ಗುವಾಹಟಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಜೈಲಿನಲ್ಲಿರುವ ಸಿಎಎ ವಿರೋಧಿ ಕಾರ್ಯಕರ್ತ ಅಖಿಲ್ ಗೊಗೊಯ್ ನೇತೃತ್ವದ ರೈಜೊರ್ ದಳದೊಂದಿಗೆ ಅಸ್ಸಾಂ ಜತೀಯ ಪರಿಷದ್(ಎಜೆಪಿ) ಪಕ್ಷವು ಮೈತ್ರಿ ಮಾಡಿಕೊಂಡಿದೆ ಎಂದು ಎಜೆಪಿ ಪಕ್ಷದ ಮುಖ್ಯಸ್ಥ ಲುರಿನ್ಜ್ಯೋತಿ ಗೊಗೊಯ್ ಅವರು ಗುರುವಾರ ತಿಳಿಸಿದರು.
ಈ ಸಂಬಂಧ ಗುವಾಹಟಿ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ನಲ್ಲಿ(ಜಿಎಂಸಿಎಚ್) ಲುರಿನ್ಜ್ಯೋತಿ ಮತ್ತು ಅಖಿಲ್ ಗೊಗೊಯ್, ಎರಡೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದರು. ಅಖಿಲ್ ಗೊಗೊಯ್ ಜಿಎಂಸಿಎಚ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವೇಳೆ ಮಾತನಾಡಿದ ಅಖಿಲ್, ‘ಎರಡು ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿಕೊಂಡಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಶೀಘ್ರದಲ್ಲಿ ಮಾಡಲಾಗುವುದು’ ಎಂದರು.
ಕಳೆದ ತಿಂಗಳು ಈ ಬಗ್ಗೆ ರೈಜೊರ್ ದಳವು ಲುರಿನ್ಜ್ಯೋತಿ ಗೊಗೊಯ್ ಅವರಿಗೆ ಪತ್ರವನ್ನು ಬರೆದಿತ್ತು.
‘ನಾವು ಆಡಳಿತರೂಢ ಬಿಜೆಪಿ ಪಕ್ಷದ ವಿರುದ್ಧ ಒಗ್ಗಟಾಗಿ ಹೋರಾಡಲು ನಿರ್ಧರಿಸಿದ್ದೇವೆ. ಹಾಗಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಉಭಯ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಆದಷ್ಟು ಬೇಗ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಿದ್ದೇವೆ’ ಎಂದು ಲುರಿನ್ಜ್ಯೋತಿ ಅವರು ತಿಳಿಸಿದರು.
‘ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿರುವ ಬುಲಂದ್ ಪೀಪಲ್ಸ್ ಫ್ರಂಟ್(ಬಿಪಿಎಫ್) ಪಕ್ಷದ ಜತೆಗೂ ಮೈತ್ರಿ ಬಗ್ಗೆ ಮಾತನಾಡಿದ್ದೇವೆ. ಎಂದು ಅವರು ಮಾಹಿತಿ ನೀಡಿದರು.