ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಅವರ ಪತ್ನಿ ವಿಜಯಲಕ್ಷ್ಮಿ ಅವರು (66) ಹೃದಯಾಘಾತದಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
‘ವಿಜಯಲಕ್ಷ್ಮಿ ಅವರಿಗೆ ಮುಂಜಾನೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು’ ಎಂದು ಜಿಇಎಂ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ.
‘ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಲಕ್ಷ್ಮಿ ಅವರು ಜಿಇಎಂ ಆಸ್ಪತ್ರೆಗೆ ದಾಖಲಾಗಿದ್ದರು. 10 ದಿನಗಳ ಚಿಕಿತ್ಸೆಯ ಬಳಿಕ ಬುಧವಾರ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬೇಕಾಗಿತ್ತು. ಆದರೆ ಬೆಳಿಗ್ಗೆ ಅವರಿಗೆ ಹೃದಯಾಘಾತ ಕಾಣಿಸಿಕೊಂಡಿದೆ’ ಎಂದು ಆಸ್ಪತ್ರೆ ತಿಳಿಸಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಜಲಸಂಪನ್ಮೂಲ ಸಚಿವ ದೊರೈಮುರಗನ್, ಎಐಎಡಿಎಂಕೆ ಸಹ ಸಂಯೋಜಕ ಕೆ. ಪಳನಿಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ, ಪನ್ನೀರ್ಸೆಲ್ವಂ ಮತ್ತು ಅವರ ಮಗ ಒ.ಪಿ ರವೀಂದ್ರನಾಥ್ ಅವರಿಗೆ ಸಾಂತ್ವನ ಹೇಳಿದರು.