ಅಸ್ಸಾಂ: ಕಾಂಗ್ರೆಸ್ ಅತ್ಯಂತ ಭ್ರಷ್ಟಪಕ್ಷ ಎಂದು ಟೀಕೆ ಮಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆಯುವುದನ್ನು ಮುಂದುವರಿಸಲುಬಿಜೆಪಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು.
ಅಸ್ಸಾಂನಲ್ಲಿ ಚುನಾವಣೆ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸ್ಮತಿ ಇರಾನಿ, ರಾಜ್ಯದ ಬಡ ಜನರಿಗೆ ಅನುಕೂಲಕರವಾದ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ರೂಪಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಅನೇಕ ಜನಪರ ಯೋಜನೆಗಳನ್ನು ಪಟ್ಟಿ ಮಾಡಿರುವ ಸ್ಮೃತಿ, ಕಾಂಗ್ರೆಸ್ ಎಂದಿಗೂ ಬಡ ಜನರಿಗಾಗಿ ಕೆಲಸ ಮಾಡಿಲ್ಲ ಎಂದು ದೂರಿದರು. ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.
ಅಸ್ಸಾಂನಿಂದ ಕಾಂಗ್ರೆಸ್ನ ಕೆಲವು ದೊಡ್ಡ ವ್ಯಕ್ತಿಗಳು ಪ್ರಧಾನಿಯಾಗಿದ್ದಾರೆ ಎಂದು ಅಸ್ಸಾಂನಿಂದ ರಾಜ್ಯಸಭಾ ಸಂಸದರಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಸರನ್ನು ಉಲ್ಲೇಖ ಮಾಡದೇ ಟೀಕೆ ಮಾಡಿದರು.
ಬಡವರಿಗಾಗಿ ಕೆಲಸ ಮಾಡುವ ಏಕೈಕ ಪಕ್ಷ ಬಿಜೆಪಿ ಮಾತ್ರವಾಗಿದೆ. ನರೇಂದ್ರ ಮೋದಿ ಆಡಳಿತದಲ್ಲಿ ಅಸ್ಸಾಂನಲ್ಲಿ ಏಮ್ಸ್ ಸ್ಥಾಪನೆಯಾಗಿದೆ. ರಾಜದಾದ್ಯಂತ ಚಹಾ ತೋಟಗಳಲ್ಲಿ ಕೆಲಸ ಮಾಡುವವರಿಗಾಗಿ ನೆರವಾಗಿದೆ. ಕೋವಿಡ್ ಪಿಡುಗಿನ ಕಠಿಣ ಸಂದರ್ಭದಲ್ಲೂ ಕೇಂದ್ರ ಸರ್ಕಾರ ನೆರವಾಗಿದೆ ಎಂದು ಹೇಳಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಅಮೇಠಿಯಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಭರ್ಜರಿ ಗೆಲುವು ದಾಖಲಿಸಿದ್ದರು.