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರು ಜ.31ರ ಸಂಜೆ ಸರ್ವಪಕ್ಷಗಳ ಸಭೆ(ವರ್ಚುವಲ್) ನಡೆಸಲಿದ್ದಾರೆ.
ಪೆಗಾಸಸ್ ಕುತಂತ್ರಾಂಶ, ಹೆಚ್ಚುತ್ತಿರುವ ನಿರುದ್ಯೋಗ, ತೈಲ ಬೆಲೆ ಏರಿಕೆ, ಕೋವಿಡ್ ಪರಿಸ್ಥಿತಿ ಮತ್ತು ಅಮರ್ ಜವಾನ್ ಜ್ಯೋತಿಯ ಸ್ಥಳಾಂತರದ ಕುರಿತ ವಿಚಾರಗಳನ್ನು ವಿರೋಧ ಪಕ್ಷಗಳು ಮೇಲ್ಮನೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರುವರಿ 11ರ ವರೆಗೆ ನಡೆಯುತ್ತದೆ. ಮಾರ್ಚ್ 14 ರಂದು ಮತ್ತೆ ಆರಂಭವಾಗಲಿರುವ ಅಧಿವೇಶನ ಏಪ್ರಿಲ್ 8 ರವರೆಗೆ ನಡೆಯಲಿದೆ. ಫೆಬ್ರುವರಿ 1ರಂದು ಸರ್ಕಾರವು 2022-23 ನೇ ಸಾಲಿನ ಬಜೆಟ್ ಮಂಡಿಸಲಿದೆ.